ಸಿಂಗಪುರದಲ್ಲಿ ಬೆಳಗೆರೆ ಮತ್ತು ಎಂದೂ ಮರೆಯದ ಹಾಡು
ಚಲನಚಿತ್ರದ ಹಾಡುಗಳಿಗೆ ಮಾತ್ರ ಪ್ರಸಿದ್ಧಿ, ಪ್ರಚಾರ, ಜನಪ್ರಿಯತೆ ಸಿಗುವ ಇತ್ತೀಚಿನ ದಶಕಗಳಲ್ಲಿ ಕನ್ನಡ ಸಾಹಿತ್ಯದ ಮಹಾನ್ ಕವಿಗಳ ಭಾವಗೀತೆ, ಭಕ್ತಿಗೀತೆ, ಜನಪದಗೀತೆಗಳಿಗೆ ಕನ್ನಡದ ಕಲಾವಿದರ ಮೂಲಕ ಸಂಗೀತ ಸಂಯೋಜಿಸಿ, ಹಾಡಿಸಿ ಕನ್ನಡ ಸಾಹಿತ್ಯಕ್ಕೆ ಪುನಃ ಜನಪ್ರಿಯತೆ ತಂದುಕೊಟ್ಟಂತವರು ರವಿ ಬೆಳಗೆರೆ. ಕವಿಗಳ ಬಗ್ಗೆ, ಅವರ ಜೀವನನ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ದೂರದರ್ಶನದ "ಎಂದೂ ಮರೆಯದ ಹಾಡುಗಳು" ಕಾರ್ಯಕ್ರಮದ ಮೂಲಕ ಸೊಗಸಾಗಿ ಜನರಿಗೆ ವಿವರಿಸುತ್ತ ಬಂದಿದ್ದಾರೆ.
26 ಮೇ, 2012ರಂದು ಸ್ಪ್ರಿಂಗ್ ಸಿಂಗಪುರ್ ಸಭಾಂಗಣದಲ್ಲಿ "ಎಂದೆಂದೂ ಮರೆಯದ ಹಾಡುಗಳು" ಕಾರ್ಯಕ್ರಮದ ಮೂಲಕ ಸಿಂಗಪುರದಲ್ಲೂ ಕನ್ನಡ ಸಾಹಿತ್ಯ ಮತ್ತು ಸಂಗೀತದ ಸುಧೆಯನ್ನು ಹರಿಸಿದರು ಒಟ್ಟು 18 ಕಲಾವಿದರನ್ನೊಳಗೊಂಡ ರವಿ ಬೆಳಗೆರೆ ಮತ್ತು ತಂಡ. ಅಲ್ಲಮ ಪ್ರಭು, ಪುರಂದರ ದಾಸರು, ಬಸವಣ್ಣನವರ ಸಾಹಿತ್ಯವನ್ನು ಬೆಳಗೆರೆ ಅವರು ರಸವತ್ತಾಗಿ ಬಣ್ಣಿಸಿದರೆ ಅವರ ರಚನೆಗಳಾದ "ತನುವ ತೋಂಟವ ಮಾಡಿ..., ನಿಮ್ಮ ಶರಣರಿಗೇ.., ದಾರಿ ಯಾವುದಯ್ಯ.." ಹಾಡುಗಳನ್ನು ಕಲಾವಿದರು ವೃಂದಗಾನದಲ್ಲಿ ಸೊಗಸಾಗಿ ಹಾಡಿದರು.
ಆನಂತರ ಬೆಳಗೆರೆ ಅವರು ಕುವೆಂಪು, ದ.ರಾ. ಬೇಂದ್ರೆ, ಕೆ.ಎಸ್. ನರಸಿಂಹ ಸ್ವಾಮಿ, ಎಚ್.ಎಸ್. ವೆಂಕಟೇಶಮೂರ್ತಿ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಂ.ಎನ್. ವ್ಯಾಸರಾವ್, ದೊಡ್ಡರಂಗೇಗೌಡ, ಮಾಸ್ತಿ ವೆಂಕಟೇಶ ಐಯಂಗಾರ್, ಬಿ.ಆರ್. ಲಕ್ಷ್ಮಣ ರಾವ್, ಜಿ.ಪಿ. ರಾಜರತ್ನಂ ಅವರ ಸಾಹಿತ್ಯವನ್ನು ತಮ್ಮದೇ ಆದ ಶೈಲಿಯಲ್ಲಿ ರಸವತ್ತಾಗಿ ರವಿ ಬೆಳಗೆರೆ ವಿವರಿಸಿದರು. ಹಾಡುಗಳ ನಡುವೆ ರವಿ ಬೆಳಗೆರೆ ಅವರಿಂದ ಕಲಾವಿದರ ಪರಿಚಯ ಮತ್ತು ತಿಳಿ ಹಾಸ್ಯ ಊಟದ ಜೊತೆಗಿನ ಉಪ್ಪಿನಕಾಯಿಯಂತಿತ್ತು.
ವ್ಯಾಸರಾಜ್ ಹಾಡಿದ "ಎಂಥಾ ಮರುಳಯ್ಯಾ ಇದು.."; ರತ್ನಮಾಲಾ ಹಾಡಿದ "ಅತ್ತಿತ್ತ ನೋಡಿದರು, ನಿನ್ನ ಕಂಗಳ ಕೊಳದಿ.."; ದಿವ್ಯಾ ಹಾಡಿದ "ನೇಸರ ನೋಡು.."; ಮಾಲತಿ ಶರ್ಮಾ ಹಾಡಿದ "ಇನ್ನೂ ಯಾಕ ಬರಲಿಲ್ಲವ್ವ"; ಶ್ರೀನಿವಾಸ್ ಹಾಡಿದ "ತೇರಾ ಏರಿ ಅಂಬರದಾಗೆ.." ಹಾಡುಗಳು ಬಹಳ ಸೊಗಸಾಗಿ ಮೂಡಿಬಂದು ಸಭಿಕರನ್ನು ಗಾನಗಂಧರ್ವ ಲೋಕಕ್ಕೆ ಒಯ್ದಿತ್ತು. ಸ್ಪರ್ಶ ಅವರ "ಮೂಡಲ ಮನೆಯ.."; ಜೋಗಿ ಸುನೀತ ಅವರ "ಎಲ್ಲೋ ಜೋಗಪ್ಪ..", ಪಂಚಮ್ ಅವರ್ "ಹೇಳ್ಕೊಳೋಕೊಂದೂರು.." ಹಾಗೂ ಸ್ಪರ್ಶ ಮತ್ತು ದಿವ್ಯಾ ಅವರ "ತೆರೆದಿದೆ ಮನೆ.." ಹಾಡುಗಳು ನಮ್ಮ ನೆನಪಿನಂಗಳದಲ್ಲಿ ಬಹುಕಾಲ ಉಳಿಯುತ್ತವೆ.
ರತ್ನಮಾಲಾ ಪ್ರಕಾಶ್ 'ಸಿಂಗಾರ ಕಲಾ ರತ್ನ' : ಈ ಕಾರ್ಯಕ್ರಮದಲ್ಲಿ ಕನ್ನಡ ಸಂಗೀತಕ್ಕೆ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ, ಇನ್ನೂ ಸಲ್ಲಿಸುತ್ತಿರುವ ರತ್ನಮಾಲಾ ಪ್ರಕಾಶ್ ಅವರಿಗೆ ಕನ್ನಡ ಸಂಘ (ಸಿಂಗಪುರ)ವು "ಸಿಂಗಾರ ಕಲಾ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕಾರ್ಯಕ್ರಮವು "ಮಡ್ಕೇರಿ ಮೇಲ್ ಮಂಜು" ಹಾಗೂ "ಜಾಲಿ ಬಾರಿನಲ್ಲಿ.." ವೃಂದಗಾನಗಳೊಂದಿಗೆ ಅಂತ್ಯಗೊಂಡಾಗ ರಾತ್ರಿ 11 ಗಂಟೆಯಾದರೂ ಪ್ರೇಕ್ಷಕರಿಗೆ ಇನ್ನೂ ಸಾಕೆನಿಸಿರಲಿಲ್ಲ.
ಈ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮತ್ತು ಕಲಾವಿದರ ಪರಿಚಯ ಸಂಘದ ಅದ್ಯಕ್ಷರಾದ ಡಾ. ವಿಜಯಕಮಾರ್ ಅವರಿಂದ; ಪ್ರಾರ್ಥನೆ ಹೇಮಾ ಭಾಸ್ಕರ್ ರವರಿಂದ; ವಂದನಾರ್ಪಣೆ ಸಂಘದ ಉಪಾಧ್ಯಕ್ಷರಾದ ವಿಜಯರಂಗ ಅವರಿಂದ; ತಿಂಡಿ ತಿನಿಸುಗಳ ಸರಬರಾಜು ವೆಜ್ ಟಿಫಿನ್ಸ್ ಅವರಿಂದ. ಕಾರ್ಯಕ್ರಮದ ಪ್ರಾಯೋಜಕರು "ಯುನೈಟೆಡ್ ಲ್ಯಾಂಡ್ ಬ್ಯಾಂಕ್, ಅಸ್ಸೆಟ್ಸ್ ಹೋಮ್ಸ್, ಕ್ಲೋವರ್ ಗ್ರೀನ್ಸ್ ಮತ್ತು ವೆಜ್ ಟಿಫಿನ್ಸ್.