ಸಾಡೇಸಾತಿ ಎಂದರೇನು, ಏನಿದರ ಮರ್ಮ?
ಈ ಲೋಕದ ಸಮಸ್ತ ಜನರಿಗೆ ಶನಿಕಾಟ ತಪ್ಪಿದ್ದಲ್ಲ ಎಂಬುದು ನಿಶ್ಚಿತವಾದ ಮಾತು. ಆದರೆ ಶನಿಯು ನಮಗೆ ಕಾಟ ಕೊಡಲು ಬರುವುದು 30 ವರ್ಷಗಳಿಗೊಮ್ಮೆ ಮಾತ್ರ ಎಂಬುದು ಸಮಾಧಾನದ ವಿಷಯ. ಅಂದರೆ ಮನುಷ್ಯನ ಜೀವಮಾನದಲ್ಲಿ ಕೇವಲ 3 ಬಾರಿ ಮಾತ್ರ ಶನಿಯು ಕಾಟಕೊಡುತ್ತಾನೆ.
ಹೇಗೆಂದರೆ ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷವಿರುತ್ತಾನೆ. ಹೀಗಾಗಿ ಎಲ್ಲ 12 ರಾಶಿಗಳ ಚಕ್ರವನ್ನು ಪೂರ್ತಿ ಸುತ್ತಿ ಬರಲು ಶನಿಗೆ 30 ವರ್ಷ ಕಾಲ ಹಿಡಿಯುತ್ತದೆ. ಶನಿಯು ಮಂದಗತಿಯಲ್ಲಿ ಚಲಿಸುವವನಾಗಿದ್ದು, ಶನಿಯ ಹುಟ್ಟಿನ ವಿಷಯ, ಅವನ ಕೌಟುಂಬಿಕ ವಿಷಯ, ಪಂಚಮ ಶನಿಕಾಟ, ಅಷ್ಟಮ ಶನಿಕಾಟ ಇನ್ನಿತರ ಸಕಲ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ನಿಮಗೆ ನೀಡಲಾಗುವುದು.
ಸಂಕಟ ಬಂದಾಗ ವೆಂಕಟರಮಣ ಎನ್ನುವ ಜನರಿಗೆ ಶನಿಯು ಕಾಟ ಕೊಡಲಾರಂಭಿಸಿದ ಮೇಲೆಯೇ ಗೊತ್ತಾಗುವುದು ನಮಗೆ ಶನಿಕಾಟ ಶುರುವಾಗಿದೆಯಂದು. ಏಕೆಂದರೆ ಶನಿಯ ಕಾಟ ಎಷ್ಟಿರುತ್ತದೆಯೆಂದರೆ ಬದುಕಲೂ ಆಗುವುದಿಲ್ಲ ಸಾಯವುದಕ್ಕೂ ಆಗುವುದಿಲ್ಲ ಅಂತ ಪರಿಸ್ಥಿತಿ ನಿರ್ಮಾಣ ಮಾಡಿ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತಾನೆ. ಇದಕ್ಕೇನೇ ಸಾಡೇಸಾತಿ ಶನಿಕಾಟ ಎನ್ನುವರು.
ಏನಿದು ಏಳರ ಕಾಟ? : ಸಾಡೇಸಾತಿ ಎಂದರೇನೇ ಎಷ್ಟೋ ಜನ ಭಯ ಬೀಳುತ್ತಾರೆ. ಹೌದು, ಸಾಡೇಸಾತಿ ಕಾಡಾಟದಲ್ಲಿ ಅವರು ಅನುಭವಿಸಿದ ಕಷ್ಟಗಳನ್ನು ಕೇಳಿದರೇನೇ ಮೈ ನಡುಕ ಬರುತ್ತದೆ. ಹನ್ನೆರಡು ರಾಶಿಗಳಲ್ಲೂ ಸಂಚರಿಸುವ ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷವಿರುತ್ತಾನೆ. ಆದರೆ ಇವನ ವಿಶೇಷವೆಂದರೆ ತಾನಿದ್ದ ರಾಶಿಯ ಹಿಂದೆ ಮತ್ತು ಮುಂದಿನ ರಾಶಿಗಳಲ್ಲೂ ಎರಡೂವರೆ ವರ್ಷದಂತೆ ತನ್ನ ಫಲಗಳನ್ನು ನೀಡುತ್ತಿರುತ್ತಾನೆ.
ಅಂದರೆ ಶನಿಯು ಏಕಕಾಲದಲ್ಲಿ ಮೂರು ರಾಶಿಗಳಿಗೆ ಸೇರಿ ಸಾಡೇಸಾತಿಯಾಗಿರುತ್ತಾನೆ. ಈ ಸಾಡೇಸಾತಿ ಶನಿ ಕಾಟಕ್ಕೆ ಏಳರಾಟವೆಂತಲೂ ಕರೆಯುತ್ತಾರೆ. ಶನಿಯು ತನ್ನ ಸಾಡೇಸಾತಿ ಆರಂಭಕ್ಕೆ 7 ತಿಂಗಳು ಮೊದಲೇ ಅವನು ಬರುವ ರಾಶಿಯವರಿಗೆ ಮುನ್ಸೂಚನೆ ಕೊಡುತ್ತಾನೆ. ಶನಿಯು ನಿಧಾನವಾಗಿ ಬರುತ್ತಾ ಜೀವನವೆಂದರೇನು? ಹಣವೆಂದರೇನು? ಬಂಧುಗಳೆಂದರೇನು? ನೋವು-ನಲಿವು ಎಂದರೇನು? ಎಲ್ಲವನ್ನೂ ಮನವರಿಕೆ ಮಾಡಿಸಿಕೊಡುತ್ತಾನೆ. ಆದರೆ ಸಾಡೇಸಾತಿ ಶನಿಕಾಟದ ಸಮಯದಲ್ಲಿ ಸಾವು ಮಾತ್ರ ಬರುವುದಿಲ್ಲವಾದರೂ ಇದ್ದೂ ಸತ್ತಂತೆ ಮಾಡುತ್ತಾನೆ ಶನಿ.
ಇಷ್ಟೆಲ್ಲ ಓದಿದ ಮೇಲೆ ನಾವೇನೂ ಮಾಡದಿದ್ದರೂ ನಮಗೇಕೆ ಶನಿ ಕಾಟ ಕೊಡುತ್ತಾನೆ? ಎಂಬ ಪ್ರಶ್ನೆ ಮನಸಲ್ಲಿ ಮೂಡುವುದು ಸಹಜ. ಶನಿಯು ಕರ್ಮಕ್ಕನುಗುಣವಾಗಿಯೇ ಫಲ ಕೊಡುತ್ತಾನೆ. ನಿಮ್ಮ ಉತ್ತಮ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾದರೆ ಶನಿಯು ಹೆಚ್ಚಿನ ಕಾಟ ಕೊಡುವುದಿಲ್ಲ. ಆದರೆ ನಿಮ್ಮ ಉತ್ತಮ ಸಮಯದಲ್ಲಿ ದಬ್ಬಾಳಿಕೆ, ಅನ್ಯಾಯ, ಅಕ್ರಮ, ಅನೀತಿ, ಅಧರ್ಮದ ಕೆಲಸಗಳು ಮತ್ತಿತರ ದುಷ್ಟತನದ ಕೆಲಸಗಳನ್ನು ಮಾಡಿದ್ದರೆ ನೀವು ಮಾಡಿದ್ದೆಲ್ಲವನ್ನೂ ನಿಮಗೆ ತನ್ನ ಶನಿ ಸಾಡೇಸಾತಿಯಲ್ಲಿ ಮರಳಿ ನೀಡುತ್ತಾನೆ. ಆದರೆ ಅನುಭವಿಸಲೇಬೇಕು, ಅನುಭವಿಸಿಯೇ ಸಾಯಬೇಕು ಎನ್ನುವುದು ಮಾತ್ರ ಸತ್ಯ.
ತುಲಾ ರಾಶಿಗೆ ಪ್ರವೇಶ : ಸದ್ಯ ಶನಿಯು ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿಯು 30 ವರ್ಷದ ನಂತರ ತನ್ನ ಉಚ್ಚಕ್ಷೇತ್ರ ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ತುಲಾ ರಾಶಿಯ ಚಿಹ್ನೆ ತಕ್ಕಡಿ. ಅದಕ್ಕೆಂದೇ ಶನಿಯು ಎಲ್ಲರಿಗೂ ತಕ್ಕಡಿಯಲ್ಲಿ ನ್ಯಾಯ-ಅನ್ಯಾಯವನ್ನು ತೂಗಿ ನ್ಯಾಯ ನೀಡುತ್ತಿದ್ದಾನೆ. ಶನಿಯು ವೃಶ್ಷಿಕ, ತುಲಾ, ಮತ್ತು ಕನ್ಯಾ ರಾಶಿಗಳವರಿಗೆ ಸಾಡೇಸಾತಿಯಾಗಿದ್ದಾನೆ. ಅಂದ ಹಾಗೆ, ಶನಿ ಮಹಾರಾಜ ಯಾರು? ಲೇಖನ ನಿರೀಕ್ಷಿಸಿ.