ನಾವೂ ಒಂದು ಸಮೀಕ್ಷೆ ಬಿಡ್ತೀವಿ ನೋಡಿ: ಸಂದರ್ಶನದಲ್ಲಿ ಉಪೇಂದ್ರ
Recommended Video

"ನಮ್ಮ ಟೀಮ್ ನಿಂದಲೂ ಒಂದು ಸಮೀಕ್ಷೆ ಮಾಡಿಸಿದ್ದೀವಿ. ಅದನ್ನೂ ಬಿಡುಗಡೆ ಮಾಡ್ತೀವಿ. ಆಗ ನೀವೇ ನೋಡಿ. ಅದು ಬರೀ ಸಂಖ್ಯೆಗಳಲ್ಲ, ಕ್ರಮಬದ್ಧವಾಗಿ ಸಮೀಕ್ಷೆ ಮಾಡಿಸಿದ್ದೀವಿ" ಎಂದರು ನಟ ಹಾಗೂ ಕೆಪಿಜೆಪಿ ಪಕ್ಷದ ಮುಖ್ಯಸ್ಥ ಉಪೇಂದ್ರ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕು ತಿಂಗಳಷ್ಟೇ ಸಮಯ ಇದೆ. ಈ ಹಿನ್ನೆಲೆಯಲ್ಲಿ ಒನ್ಇಂಡಿಯಾ ಕನ್ನಡದಿಂದ ಉಪೇಂದ್ರ ಸಂದರ್ಶನ ಮಾಡಲಾಗಿದೆ. ಈ ವರೆಗಿನ ಚುನಾವಣೆ ಸಮೀಕ್ಷೆಗಳ ಪ್ರಕಾರ ಕೆಪಿಜೆಪಿಯು ಯಾವುದೇ ಸ್ಥಾನ ಗಳಿಸುವುದಿಲ್ಲ ಅಂತಲೇ ಬರುತ್ತಿದೆ. ಈ ಬಗ್ಗೆ ನೀವೇನಂತೀರಾ ಎಂಬ ಪ್ರಶ್ನೆಗೆ ಈ ಮೇಲಿನಂತೆ ಉಪೇಂದ್ರ ಉತ್ತರಿಸಿದರು.
ಮನೆಯ ಮಹಡಿಯ ಮೇಲೆ ಸೋಫಾದಲ್ಲಿ ಕುಳಿತಿದ್ದ ಉಪೇಂದ್ರ ಎದುರು ತಾಲೀಮಿಗೆ ಅಂತಲೇ ಇದ್ದ ಜಿಮ್ ನ ಸಲಕರಣೆಗಳಿದ್ದವು. ಅಲ್ಲೊಂದು ಬೋರ್ಡ್ ಮೇಲೆ ನಾನು+ನಾನು+ನಾನು= ನಾವು ಎಂಬ ಒಕ್ಕಣೆ. ಬಜೆಟ್ ಬಗ್ಗೆ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯಂತೆ ಓದಿಕೊಳ್ಳುತ್ತಿದ್ದ ಅವರು, ನಮಗೆ ಸಂದರ್ಶನ ನೀಡುವ ಸಲುವಾಗಿಯೇ ಸ್ವಲ್ಪ ಬಿಡುವಾದರು.
ಇದೇ ಹೊತ್ತಿಗೆ ಕೆಪಿಜೆಪಿಯಿಂದ ಸ್ಪರ್ಧಿಸಲು ಬಯಸಿದ ಆಕಾಂಕ್ಷಿಗಳ ಸಂದರ್ಶನ ಕೂಡ ನಡೆಯುತ್ತಲೇ ಇತ್ತು. "ಮೊದಲ ಸುತ್ತಿನ ಸಂದರ್ಶನ ನಡೆದ ಮೇಲೆ, ಫೈನಲ್ ಆಗಿ ನಾನೊಂದು ಸಲ ಮಾತನಾಡಿಸ್ತೀನಿ" ಎಂದರು ಉಪೇಂದ್ರ. ಇನ್ನು ಪ್ರಶ್ನೋತ್ತರಗಳನ್ನು ಓದಿ.

ಪ್ರಶ್ನೆ: ನಿಮ್ಮ ಪಕ್ಷದಿಂದ ಎಷ್ಟು ಅಭ್ಯರ್ಥಿಗಳು ಚುನಾವಣೆ ಕಣಕ್ಕೆ ಇಳಿಯುತ್ತಾರೆ?
ಉಪೇಂದ್ರ: ಬರ್ತಾ ಇದ್ದಾರೆ. ಈಗ ಇಂಟರ್ ವ್ಯೂ ನಡೀತಾ ಇದೆ. ಅದಾದ ಮೇಲೆ ನನ್ನ ಜೊತೆ ಪರ್ಸನಲ್ ಇಂಟರ್ ವ್ಯೂ ಇರುತ್ತೆ. ಅದಾದ ಮೇಲೆ ಅವರು ತಂದಿರುವ ಕ್ಲಿಪ್ಪಿಂಗ್ಸ್, ಮೈಕ್ರೋ ಮ್ಯಾನಿಫೆಸ್ಟೋ ಮತ್ತು ಮ್ಯಾಕ್ರೋ ಮ್ಯಾನಿಫೆಸ್ಟೋ ಇಟ್ಟು ವಿವರಿಸ್ತೀವಿ.

ಪ್ರಶ್ನೆ: ಮೈಕ್ರೋ ಮತ್ತು ಮ್ಯಾಕ್ರೋ ಮ್ಯಾನಿಫೆಸ್ಟೋ ಅಂದರೇನು?
ಉಪೇಂದ್ರ: ಮೈಕ್ರೋ ಅಂದರೆ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಣಾಳಿಕೆ. ಆ ಕ್ಷೇತ್ರದ ಶಾಲೆ, ನೀರು, ಪ್ರವಾಸೋದ್ಯಮ ಇತ್ಯಾದಿ ವಿಚಾರ ಇರುತ್ತದೆ. ಇನ್ನು ಮ್ಯಾಕ್ರೋ ಅಂದರೆ ಕೃಷಿ, ಆರೋಗ್ಯ, ಶಿಕ್ಷಣ ಇತ್ಯಾದಿ ವಿಚಾರಗಳ ಬಗ್ಗೆ ಇರುತ್ತದೆ. ಮೊನ್ನೆ ಕೃಷಿಗೆ ಸಂಬಂಧಿಸಿದ ಪ್ರಣಾಳಿಕೆ ಬಿಡುಗಡೆ ಮಾಡಿದ್ವಿ. ಹೇಗೆ ಹಣ ಬರುತ್ತದೆ ಮತ್ತು ಅದು ಹೇಗೆ ಹಂಚಿಕೆ ಆಗುತ್ತದೆ ಎಂಬ ವಿವರಗಳಿದ್ದವು.

ಪ್ರಶ್ನೆ: ನೀವು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ನಿರ್ಧಾರ ಆಗಿದೆಯಾ?
ಉಪೇಂದ್ರ: ಇನ್ನೂ ಜನ ಬರ್ತಾ ಇದ್ದಾರೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡೋದು ಅಂತ ಅಂತಿಮವಾಗಿಲ್ಲ. ಅಭ್ಯರ್ಥಿಗಳು ಎಲ್ಲ ಬಂದುಬಿಡಲಿ. ಆ ಮೇಲೆ ಯಾವ ಕ್ಷೇತ್ರ ಅಂತ ನಿರ್ಧಾರ ಮಾಡ್ತೀವಿ. ಈಗಿನ್ನೂ ಸ್ಕ್ರೀನಿಂಗ್ ಹಂತದಲ್ಲೇ ಇದೆ.

ಪ್ರಶ್ನೆ: ಪ್ರಣಾಳಿಕೆ ಯಾವ ಹಂತದಲ್ಲಿದೆ?
ಉಪೇಂದ್ರ: ಪ್ರಣಾಳಿಕೆ ಅಂತಿಮ ಅಂತಲ್ಲ. ಅದನ್ನು ಪ್ರಸ್ತಾವ ಅಂತಲೇ ಮಾಡಿದ್ದೀನಿ. ಇನ್ನೂ ಸಲಹೆಗಳು ಬರ್ತಾ ಇವೆ. ಇನ್ನೇನು ಕೆಲವು ದಿನಕ್ಕೆ ಅಂತಿಮ ಅಂತ ಮಾಡಿ, ಬಿಡುಗಡೆ ಮಾಡ್ತೀವಿ.

