ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ತಜ್ಞೆಯಾಗಿ ಬೆಂಗಳೂರಿನ ಪ್ರೊಫೆಸರ್ ಅಶ್ವಿನಿ ನೇಮಕ
ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ಸ್ವತಂತ್ರ ತಜ್ಞೆಯಾಗಿ ಬೆಂಗಳೂರು ಮೂಲದ ಅಶ್ವಿನಿ ಕೆ.ಪಿ. ಅಕ್ಟೋಬರ್ 7ರಂದು ನೇಮಕವಾಗಿದ್ದಾರೆ. ಜನಾಂಗೀಯತೆ ಹಾಗು ಅದರ ಸಂಬಂಧಿತ ಅಸಹಿಷ್ಣುತೆಯ ವಿಚಾರದ ಬಗ್ಗೆ ಅವರು ಸ್ವತಂತ್ರ ತಜ್ಞೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಶ್ವಿನಿ ಕೆ.ಪಿ. ಅವರು ಯುಎನ್ಎಚ್ಆರ್ಸಿಯಲ್ಲಿ ಸ್ಪೆಷಲ್ ರೆಪೋಟರ್ (ಎಸ್ಆರ್) ಆಗಿ ನೇಮಕವಾದ ಮೊದಲ ಭಾರತೀಯೆ ಮಾತ್ರವಲ್ಲ, ಮೊದಲ ಏಷ್ಯನ್ ವ್ಯಕ್ತಿ ಕೂಡ ಹೌದು.
ಝಾಂಬಿಯಾ ದೇಶ ಎ. ತೇಂಡಯಿ ಅಚ್ಯೂಮೆ ತಮ್ಮ 3 ವರ್ಷದ ಅವಧಿಗೆ ಮುನ್ನವೇ ರಾಜೀನಾಮೆ ನೀಡಿದ ಬಳಿಕ ಎಸ್ಆರ್ ಸ್ಥಾನ ಖಾಲಿ ಇತ್ತು. ಈ ಸ್ಥಾನಕ್ಕೆ ಅಶ್ವಿನಿ ಸೇರಿದಂತೆ ಮೂವರ ಹೆಸರು ಶಾರ್ಟ್ ಲಿಸ್ಟ್ ಆಗಿತ್ತು. ಭಾರತದವರೇ ಆದ ಜೋಶುವಾ ಕ್ಯಾಸ್ಟೆಲಿನೋ ಹಾಗೂ ಬೋಟ್ಸ್ವಾನಾದ ಯೂನಿಟಿ ಡೋವ್ ಅವರು ಇತರ ಇಬ್ಬರು. ಅಂತಿಮವಾಗಿ ಅಶ್ವಿನಿ ಕೆ.ಪಿ. ನೇಮಕವಾಗಿದ್ದಾರೆ.
ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ 51ನೇ ಅಧಿವೇಶನ ಮುಕ್ತಾಯಕ್ಕೆ ಮುನ್ನ ಅಕ್ಟೋಬರ್ 7ರಂದು ಅಶ್ವಿನಿ ಅವರನ್ನು ಸ್ಪೆಷಲ್ ರೆಪೋರ್ಟರ್ (SR- Special Rapporteur) ಆಗಿ ನೇಮಕಾತಿ ಮಾಡಿ ಅಧಿಕೃತವಾಗಿ ಘೋಷಿಸಲಾಯಿತು.
ಈಗ ಸ್ಥಾನಕ್ಕೆ ನೇಮಕವಾದ ಅಶ್ವಿನಿ ಕೆ.ಪಿ. ಬೆಂಗಳೂರಿನವರು. ದಲಿತ ಕಾರ್ಯಕರ್ತೆ ಮತ್ತು ರಾಜಕೀಯ ಶಾಸ್ತ್ರದ ಪ್ರೊಫೆಸರ್ ಕೂಡ ಹೌದು. ಜನಾಂಗೀಯತೆ, ಜನಾಂಗೀಯ ತಾರತಮ್ಯ, ಕ್ಸೆನೋಫೋಬಿಯಾ (ಪರದೇಶಿಗಳ ಬಗ್ಗೆ ಭಯ) ಹಾಗೂ ಇಂಥ ವಿವಿಧ ರೀತಿಯ ವಿಚಾರಗಳ ಬಗ್ಗೆ ಯುಎನ್ಎಚ್ಆರ್ಸಿಗೆ ಅಶ್ವಿನಿ ಕೆ.ಪಿ. ವರದಿ ಮಾಡಲಿದ್ದಾರೆ. ನವೆಂಬರ್ 1ರಿಂದ ಅವರ ಸೇವಾವಧಿ ಇರಲಿದ್ದು, ಮೂರು ವರ್ಷ ಕಾಲ ಕಾರ್ಯನಿರ್ವಹಿಸಲಿದ್ದಾರೆ.
ಸ್ಪೆಷಲ್ ರೆಪೋರ್ಟರ್ಗಳ ಕೆಲಸವೇನು?
ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ ಸ್ವತಂತ್ರ ತಜ್ಞರಾಗಿ ಹಲವು ವಿಶೇಷ ರೆಪೋರ್ಟರ್ಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ, ಆಯಾ ಕ್ಷೇತ್ರದಲ್ಲಿ ನುರಿತವರನ್ನು ಎಸ್ಆರ್ ಆಗಿ ಆಯ್ಕೆ ಮಾಡಲಾಗುತ್ತದೆ. ಒಂದು ದೇಶಕ್ಕೆ ನಿರ್ದಿಷ್ಟವಾಗಿ ಮಾನವ ಹಕ್ಕು ವಿಚಾರಗಳನ್ನು ಇವರು ವರದಿ ಮಾಡುತ್ತಾರೆ.

ಇದು ಸಂಭಾವನೆ ರಹಿತ ಹುದ್ದೆಯಾಗಿದೆ. ಯುಎನ್ಎಚ್ಆರ್ಸಿಯಲ್ಲಿ ವಿವಿಧ ವಿಚಾರಗಳಿಗೆ ತಜ್ಞರಾಗಿ 45 ಎಸ್ಆರ್ಗಳು ಮತ್ತು ದೇಶ ನಿರ್ದಿಷ್ಟ ತಜ್ಞರಾಗಿ 13 ಎಸ್ಆರ್ಗಳಿರುತ್ತಾರೆ. ಇವರೆಲ್ಲರೂ ತಮಗೆ ವಹಿಸಿದ ವಿಚಾರಗಳ ಬಗ್ಗೆ ಜಾಗತಿಕ ಅಥವಾ ನಿರ್ದಿಷ್ಟ ದೇಶದಲ್ಲಿ ಬೆಳವಣಿಗೆಯ ಮೇಲೆ ನಿಗಾ ಇಟ್ಟು ಸ್ವತಂತ್ರವಾಗಿ ಅವಲೋಕಿಸಿ ಯುಎನ್ಎಚ್ಆರ್ಸಿ ಅಧ್ಯಕ್ಷರಿಗೆ ವರದಿ ಮತ್ತು ಸಲಹೆ ನೀಡುವ ಜವಾಬ್ದಾರಿ ಹೊಂದಿರುತ್ತಾರೆ. ಈ ಜವಾಬ್ದಾರಿಯನ್ನು ಮ್ಯಾಂಡೇಟ್ ಎಂದು ಕರೆಯಲಾಗುತ್ತದೆ.
ರೇಸಿಸಂ ಅಥವಾ ಜನಾಂಗೀಯತೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಯುಎನ್ಎಚ್ಆರ್ಸಿಯಲ್ಲಿ 1994ರಲ್ಲಿ ಮ್ಯಾಂಡೇಟ್ ರಚಿಸಲಾಯಿತು. ಆಫ್ರಿಕನ್ನರು, ಆಫ್ರಿಕಾ ಮೂಲದವರು, ಅರಬ್ಬರು, ಮುಸ್ಲಿಮರು, ಏಷ್ಯನ್ನರು, ಏಷ್ಯನ್ ಮೂಲದವರು, ವಲಸಿಗರು, ಮತ್ತು ಯಾವ ರಾಷ್ಟ್ರೀಯತೆ ಇಲ್ಲದವರು, ಮೂಲವಾಸಿಗಳು, ಅಲ್ಪಸಂಖ್ಯಾತರು, ಹಾಗು ಡರ್ಬನ್ ಡಿಕ್ಲರೇಶನ್ ಅಂಡ್ ಪ್ರೋಗ್ರಾಮ್ ಆಫ್ ಆ್ಯಕ್ಷನ್ನಲ್ಲಿ ಪ್ರಸ್ತಾಪಿಸಲಾದ ಸಂತ್ರಸ್ತರು ಇವರಲ್ಯಾರನ್ನಾದರೂ ಗುರಿಯಾಗಿಸಿ ಜನಾಂಗೀಯ ದೌರ್ಜನ್ಯ ಇತ್ಯಾದಿ ಅಸಹಿಷ್ಣು ಘಟನೆಗಳು ನಡೆದಲ್ಲಿ ಅದರನ್ನು ವರದಿ ಮಾಡಬೇಕೆಂದಿದೆ.
