ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗೋಮೂತ್ರ
ಗೋ ಉತ್ಪನ್ನಗಳಲ್ಲಿ ಅತ್ಯಂತ ಹೆಚ್ಚು ಔಷಧೀಯ ಗುಣವುಳ್ಳದ್ದು ಗೋಮೂತ್ರ. ಇದು ಸಸ್ಯಗಳಿಗೆ ತಗುಲುವ ಕೀಟಗಳಿಗೆ ರಾಮಬಾಣ. ಕೆಲವು ಸಸ್ಯಗಳ ಬೀಜಬಿತ್ತನೆಯ ಮೊದಲು ಪುಷ್ಟಿಯುತವಾಗಿ ಬೆಳಿಯಲಿ ಎಂದು ಗೋಮೂತ್ರದಲ್ಲಿ ನೆನೆಸಿಟ್ಟು ನಂತರ ಬಿತ್ತುವ ಪರಿಪಾಠವೂ ಉಂಟು. ಹಾಗೆಯೇ ತಲೆಯಲ್ಲಿನ ಹೊಟ್ಟಿಗೂ ಗೋಮೂತ್ರ ಔಷಧ. ಗೋಮೂತ್ರವನ್ನು ಭಟ್ಟಿ ಇಳಿಸಿದಾಗ ದೊರೆಯುವ ಶುದ್ಧ, ಸ್ವಚ್ಚ ದ್ರವ ಪದಾರ್ಥವನ್ನು ಅರ್ಕ ಎಂದು ಕರೆಯಲಾಗುತ್ತದೆ. ಅರ್ಕವು ದೇಹದಲ್ಲಿನ ಬಿಳಿ ರಕ್ತಕಣಗಳ ಅಭಿವೃದ್ಧಿಗೆ, ಸಬಲತೆಗೆ ನೆರವಾಗುತ್ತದೆ. ಅದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿ ದಿನನಿತ್ಯ ನಿಗದಿತ ಪ್ರಮಾಣದಲ್ಲಿ ಅರ್ಕವನ್ನು ಸೇವಿಸುವುದರಿಂದ ಎಲ್ಲಾ ರೀತಿಯ ರೋಗಗಳನ್ನೂ ದೂರವಿಡಬಹುದಾಗಿದೆ. ಹೀಗಾಗಿಯೇ ಗೋಮೂತ್ರ ಒಂದು ವಿಶಿಷ್ಟ ಔಷಧ. ಗೋಮೂತ್ರವನ್ನು ಸಣ್ಣಪ್ರಮಾಣದ ವಿದ್ಯುತ್ ಉತ್ಪಾದನೆಗೂ ಉಪಯೋಗಿಸಬಹುದು. ಗೋಮೂತ್ರದಿಂದ ಗಡಿಯಾರದ ಚಲನೆ ಇತ್ಯಾದಿ ಪ್ರಯೋಗಗಳು ಯಶಸ್ವಿಯಾಗಿವೆ.
ತುಪ್ಪ:
ತುಪ್ಪ ಎಂಬುದು ತೇಜಸ್ಸು ಪ್ರಧಾನ ದ್ರವ್ಯ. "ಘೃತಂ ತು ಸೌಮ್ಯಂ ಶೀತವೀರ್ಯಂ(ಸುಶ್ರುತ ಸಂಹಿತಾ 179-80)" ಎಂಬ ಶ್ಲೋಕಗಳಲ್ಲಿ ತುಪ್ಪದ ವಿಶ್ಲೇಷಣೆ ಮಾಡಲಾಗಿದೆ. ಅದರ ಪ್ರಕಾರವಾಗಿ ತುಪ್ಪದಲ್ಲಿ ಸೋಮಾಂಶ ಕಂಡುಬರುತ್ತದೆ. ಇದರಿಂದ ಪಿತ್ತಶಮನ, ಅಗ್ನಿದೀಪಕ ಕಾರ್ಯಗಳು ನಡೆಯುತ್ತವೆ. ಘೃತದ ಪ್ರಭಾವದಿಂದ ಬುದ್ಧಿಶಕ್ತಿ, ಕಾಂತಿ, ಸ್ವರ, ಲಾವಣ್ಯ, ಪರಾಕ್ರಮ, ಓಜೋಗುಣ, ಬಲ ವೃದ್ಧಿಯಾಗುತ್ತದೆ. ಹೀಗಾಗಿ ಘೃತ ಸೇವನೆ ಮಹತ್ವವಾದ ಪಾತ್ರವನ್ನು ವಹಿಸುತ್ತದೆ. "ಅತಿಯಾದರೆ ಅಮೃತವೂ ವಿಷ" ಎಂಬ ಉಕ್ತಿಯನ್ನು ಕೇಳಿದ್ದೇವೆ. ಅಂತೆಯೇ ತುಪ್ಪದ ಅಧಿಕ ಸೇವನೆಯಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಠ ಪಕ್ಷ ಒಂದು ಚಮಚ ಘೃತ ಸೇವಿಸಿದರೆ ಔಷಧವಾಗುತ್ತದೆ. ಮೂಳೆಯ ಕೀಲುಗಳಲ್ಲಿರುವ ತೈಲಾಂಶವನ್ನು ವರ್ಧಿಸುವ ಕಾರ್ಯವನ್ನು ತುಪ್ಪ ಮಾಡುವುದರಿಂದ ಕೀಲುಗಳ ನೋವನ್ನು ತಡೆಗಟ್ಟಬಹುದು. ಹೀಗಾಗಿ ಘೃತ ಮಹತ್ವದ ಸ್ಥಾನವನ್ನು ಪಡೆದಿದೆ. ಘೃತಕ್ಕೆ ಮೌಲ್ಯ ಕೂಡಾ ಹೆಚ್ಚು. ಅದಕ್ಕೋಸ್ಕರವೇ ಚಾರ್ವಾಕಮುನಿಗಳು "ಋಣಂ ಕೃತ್ವಾ ಘೃತಂ ಪಿಬೇತ್" ಎಂದಿರಬೇಕು.