ಪ್ರಶ್ನೆ: ಪ್ರಮುಖ ರಾಜಕೀಯ ಪಕ್ಷಗಳಿಂದ ಮುಖ್ಯಮಂತ್ರಿ ಅಭ್ಯರ್ಥಿಗಳ ಘೋಷಣೆ ಆಗಿದೆ, ನಿಮ್ಮ ಪಕ್ಷದಿಂದ ಯಾರು?
ಉಪೇಂದ್ರ: ಅದನ್ನು ನಾವಿನ್ನೂ ನಿರ್ಧರಿಸಿಲ್ಲ. ಅದ್ಭುತ ಅನಿಸುವ ಅಭ್ಯರ್ಥಿ ಸಿಕ್ಕಿದರೆ ಅವರನ್ನೇ ಘೋಷಣೆ ಮಾಡ್ತೀವಿ.

ಪ್ರಶ್ನೆ: ಇನ್ನು ನಾಯಕತ್ವ ಯಾರದು? ಪಕ್ಷದ ಸಂಘಟನೆ ಹೇಗೆ? ಪ್ರಚಾರ ದೃಷ್ಟಿಯಿಂದ ವಿಭಾಗಗಳನ್ನು ಮಾಡಿಕೊಂಡಿದ್ದೀರಾ?
ಉಪೇಂದ್ರ: ಸದ್ಯಕ್ಕೆ ನಾನೇ ನೋಡಿಕೊಳ್ತಿದ್ದೀನಿ. ನಮ್ಮ ಪಕ್ಷದಲ್ಲಿ ಹುದ್ದೆಗಳು ಅಂತ ಇರಲ್ಲ. ಒಬ್ಬರು, ಅವರ ಕೆಳಗೆ ಮತ್ತೊಂದು ಹುದ್ದೆ. ಹೀಗೆ ಇರಲ್ಲ. ಅದು ಬೇಡ ಅನ್ನೋದು ನನ್ನ ಉದ್ದೇಶ. ಹಾಗಿದ್ದರೆ ಸಮಸ್ಯೆ ಆಗುತ್ತದೆ. ಇನ್ನು ಅಭ್ಯರ್ಥಿಗಳೇ ವಿಭಾಗ ಮಾಡಿಕೊಳ್ತಾರೆ. ಅವರೇ ಪ್ರಚಾರ ಮಾಡ್ತಾರೆ.

ಪ್ರಶ್ನೆ: ಸಿದ್ಧಾಂತ ಮತ್ತಿತರ ಕಾರಣಗಳಿಗೆ ಯಾವುದಾದರೂ ಪಕ್ಷ ಅಥವಾ ವ್ಯಕ್ತಿ ವಿರುದ್ಧ ಅಭ್ಯರ್ಥಿ ಹಾಕಬಾರದು ಅಂತೇನಿದ್ದರೂ ಅಂದುಕೊಂಡಿದ್ದೀರಾ?
ಉಪೇಂದ್ರ: ಇಲ್ಲ, ಆ ಥರ ಇಲ್ಲ. ಹಾಗೆ ಮಾಡಿದರೆ ಒಬ್ಬರು ಸರಿಯಿದ್ದು, ಮತ್ತೊಬ್ಬರು ಸರಿ ಇಲ್ಲದೆ ಅವರಿಗೆ ಅನುಕೂಲ ಮಾಡಿಕೊಟ್ಟ ಹಾಗಿರುತ್ತದೆ. ನಮ್ಮ ವಿಚಾರ ಮುಂದಿಟ್ಟು ಮತವನ್ನು ಕೇಳ್ತೀವಿ.

ಪ್ರಶ್ನೆ: ನಿಮ್ಮ ಕುಟುಂಬದಿಂದ ಯಾರಾದರೂ ಸ್ಪರ್ಧೆ ಮಾಡ್ತಾರಾ? ಪಕ್ಷದಲ್ಲಿ ಯಾರಿಗಾದರೂ ಹುದ್ದೆ ಕೊಟ್ಟಿದ್ದೀರಾ?
ಉಪೇಂದ್ರ: ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ. ಇನ್ನು ಪ್ರಿಯಾಂಕ ಖಜಾಂಚಿ ಆಗಿದ್ದಾಳೆ. ನಮ್ಮದು ಮೊದಲೇ ಕ್ಯಾಶ್ ಲೆಸ್ ಪಕ್ಷ (ನಗು). ಚುನಾವಣೆಗಾಗಿ ಒಂದು ಸಂಘಟನೆ ರೂಪ ಬೇಕು ಅನ್ನೋ ಕಾರಣಕ್ಕೆ ಇದೆ ಅಷ್ಟೇ.

ಪ್ರಶ್ನೆ: ನಿಮ್ಮ ಪಕ್ಷದ ಚಿಹ್ನೇ ಆಟೋ ಅಂತಾಗಿದೆ. ಅದನ್ನು ಜನರಿಗೆ ತಲುಪಿಸುವುದಕ್ಕೆ ಏನ್ಮಾಡ್ತೀರಾ?
ಉಪೇಂದ್ರ: ಇನ್ನೆರಡು ತಿಂಗಳಲ್ಲಿ ಅದೇ ಮಾಡ್ತೀವಿ. ಅಭ್ಯರ್ಥಿಗಳು ಅಂತ ಆಯ್ಕೆ ಆದ ಮೇಲೆ ಅವರೇ ಮನೆಮನೆಗೆ ಹೋಗಿ ಪ್ರಚಾರ ಮಾಡ್ತಾರೆ.

ಪ್ರಶ್ನೆ: ಚುನಾವಣೆ ಪೂರ್ವದಲ್ಲೋ ಅಥವಾ ನಂತರದಲ್ಲೋ ಸಮಾನ ಮನಸ್ಕರ ಜತೆಗೆ ಮೈತ್ರಿ ಮಾಡಿಕೊಳ್ಳೋ ಉದ್ದೇಶ ಇದೆಯಾ?
ಉಪೇಂದ್ರ: ಇದನ್ನು ಯಾರು ಬೇಕಾದರೂ ಮಾಡಬಹುದು. ಅದನ್ನೇ ಪ್ರಣಾಳಿಕೆಯಲ್ಲೇ ಹೇಳಿದ್ದೀನಿ. ಈ ಹೊಂದಾಣಿಕೆ, ಮೈತ್ರಿ ಇವೆಲ್ಲ ರಾಜಕೀಯಕ್ಕೆ ಸರಿ. ಆದರೆ ನಮ್ಮದು ಪ್ರಜಾಕೀಯ. ಇದು ಸ್ವಲ್ಪ ಹೊಸದಾದ್ದರಿಂದ ಬೇರೆ ಥರ ಇರುತ್ತದೆ. ಇವೆಲ್ಲ ಚುನಾವಣೆ ನಂತರ ಯೋಚನೆ ಮಾಡ್ತೀವಿ.

ಪ್ರಶ್ನೆ: ಈ ವರೆಗೆ ಬಂದಿರುವ ಯಾವ ಸಮೀಕ್ಷೆಯಲ್ಲೂ ನಿಮ್ಮ ಪಕ್ಷ ಚುನಾವಣೆಯಲ್ಲಿ ವ್ಯತ್ಯಾಸ ಮಾಡಲ್ಲ ಅಂತಿದೆ, ಅದಕ್ಕೆ ಏನಂತೀರಾ?
ಉಪೇಂದ್ರ: ನಮ್ಮದೂ ಒಂದು ಸಮೀಕ್ಷೆ ಟೀಮ್ ಇದೆ. ನಾವೂ ಒಂದು ಸಮೀಕ್ಷೆ ಮಾಡಿ, ಬಿಡ್ತೀವಿ. ಆಗ ನೋಡಿ, ನಿಮಗೇನನ್ನಿಸುತ್ತೆ ಅಂತ ಹೇಳಿ.

ಪ್ರಶ್ನೆ: ವಲಸೆ ಸಮಸ್ಯೆ ಅಂದರೆ ಅವಕಾಶಗಳ ಕಾರಣಕ್ಕೆ ಹಳ್ಳಿಗಳು ಖಾಲಿಯಾಗ್ತಿವೆ, ಅದಕ್ಕೆ ನೀವು ಸೂಚಿಸುವ ಪರಿಹಾರ ಏನು?
ಉಪೇಂದ್ರ: ನಮ್ಮ ಪ್ರಣಾಳಿಕೆಯಲ್ಲೇ ಇದಕ್ಕೆ ಉತ್ತರ ಇದೆ. ಸಣ್ಣ ಸಣ್ಣ ಗುಡಿ ಕೈಗಾರಿಕೆ, ಪ್ರವಾಸೋದ್ಯಮ, ಮೂಲ ಸೌಕರ್ಯ, ಆಸ್ಪತ್ರೆ, ಶಿಕ್ಷಣ ಸಿಕ್ಕಿತು ಅಂದುಕೊಳ್ಳಿ, ಅವರು ವಾಪಸ್ ಹೋಗ್ತಾರೆ. ಇನ್ನು ಉತ್ಪಾದನೆ ವಿಚಾರಕ್ಕೆ ಬಂದರೆ ಮಾರ್ಕೆಟ್ ಇದೆಯಾ, ಫಾರಿನ್ ಕಂಪೆನಿ ಜತೆ ಸ್ಪರ್ಧೆ ಸಾಧ್ಯವಾ? ಹೀಗೆ ನಾನಾ ವಿಚಾರ ಇದರಲ್ಲಿ ತಳಕು ಹಾಕಿಕೊಂಡಿದೆ. ಅದಕ್ಕೆ ಈಗ ನಮ್ಮ ಪ್ರಣಾಳಿಕೆಯಲ್ಲಿ ಅದೆಲ್ಲ ಪ್ರಸ್ತಾವ ಮಾಡಿದ್ದೀವಿ.

ಪ್ರಶ್ನೆ: ನಿಮ್ಮ ಕಲ್ಪನೆಯ ಪ್ರಜಾಕೀಯ ಜಾರಿ ಆಗುವುದಕ್ಕೆ ಎಷ್ಟು ಸಮಯ ಬೇಕಾಗಬಹುದು?
ಉಪೇಂದ್ರ: ಇನ್ನಾರು ತಿಂಗಳಲ್ಲಿ ಆಗುತ್ತೆ. ಯಾಕೆ, ನಿಮಗೆ ನಂಬಿಕೆ ಇಲ್ಲವಾ? ಹಣ-ಜ್ಞಾನ-ಶ್ರಮ ಈ ಮೂರು ಸೇರಿದರೆ ಏನು ಬೇಕಾದರೂ ಸಾಧ್ಯವಿದೆ. ಈ ಮೂರನ್ನೂ ಒಟ್ಟು ಸೇರಿಸುವುದೇ ನನ್ನ ಉದ್ದೇಶ. ಎಲೆಕ್ಷನ್ ವ್ಯವಸ್ಥೆ ಅನ್ನೋದು ಎಲ್ಲಿವರೆಗೆ ವ್ಯವಹಾರ ಆಗಿರುತ್ತದೋ ಅಲ್ಲಿಯವರೆಗೆ ಇದೇ ಪರಿಸ್ಥಿತಿ ಇರುತ್ತದೆ. ಇನ್ನು ನಾನೊಬ್ಬನೇ ಮಾಡಿಬಿಡ್ತೀನಿ ಅಂತಲೂ ಹೇಳ್ತಿಲ್ಲ. ಈ ವೇದಿಕೆಗೆ ನೀವೇ ಬನ್ನಿ ಅಂತ ಕರೆಯುತ್ತಿದ್ದೀನಿ. ಭ್ರಷ್ಟಾಚಾರ ಮಾಡುವುದಕ್ಕೆ ಸಾಧ್ಯವೇ ಇಲ್ಲದ ವ್ಯವಸ್ಥೆ ಮಾಡಿಬಿಟ್ಟರೆ ಆಯಿತಲ್ಲವಾ?

ಪ್ರಶ್ನೆ: ದಕ್ಷಿಣ ಕನ್ನಡದಲ್ಲಿ ಧರ್ಮದ ಹೆಸರಲ್ಲಿ ಹಿಂಸಾಚಾರ ನಡೆಯುತ್ತಿದೆ, ಇದರ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ಯೋಚಿಸಿದ್ದೀರಾ?
ಉಪೇಂದ್ರ: ಅದಕ್ಕೆ ತೆಗೆದುಕೊಂಡ ಕ್ರಮವೇ ಪ್ರಜಾಕೀಯ. ಆ ಬಗ್ಗೆ ಎಲೆಕ್ಷನ್ ಸಮಯದಲ್ಲೇ ಮಾತೇ ಆಡಬಾರದು. ಈಗ ಮುಖ್ಯ ಆಗುವುದು ಜನರ ದುಡ್ಡನ್ನು ನಾವು ಹೇಗೆ ಜನರಿಗೆ ತಲುಪಿಸ್ತೀವಿ ಅನ್ನೋದು ಮುಖ್ಯ.

ಪ್ರಶ್ನೆ: ನೀವು ಹೇಳ್ತಾ ಇರುವ ಈ ಪಾರದರ್ಶಕತೆ ಈಗಾಗಲೇ ಶೇ ಎಪ್ಪತ್ತೈದರಷ್ಟು ಜಾರಿ ಆಗಿದೆಯಲ್ಲಾ, ವ್ಯವಸ್ಥೆ ಇರೋದು ಹೀಗೆ.
ಉಪೇಂದ್ರ: ಟೆಂಡರ್ ಪ್ರಕ್ರಿಯೆ ಆನ್ ಲೈನ್ ಮಾಡ್ತೀರಾ. ಆದರೆ ಅಂತಿಮವಾಗಿ ಯಾರಿಗೆ ಸಿಕ್ಕಿತು ಅನ್ನೋದು ಯಾಕೆ ಫೇಸ್ ಬುಕ್ ಲೈವ್ ಮಾಡಬಾರದು? ಆರ್ ಟಿಐ ಅಂತ ಇದೆ. ಅದಕ್ಕೆ ಜನರೇ ಅರ್ಜಿ ಹಾಕಬೇಕು. ಅದರ ಬದಲು ಸರಕಾರದವರೇ ಮಾಹಿತಿ ಕೊಡಿ. ಯಾಕೆ ಜನರು ಬಂದು ಕೇಳಬೇಕು?

ಪ್ರಶ್ನೆ: ದಕ್ಷಿಣ ಭಾರತದ ಚಿತ್ರರಂಗದಿಂದ ಹಲವರು (ಪವನ್ ಕಲ್ಯಾಣ್, ರಜನಿ, ಕಮಲ್, ಉಪೇಂದ್ರ) ಏಕಕಾಲಕ್ಕೆ ರಾಜಕೀಯಕ್ಕೆ ಬಂದಿದ್ದು, ಈ ಮನಸ್ಥಿತಿ ಹಿಂದೆ ಕೆಲಸ ಮಾಡ್ತಿರೋದು ಏನು?
ಉಪೇಂದ್ರ: ಅವರ ಮನಸ್ಥಿತಿ ನನಗೆ ಹೇಗೆ ಗೊತ್ತಾಗಬೇಕು? ನನ್ನ ಬಗ್ಗೆ ಹೇಳಬಹುದು ಅಷ್ಟೇ. ಇಪ್ಪತ್ತು ವರ್ಷದ ಹಿಂದೆ ಮೊದಲ ಸಲ ರಜನೀಕಾಂತ್ ಅವರನ್ನು ಭೇಟಿಯಾದಾಗ, ಯಾವಾಗ ರಾಜಕಾರಣಕ್ಕೆ ಬರ್ತೀರಾ ಅಂತ ಕೇಳಿದ್ದೆ. ಉಳಿದಂತೆ ನಾವು ಸಿಕ್ಕಾಗ ಮಾತನಾಡೋದು ಸಿನಿಮಾ ಬಗ್ಗೆ ಮಾತ್ರ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications