ನಿದ್ದೆ ಬರಿಸುವ ಮೂರು ಸಖತ್ ಟ್ರಿಕ್ಸ್
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತೆ ಅಂತ ಗಾದೆ ಮಾತು ಕೇಳಿರುತ್ತೇವೆ. ಇದು ನಿದ್ದೆ ಬಾರದ ವ್ಯಕ್ತಿ ಹುಟ್ಟುಹಾಕಿದ ಗಾದೆ ಮಾತಿರಬಹುದೇನೋ.!
ವಯಸ್ಸಾದರೆ ನಿದ್ದೆ ಬರೋದಿಲ್ಲ ಎನ್ನೋದು ಸಹಜ. ಆದರೆ, ಆರೋಗ್ಯವಾಗಿರುವ ಜನರೂ ಕೆಲವೊಮ್ಮೆ ರಾತ್ರಿಯ ಹೊತ್ತು ನಿದ್ದೆ ಬರದೇ ಒದ್ದಾಡುವುದನ್ನು ನೋಡಿರುತ್ತೇವೆ. ಯಾಕೆ ಹೀಗೆ? ಹಾಸಿಗೆಯಲ್ಲಿ ವಿಲ ವಿಲ ಒದ್ದಾಡಿದರೂ ನಿದ್ದೆ ಹತ್ತೊಲ್ಲದು. ಹೀಗೆ ಅತ್ತಿಂದಿತ್ತ ಗಂಟೆಗಟ್ಟಲೆ ಉರುಳಾಡಿ ಕೊನೆಗೆ ಮೊಬೈಲ್ ಹಿಡಿದೋ, ಟಿವಿ ನೋಡುತ್ತಲೇ ಕೂತು ಬಿಡುವುದಿದೆ. ನಿದ್ದೆ ಬರೋದು ರಾತ್ರಿ ನಾಲ್ಕು ಗಂಟೆ ಆದೀತು.
ರಾತ್ರಿ ನಿದ್ದೆ ಇಲ್ಲದೇ ತಡವಾಗಿ ಮಲಗಿದವರು ಬೆಳಗ್ಗೆ ಬೇಗನೇ ಏಳುವುದು ಮಾತ್ರ ಅನಿವಾರ್ಯ. ಸರಿಯಾಗಿ ನಿದ್ದೆ ಇಲ್ಲದೇ ಅವರದ್ದು ಇಡೀ ದಿನ ಆಯಾಸಗೊಂಡ ಸ್ಥಿತಿ.
ಅಷ್ಟಕ್ಕೂ ನಿದ್ದೆ ಯಾಕೆ ಬರೋದಿಲ್ಲ? ದೇಹದ ಕಾಯಿಲೆ ಕಾರಣದಿಂದ ನಿದ್ದೆ ಹತ್ತುತ್ತಿಲ್ಲವೆಂದರೆ ಅದಕ್ಕೆ ವೈದ್ಯಕೀಯ ತಪಾಸಣೆ ಮಾಡಿಕೊಳ್ಳಬಹುದು. ಆದರೆ ಬಹುತೇಕ ಸಂದರ್ಭದಲ್ಲಿ ನಿದ್ದೆ ಬರದೇ ಇರಲು ಮಾನಸಿಕ ಕಾರಣಗಳಿವೆ. ಅದೃಷ್ಟಕ್ಕೆ ಮಾನಸಿಕ ವಿಚಾರಕ್ಕೆ ನಿದ್ದೆ ಬರುತ್ತಿಲ್ಲವಾದರೆ ಸಮಸ್ಯೆ ನಿವಾರಣೆ ಕೆಲ ಪರಿಣಾಮಕಾರಿ ತಂತ್ರಗಳಿವೆ.

ನಿದ್ರಾ ತಜ್ಞರು ಏನಂತಾರೆ?
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತೆ ಅನ್ನೋದು ಎಷ್ಟು ನಿಜವೋ, ಚಿಂತೆ ಇದ್ದರೆ ನಿಮಗೆ ಕತ್ತಲ ಕೋಣೆಯಲ್ಲಿ ಕೂಡಿಹಾಕಿದರೂ ನಿದ್ದೆ ಬರೋದಿಲ್ಲ ಅನ್ನೋದು ಸತ್ಯ. ಮಲಗುವಾಗ ನಮ್ಮ ತಲೆ ಬಹುತೇಕ ಖಾಲಿ ಇರಬೇಕು. ಅಂದರೆ ಯೋಚನೆಗಳು ಸಂಪೂರ್ಣ ಹೊರಗಿರಬೇಕು. ಆಗ ಪರಿಪೂರ್ಣವಾಗಿ ನಿದ್ರೆ ಹತ್ತುತ್ತದೆ.
ಜನರು ನಿದ್ರೆ ಮಾಡಲು ಕಷ್ಟಪಡುತ್ತಿದ್ದಾರೆಂದರೆ ಬಹುತೇಕ ಅವರ ತಲೆಯಲ್ಲಿ ಚಿಂತೆಯೇ ಹೆಚ್ಚಿರುತ್ತದೆ. ನಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ನಾವೆಷ್ಟು ಮುಳುಗಿ ಹೋಗಿರುತ್ತೇವೆಂದರೆ ಹಗಲಿನ ಯಾವ ಹೊತ್ತಿನಲ್ಲೂ ಆ ದಿನದ ಘಟನೆಗಳನ್ನು ಮೆಲುಕು ಹಾಕುಲು ಸಮಯವೇ ಸಿಗುವುದಿಲ್ಲ. ಹೀಗಾಗಿ ಎಲ್ಲಾ ಯೋಚನೆ, ಆಲೋಚನೆಗಳು ಮಲಗುವಾಗ ವಕ್ಕರಿಸುತ್ತವೆ. ಇದು ನಿದ್ರೆಗೆ ಅಡ್ಡಗಾಲು ಹಾಕುತ್ತದೆ ಎನ್ನುತ್ತಾರೆ ತಜ್ಞರು.
ನಿಮ್ಮ ನಿದ್ರೆಗೆ ಅಡ್ಡಿಯಾಗಿರುವ ಯೋಚನೆಗಳನ್ನು ತಲೆಯಿಂದ ಹೊರಗಟ್ಟುವುದಕ್ಕೆ ತಜ್ಞರು ಮೂರು ಪರಿಣಾಮಕಾರಿ ಮತ್ತು ಸರಳ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಇವು ಬಹಳ ಕುತೂಹಲ ಎನಿಸುತ್ತವೆ.

ಐಡಿಯಾ 1, ಚಿಂತೆಗೆ ಬೇರೆ ಸಮಯ ಇಡಿ
ಮಲಗುವಾಗ ನಿಮಗೆ ಎಲ್ಲಾ ಆಲೋಚನೆ, ಚಿಂತೆಗಳು ಮುತ್ತಿಕೊಂಡು ನಿದ್ದೆ ಹತ್ತದಂತೆ ಮಾಡುತ್ತವೆಯಾ? ಹಾಗಾದರೆ ಚಿಂತೆಗಳಿಗೆ ಬೇರೆ ಸಮಯವನ್ನು ಎತ್ತಿಡಿ. ಆದರೆ ಚಿಂತೆ ದೂರ ಮಾಡಲು ಹೇಗೆ ಸಾಧ್ಯ? ಅದಕ್ಕೂ ಟ್ರಿಕ್ ಇದೆ.
ಮಲಗುವ ಮುನ್ನ ಒಂದು ಕಡೆ ಕುಳಿತುಕೊಂಡು ನಿಮ್ಮ ತಲೆಯಲ್ಲಿ ಹೊಯ್ದಾಡುತ್ತಿರುವ ಚಿಂತೆಗಳನ್ನು ಪುಸ್ತಕದಲ್ಲೋ ಅಥವಾ ಎಲ್ಲಿಯಾದರೋ ಬರೆದಿಡಿ. ಚಿಂತೆ ಎಂಥದ್ದೇ ಇರಲಿ, ಸಣ್ಣದೋ ದೊಡ್ಡದೋ ಯಾವುದೇ ಇರಲಿ ಬರೆಯಿರಿ ಎನ್ನುತ್ತಾರೆ ತಜ್ಞ ವೈದ್ಯ ರೆಬೆಕಾ ರಾಬಿನ್ಸ್.
ಅಥವಾ ನೀವು ಕೆಲಸ ಮಾಡುವ ಆಫೀಸ್ನ ಯಾವುದೇ ಪ್ರಾಜೆಕ್ಟ್ ನಿಮ್ಮನ್ನು ಬಾಧಿಸುತ್ತಿದ್ದಿರಬಹುದು. ಅಥವಾ ಮನೆಯ ಯಾವುದೋ ಮುಖ್ಯವಾದ ಕೆಲಸ ಬಾಕಿ ಉಳಿದುಕೊಂಡಿರಬಹುದು. ಹೀಗೇ ಏನೇ ಇರಲಿ ಅದನ್ನು ಬರೆಯಿರಿ.
ನಾಳೆಯ ದಿನ ಏನೇನು ಕೆಲಸ ಮಾಡಬೇಕು ಎಂದು ಪಟ್ಟಿ ಮಾಡಿಟ್ಟರೆ ಆಗ ಬಹುತೇಕ ನಿಮ್ಮೆಲ್ಲಾ ಚಿಂತೆಗಳು ಆವತ್ತಿನ ಮಟ್ಟಿಗೆ ದೂರವಾಗಲು ಸಾಧ್ಯವಾಗುತ್ತದೆ. ನಿದ್ದೆ ಮಾತ್ರವಲ್ಲ ನಿಮ್ಮ ಜೀವನಕ್ಕೆ ಒಂದು ಶಿಸ್ತೂ ಸಿಕ್ಕಂತಾಗುತ್ತದೆ.

