ಗತಕಾಲಕ್ಕೆ ಕರೆದೊಯ್ದ ಯಾದ್ ಭರೀ ನಗ್ಮೇ
ಕನ್ನಡ ಚಲನಚಿತ್ರರಂಗದಲ್ಲಿ ಪರ-ಭಾಷಾ ನಟ-ನಟಿಯರು, ಸಂಗೀತ ಕಲಾವಿದರು ಬಂದು ಕೆಲಸ ಮಾಡಿ ಪ್ರಸಿದ್ಧಿಯಾಗಿರುವುದು ಹೊಸದೇನಲ್ಲ. ಆದರೆ ಕನ್ನಡಿಗ ಕಲಾವಿದರು ಇತರ ಭಾಷೆಗಳಲ್ಲಿ ತಮ್ಮ ಪ್ರಾವೀಣ್ಯ ಮೆರೆದಿದ್ದಾರೆಯೇ ಎಂಬ ಪ್ರಶ್ನೆ ಮೂಡುವುದು ಸಹಜ.
ಈ ಪ್ರಶ್ನೆಗೆ ಉತ್ತರವೋ ಎಂಬಂತೆ ಕನ್ನಡ ಸಂಘ (ಸಿಂಗಪುರ)ವು ವುಡ್ಲ್ಯಾಂಡ್ಸ್ ಸಿಸಿ ಐ.ಎ.ಇ.ಸಿ.ಯ ಸಹಯೋಗದಲ್ಲಿ "ಎಂದೆಂದೂ ಮರೆಯದ ಹಾಡುಗಳು" ಕಾರ್ಯಕ್ರಮ ನೀಡಿದ ಕನ್ನಡ ಕಲಾವಿದರಾದ ರವಿ ಬೆಳಗೆರೆ ಮತ್ತು ಬಳಗದವರಿಂದ "ಯಾದ್ ಭರೀ ನಗ್ಮೇ.." ಎಂಬ ಜನಪ್ರಿಯ ಹಿಂದಿ ಹಾಡುಗಳ ಕಾರ್ಯಕ್ರಮವನ್ನು 27 ಮೇ, 2012ರಂದು ವುಡ್ಲ್ಯಾಂಡ್ಸ್ ಸಿಸಿ ಥಿಯೇಟ್ರೆಟ್, ಸಿಂಗಪುರದಲ್ಲಿ ಏರ್ಪಡಿಸಿತ್ತು. ಈ ಉಚಿತ ಕಾರ್ಯಕ್ರಮವು ಆಹ್ವಾನಿತರಿಗೆ ಮಾತ್ರ ಸೀಮಿತವಾಗಿತ್ತು.
ರವಿ ಬೆಳಗೆರೆ ಅವರು ಹಿಂದೀ ಚಿತ್ರರಂಗದ ಕಲಾವಿದರು, ಚಲನಚಿತ್ರಗಳು ಹಾಗೂ ಮಹಾನ್ ಗಾಯಕ-ಗಾಯಕಿ-ಸಂಗೀತ ಸಂಯೋಜಕರ ಬಗ್ಗೆ ರಸಪೂರ್ಣ ವಿವರಗಳನ್ನು ನೀಡಿದರು. ನಮ್ಮ ಕನ್ನಡ ಕಲಾವಿದರು ಹಿಂದಿ ಹಾಡುಗಳನ್ನು ಅಷ್ಟೇ ರಸವತ್ತಾಗಿ ಹಾಡಿದರು. ವ್ಯಾಸರಾಜ್ ಅವರು ನಮ್ಮನ್ನು ತಮ್ಮ ಹಾಡಿನಲ್ಲಿ "ಚೌದವೀಕಾ ಚಾಂದ್"ನತ್ತ ಕೊಂಡೊಯ್ದರೆ, ಶ್ರೀನಿವಾಸ್ ಮತ್ತು ಜೋಗಿ ಸುನೀತಾ ಅವರು "ಸೌ ಸಾಲ್ ಪಹೆಲೇ.." ಹಾಡಿನ ಮೂಲಕ ನಮ್ಮನ್ನು ಕೆಲದಶಕಗಳ ಹಿಂದೆ ಕೊಂಡೊಯ್ದರು. ಪಂಚಮ್ ಮತ್ತು ದಿವ್ಯಾ ಅವರು "ಚುರಾಲಿಯಾ.." ಹಾಡಿನ ಮೂಲಕ ನಮ್ಮ ಮನ ಕದ್ದರು, ಗೆದ್ದರು.
ಹೀಗೆ ಪ್ರಾರಂಭವಾದ ಗಾನಸುಧೆಯಲ್ಲಿ ನಮಗೆ ಕೇಳಲು ಸಿಕ್ಕಿದ್ದು "ಹಮ್ ಪ್ಯಾರ್ ಮೇ ಜಲ್ನೇವಾಲೋಂ ಕೋ (ಜೋಗಿ ಸುನೀತಾ), ರಸಿಕ ಬಲ್ಮಾ (ಸ್ಪರ್ಷ), ಅಜೀಬ್ ದಾಸ್ತಾ (ದಿವ್ಯಾ), ಆ ಜಾ ಸನಂ ಮಧುರ್ (ವ್ಯಾಸರಾಜ್ ಮತ್ತು ಜೋಗಿ ಸುನೀತಾ), ಜರಾ ಹೊಲ್ಲೆ ಹೊಲ್ಲೆ (ಜೋಗಿ ಸುನೀತಾ), ಮೇರೇ ಸಪ್ನೋಂಕಿ ರಾಣಿ (ವ್ಯಾಸರಾಜ್) ಮತ್ತು ಕೋರಾ ಕಾಗಜ್ ಥಾ (ಪಂಚಮ್ ಮತ್ತು ಸ್ಪರ್ಷ)". ಗಂಟಲು ಸರಿಯಿಲ್ಲದಿದ್ದರೂ "ಬಾತ್ ಬಾಕೀ.." ಹಾಡನ್ನು ವ್ಯಾಸರಾಜ್ ಅವರೊಡನೆ ಅಮೋಘವಾಗಿ ಹಾಡಿ, ಪ್ರೇಕ್ಷಕರ "ಒನ್ಸ್ ಮೋರ್" ಮನವಿಯ ಮೇರೆಗೆ ಇನ್ನೊಮ್ಮೆ ಹಾಡಿದರು ರತ್ನಮಾಲಾ ಪ್ರಕಾಶ್. ಈ ಹಾಡಿನಲ್ಲಿ ಇನ್ನೊಂದು ವಿಶೇಷವೆಂದರೆ ಹಾಡಿಗೆ ತಕ್ಕನಾಗಿ ಶಿಳ್ಳೆಯ ಸಂಗೀತ ಮೂಡಿಸಿದ ಪಂಚಮ್ ಹಾಗೂ ಉತ್ತಮವಾಗಿ ಡ್ರಮ್ಪ್ಯಾಡ್ಸ್ ನುಡಿಸಿದ ಪ್ರದ್ಯುಮ್ನ ಅವರಿಗೆ ಚಪ್ಪಾಳೆ ತಟ್ಟಿದ ಪ್ರೇಕ್ಷಕರು ಮನಃಪೂರ್ವಕವಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದೀ ಹಾಡುಗಳ ನಡುವೆ ರತ್ನಮಾಲಾ ಪ್ರಕಾಶ್ ಹಾಗೂ ಜೋಗಿ ಸುನೀತಾ ಅವರು "ಜೋಕೆ, ನಾನು ಬಳ್ಳಿಯ ಮಿಂಚು.." ಹಾಡಿ ಮಿಂಚಿದರು. ಸಾಗರದಾಚೆಯ, "ದೂರದಿಂದ ಬಂದಂತ.." ನಮ್ಮ ಹೆಮ್ಮೆಯ ಕಲಾವಿದರಾದ ದಿವ್ಯಾ ಮತ್ತು ಜೋಗಿ ಸುನೀತಾ ಅವರ ಹಾಡೂ ಅಷ್ಟೇ ಮಧುರವಾಗಿತ್ತು. ಸ್ಥಳೀಯ ಕಲಾವಿದರಾದ ರಮ್ಯಾ ಐತಾಳ್ ಮತ್ತು ಸಂಜೀವ್ ಕುಮಾರ್ ಅವರು "ಏ ರಾತೇ ಏ ಮೌಸಮ್" ಹಾಡಿ ಆಹ್ವಾನಿತ ಕಲಾವಿದರ ಮೆಚ್ಚುಗೆಗೆ ಪಾತ್ರರಾದರು.
ತಾವು ಹಾಡಬಲ್ಲೆವೆಂಬ ಯಾವುದೇ ಕಣ್ಸನ್ನೆಯನ್ನೂ ನೀಡದೇ ನಮ್ಮ ಸಂಘದ ಅಧ್ಯಕ್ಷರಾದ ಡಾ. ವಿಜಯಕುಮಾರ್ ಅವರು ಪಂಚಮ್ ಅವರ ಜೊತೆಗೂಡಿ "ಜೀವನ್ ಸೇ ಭರೀ ತೇರೀ ಆಂಖೇ" ಹಾಡನ್ನು ಹಾಡಿ, ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡರಲ್ಲದೇ ಸಭಿಕರ "ಒನ್ಸ್ ಮೋರ್" ಮನವಿಯ ಮೇರೆಗೆ ಇನ್ನೊಮ್ಮೆ ಹಾಡಿದರು. ಭಾರತದ ರಾಷ್ಟ್ರಭಾಷೆ ಹಿಂದಿಯಷ್ಟೇ ಅಲ್ಲದೇ ಸಿಂಗಪುರದ ರಾಷ್ಟ್ರಭಾಷೆಗಳಲ್ಲೊಂದಾದ ತಮಿಳಿನಲ್ಲಿ "ಉಯಿರೇ.." ಹಾಡನ್ನು ಹಾಡಿದ ವ್ಯಾಸರಾಜ್ ಮತ್ತು ಸ್ಪರ್ಷ ಅವರು ತಮ್ಮ ಹಾಡಿನ ಮೂಲಕ "ಸಂಗೀತ ಭಾಷಾತೀತವಾದುದು" ಎಂಬುದನ್ನು ಪ್ರತಿಪಾದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಕಲಾವಿದರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ಕೆಲವು ವರ್ಷಗಳ ಹಿಂದೆ ರೇಡಿಯೋದಲ್ಲಿ ಬರುತ್ತಿದ್ದ "ಬಿನಾಕಾ ಗೀತ್ ಮಾಲಾ"ವನ್ನು ನೆನಪಿಸುವಂತಿದ್ದ ಇಂತಹ ಕಾರ್ಯಕ್ರಮಗಳು ಎಲ್ಲ ಕಡೆ ಸಂಗೀತದ ಕಂಪನ್ನು ಹರಡಲಿ, ನಮ್ಮ ಕನ್ನಡಿಗ ಕಲಾವಿದರು ಎಲ್ಲೆಡೆ ಕನ್ನಡದ ಪತಾಕೆಯನ್ನು ಹಾರಿಸಲಿ.