ಮೊಸರು ಮತ್ತು ಮಜ್ಜಿಗೆ:
ಮೊಸರು ಆಯುರ್ವೇದದ ದೃಷ್ಟಿಯಿಂದ ದೇಹಕ್ಕೆ ತುಂಬ ಉಪಯುಕ್ತವಾದದ್ದು. ಆದರೆ ಇದನ್ನು ಹಗಲಲ್ಲೇ ಬಳಸಬೇಕು. ಅದರಿಂದ ಉತ್ಪತ್ತಿಯಾದ ಮಜ್ಜಿಗೆಯೂ ಅಷ್ಟೇ ಮಹತ್ವದ್ದು. ಅದನ್ನೇ ಚರಕಾಚಾರ್ಯರು ತಮ್ಮ ಸಂಹಿತೆಯಲ್ಲಿ ಹೀಗೆ ಹೇಳಿದ್ದಾರೆ "ನ ತಕ್ರಸೇವಿ ವ್ಯಯತೇ ಕದಾಚಿತ್" ಎಂಬ ಶ್ಲೋಕದಲ್ಲಿ ಹೇಳಿರುವಂತೆ ದೇವತೆಗಳಿಗೆ ಅಮೃತ ಹೇಗೆ ಹಿತವೋ ಹಾಗೆಯೇ ಮನುಷ್ಯನಿಗೂ ಮಜ್ಜಿಗೆ ಹಿತ. ಊಟದ ಅಂತ್ಯದಲ್ಲಿ ಮಜ್ಜಿಗೆಯನ್ನು ತೆಗೆದುಕೊಳ್ಳುವುದರೊಂದಿಗೆ ಊಟವನ್ನು ಮುಗಿಸಬೇಕೆಂದು ತಿಳಿದಿದ್ದೇವೆ. ಮಜ್ಜಿಗೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಹೀಗಾಗಿಯೇ ಹೊಟ್ಟೆ ನೋವಿಗೆ ಮಜ್ಜಿಗೆಯ ಪರಿಹಾರ ನೀಡುತ್ತಾರೆ.
ಪಂಚಗವ್ಯ:
ಸಗಣಿ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಈ ಐದು ಅಂಶಗಳನ್ನೊಳಗೊಂಡ ಪಂಚಗವ್ಯವು ಚರ್ಮ ಮತ್ತು ಮೂಳೆಯ ತೊಂದರೆಗಳನ್ನು ಸರಿಪಡಿಸುವುದು. ಈ ಐದೂ ಅಂಶಗಳನ್ನು ಕ್ರಮವಾಗಿ 4 8 6 5 4 ಅನುಪಾತದಲ್ಲಿ ಬೆರೆಸಲಾಗುತ್ತದೆ. ಇದು ಪವಿತ್ರವಾಗಿದ್ದು, ವೈದಿಕಪದ್ಧತಿಯಲ್ಲಿ ವಿಶಿಷ್ಟ ಪಾತ್ರವನ್ನು ಹೊಂದಿದೆ. ಇವಿಷ್ಟು ಅಂಶಗಳು ಗೋವಿನಿಂದ ಪಡೆಯುವ ಭೌತಿಕ ಉಪಯೋಗಗಳು. ದೈವಿಕ ಸ್ತರದಲ್ಲಿಯೂ ಗೋವಿನ ಪ್ರಭಾವ ಲಕ್ಷಿಸಲ್ಪಟ್ಟಿದೆ.
ಮುಂದೆ
ಓದಿ
:
ಸರ್ಪದೋಷ
ನಿವಾರಣೆಗೆ
ಗೋವನ್ನು
ಸಾಕಿರಿ
»