ಸರ್ಪದೋಷ ನಿವಾರಣೆಗೆ ಗೋವನ್ನು ಸಾಕಿರಿ
ಭಾರತೀಯ ಪರಂಪರೆಯಲ್ಲಿ 33 ದೇವತೆಗಳ ಕಲ್ಪನೆ ಪ್ರಮುಖವಾದುದು. ಭೂಃ, ಭುವಃ, ಸುವಃ, ಜನಃ, ಮಹಃ, ತಪಃ, ಸತ್ಯಂ ಈ ಏಳು ಲೋಕಗಳನ್ನು ವ್ಯಾಪಿಸಿ ಈ ದೇವತಾ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಬ್ರಹ್ಮಾಂಡದಲ್ಲಿರುವ ಈ ಎಲ್ಲಾ ಶಕ್ತಿಗಳು ಪಿಂಡಾಂಡಗಳಲ್ಲೂ ನಿವಿಷ್ಟವಾಗಿರುತ್ತವೆ. ಆದರೆ ಜೀವರಾಶಿಗಳಲ್ಲಿನ ಎಲ್ಲಾ ಪಿಂಡಾಂಡಗಳಿಗೂ (ಶರೀರಗಳಿಗೂ) ಆ ದೇವತಾ ಶಕ್ತಿಗಳನ್ನು ಪ್ರತಿಫಲಿಸುವುದು ಸಾಧ್ಯವಿಲ್ಲ. ಭಗವಂತನ ವರಪ್ರಸಾದದಿಂದ ಹಸುಗಳ ಶರೀರಕ್ಕೆ ದೇವತಾಶಕ್ತಿಗಳನ್ನು ಪ್ರತಿಫಲಿಸುವ ವಿಶಿಷ್ಟ ಶಕ್ತಿಯಿದೆ. ಆಕಳುಗಳ ನಾಡಿಯಲ್ಲಿ ಸೂರ್ಯಸೋಮರ ಔಷಧ ಕಿರಣಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ. ಇದು ಅವುಗಳಿಗೆ ನಿಸರ್ಗದತ್ತ ವರ.
ಭೂಮಿಯೆಂಬುದು ಸೋಮ ಮತ್ತು ಸೂರ್ಯರೆಂಬ ಎರಡು ವಿಧ ವಿಶ್ವ ಕಿರಣಗಳ ಸಮತೋಲನ ಹೊಂದಿರುವ ತಾಣ. ಇಂತ ಸಮತೋಲನ ವಿಶ್ವದ ಬೇರಾವ ಆಕಾಶಕಾಯದಲ್ಲಿದೆ ಎಂಬುದು ಇನ್ನೂ ತಿಳಿದಿಲ್ಲ. ಪೃಥ್ವಿಯಂತೂ ಸೋಮಸೂರ್ಯರ ಸಂಗಮದಿಂದ ಅಸಂಖ್ಯ ಜೀವರಾಶಿಗಳ ತಾಣವಾಗಿದ್ದಾಳೆ ಭೂಮಿಗೂ ಸಂಸ್ಕೃತ ಭಾಷೆಯಲ್ಲಿ ಗೋ ಎಂಬ ಹೆಸರಿದೆ. ಸೂರ್ಯನಲ್ಲಿರುವ ಸಾತ್ವಿಕ ಕಿರಣಕ್ಕೂ ಈ ಹೆಸರಿರುವುದು ತಿಳಿದುಬರುತ್ತದೆ. ಹಾಗಾಗಿಯೇ ಗಾಯತ್ರೀ ಮಂತ್ರವು ಸೂರ್ಯನಲ್ಲಿತುವ ಭರ್ಗ ಎಂಬ ಕಿರಣದ ಧ್ಯಾನದ ಬಗ್ಗೆ ತಿಳಿಸುತ್ತದೆ. ಈ ಭರ್ಗವೆಂಬ ತೇಜವು ಮಾನವ ಲೋಕಕ್ಕೆ ಹಿತಕರವಾಗಿದೆ. ಅದೇ ಸೂರ್ಯನಿಂದ ಸೋಮಕಿರಣದ ಸಂಪರ್ಕವಿಲ್ಲದಿರುವಾಗ ಭೂಮಿಗೆ ಅಪಾಯಕಾರಿಯಾದ ಕಿರಣಗಳು ಹೊಮ್ಮಿಬರುತ್ತವೆ. ಈ ದೋಷಕ್ಕೆ ಸರ್ಪದೋಷವೆಂದು ಹೆಸರು.
ಈ ದೋಷ ದೂರೀಕರಿಸಲು ಇರುವ ಏಕೈಕ ಉಪಾಯ ಭಾರತೀಯ ತಳಿಯನ್ನು ಪ್ರತಿ ಮನೆಯಲ್ಲಿ ಸಾಕುವುದು. ಇಂತಹ ಗೋವಿನ ಪಂಚಗವ್ಯಗಳನ್ನು ಆಗಾಗ ಪ್ರಾಶನಮಾಡುವುದಾಗಿರುತ್ತದೆ. ನಿಸರ್ಗದಲ್ಲಾದ ವಿವಿಧ ವೈಪರೀತ್ಯಗಳಿಂದ ಕೇಳರಿಯದ, ಕಂಡರಿಯದ ರೋಗಗಳು ಹೆಚ್ಚುತ್ತಿವೆ. ಪಂಚಗವ್ಯದ ಮೇಲೆ ನಡೆದ ವಿಶ್ವ ಮಟ್ಟದ ಸಮ್ಮೇಳನದಲ್ಲಿ ಶುದ್ಧ ಭಾರತೀಯ ತಳಿಯ ಪಂಚಗವ್ಯದ ಮಹತ್ವದ ಬಗ್ಗೆ ಅನೇಕ ವೈಜ್ಞಾನಿಕ ಸತ್ಯಗಳು ಹೊರಹೊಮ್ಮಿವೆ. ಈ ಬೆಳಕಿನಲ್ಲಿ ನಾವು ಗೋವಿನ ವೈಜ್ಞಾನಿಕ ಮಹತ್ವವನ್ನರಿತು ಭಾರತೀಯ ಜಾನಪದ ಸಂಸ್ಕೃತಿಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಸಿದ್ಧರಾಗಬೇಕಾಗಿದೆ.
ಲೇಖಕರು : ಶಶಾಂಕ ಹತ್ವಾರ್ , ವಿದ್ಯಾರ್ಥಿ, ವೇದವಿಜ್ಞಾನ ಗುರುಕುಲಂ, ಜನಸೇವಾ ಟ್ರಸ್ಟ್, ಚನ್ನೇನಹಳ್ಳಿ, ಬೆಂಗಳೂರು.