ತಲೆದಂಡಕ್ಕೆ ಜ್ಞಾನಪೀಠ ಕೊಟ್ಟಿದ್ದೇ ದಂಡ : ಪಾಪು
- ‘ತಲೆದಂಡ’ ಬರೆದು ಒಬ್ಬರು ಜ್ಞಾನಪೀಠ ಬಾಚಿಕೊಂಡರು. ಆದರೆ, ಈ ಕೃತಿಗೆ ಜ್ಞಾನಪೀಠ ಕೊಡುವಷ್ಟು ಅರ್ಹತೆ ಇದೆಯೇ ಅಂತ ನಾನು ಸವಾಲು ಹಾಕುತ್ತೇನೆ.
- ಕದ್ದು ಬರೆಯುವವರೇನೂ ನಮ್ಮಲ್ಲಿ ಕಡಿಮೆಯಿಲ್ಲ. ದೊಡ್ಡವರೊಬ್ಬರು ‘ಸಂಗ್ಯಾ ಬಾಳ್ಯಾ’ ನಾಟಕಕ್ಕೆ ತಮ್ಮ ಹೆಸರು ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಂಡರು.
- ಸಾಹಿತಿಗಳು ಪರಸ್ಪರ ಪ್ರಶಂಸಿಸುವ ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ಎಸ್.ಎಲ್.ಭೈರಪ್ಪ, ಯು.ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ...ಹೀಗೆ ನಾನಾ ನಮೂನೆ ಇದ್ದಾರೆ...
ಪಾಪು ಕೂರಂಬು ಎಸೆದದ್ದು ಲಾಬಿ ಸಾಹಿತಿಗಳತ್ತ. ಯಾವ ಮಂತ್ರಿ, ಶಾಸಕರನ್ನು ಹಿಡಿದರೆ ಯಾವ ಪ್ರಶಸ್ತಿ ಸಿಗುತ್ತದೆ ಅಂತ ನೋಡುವ ಸಾಹಿತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಷ್ಟೋ ಲೇಖಕರು ಪ್ರಶಸ್ತಿ ಪಡೆದಾಗಲೇ, ಅವರು ಬರೆಯುತ್ತಾರೆ ಎಂಬುದು ಗೊತ್ತಾಗುತ್ತದೆ. ರಾಜಕೀಯ ಕೆಟ್ಟಿದೆ ಎನ್ನುತ್ತಾರೆ. ಸಾಹಿತ್ಯವೇನು ಕಡಿಮೆ ಕೆಟ್ಟಿದೆಯೇ ಎಂದು ಪಾಪು ಪ್ರಶ್ನಿಸಿದರು.
ತಲೆದಂಡ ಕೃತಿಯಲ್ಲಿ ಬಸವಣ್ಣನ ಮೂಲಕ ಒರಟು ಮಾತನ್ನಾಡಿಸಿದ್ದಾರೆ. ಅಂಥದಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಸಂಗ್ಯಾ ಬಾಳ್ಯಾ ಮೂಲಕ ಒಬ್ಬರು ಪ್ರಚಾರ ಗಿಟ್ಟಿಸಿಕೊಂಡಂತೆ ಅನೇಕರು ಉಂಟು. ಅವರದೊಂದು ವರ್ಗ. ಆದರೆ ಯಾರೂ ಅಂಥವರ ಬಗ್ಗೆ ಮಾತಾಡುವುದಿಲ್ಲ. ಇಂಗ್ಲಿಷ್ ಸಾಹಿತ್ಯ ಕ್ಷೇತ್ರ ಅಗಾಧವಾದದ್ದು. ಅಲ್ಲಿಂದ ಯಾರು ಕದಿಯುತ್ತಾರೇ ಅನ್ನೋದೇ ಗೊತ್ತಾಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಪ್ರಶಸ್ತಿಗಳ ಬಹುಮಾನದ ಮೊತ್ತ ತಗ್ಗಿಸಿದರೆ, ಲಾಬಿ ಮಾಡುವ ಸಾಹಿತಿಗಳೂ ಕಡಿಮೆಯಾಗಬಹುದು ಎಂಬ ಪಾಪು ಚಟಾಕಿಗೆ ಸಭೆ ಗೊಳ್ಳೆಂದು ನಕ್ಕಿತು.
ಕುವೆಂಪು ಅವರು ಪುರೋಹಿತ ಶಾಹಿಗಳನ್ನು ವಿರೋಧಿಸುತ್ತಿದ್ದರು ಅಂದರೆ, ಕೆಲವರು ಬ್ರಾಹ್ಮಣರನ್ನು ಮಾತ್ರ ವಿರೋಧಿಸುತ್ತಿದ್ದರು ಅಂತ ತಿಳಿದುಕೊಂಡಿದ್ದಾರೆ. ಆದರೆ, ಪುರೋಹಿತಶಾಹಿಗಳೆಂದರೆ ಬರೀ ಬ್ರಾಹ್ಮಣರಲ್ಲ ಎಂದರು.
ಇದೇ ಸಮಾರಂಭದಲ್ಲಿ ಸಾಹಿತಿ ಕೋ.ಚೆನ್ನಬಸಪ್ಪ ಅವರಿಗೆ 2001ನೇ ಇಸವಿಯ ವಿಶ್ವ ಮಾನವ ಪ್ರಶಸ್ತಿ ಹಾಗೂ ಡಾ. ಲತಾ ಶೇಖರ್ ಅವರಿಗೆ ದೇಜಗೌ ಪ್ರಶಸ್ತಿಯಯನ್ನು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಪ್ರದಾನ ಮಾಡಿದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ
ಸಾಹಿತ್ಯ ಸಮ್ಮೇಳನ ಪಲ್ಲಕ್ಕಿಯ ಪಟ್ಟಕ್ಕೆ ಪಾಪು