2013ರ ಬಿಜೆಪಿ,ಈಗಿನ ಬಿಜೆಪಿಗೂ ವ್ಯತ್ಯಾಸವೇನು: ಬಿಜೆಪಿ ಅಭ್ಯರ್ಥಿ ಸಂದರ್ಶನ
Recommended Video

ಮೀಸಲು ಕ್ಷೇತ್ರವಾದ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕಾಂಗ್ರೆಸ್ಸಿನ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದ್ದರೂ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ ನಾರಾಯಣಸ್ವಾಮಿ ಬಂಡಾಯ ಎದ್ದು, ಪಕ್ಷೇತರ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
2008ರ ಚುನಾವಣೆಯಲ್ಲಿ ಸುಮಾರು ಆರು ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ಬಿ ಪಿ ವೆಂಕಟ ಮುನಿಯಪ್ಪ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ. ಬಿಜೆಪಿಯ ಒಡಕಿನ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳುತ್ತಾ? ಕಾದು ನೋಡಬೇಕಿದೆ. ಬಿಜೆಪಿ ಅಭ್ಯರ್ಥಿ ವೆಂಕಟ ಮುನಿಯಪ್ಪನವರ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಆಯ್ದ ಭಾಗ ಇಂತಿದೆ:
ಪ್ರ: ಬಂಗಾರಪೇಟೆಯಲ್ಲಿ ಈ ಬಾರಿ ಹೇಗಿದೆ ಚುನಾವಣಾ ಕಾವು?
ವೆಂಕಟ ಮುನಿಯಪ್ಪ: ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಯಡಿಯೂರಪ್ಪನವರು ಮಾಡಿಕೊಟ್ಟಿದ್ದಾರೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಪಕ್ಷದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ಪರಿವರ್ತನಾ ಸಮಾವೇಶದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಮಾಲೂರು, ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ನಮ್ಮ ಪಕ್ಷ ಬಲಾಢ್ಯವಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷ ನನಗೆ ಟಿಕೆಟ್ ನೀಡಿದೆ. ನಾನು ಪಕ್ಷದ ಮುಖಂಡರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಮತದಾರ ನನಗೆ ಆಶೀರ್ವಾದ ಮಾಡಲಿದ್ದಾನೆ ಎನ್ನುವ ನಂಬಿಕೆಯಲ್ಲಿದ್ದೇನೆ.

ನಾರಾಯಣಸ್ವಾಮಿಯವರು ಬಂಗಾರಪೇಟೆ ಪಟ್ಟಣದಲ್ಲಿ ಮಾತ್ರ ಕೆಲಸ ಮಾಡಿದ್ದಾರೆ
ಪ್ರ: ಪ್ರಮುಖವಾಗಿ ಬಂಗಾರಪೇಟೆಯಲ್ಲಿ ಸಮಸ್ಯೆಗಳೇನು?
ವೆಂಕಟ ಮುನಿಯಪ್ಪ: ಹಾಲೀ ಕಾಂಗ್ರೆಸ್ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿಯವರು ಬಂಗಾರಪೇಟೆ ಪಟ್ಟಣದಲ್ಲಿ ಮಾತ್ರ ಕೆಲಸ ಮಾಡಿದ್ದಾರೆಯೇ ಹೊರತು ಬೇರೆಲ್ಲೂ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ. ಅನೇಕ ರಸ್ತೆಗಳು ಕುಸಿದು ಬಿದ್ದಿವೆ. ಪುರಸಭೆ ಅಧ್ಯಕ್ಷರಾಗಿ ಅವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಮಾತನ್ನು ಕೇಳುತ್ತಿದ್ದ ವ್ಯಕ್ತಿಗಳಿಗೆ ಮಾತ್ರ ಅವರು ಅನುಕೂಲ ಮಾಡಿಕೊಡುತ್ತಿದ್ದಾರೆ.
ಶಾಸಕರಾಗಿ ಅವರ ವರ್ತನೆ ಸರಿಯಿಲ್ಲ, ಮತದಾರರನ್ನು ಗೌರವಿಸುವ ಕೆಲಸವನ್ನು ಕಾಂಗ್ರೆಸ್ ಶಾಸಕರು ಮಾಡುತ್ತಿಲ್ಲ. ಹಿಟ್ಲರ್ ರೀತಿಯಲ್ಲಿ ನಾರಾಯಣಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಬೂದಿಕೋಟೆಯಲ್ಲಿ ಮಾಡಿದ ಭಾಷಣದಲ್ಲಿ, ಆರು ತಿಂಗಳ ಒಳಗೆ ಕೆ ಸಿ ವ್ಯಾಲಿ ನೀರು ತಂದಿಲ್ಲದಿದ್ದರೆ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದರು. ಇದುವರೆಗೂ ನೀರು ಬಂದಿಲ್ಲ.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಿನಿ ವಿಧಾನಸೌಧದ ಕಾಮಗಾರಿಗೆ ಆರಂಭಿಸಿದ್ದೆ. ಕೋರ್ಟ್, ಬಸ್ ಸ್ಟ್ಯಾಂಡ್, PWD ಗೆಸ್ಟ್ ಹೌಸ್, ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಿದ್ದೇನೆ. ಕೋಲಾರ ಜಿಲ್ಲೆಗೆ ಶಾಸ್ವತ ನೀರು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮತದಾರ ನನಗೆ ಆಶೀರ್ವಾದ ಮಾಡಲಿದ್ದಾರೆ.

ರೈತರ ಸಮಸ್ಯೆ ಪರಿಹಾರಕ್ಕೆ ನಮ್ಮ ಮನವಿಗೆ ಬಿಎಸ್ವೈ ಸ್ಪಂದಿಸುತ್ತಾರೆ
ಪ್ರ: ಕ್ಷೇತ್ರದ ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿದೆಯೇ
ವೆಂಕಟ ಮುನಿಯಪ್ಪ: ರೈತರು ನಮಗೆ ಬೆನ್ನೆಲುಬು, 1600 ಅಡಿ ಬೋರ್ ಕೊರೆದರೂ ನೀರು ಬರುತ್ತಿಲ್ಲ. ಕೋಲಾರ ಜಿಲ್ಲೆಯ ರೈತರು ತರಕಾರಿ, ಮಾವನ್ನು ಹೆಚ್ಚಾಗಿ ಬೆಳೆಯುತ್ತಾರೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಸೂಕ್ತ ರೇಟ್ ನಿಗದಿ ಪಡಿಸುತ್ತೇವೆ. ನಷ್ಟ ಆಗುವ ಹಾಗಿದ್ದರೆ, ಸರಕಾರ ಅದನ್ನು ಕಟ್ಟಿಕೊಡಬೇಕು ಎಂದು ಯಡಿಯೂರಪ್ಪನವರಲ್ಲಿ ಮನವಿ ಮಾಡುತ್ತೇನೆ.
ನಲವತ್ತು ವರ್ಷದಿಂದ ರಾಜಕೀಯದಲ್ಲಿರುವ ಯಡಿಯೂರಪ್ಪನವರಿಗೆ ರೈತರ ಮೇಲೆ ಬಹಳ ಕಳಕಳಿಯಿದೆ. ಈ ಭಾಗದ ರೈತರ ಸಮಸ್ಯೆ ಪರಿಹಾರಕ್ಕೆ ಸಂಬಂಧ ಪಟ್ಟಂತೆ ನಮ್ಮ ಮನವಿಗೆ ಬಿಎಸ್ವೈ ಸ್ಪಂದಿಸುತ್ತಾರೆ ಎನ್ನುವ ಆಶ್ವಾಸನೆಯನ್ನು ನಾನು ನೀಡುತ್ತೇನೆ.

ಬಿಎಸ್ವೈ ಕಾರಣಾಂತರದಿಂದ ಪಕ್ಷ ಬಿಟ್ಟಿದ್ದರು. ಹಾಗಾಗಿ ಪಕ್ಷಗಳು ಭಾಗಗಳಾಗಿ ಹೋಯಿತು
ಪ್ರ: 2013ರ ಬಿಜೆಪಿಗೂ 2018ರ ಬಿಜೆಪಿಗೂ ಏನು ವ್ಯತ್ಯಾಸ?
ವೆಂಕಟ ಮುನಿಯಪ್ಪ: ಬಿಎಸ್ವೈ ಕಾರಣಾಂತರದಿಂದ ಪಕ್ಷ ಬಿಟ್ಟಿದ್ದರು. ಹಾಗಾಗಿ ಪಕ್ಷಗಳು ಭಾಗಗಳಾಗಿ ಹೋಯಿತು, ನಾವು ಹಿನ್ನಡೆ ಅನುಭವಿಸಬೇಕಾಗಿ ಬಂತು. ಆಮೇಲೆ, ಬಿಎಸ್ವೈ ಪಕ್ಷಕ್ಕೆ ವಾಪಸ್ ಬಂದ ಮೇಲೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅದ್ದೂರಿಯಾಗಿ ನಾವು ಗೆದ್ದೆವು. ಈಗ ಅಸೆಂಬ್ಲಿ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಮುಂದಿನ ಲೋಕಸಭಾ ಚುನಾವಣೆಗೆ ಇನ್ನಷ್ಟು ಶಕ್ತಿ ತುಂಬುತ್ತೇವೆ.
ಪ್ರ: ಈ ಚುನಾವಣೆಯಲ್ಲಿ ನಿಮ್ಮ ನೇರ ಪ್ರತಿಸ್ಪರ್ಧಿ ಯಾರು?
ವೆಂಕಟ ಮುನಿಯಪ್ಪ: ಕಾಂಗ್ರೆಸ್ಸಿನ ಎಸ್.ಎನ್.ನಾರಾಯಣಸ್ವಾಮಿ.

ನಾರಾಯಣಸ್ವಾಮಿ ಬಂಡಾಯ, ನಿಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಮುಳುವಾಗುತ್ತಾ?
ಪ್ರ: ಬಿಜೆಪಿಯಲ್ಲೇ ಇದ್ದ ಎಂ ನಾರಾಯಣಸ್ವಾಮಿ ಬಂಡಾಯ, ನಿಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಮುಳುವಾಗುತ್ತಾ?
ವೆಂಕಟ ಮುನಿಯಪ್ಪ: ನಾರಾಯಣಸ್ವಾಮಿಯವರ ಬಗ್ಗೆ ನಾನು ಹೆಚ್ಚೇನು ಹೇಳಲು ಹೋಗುವುದಿಲ್ಲ. ಅವರು ಹಿರಿಯ ಮಾಜಿ ಶಾಸಕರು ಮತ್ತು ಅವರ ಮೇಲೆ ನನಗೆ ಅಪಾರವಾದ ಗೌರವವಿದೆ. ಅನ್ಯೋನ್ಯವಾಗಿ ನಾವಿಬ್ಬರೂ ಕೆಲಸ ಮಾಡಿದ್ದೆವು. ಟಿಕೆಟ್ ನನಗೆ ಘೋಷಣೆಯಾದ ನಂತರ ಕೆಲವರು ಅವರ ತಲೆಕೆಡಿಸಿ ಮುನಿಸಿಕೊಳ್ಳುವ ಹಾಗೇ ಮಾಡಿದ್ದಾರೆ. ಅವರು ವಾಪಸ್ ಬರುತ್ತಾರೆ ಎನ್ನುವ ನಂಬಿಕೆಯಿದೆ. ರಾಜ್ಯ ಮುಖಂಡರೂ ಅವರ ಸಂಪರ್ಕದಲ್ಲಿದ್ದಾರೆ.
ಪ್ರ: ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, ಜಿಲ್ಲೆಯಲ್ಲಿ ಬಿಜೆಪಿ ಎಷ್ಟು ಸ್ಥಾನವನ್ನು ಗೆಲ್ಲಬಹುದು?
ವೆಂಕಟ ಮುನಿಯಪ್ಪ: ಕೋಲಾರ ಜಿಲ್ಲೆಯಲ್ಲಿ ಒಳ್ಳೆ ಸಂಘಟನೆಯಿದೆ. ನಾಲ್ಕು ಕ್ಷೇತ್ರ ಖಂಡಿತ ಗೆಲ್ಲುತ್ತೇವೆ.

ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಈಗಾಗಲೇ ಮನಸ್ಸು ಮಾಡಿದ್ದಾರೆ
ಪ್ರ: ಬಂಗಾರಪೇಟೆ ಮತದಾರರಲ್ಲಿ ನಿಮ್ಮ ಮನವಿ?
ವೆಂಕಟ ಮುನಿಯಪ್ಪ: 1,90,000 ಮತದಾರರು ಈ ಕ್ಷೇತ್ರದಲ್ಲಿ ಇದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಮತದಾರ ಈಗಾಗಲೇ ಮನಸ್ಸು ಮಾಡಿದ್ದಾರೆ. ಎಲ್ಲರಲ್ಲೂ ಒಬ್ಬನಾಗಿ ನಾನು ಇದುವರೆಗಿನ ರಾಜಕೀಯ ಜೀವನದಲ್ಲಿ ಗುರುತಿಸಿಕೊಂಡು ಬಂದವನು. ಬಿಜೆಪಿಗೆ ಮತ್ತು ನನಗೆ ಜನ ಆಶೀರ್ವಾದ ಮಾಡುತ್ತಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications