ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ
Suryakumar Yadav Retirement: ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವೆ ಭಾನುವಾರ (ಮಾರ್ಚ್ 8) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನವೇ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿವೃತ್ತಿ ವದಂತಿಯೊಂದು ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದ ನಂತರ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಕೆಲವು ಮಾಧ್ಯಮಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.

ಅಧಿಕೃತ ಮಾಹಿತಿ ಹೊರಬಿದ್ದಿಲ್ಲ
ಆದರೆ, ಸೂರ್ಯಕುಮಾರ್ ಯಾದವ್ ಅಥವಾ ಬಿಸಿಸಿಐ ಆಗಲಿ ಈ ಬಗ್ಗೆ ಎಲ್ಲಿಯೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕಳೆದ ಬಾರಿ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರು ನಿವೃತ್ತಿ ಘೋಷಣೆ ಮಾಡಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಅವರ ವಿಷಯದಲ್ಲೂ ಅದೇ ರೀತಿಯದ್ದೇನಾದರೂ ನಡೆಯಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಸೂರ್ಯಕುಮಾರ್ ಯಾದವ್ ಸದ್ಯ ಕೇವಲ ಟಿ20 ಕ್ರಿಕೆಟ್ ಅನ್ನು ಮಾತ್ರ ಆಡುತ್ತಿದ್ದಾರೆ. ಅವರು ಏಕದಿನ ತಂಡಕ್ಕೆ ಮರಳುವ ಬಗ್ಗೆಯೂ ಈ ಹಿಂದೆ ತಿಳಿಸಿದ್ದರು. ಹೀಗಿರುವಾಗ, ಕೇವಲ ಒಂದು ಫಾರ್ಮ್ಯಾಟ್ಗೆ ಮಾತ್ರ ಸೀಮಿತವಾಗಿರುವಾಗ ಎಲ್ಲಾ ಮಾದರಿಯ ಕ್ರಿಕೆಟ್ಗೂ ನಿವೃತ್ತಿ ಘೋಷಣೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕುತೂಹಲ ಕೆರಳಿಸಿದ ಎಸ್ಕೆವೈ ನಿವೃತ್ತಿ ವದಂತಿ
ಸೂರ್ಯಕುಮಾರ್ ಅವರು ಟಿ20 ನಾಯಕರಾಗಿ ಭಾರತ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ತಂಡವು ಇಲ್ಲಿಯವರೆಗೆ ಯಾವುದೇ ಟಿ20 ಸರಣಿಯನ್ನು ಸೋತಿಲ್ಲ. ಆದ್ದರಿಂದ, ತಂಡದ ನಾಯಕನಾಗಿ ಅವರ ಜವಾಬ್ದಾರಿ ಇನ್ನೂ ಮುಂದುವರಿಯುವ ಸಾಧ್ಯತೆಗಳೇ ಹೆಚ್ಚು. ಯಾವುದೇ ಅಧಿಕೃತ ಮಾಹಿತಿ ಬಾರದ ಹಿನ್ನೆಲೆ ಸದ್ಯಕ್ಕೆ ಇದನ್ನು ವದಂತಿ ಅಂತಲೇ ಪರಿಗಣಿಸಲಾಗುತ್ತದೆ. ಸದ್ಯ ಸೂರ್ಯಕುಮಾರ್ ನಾಳಿನ ಫೈನಲ್ ಪಂದ್ಯದ ಮೇಲೆ ಗಮನಹರಿಸಿದ್ದು, ನಾಳೆ ಏನಾದರೂ ನಿವೃತ್ತಿ ಬಗ್ಗೆ ಮಾತನಾಡುತ್ತಾರಾ ಎನ್ನುವ ಪ್ರಶ್ನೆಗಳು ಎದ್ದಿವೆ.
ಮತ್ತೊಂದೆಡೆ, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕುತ್ತಿದ್ದಾರೆ. ಅವರು ಉತ್ತಮವಾಗಿ ತಂಡವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ನಾಯಕರಾಗಿ ಮುಂದುವರೆಯಬೇಕು. ಯಾವುದೇ ಕಾರಣಕ್ಕೂ ನಿವೃತ್ತಿ ಘೋಷಣೆ ಮಾಡಬಾರದು ಎಂದು ಹೇಳುತ್ತಿದ್ದಾರೆ.












Click it and Unblock the Notifications