ಐಡಿಯಾ 2: ನಿದ್ದೆ ಸಹವಾಸವೇ ಬೇಡ
ನಿದ್ದೆ ಬೇಕು ಎನ್ನೋ ಬಯಸಿ ಬಯಸಿ ನಿದ್ದೆಗೆಡುತ್ತೇವೆ. ಯೋಚಿಸಿ ನೋಡಿ, ಇದು ನಿಜವೇ ತಾನೇ? ಮಾನಸಿಕ ವಿಜ್ಞಾನ ಕೂಡ ಅದನ್ನೇ ಹೇಳುತ್ತದೆ. ಇದಕ್ಕೆ ಮನಃಶಾಸ್ತ್ರದಲ್ಲಿ ಪರಿಹಾರವೂ ಇದೆ. ಇವತ್ತು ರಾತ್ರಿ ನಿದ್ದೆ ಮಾಡಲೇಬೇಕೆಂಬ ಆಲೋಚನೆಯನ್ನು ಮನಸ್ಸಿನಿಂದ ತೆಗೆದುಹಾಕಿಯೇ ಹಾಸಿಗೆ ಹತ್ತಿ ಹೋಗಿ. ಹಾಗೇ ಸುಮ್ಮನೆ ಮಲಗಿ. ಕಣ್ಣು ಮುಚ್ಚಬೇಡಿ. ಕಣ್ಣು ಪೂರ್ಣವಾಗಿ ತೆರೆದೇ ಇರಲಿ. ಮಲಗುವ ಯೋಚನೆ ಬಿಟ್ಟು ಎಚ್ಚರದಿಂದಿರುವತ್ತ ಗಮನ ಇರಲಿ. ಇದರಿಂದ ಮಲಗಬೇಕೆಂಬ ಒತ್ತಡ ಮತ್ತು ಮಲಗಲು ಆಗುತ್ತಿಲ್ಲವಲ್ಲ ಎಂಬ ಆತಂಕ ನಿವಾರಣೆ ಆಗುತ್ತದೆ.
ಇಲ್ಲಿ ಇನ್ನೊಂದು ವಿಚಾರ ನೆನಪಿರಲಿ. ನಿದ್ರಾಹೀನತೆ ಎಂಬುದು ಅಥವಾ ಮಲಗಲು ಆಗುತ್ತಿಲ್ಲ ಎಂಬುದು ನಿಮ್ಮ ಭಯ. ಈ ಭಯವನ್ನೇ ನೀವು ನೇರವಾಗಿ ಎದುರಿಸುತ್ತಿದ್ದೀರಿ. ಸಮಯ ಕಳೆದಂತೆ ನಿಮ್ಮ ಮೇಲಿನ ಒತ್ತಡ ಕಡಿಮೆಯಾಗುತ್ತಾ ಹೋಗುತ್ತದೆ. ಮಲಗಬೇಕೆಂಬ ಒತ್ತಡವೇ ಇಲ್ಲದಿದ್ದಾಗ ನಿದ್ರೆ ಸಹಜವಾಗಿಯೇ ಬಂದುಬಿಡುತ್ತದೆ ಎನ್ನುತ್ತಾರೆ ಮನೋಜ್ಞಾನಿ ಶೆಲ್ಬಿ ಹ್ಯಾರಿಸ್.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಲಗದೇ ಎಚ್ಚರ ಇರಬೇಕೆಂದು ನೀವು ಅದೂ ಇದೂ ಕೆಲಸ ಮಾಡುವುದಾಗಲೀ, ಮೊಬೈಲ್ ನೋಡುವುದಾಗಲೀ, ಮ್ಯೂಸಿಕ್ ಕೇಳುವುದಾಗಲೀ, ಟಿವಿ ನೋಡುವುದಾಗಲೀ ಅಥವಾ ಇನ್ನೇನಾದರೂ ಮಾಡುವುದಾಗಲೀ ಆಗಬಾರದು. ಇವತ್ತು ರಾತ್ರಿ ನಾನು ಎಚ್ಚರವಾಗಿಯೇ ಇರುತ್ತೇನೆ ಎಂದು ಮನಸಿನಲ್ಲಿ ನಿರ್ಧರಿಸಿಕೊಂಡು ಹಾಗೇ ಸುಮ್ಮನೆ ಹಾಸಿಗೆ ಮೇಲೆ ಕಣ್ಣು ತೆರೆದುಕೊಂಡೇ ಮಲಗಬೇಕು. ಇದೇ ಟ್ರಿಕ್.

