ಸಾಹಿತ್ಯ ಕೃಷಿಕ ಡಾ।। ಮ. ಸು. ಕೃಷ್ಣಮೂರ್ತಿ
- ದಟ್ಸ್ಕನ್ನಡ ಡಾಟ್ ಕಾಮ್- ಮೈಸೂರು ಬ್ಯೂರೋ
ಮೈಸೂರು ವಿಶ್ವವಿದ್ಯಾನಿಲಯದದ ಹಿಂದಿ ವಿಭಾಗದ ಪ್ರಾಧ್ಯಾಪಕರೂ ಹಾಗೂ ಮುಖ್ಯಸ್ಥರೂ ಆಗಿದ್ದು, ನಿವೃತ್ತರಾಗಿರುವ ಡಾ। ಮ. ಸು. ಕೃಷ್ಣಮೂರ್ತಿಗಳು (ವಿಳಾಸ: 718, 16ನೆಯ ಮುಖ್ಯರಸ್ತೆ, ಸರಸ್ವತೀಪುರಂ, ಮೈಸೂರು- 570009; (821) 2540926) ಕನ್ನಡ ಮತ್ತು ಹಿಂದೀ ಭಾಷೆಗಳ, ನಮ್ಮ ವಿರಳ ವಿದ್ವಾಂಸರಲ್ಲಿ ಒಬ್ಬರು. ಕನ್ನಡ ಮತ್ತು ಹಿಂದೀ- ಎರಡರಲ್ಲೂ ಪದವಿಗಳನ್ನೂ, ಪ್ರಶಸ್ತಿಗಳನ್ನೂ ಗಳಿಸಿದ್ದಾರೆ. ಇವರು ಎರಡು ಭಾಷೆಗಳಲ್ಲೂ ಬರೆಯುವ ಸವ್ಯಸಾಚಿಗಳು.
ಸೃಜನಶೀಲ ಮತ್ತು ವೈಚಾರಿಕ ಲೇಖನಗಳಲ್ಲಿ ಕ್ರಿಯಾಶೀಲರಾಗಿರುವ ಇವರು ಕನ್ನಡದಿಂದ ಹಿಂದಿಗೂ, ಹಿಂದಿಯಿಂದ ಕನ್ನಡಕ್ಕೂ ಯಶಸ್ವಿಯಾದ ಅನುವಾದ ಕಾರ್ಯವನ್ನೂ ಮಾಡಿದ್ದಾರೆ. ಹಿಂದಿಯಲ್ಲಿ ಸ್ವತಂತ್ರ ಕೃತಿಗಳನ್ನೂ ಪ್ರಕಟಿಸಿದ್ದಾರೆ. ತಮ್ಮ ಅನುವಾದಗಳ ಮೂಲಕ ಈ ಎರಡೂ ಭಾಷಾ ಸಾಹಿತ್ಯಗಳ ನಡುವೆ ಸ್ನೇಹ ಸೌಹಾರ್ದಗಳ ಬೆಸುಗೆ ಹಾಕುತ್ತಿರುವವರು, ಇವರು. ಕಿರುಗತೆ, ಲಲಿತ ಪ್ರಬಂಧ, ರೇಖಾಚಿತ್ರ ಹಾಗೂ ಕಾದಂಬರಿ ಕ್ಷೇತ್ರಗಳಲಿಯೂ ಕೈಯಾಡಿಸಿದ್ದಾರೆ. ‘ಸಿದ್ಧ ಸಾಹಿತ್ಯ’, ‘ಹಿಂದೀ ಸಾಹಿತ್ಯ’, ‘ಬಸವರಾಜ ಮಾರ್ಗ’, ‘ಉತ್ತರದ ಸಂತ ಪರಂಪರೆ’- ಇವರ ಪ್ರಸಿದ್ಧ ಗ್ರಂಥಗಳು.
‘ಸೂಫೀ ಪ್ರೇಮಕಾವ್ಯ’ (ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆ, 1995; ಪುಟಗಳು 544) ಇವರ ಸುಮಾರು 25 ವರ್ಷಗಳಿಗೂ ಮೀರಿದ ಸಾರಸ್ವತ ತಪಸ್ಸಿನ ಫಲ. ಭಾರತೀಯ ಸಾಹಿತ್ಯದಲ್ಲಿ ಒಂದು ಹೊಸ ದನಿಯನ್ನ ಮಿಡಿದ ಸೂಫೀಧರ್ಮ ದರ್ಶನದ ಬಗೆಗೆ ಪ್ರಪ್ರಥಮವಾಗಿ ಕನ್ನಡಕ್ಕೆ ಈ ಸಂಶೋಧನಾತ್ಮಕ ಉದ್ಗ್ರಂಥ ಹೊರ ಬಂದಿತು.
‘ಉತ್ತರದ ಸಂತ ಪರಂಪರೆ’ (ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆ, 2ಂಂ3; ಪುಟಗಳು 432) ಇವರ ಒಂದು ಮೌಲಿಕ ಗ್ರಂಥ. ‘‘ಉತ್ತರ ಭಾರತದಲ್ಲಿ ಸಂತ ಪರಂಪರೆಯ ಸ್ವರೂಪ ಹೇಗಿತ್ತು, ಪ್ರಮುಖರಾದ ಸಂತರ ಸಾಮಾಜಿಕ ದೃಷ್ಟಿಕೋನ ಯಾವ ಬಗೆಯದಾಗಿತ್ತು. ಸಾಮಾಜಿಕ ಬದುಕಿನ ಮುನ್ನಡೆಗೆ ಅವರ ವಿಚಾರ ಧಾರೆಯ ಕೊಡುಗೆ ಏನು?.... ಇಂದು ಹೊಸ ಬಗೆಯ ಸಮಾಜವನ್ನು ಕಟ್ಟುವ ಆಕಾಂಕ್ಷೆಯನ್ನು ಹೊಂದಿರುವ ಮನಸ್ಸುಗಳು ಈ ಸಂತ ಪರಂಪರೆಯ ಮೂಲದಿಂದ ತಮ್ಮ ವಿಚಾರಧಾರೆಗಳಿಗೆ ಏನು ಪುಷ್ಟಿಗಳನ್ನು ಪಡೆಯಬಹುದು? ಈ ನಿಟ್ಟಿನಲ್ಲಿ ನಡೆಸಿದ, ಉತ್ತರ ಭಾರತದ ಸಂತ ಪರಂಪರೆಯನ್ನ ಕುರಿತ ಒಂದು ವಿಸ್ತಾರವಾದ ಅಧ್ಯಯನ ಇಲ್ಲಿದೆ.’’ -ಪ್ರೊ. ಲಕ್ಷ್ಮೀನಾರಾಯಣ ಅರೋರಾ, ನಿರ್ದೇಶಕ, ಪ್ರಸಾರಾಂಗ, ಮೈಸೂರು.
‘ಪುನರಾಗಮನ’ (ಕಣಿವೆ ಪ್ರಕಾಶನ, ಮೈಸೂರು, 1999) ‘‘ಇವರ ಲಲಿತ ಪ್ರಬಂಧಗಳು ನಮ್ಮ ಸಂಸ್ಕೃತಿಯ ಒಳನೋಟಗಳನ್ನು ಪದರ ಪದರವಾಗಿ ಅನಾವರಣಿಸುವ, ನಮ್ಮ ಸಾಂಸ್ಕೃತಿಕ ಲೋಕದ ಪುನರ್ದರ್ಶನ ಮಾಡಿಸುವ ದೀಪಸ್ತಂಭಗಳು. ಇವರ ಕಥೆಗಳಲ್ಲಿ ಸೂಕ್ಷ್ಮದೃಷ್ಟಿ, ಶಿಶುಸಹಜ ಕುತೂಹಲ ಹಾಗೂ ಜೀವನಾನುಭವ ಅತ್ಯಂತ ಆಪ್ತವಾದ ಶೈಲಿಯಲ್ಲಿ ಬಿಂಬಿತವಾಗಿವೆ. ಸಂಶೋಧಕನ ಅದಮ್ಯ ಕುತೂಹಲ, ಲಲಿತ ಪ್ರಬಂಧಕಾರನ ಅಲೆಯುವ ಸ್ವಸ್ಥ ಮನಸ್ಸು ಮತ್ತು ಸೃಜನಾತ್ಮಕನ ಸೃಷ್ಟ್ಯಾತ್ಮಕ ಪ್ರತಿಭೆಗಳ ತ್ರಿವೇಣಿ ಸಂಗಮ ಇವರಲ್ಲಿದೆ.’’ -ಶ್ರೀಮತಿ ಯಶೋದಾ, ಕಣಿವೆ ಪ್ರಕಾಶನ, ಮೈಸೂರು.
‘ರತ್ನಕಂಕಣ’ (ಮಂಜುಶ್ರೀ ಪ್ರಕಾಶನ, ಮೈಸೂರು, 2ಂಂ3): ‘‘ಈ ನಾಟಕದ ನಾಯಕ ರವಿದಾಸ ಭಕ್ತಿ ಮಾರ್ಗದ ಒಬ್ಬ ಸಂತ. ಅವನ ಜೀವನದ ಕೆಲವು ಪ್ರಮುಖ ಘಟನೆಗಳನ್ನು ಹಿನ್ನಲೆಯಾಗಿಟ್ಟುಕೊಂಡು ಕೃಷ್ಣಮೂರ್ತಿಗಳು ನಾಟಕ ರಚಿಸಿದ್ದಾರೆ. ಜೊತೆಗೆ ಆಗಿನ ಕಾಲದಲ್ಲಿ ಇದ್ದಿರಬಹುದಾದ ಅಸ್ಪೃಶ್ಯತಾ ಆಚರಣೆ, ವರ್ಣಬೇಧ ಹಾಗೂ ಇನ್ನಿತರ ಊಳಿಗಮಾನ್ಯ ಆಚರಣೆಗಳ ಹಿನ್ನೆಲೆಯನ್ನು ವಾತಾವರಣ ಸೃಷ್ಟಿಗೆ ಬಳಸಿಕೊಂಡಿದ್ದಾರೆ. .. .. ಕೃಷ್ಣಮೂರ್ತಿಯವರು ಸಂಭಾಷಣೆ ಬರೆಯುವುದರಲ್ಲಿ ಸಾಧಿಸಿರುವ ಹಿಡಿತ ಮೆಚ್ಚುವಂತಹದ್ದು.
ಕೆಲವು ಕಡೆ ಅತ್ಯಂತ ಲವಲವಿಕೆಯಿಂದ ಸಂಭಾಷಣೆಗಳು ಗಮನ ಸೆಳೆಯುತ್ತವೆ. ಆದರೆ ಬಹಳಷ್ಟು ದೃಶ್ಯಗಳಲ್ಲಿ ಎರಡು ಅಥವಾ ಮೂರು ಪಾತ್ರಗಳ ಮಧ್ಯೆ ನಡೆಯುವ ಚರ್ಚೆ ಒಂದು ರೀತಿಯ ಧಾರ್ಮಿಕ ಪ್ರವಚನದಂತೆ ಕಂಡು ಬರುತ್ತದೆ. .. .. ಕೃಷ್ಣಮೂರ್ತಿಯವರ ಪ್ರಥಮ ನಾಟಕ ಇದು. ಸಹಜವಾಗಿಯೇ ಪ್ರಥಮ ಪ್ರಯತ್ನದ ವೈಫಲ್ಯಗಳು ಇಲ್ಲಿವೆ. ವೈಫಲ್ಯಗಳ ಮಧ್ಯೆಯೂ ನಾಟಕಕಾರರು ಕೆಲವಾರು ಗುಣಾತ್ಮಕ ಅಂಶಗಳನ್ನು ಮೆರೆದಿದ್ದಾರೆ. .. .. ಕೃಷ್ಣಮೂರ್ತಿಯವರು ತಮ್ಮ ಮುಂದಿನ ಪ್ರಯತ್ನದಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾದ ನಾಟಕಗಳನ್ನು ರಚಿಸಲಿ- ಎಂದು ಹಾರೈಸುತ್ತೇನೆ’’ - ಪ್ರೊ।। ಲಿಂಗದೇವರು ಹಳೇಮನೆ, ಭಾರತೀಯ ಭಾಷಾ ವಿದ್ಯಾ ಕೇಂದ್ರ ಸಂಸ್ಥೆ, ಮೈಸೂರು.
‘ಸಮುದ್ರ ಸಂಗಮ’ (ಮಂಜುಶ್ರೀ ಪ್ರಕಾಶನ, ಮೈಸೂರು, 2ಂಂಂ): ‘‘ಅರ್ಥಪೂರ್ಣವೂ ಭಾವಗರ್ಭಿತವೂ ಆದ ಕೃತಿ ಇದು. .. .. ವ್ಯಕ್ತಿಯ ಆತ್ಮೋನ್ನತಿಯನ್ನು ಸಾಧಿಸುವುದರ ಜೊತೆಗೇ ಸಮಾಜದ ಲೋಪದೋಷಗಳನ್ನು ಚಿಕಿತ್ಸಕ ದೃಷ್ಟಿಯಿಂದ ಪರಿಶೀಲಿಸಿ ನಿರ್ದಾಕ್ಷಿಣ್ಯದ ನೇರ ನುಡಿಗಳಿಂದ ಜನರ ಅಂತ:ಸತ್ವವನ್ನು ಎಚ್ಚರಿಸಿ ಯುಕ್ತ ಮಾರ್ಗದಲ್ಲಿ ಅಡಿಯಿಡಲು ಬೆಳಕು ತೋರಿದ .. .. ಬೇರೆ ಬೇರೆ ಕಾಲಮಾನದ ಭಾರತೀಯ ಪರಂಪರೆಯ ಹಿರಿಯ ಚೇತನಗಳು ಪರಸ್ಪರ ಭೇಟಿಯಾದರೆ ಎಂಥಾ ಸೊಗಸು ಎಂಬ ಈ ಕೃತಿಯ ಮೂಲಭೂತ ಭಾವವೇ ರೋಮಾಂಚಕಾರಿ ಎನ್ನಬೇಕು.’’ - ಪ್ರೊ।। ಎಸ್. ರಾಘವೇಂದ್ರ ಭಟ್ಟ, ಮೈಸೂರು.
‘ವ್ಯೋಮಕೇಶನ ವಚನಗಳು’ (ಭಾರತೀ ಪ್ರಕಾಶನ, ಮೈಸೂರು, 1997, ಪುಟಗಳು 246): ‘‘ಡಾ. ಕೃಷ್ಣಮೂರ್ತಿಯವರು ಹಿಂದೀ ಭಾಷೆಯಲ್ಲಿ ಬಹುಶ್ರುತರಾಗಿ ಸಾಹಿತ್ಯದಲ್ಲಿ ಕೃಷಿ ಮಾಡಿ, ಸಂಶೋಧನೆಯಲ್ಲಿ ಭಾಷಾಂತರದಲ್ಲಿ ಹಿಂದೀ ವಿದ್ವತ್ ಪ್ರಪಂಚದಲ್ಲಿ ಸುಪ್ರಸಿದ್ಧರಾಗಿದ್ದಾರೆ. ಅವರು ಕನ್ನಡದಲ್ಲಿಯೂ ಸಮಾನ ಪಾಂಡಿತ್ಯವನ್ನು ಸಂಪಾದಿಸಿ ತಮ್ಮ ಬರಹಗಳ ಮೂಲಕ ವಿದ್ವಲ್ಲೋಕದಲ್ಲಿ ಸುಪರಿಚಿತರಾಗಿದ್ದಾರೆ..... ಇವರ ಈ ವಚನ ಸಂಕಲನವನ್ನು ಕೈಗೆತ್ತಿಕೊಂಡಾಗ ಸಂಖ್ಯೆ ಮತ್ತು ವಿದ್ವತ್ತು ಓದುಗನನ್ನು ಚಕಿತಗೊಳಿಸುತ್ತವೆ. ಕಾಂತಮಯ ಭಾವ ತಾರಾ ಖಚಿತ ವ್ಯೋಮಗತ ಕ್ಷೀರ ಪಥದಂತೆ ಬಹುವರ್ಣ ಸಂಕೀರ್ಣ ಭಾವನಾ ಕುಸುಮ ಪ್ರಪೂರ್ಣ ಉದ್ಯಾನದಂತೆ, ಮಧ್ಯಮೋತ್ತಮ ಸಾಧಾರಣ ಅಸಾಧಾರಣ ವೈವಿಧ್ಯಮಯ ಸಂಗತಿಗಳ ವಸ್ತುಪ್ರದರ್ಶನಾಲಯದಂತೆ ‘ವ್ಯೋಮಕೇಶನ ವಚನಗಳು’ ಆಕರ್ಷಣೀಯವಾಗಿವೆ.’’ - ಪ್ರೊ।। ದೇಜಗೌ, ವಿಶ್ರಾಂತ ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯ.
ಡಾ। ಮ ಸು. ಕೃಷ್ಣಮೂರ್ತಿಯವರ ಕೃತಿಗಳು :
ಕಾದಂಬರಿ:
- ನಾದ ಸೇತು(1977)
- ಹಡಗಿನ ಹಕ್ಕಿ(1989)
- ಕುರಿ ಸಾಕಿದ ತೋಳ(1999)
- ಪರಶುರಾಮನ ತಂಗಿಯರು(1999)
- ಚತುರ್ಮುಖ(2000)
- ರಥ ಚಕ್ರ(2004)
- ಕಸ್ತೂರಿಮೃಗ (1999)
- ಒಂಟಿ ಸಲಗ (2003)
- ಫಲ್ಗುಣಿ (2004)
ಸಂತ ನರಸೀ ಮೆಹತಾ(1999)
ಕಥಾ ಸಂಕಲನ :
- ಬೆಟ್ಟಕ್ಕೆ ಚಳಿಯಾದಡೆ(1998)
- ಪುನರಾಗಮನ (1999)
- ರತ್ನಕಂಕಣ (2003)
- ಯುಗಾಂತ (ಅಪ್ರಕಟಿತ)
- ಬಂಗಾರದ ಹುಳು(ಅಪ್ರಕಟಿತ)
- ಗಂಧಮಾದನ(1973)
- ಚಂಕ್ರಮಣ(1978)
- ಹಾದಿ ಪುರಾಣ(1986)
- ಚೈತ್ರ ರಥ(1990)
- ಏಕಾಂತ ಸಂಗೀತ(1993)
- ಕ್ರೀತರಾಗ(2000)
- ಗಿರಿಕರ್ಣಿಕಾ(1996)
