ನಾಗತಿಹಳ್ಳಿ ಸಂಸ್ಕೃತಿ ಹಬ್ಬದ ಚಿತ್ರಗಳು
'ಋಣಪ್ರಜ್ಞೆ’ಯ ಅಭಿವ್ಯಕ್ತಿ 'ನಾಗತಿಹಳ್ಳಿ ಸಂಸ್ಕೃತಿ ಹಬ್ಬ 2004’ ಏಪ್ರಿಲ್ 18ರಿಂದ 23ರವರೆಗೆ ನಡೆಯಿತು. ನಾಗತಿಹಳ್ಳಿ ಚಂದ್ರಶೇಖರರ ಬಳಗ ದೊಡ್ಡದು. ಹಾಗಾಗಿ ಹಬ್ಬದ ಕಳೆ ಜೋರಾಗಿತ್ತು . ಸಂಸ್ಕೃತಿ ಹಬ್ಬಕ್ಕೆ ನಾಡಿನ ನಾನಾಮೂಲೆಯಿಂದ ವಿವಿಧ ಕ್ಷೇತ್ರಗಳ ಜನ ತಮಗೆ ಬಿಡುವಾದಾಗ ಬಂದು ಹೋದರು. ಕಂಬಾರ, ಶಿವರುದ್ರಪ್ಪನವರಂಥ ಹಿರಿಯರೂ ಹಬ್ಬದ ಸಿಹಿ ಹೆಚ್ಚಿಸಿ ಹೋದರು. ಹೀಗಾಗಿ ನಾಗತಿಹಳ್ಳಿಗೆ ಮಾತ್ರ ಸೀಮಿತವಾಗಿದ್ದ ಸಂಸ್ಕೃತಿ ಹಬ್ಬದ ಸಿಹಿ ಊರಮೇರೆಗಳನ್ನು ಮೀರಿತು.
ಇದೇ ಹಬ್ಬದಲ್ಲಿ ಶಿಕಾರಿಪುರ ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿಗಳನ್ನು ಗೌರವಿಸಲಾಯಿತು. ಮೈಸೂರಿನಲ್ಲಿ ನೆಲೆಸಿದ್ದರೂ, ಅಮೆರಿಕನ್ನಡಿಗರು ಹಾಗೂ ತವರು ಕನ್ನಡಿಗರ ನಡುವಣ ಸೇತುವಂತಿರುವ ಹರಿಹರೇಶ್ವರ ದಂಪತಿಗಳಿಗೆ ಸಂದ ಈ ಸನ್ಮಾನ, ಒಂದರ್ಥದಲ್ಲಿ ಅನಿವಾಸಿ ಕನ್ನಡಿಗರಿಗೆಲ್ಲ ಸಂದ ಗೌರವ. ಈ ಸಮರ್ಪಣೆಯ ಹಿಂದೆ 'ಇಂಥ ಕಾರ್ಯಕ್ರಮಗಳು ನಿಮ್ಮಿಂದಲೂ ಆಗಲಿ’ ಎನ್ನುವ ಪ್ರೇರಣೆಯೂ ಇತ್ತು . ಒಳ್ಳೆಯ ಕೆಲಸ ಎಲ್ಲರಿಂದಲೂ ಆಗಲಿ.
ವೈದ್ಯಕೀಯ ಶಿಬಿರ, ಗಿಡ ನೆಡುವುದು, ನಾಟಕೋತ್ಸವ, ಸಂಗೀತೋತ್ಸವ, ಕವಿಮೇಳ, ತಾರಾಮೇಳ, ಊರದೇವತೆ ಮೆರವಣಿಗೆ, ಹರಿಕಥೆ.... ಹೀಗೆ 'ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದ ಬೀಸು ದೊಡ್ಡದು. ಇಲ್ಲಿರುವುದು ನಾಲ್ಕು ಚಿತ್ರಗಳು ಮಾತ್ರ. ಇದು ಸಂಸ್ಕೃತಿ ಹಬ್ಬದ ಒಂದು ಮುಖ ಮಾತ್ರ.ಸಂಸ್ಕೃತಿ ಹಬ್ಬ 2004ಕ್ಕೆ ಮಾತ್ರ ಸೀಮಿತವಾಗದಿರಲಿ.












Click it and Unblock the Notifications