ಐಡಿಯಾ 3: ಮನಸ್ಸಲ್ಲೇ ಅಂಕಿ ಆಟ
ಮಲಗುವ ಮುನ್ನ ಬಹಳಷ್ಟು ಯೋಚನೆಗಳು ದುತ್ತನೆ ಆವರಿಸಿಬಿಡುತ್ತವೆ. ಮೊದಲ ಐಡಿಯಾದಲ್ಲಿ ನಾವು ಚಿಂತೆಗಳಿಗೆ ಸಿಕ್ಕು ಹೇಗೆ ನಿದ್ದೆಗೆಡುತ್ತೀವಿ. ಅದರಿಂದ ಹೇಗೆ ಹೊರಬರಬೇಕು ಎಂದು ತಿಳಿದೆವು. ಈಗ ನಮಗೆ ಕ್ರಿಯಾತ್ಮಕ ಆಲೋಚನೆಗಳು ಮಲಗುವ ಸಮಯದಲ್ಲಿ ಬಂದುಬಿಡಬಹುದು. ಮಲಗಲು ಕಷ್ಟವಾಗಬಹುದು.
ಇಂಥ ಸಂದರ್ಭದಲ್ಲಿ ಅಂತ್ಯಾಕ್ಷರಿ ರೀತಿಯ ಒಂದು ಆಟವನ್ನು ನೀವೊಬ್ಬರೇ ಮನಸಿನಲ್ಲಿ ಆಡಿಕೊಳ್ಳಿ. ಯಾವುದಾದರೂ ಒಂದು ವಸ್ತುವಿನ ಹೆಸರು ಆಯ್ದುಕೊಳ್ಳಿ. ಉದಾಹರಣೆಗೆ, 'ವಿಕ್ರಾಂತ್ ರೋಣ' ನೆನಪಿಸಿಕೊಳ್ಳಿ. ಇಲ್ಲಿ ಈ ಪದಗಳ ಮೊದಲ ಅಕ್ಷರ ವ. ಈ ವ ಅಕ್ಷರದ ಯಾವೆಲ್ಲಾ ಪದಗಳು ಗೊತ್ತೋ ಅದೆಲ್ಲವನ್ನೂ ಮನಸಿನಲ್ಲೇ ಪಟ್ಟಿ ಮಾಡಿ. ಜೊತೆಗೆ ಆ ಪದಗಳ ದೃಶ್ಯವನ್ನೂ ಮನಸ್ಸಿನಲ್ಲೇ ಕಲ್ಪಿಸಿಕೊಳ್ಳಿ. ಉದಾಹರಣೆ, ವಂದನೆ. ವಂದನೆ ಎಂದರೆ ಕೈ ಮುಗಿಯುವ ಚಿತ್ರಣ.
ಹೀಗೆ ನಿಮಗೆ ಗೊತ್ತಿರುವಷ್ಟು ಪದಗಳನ್ನು ಮನಸ್ಸಿನಲ್ಲೇ ಪಟ್ಟಿ ಮಾಡಿ. ನಂತರ ನಿಮ್ಮ ಮೂಲ ಪದ ವಿಕ್ರಾಂತ್ ರೋಣದ ಎರಡನೇ ಅಕ್ಷರ ಕ ಎತ್ತಿಕೊಳ್ಳಿ. ಆ 'ಕ' ಅಕ್ಷರದಿಂದ ಪ್ರಾರಂಭವಾಗುವ ಪದಗಳು ಮತ್ತದರ ಚಿತ್ರಣವನ್ನು ಕಲ್ಪಿಸಿಕೊಳ್ಳುತ್ತಾ ಹೋಗಿ. ಹೀಗೆ ವಿಕ್ರಾಂತ್ ರೋಣದ ಎಲ್ಲಾ ಅಕ್ಷರಗಳಿಗೂ ಇದೇ ಪ್ರಕ್ರಿಯೆ ಇರಲಿ.
ನೀವು ಪದಗಳನ್ನು ಪಟ್ಟಿ ಮಾಡುವುದರ ಜೊತೆಗೆ ಅದರ ದೃಶ್ಯವನ್ನು ಕಲ್ಪಿಸಿಕೊಳ್ಳುವುದರಿಂದ ಮನಸ್ಸಿನ ಹೊಯ್ದಾಟಗಳನ್ನು ದೂರ ಮಾಡಿ ನಿಮ್ಮ ಮಿದುಳನ್ನು ಶಾಂತಗೊಳಿಸಬಹುದು ಎನ್ನುತ್ತಾರೆ ನಿದ್ರಾ ತಜ್ಞರು.
(ಒನ್ಇಂಡಿಯಾ ಸುದ್ದಿ)
-
Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ -
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications