ಮನಸ್ಸು ಶುಭ್ರವಾಗಿರಿಸಿಕೊಳ್ಳಲು ಭಕ್ತಿಗೀತೆ ಕೇಳಿ
ಶನಿಮಹಾತ್ಮನು ಮೇಷರಾಶಿಯವರಿಗೆ ಸಪ್ತಮ ಸ್ಥಾನದಲ್ಲಿದ್ದಾನೆ. ಈ ಸ್ಥಾನವು ರಾಶಿಚಕ್ರದಲ್ಲಿ ಪಾರ್ಟನರ್ಶಿಪ್ ಕ್ಷೇತ್ರವಾಗಿದೆ. ಪದೇ-ಪದೇ ಮನೆಮಂದಿ ಬಿಟ್ಟು ಬೇರೆಡೆ ವಾಸ ಮಾಡುವ ಹಾಗಾಗುತ್ತಿರುವುದರಿಂದ ಮನಸ್ಸಿಗೆ ಬೇಸರ ಆಗುತ್ತಿರುತ್ತದೆ.
ಮನಸ್ಸಿನ ಬಗ್ಗೆ ಒಂದು ಮಾತು ಹೇಳಬೇಕು. ನಿಮಗೇನಾದರೂ ಗಾಯವಾದರೆ ವೈದ್ಯರ ಹತ್ತಿರ ತೋರಿಸಿ, ಗಾಯಕ್ಕೆ ಮುಲಾಮು ಹಚ್ಚಿ, ನೋವು ನಿವಾರಕ ಮಾತ್ರೆ ತೆಗೆದುಕೊಂಡು ಕಣ್ತುಂಬ ನಿದ್ದೆ ಮಾಡುತ್ತೀರಿ. ಆದರೆ, ಮನಸಿಗೆ ತುಂಬಾ ನೋವಾಗಿದ್ದರೆ, ಆಘಾತವಾಗಿದ್ದರೆ? ಎಲ್ಲಿ ಮುಲಾಮು ಹಚ್ಚಬೇಕು? ಯಾವ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳಬೇಕು? ವೈದ್ಯರ ಹತ್ತಿರ ಹೋಗಿ ನೋವಾಗಿರುವ ಮನಸ್ಸನ್ನು ತೋರಿಸಲು ಸಾಧ್ಯವಿಲ್ಲ ಅಲ್ಲವೇ? ಇದಕ್ಕೇನೆ ಹಲವರು ಜೀವನದ ಜಿಗುಪ್ಸೆ ಎನ್ನುವರು.
ಹೀಗಾಗಿ ಯಾವಾಗಲೂ ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಳ್ಳಬೇಕು. ಮತ್ತೊಬ್ಬರ ಮನಸ್ಸನ್ನು ನೋವಿಸುವ ಕೆಲಸವನ್ನು ಅಪ್ಪಿತಪ್ಪಿಯೂ ಮಾಡಬೇಡಿ. ಯಾಕೆಂದರೆ ಮನಸ್ಸು ತುಂಬಾ ಸೂಕ್ಷ್ಮ. ಗುಣ ಹೇಗಿದ್ದರೂ ನಡೆಯುತ್ತದೆ. ಆದರೆ ಮನಸ್ಸು ಕೆಟ್ಟರೆ ಮುಗೀತು. ಪ್ರಾಣ ತೆಗೀಬಹುದು, ಪ್ರಾಣ ಬಿಡಬಹುದು, ಪ್ರಾಣ ಕೊಡಬಹುದು.
ಕ್ಷಣಿಕ ಸುಖಕ್ಕಾಗಿ ಕಣ್ಣಿನಲ್ಲೇ ಮಾತಾಡಿಕೊಂಡು, ದೇಹವನ್ನು ಸಿಕ್ಕ ಸಿಕ್ಕವರಿಗೆ ಒಪ್ಪಿಸಿಕೊಂಡು, ನೋವಿನಲ್ಲೇ ಸುಖ ಅನುಭವಿಸುವ ಮನಸ್ಸು ಕೂಡ ಹಲವರಿಗಿರುತ್ತದೆ. ಹೀಗೆ ಮಾಡುವುದರಿಂದ ಮನಸ್ಸು, ದೇಹ ಕಲ್ಮಶಗೊಳ್ಳುತ್ತದೆ. ದೊಡ್ಡ ದೊಡ್ಡವರೆನಿಸಿಕೊಂಡವರೇ ಇಂತಹ ಕೆಲಸ ದಿನನಿತ್ಯ ಮಾಡುತ್ತಿರುವುದನ್ನು ನೀವು ನೋಡಿರಬಹುದು.
"ಮನಸ್ಸಿದ್ದಲ್ಲಿ ಮಾರ್ಗ" ಎಂದು ಅರಿತುಕೊಂಡು, ಅವರಿವರು ಮನಸ್ಸಿಗೆ ನೋವು ಮಾಡಿದರೆಂದು ಏನೇನೋ ಹುಂಬತನ ಮಾಡಿಕೊಳ್ಳಬಾರದು. ನಿಮ್ಮ ಮನಸ್ಸನ್ನು ಯಾವುದೇ ರೀತಿಯಿಂದ ಯಾರೇ ನೋವು ಮಾಡಿದ್ದರೆ, ಅದಕ್ಕೆಲ್ಲಾ ಮಹಾತ್ಮನಿದ್ದಾನೆ. ನೆನಪಿಡಿ ನಿಮ್ಮ ಮನಸ್ಸು ನೋಯಿಸಿದವರ ಕುಟುಂಬದವರೆಲ್ಲರೂ ಮನಸ್ಸು ಕೆಡಿಸಿಕೊಂಡು ದಿವಾಳಿಯಾಗುತ್ತಾರೆ. ಅಂದರೆ ಹುಚ್ಚರಾಗುತ್ತಾರೆ ಎಂದರೂ ಅಡ್ಡಿಯಿಲ್ಲ. ನಿಮ್ಮ ಕುಟುಂಬ ಕೂಡ ದಿವಾಳಿಯಾಗಬಾರದೆಂದರೆ ಯಾರೊಬ್ಬರ ಮನಸ್ಸನ್ನು ನೋಯಿಸುವ ಕೆಲಸ ಮಾಡಬೇಡಿ. ಮಲಗಿದ ಚಿಕ್ಕ ಮಗುವಿನ ಮುಗ್ಧ ಮುಖವನ್ನು ಒಮ್ಮೆ ನೋಡಿ. ಇಂತಹ ಪುಟ್ಟ ಸುಂದರ ಮಗುವಿನ ಕುಟುಂಬದವರಿಗೆ ನೋವು ಕೊಡುವಷ್ಟು ರಾಕ್ಷಸತನ ಕೆಲ ವಿದ್ಯಾವಂತ, ಬುದ್ಧಿವಂತನರೆನಿಸಿಕೊಂಡವರಲ್ಲಿರುತ್ತದೆ.
ಮನಸ್ಸೆಂದರೇನು, ಅದರ ಸಾಮರ್ಥ್ಯವೆಷ್ಟು ಎಂಬುದರ ಅರಿವು ಕೆಲವರಿಗಿರುವುದಿಲ್ಲ. ನೀವು ನೋಡಿರಬಹುದು. ಒಬ್ಬ ದನ ಕಾಯುವ ಹುಡುಗಿ ಬೆಳಗಿನಿಂದ ಸಂಜೆಯವರೆಗು ಏನೂ ಕೆಲಸವಿಲ್ಲದೆ ಬರೀ ದನ ಕಾಯುವುದರಲ್ಲೇ ಮಗ್ನಳಾಗಿರುತ್ತಾಳೆ. ಅಷ್ಟೊಂದು ಸಮಯ ಅವಳು ತನ್ನ ಮನಸ್ಸನ್ನು ಎಲ್ಲಿಯೂ ಹರಿಬಿಡದೆ ಹಿಡಿತದಲ್ಲಿಟ್ಟುಕೊಂಡಿರುತ್ತಾಳೆ. ಒಮ್ಮೆ ನೀವು ಆ ಸ್ಥಾನದಲ್ಲಿದ್ದರೆ ನಿಮ್ಮ ಮನಸ್ಸನ್ನು ಹೇಗೆ ನಿಯಂತ್ರಿಸಿಕೊಳ್ಳುತ್ತಿದ್ದೀರಿ ಎಂಬುದನ್ನು ಯೋಚಿಸಿ ಗೊತ್ತಾಗುತ್ತದೆ ಮನಸ್ಸಿನ ನಿಯಂತ್ರಣದ ಬಗ್ಗೆ.
ಆದರೆ, ನಮ್ಮಲ್ಲಿನ ಕೆಲವೊಬ್ಬರಿಗೆ ದನ ಕಾಯುವವರಲ್ಲಿದ್ದಷ್ಟು ಕೂಡ ಬುದ್ಧಿ ಇರುವುದಿಲ್ಲ. ಕೆಟ್ಟದ್ದನ್ನೇ ಮಾಡಲು ಅಂಥಹವರ ಮನಸ್ಸು ಪ್ಲಾನ್ ಮಾಡುತ್ತಿರುತ್ತದೆ. ಆದ್ದರಿಂದ ಶನಿಕಾಡಾಟದಲ್ಲಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು. ತಾಳ್ಮೆ, ಸಹನೆ, ಭಕ್ತಿ, ಶ್ರದ್ಧೆ, ಧೈರ್ಯ ಬೆಳೆಸಿಕೊಳ್ಳಬೇಕು. ಚೆನ್ನಾಗಿ ಬಾಳಿ ಬದುಕಬೇಕೆಂದರೆ ಹೀಗಿರಬೇಕು. ಆಗಲ್ಲ ಅಂದರೆ ಹಾಳಾಗೋದು ನಿಮ್ಮ ಬದುಕು. ಹೀಗಾಗಿಯೇ ಪ್ರತಿನಿತ್ಯ ಮನೆಯಲ್ಲಿ ಗಾಯತ್ರಿ ಮಂತ್ರ ಅಥವಾ ಸುಪ್ರಭಾತ, ರುದ್ರಗಳ ಕ್ಯಾಸೆಟ್ ಹಾಕಿ ಕೇಳಿಸಿಕೊಳ್ಳಬೇಕು ಎಂದು ಹೇಳುವುದು.
ಕ್ಯಾಸೆಟ್ ಹಾಕಿ ಭಕ್ತಿಗೀತೆ ಕೇಳಬೇಡಿ ಎಂದು ಹೇಳುತ್ತಾರೆ ಕೆಲ ಮಹಾನ್ ಪಂಡಿತರು. ಆದರೆ ನಮ್ಮ ಮನಸ್ಸನ್ನು ಶುಭ್ರವಾಗಿರಿಸಿಕೊಳ್ಳಲು ಭಕ್ತಿಗೀತೆಗಳು ಸಹಾಯ ಮಾಡುತ್ತವೆ. ಕ್ಯಾಸೆಟ್ ಕೇಳಬೇಡಿ ಎಂದು ಹೇಳುವವರು ನಮ್ಮ ಮನೆಗೆ ಬರುವುದಿಲ್ಲ ನಮ್ಮ ಮನಸ್ಸನ್ನು ಶುಭ್ರ ಮಾಡಲು ಎಂಬುದು ಅರಿತುಕೊಳ್ಳಬೇಕು. ಇರಲಿ, ಮನಸ್ಸಿನ ಬಗ್ಗೆ ಹೆಚ್ಚಿನ ವಿಷಯ ಮುಂದಿನ ಲೇಖನಗಳಲ್ಲಿ ನೋಡೋಣ.