ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ
ಬೆಂಗಳೂರು: ಎಂ.ಬಿ. ಪಾಟಿಲ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರಿನಿಂದ ಬೀದರ್ ಮತ್ತು ಕಲ್ಬುರ್ಗಿಗೆ ವಿಮಾನಸೇವೆ ಪುನ: ಆರಂಭಿಸುವ ಪ್ರಕಿಯೆಗೆ ವೇಗ ನೀಡಲಾಗಿದೆ. ಈ ಹಿನ್ನಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಇದೇ ತಿಂಗಳು 23ರ ಒಳಗೆ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚನೆ ನೀಡಲಾಗಿದ್ದು, ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾದ್ಯತೆ ಇದು ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದರು.
ಈ ಸಂಬಂಧ ಸಚಿವ ಎಂ ಬಿ ಪಾಟೀಲ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ ವಿವಿಧ ವಿಮಾನಯಾನ ಸಂಸ್ಥೆಗಳೊಂದಿಗೆ ಅವರು ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ರಹೀಂಖಾನ್ ಮತ್ತು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ (ಕೆ.ಕೆ.ಆರ್.ಡಿ.ಬಿ) ಅಧ್ಯಕ್ಷ ಡಾ.ಅಜೇಯ್ ಸಿಂಗ್ ಸೇರಿ ಆ ಭಾಗದ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿದರು.

ಸಭೆ ಬಳಿಕ ಮಾತನಾಡಿದ ಸಚಿವ ಎಂ ಬಿ ಪಾಟೀಲ ಅವರು, ಕಲಬುರಗಿ ವಿಮಾನ ನಿಲ್ದಾಣದಿಂದ ಈಗ ವಿಮಾನಸೇವೆ ನಿಲ್ಲಿಸಲಾಗಿದೆ. ಬೀದರನಲ್ಲಿ ಕೆ.ಕೆ.ಆರ್.ಡಿ.ಬಿ ನೆರವಿನಿಂದ ದಿನಕ್ಕೆ ಒಂದು ವಿಮಾನ ಮಾತ್ರ ಸಂಚರಿಸುತ್ತಿದೆ. ಕೇಂದ್ರ ಸರಕಾರವು ಪ್ರಾದೇಶಿಕ ಮಟ್ಟದಲ್ಲಿ ವಿಮಾನಯಾನ ಉತ್ತೇಜಿಸಲು ಉಡಾನ್ ಯೋಜನೆ ಮೂಲಕ ಮೂರು ವರ್ಷ ನೆರವು ನೀಡಿತು. ಆ ಅವಧಿ ಮುಗಿದ ನಂತರ ಹೀಗಾಗುತ್ತಿದೆ. ಕಲಬುರಗಿಯಲ್ಲಿ 742 ಎಕರೆಯಲ್ಲಿ ವಿಮಾನ ನಿಲ್ದಾಣವಿದೆ. ಇಂದಿನ ಸಭೆಯಲ್ಲಿ ವೈಮಾನಿಕ ಸೇವೆ ಎಷ್ಟರ ಮಟ್ಟಿಗೆ ಕಾರ್ಯಸಾಧ್ಯತೆ ಮತ್ತು ವಿಮಾನ ನಿಲ್ದಾಣಗಳ ಪ್ರಾಧಿಕಾರ ಎರಡೂ ಕಡೆ ಒದಗಿಸಿರುವ ಸೌಲಭ್ಯಗಳು ಮುಂತಾದವನ್ನು ಚರ್ಚಿಸಲಾಯಿತು ಎಂದಿದ್ದಾರೆ.
ಕಲಬುರಗಿಯಲ್ಲಿ ರಾತ್ರಿ ವೇಳೆ ವಿಮಾನ ನಿಲ್ಲಿಸುವ ಸೌಲಭ್ಯ ಸೇರಿದಂತೆ ಎಲ್ಲ ಬಗೆಯ ವಿಮಾನಗಳು ಬಂದಿಳಿಯಲು ಅನುಕೂಲವಿದೆ. ಅಲ್ಲಿಂದ ಬೆಂಗಳೂರು ಮತ್ತು ಉಳಿದ ಅನೇಕ ರಾಜ್ಯಗಳಿಗೆ ದಿನನಿತ್ಯದ ವಿಮಾನಸೇವೆ ಆರಂಭಿಸಬಹುದು ಎಂದು ವಿಮಾನ ಸಂಸ್ಥೆಗಳು ಹೇಳಿವೆ. ಮತ್ತೊಂದು ವಿಮಾನ ಸಂಸ್ಥೆಯು ನಿತ್ಯವೂ ಬೆಂಗಳೂರಿನಿಂದ ಬೆಳಿಗ್ಗೆ ಹೊತ್ತು ಬೀದರಗೆ ಮತ್ತು ಸಂಜೆ ಕಲಬುರಗಿಗೆ ವಿಮಾನಸೇವೆ ಆರಂಭಿಸಲು ಯೋಚಿಸುತ್ತಿರುವುದಾಗಿ ಹೇಳಿದೆ. ಜೊತೆಗೆ ಬೆಂಗಳೂರು-ಕಲಬುರಗಿ-ಹೈದರಾಬಾದ್-ಬೆಂಗಳೂರು ಮಾರ್ಗವಾಗಿ ಸೇವೆ ಆರಂಭಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಮುಖ್ಯವಾಗಿ ವಿಮಾನಯಾನ ಸಂಸ್ಥೆಗಳು ವಿಮಾನಸೇವೆ ವಾಣಿಜ್ಯ ದೃಷ್ಟಿಯಿಂದ ಎಷ್ಟು ಲಾಭದಾಯಕ ಎನ್ನುವುದನ್ನು ನೋಡುತ್ತವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಮಾನಯಾನ ಸೇವೆ ಲಭ್ಯವಾದರೆ ಆರ್ಥಿಕ ಚಟುವಟಿಕೆಗಳು ಗರಿಗೆದರಬಹುದು ಎನ್ನುವ ಲೆಕ್ಕಾಚಾರವಿದೆ ಎಂದು ಪಾಟೀಲ ಹೇಳಿದ್ದಾರೆ. ಇಂಡಿಗೋ, ಏರ್ ಇಂಡಿಯಾ, ಅಲಯನ್ಸ್ ಏರ್, ಸ್ಟಾರ್ ಏರ್, ಆಕಾಶ ಏರ್ ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಆರ್.ವಿಶಾಲ್ ಹಾಗೂ ಕೆಎಸ್ ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ ಚೌಧರಿ ಭಾಗವಹಿಸಿದ್ದರು.












Click it and Unblock the Notifications