ರಾಮನಗರ; ಏಕಾಏಕಿ ಕೆಲಸದಿಂದ ತೆಗೆದ ಕಂಪನಿ, ಧರಣಿ ಕುಳಿತ ನೌಕರರು
ರಾಮನಗರ, ಸೆಪ್ಟೆಂಬರ್ 3: ಮಾಹಿತಿ ನೀಡದೆ, ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಆರೋಪಿಸಿ ತಾಲೂಕಿನ ಅಚ್ಚಲು ಗ್ರಾಮದ ಲಕ್ಷ್ಮಣನ್ ಐಸೋಲಾ ಕಂಪನಿಯ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಎಂಟಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನು ಕಂಪನಿಯಿಂದ ತೆಗೆದುಹಾಕಲಾಗಿದ್ದು, ಕಂಪನಿ ಆಡಳಿತ ಮಂಡಳಿಯ ಕ್ರಮದ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಮಿಕ ವಿನೋದ್ ಕುಮಾರ್ ಮಾತನಾಡಿ, "ಕಳೆದ 8 ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದೇವೆ. ಆದರೆ, ಕಂಪನಿ ಯಾವುದೇ ಮಾಹಿತಿ ನೀಡದೇ ಏಕಾಏಕಿ ಕೆಲಸದಿಂದ ಹೊರಹಾಕಿದೆ. ಮೊದಲ ಮೂರು ವರ್ಷ ತರಬೇತಿ ನೀಡುವ ನೆಪದಲ್ಲಿ ದುಡಿಸಿಕೊಳ್ಳಲಾಯಿತು. ನಂತರ 5 ವರ್ಷ ತಾತ್ಕಾಲಿಕ ನೌಕರರಾಗಿ ನೇಮಿಸಿಕೊಂಡಿತು. ಕಾಯಂ ನೌಕರಿಯಲ್ಲೇ ಸತತ 8 ವರ್ಷಗಳ ಕಾಲ ನಮ್ಮನ್ನು ದುಡಿಸಿಕೊಳ್ಳಲಾಗಿದೆ" ಎಂದು ದೂರಿದರು.

"ಹೊರ ಕಳುಹಿಸಿರುವ ಎಲ್ಲಾ ಕಾರ್ಮಿಕರು ಐಟಿಐ, ಜೆಒಸಿ ವಿದ್ಯಾರ್ಹತೆ ಹೊಂದಿದವರು. ನಮಗೆ ಈಗಾಗಲೇ 30 ವರ್ಷ ವಯಸ್ಸಾಗಿದೆ. ಬೇರೆ ಕಡೆ ಕೆಲಸ ಸಿಗುವುದು ಅನುಮಾನ. ಇಂಥ ಸ್ಥಿತಿಯಲ್ಲಿ ಕಂಪನಿ ನಮ್ಮನ್ನು ಬೀದಿಗೆ ತಂದು ನಿಲ್ಲಿಸಿದೆ. 2 ವರ್ಷಗಳ ಹಿಂದಿನವರನ್ನು ಕಾಯಂಗೊಳಿಸಲಾಗಿದೆ. ಜತೆಗೆ, ಅನಕ್ಷರಸ್ಥರು ಈ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ. ವಿದ್ಯಾರ್ಹತೆ ಜತೆಗೆ ಅನುಭವ ಇದ್ದರೂ, ನಮ್ಮನ್ನು ಹೊರ ಹಾಕಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, "ಮಾಹಿತಿ ನೀಡದೇ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಪ್ರಶ್ನಿಸಿದರೆ, ಉತ್ಪಾದನೆ ಕಡಿಮೆಯಾಗಿದೆ ಎಂದು ನೆಪ ಹೇಳುತ್ತಾರೆ. ಇದೇ ರೀತಿ ಹಲವು ತಿಂಗಳಿನಿಂದಲೂ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ" ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಸಿದ್ದರಾಜು, "ಉತ್ಪಾದನೆ ಕಡಿಮೆಯಾಗಿರುವುದರಿಂದ ಹಲವು ತಿಂಗಳಿನಿಂದಲೂ ಕಾರ್ಮಿಕರನ್ನು ತೆಗೆದು ಹಾಕಲಾಗುತ್ತಿದೆ. ಇರುವ ಕಾರ್ಮಿಕರನ್ನು ವಿಆರ್ ಎಸ್ ಪಡೆಯುವಂತೆ ಮನವಿ ಮಾಡುತ್ತಿದ್ದೇವೆ. ಉತ್ಪಾದನೆ ಕಡಿಮೆಯಾಗಿರುವುದರಿಂದ ಹೀಗೆ ಮಾಡಬೇಕಿದೆ" ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾರ್ಮಿಕರಾದ ಕಿರಣ್, ಸುರೇಶ್, ಶ್ರೀನಿವಾಸ್, ಶೇಖರ್, ಜಗದೀಶ್ ಸೇರಿದಂತೆ ಇತರರು ಇದ್ದರು.












Click it and Unblock the Notifications