ಜನಾಂಗೀಯತೆಯ ವಿಚಾರದ ಬಗ್ಗೆ 1994ರಿಂದ ಎಸ್ಆರ್ ಆಗಿ ನೇಮಕವಾಗಿರುವುದು ಅಶ್ವಿನಿ ಅವರು ಆರನೆಯವರು. ಈ ಮೊದಲು ಎಸ್ಆರ್ಗಳಾದ ಎಲ್ಲಾ ಐವರೂ ಕೂಡ ಆಫ್ರಿಕನ್ನರು. ಈಗ ಮೊದಲ ಬಾರಿಗೆ ಆಫ್ರಿಕನ್ನೇತರರು ಜನಾಂಗೀಯ ಸಮಸ್ಯೆ ಬಗ್ಗೆ ಯುಎನ್ಎಚ್ಆರ್ಸಿಯಲ್ಲಿ ಸ್ವತಂತ್ರ ತಜ್ಞೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಇತ್ತೀಚೆಗೆ ಮುಸ್ಲಿಮರು, ಭಾರತೀಯ ಮೂಲದ ಜನರ ಮೇಲೆ ಜನಾಂಗೀಯ ನಿಂದನೆ, ತಾರತಮ್ಯದ ಪ್ರಕರಣಗಳು ಹೆಚ್ಚುತ್ತಿದೆ. ಈ ಕಾರಣಕ್ಕೆ ಅಶ್ವಿನಿ ಅವರನ್ನು ಸ್ಪೆಷಲ್ ರೆಪೋರ್ಟರ್ ಆಗಿ ಆಯ್ಕೆ ಮಾಡಲಾಗಿದೆ.

ಬೆಂಗಳೂರಿನವರು:
ಅಶ್ವಿನಿ ಕೆಪಿ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದರು. "ಝರಿಯಾ: ವುಮೆನ್ಸ್ ಅಲಾಯನ್ಸ್ ಫಾರ್ ಡಿಗ್ನಿಟಿ ಅಂಡ್ ಈಕ್ವಾಲಿಟಿ" ಎಂಬ ಎನ್ಜಿಒದ ಸಹ-ಸಂಸ್ಥಾಪಕಿ.
ಜೆಎನ್ಯುನಲ್ಲಿ ಪಿಎಚ್ಡಿ ಮಾಡಿದ್ದಾರೆ. ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಭಾರತ ಘಟಕದಲ್ಲಿ ಕೆಲಸ ಮಾಡಿದ್ದಾರೆ. ದಲಿತ ವಿಚಾರಗಳ ಬಗ್ಗೆ ಬಹಳ ಕಾಳಜಿ ಇಟ್ಟುಕೊಂಡಿದ್ದಾರೆ. ಮಾನವ ಹಕ್ಕು ವಿಚಾರಗಳಲ್ಲಿ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನಾಂಗೀಯ ತಾರತಮ್ಯದಂಥ ವಿಚಾರಗಳಲ್ಲಿ ಸೂಕ್ಷ್ಮ ಸಂವೇದನೆ ಹೊಂದಿರುವುದು ಅಶ್ವಿನಿ ಕೆಪಿ ಅವರನ್ನು ಯುಎನ್ಎಚ್ಆರ್ಸಿಯಲ್ಲಿ ಎಸ್ಆರ್ ಆಗಿ ನೇಮಕ ಮಾಡಲು ಪ್ರಮುಖ ಕಾರಣ.
ಅರ್ಜಿಯಲ್ಲಿ ಅಶ್ವಿನಿ ಬರೆದುಕೊಂಡಿದ್ದು:
"ದಲಿತ ಮಹಿಳೆ ಮತ್ತು ಶೋಷಿತ ಸಮುದಾಯದ ವ್ಯಕ್ತಿಯಾಗಿರುವ ನಾನು ಹುಟ್ಟು ಮತ್ತು ಉದ್ಯೋಗ ಆಧಾರಿತ ತಾರತಮ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೆಲಸ ಮಾಡಿದ್ದೇನೆ. ಛತ್ತೀಸ್ಗಡ, ಒಡಿಶಾ ರಾಜ್ಯಗಳಲ್ಲಿ ಅಕ್ರಮ ಭೂಸ್ವಾಧೀನದಿಂದ ಸಂತ್ರಸ್ತರಾದ ಮೂಲನಿವಾಸಿಗಳ ಜೊತೆ ಕೆಲಸ ಮಾಡಿದ್ದೇನೆ. ಹುಟ್ಟಿನಿಂದ ಮತ್ತು ಉದ್ಯೋಗದಿಂದ ತಾರತಮ್ಯ ಎದುರಿಸುವ ಜನರ ಜೊತೆ ಕೆಲಸ ಮಾಡುವ ಅನೇಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದೇನೆ" ಎಂದು ಅಶ್ವಿನಿ ಕೆ.ಪಿ. ಯುಎನ್ಎಚ್ಆರ್ಸಿಗೆ ಎಸ್ಆರ್ ಸ್ಥಾನಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಮ್ಮ ಬಗ್ಗೆ ಹೇಳಿಕೊಂಡಿದ್ದರು.
(ಒನ್ಇಂಡಿಯಾ ಸುದ್ದಿ)
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers












Click it and Unblock the Notifications