- ಚಿತ್ತಭಿತ್ತಿಯ ಚಿತ್ರಗಳು(1983)
- ಗೋಪುರದ ದೀಪ(2000)
- ದೀಪಮಾಲೆ (2004)
ವ್ಯೋಮಕೇಶನ ವಚನಗಳು (1997)
ವಿಮರ್ಶೆ ಸಂಶೋಧನೆ :
- ಬಸವರಾಜ ಮಾರ್ಗ(1985)
- ಸೀಮೋಲ್ಲಂಘನ(1994)
- ಸೇತುಬಂಧ (1995)
- ಪರಿಶೋಧನ(1995)
- ಸೂರದಾಸ(1973)
- ವಿದ್ಯಾಪತಿ (1978)
- ಬಿಹಾರಿ(1980)
- ಸಿದ್ಧ ಸಾಹಿತ್ಯ(1982)
- ಸೂಫೀ ಪ್ರೇಮದರ್ಶನ(1995)
- ಸೂಫೀ ಪ್ರೇಮಕಾವ್ಯ (1995)
- ಉತ್ತರದ ಸಂತ ಪರಂಪರೆ (2003)
- ಕೋಗಿಲೆಯ ಚಿಕ್ಕವ್ವ(1989)
- ಮೀರಾಬಾಯಿ(1991)
- ಮೆಣಸಿನಕಾಯಿ ಸಾಹಸ(1992)
- ಚಂದಮಾಮನ ಅಳಿಯ(1988)
- ಸಂತ ರೈದಾಸ(1984)
- ಮಹರ್ಷಿ ಕರ್ವೆ(1983)
- ಕಿತ್ತೂರ ರಾಣಿ ಚೆನ್ನಮ್ಮ(1983)
- ಕಾಲುಗಳ ಜಗಳ(1999)
- ಗೋರಾ ಬಾದಲ್(1999)
- ಚೈತ್ರ ಪಲ್ಲವ(2001)
- ವೈಶಾಖ ಪ್ರಭ(ಅಪ್ರಕಟಿತ)
- ಆಷಾಢ ಸೋನೆ(ಅಪ್ರಕಟಿತ)
- ಮಕ್ಕಳ ಅಕ್ಕ(ಅಪ್ರಕಟಿತ)
ಹಿಂದಿ ಸಾಹಿತ್ಯ(1976)
ಸಂಪಾದನೆ :
ನಳ ಚಂಪೂ ಸಂಗ್ರಹ(1973)
ಅನುವಾದ, ಹಿಂದಿಯಿಂದ :
- ರಾಮಚರಿತ ಮಾನಸ(1991)
- ವಿನಯ ಪತ್ರಿಕಾ(1997)
- ಬಾಣಭಟ್ಟನ ಆತ್ಮಕಥೆ(1956)
- ಮೃಗನಯನಿ(1958)
- ಜಯಸೋಮನಾಥ(1960)
- ಮೇಘದೂತ(1973)
- ಅನಾಮದಾಸನ ಒಂದು ಕಡತ(1980)
- ಕೋಮಲ ಗಂಗಾಧರ(1982)
- ಬಿಹಾರೀ ಸಪ್ತಶತೀ(1986)
- ಸೂರ್ಯನ ಏಳನೇ ಕುದುರೆ(1973)
- ಚಿದಂಬರಾ ಸಂಚಯನ(1973)
- ಕಬೀರ ಪದಾವಲಿ (2000)
- ಮೀರಾ ಪದಾವಳಿ (2003)
ಭಾರತೀಯ ಮತ್ತು ಅಮೆರಿಕನ್ನರ ಸಂಯುಕ್ತ ಸಾಹಸ(1972)
ಸಂವಾದ ಸಾಹಿತ್ಯ :
ಸಮುದ್ರ ಸಂಗಮ (2000)
ಪೂರಕ ಓದಿಗೆ-
‘ಯುಗಾಂತ’ ನಾಟಕ : ಒಂದು ವಿಶಿಷ್ಟ ಪ್ರಯೋಗ
ಮೈಸೂರಿನ ಸುರುಚಿ ರಂಗಮನೆಯಲ್ಲಿ ‘ಯುಗಾಂತ’ !
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications