ರಾಜ್ಯಸಭೆ ಚುನಾವಣೆ: ಕೇಜ್ರಿವಾಲ್ ವಿರುದ್ಧ ಕುಮಾರ್ ವಿಶ್ವಾಸ್ ಆಕ್ರೋಶ
ನವದೆಹಲಿ, ಜನವರಿ 3: ಮೂರು ರಾಜ್ಯಸಭಾ ಸ್ಥಾನಗಳಿಗೆ ಎಎಪಿ ತನ್ನ ಅಭ್ಯರ್ಥಿಗಳನ್ನು ಇಂದು ಘೋಷಿಸಿದೆ. ಆದರೆ ರಾಜ್ಯಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ಎಎಪಿಯ ಸಹ ಸಂಸ್ಥಾಪಕ ಮತ್ತು ಕವಿ ಕುಮಾರ್ ವಿಶ್ವಾಸ್ ಟಿಕೆಟ್ ಪಡೆದಿಲ್ಲ.
ಇದರಿಂದ ನಿರಾಸೆಗೆ ಒಳಗಾಗಿರುವ ವಿಶ್ವಾಸ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸತ್ಯ ಹೇಳಿದ್ದಕ್ಕಾಗಿ ತಮಗೆ ಶಿಕ್ಷೆ ನೀಡಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಮಾತ್ರವಲ್ಲ ಕೇಜ್ರಿವಾಲ್ ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುವುದಿಲ್ಲ ಎಂದು ಎಎಪಿಯಲ್ಲಿ ಒಬ್ಬರೂ ಹೇಳದಿದ್ದರೆ ಈ ಪಕ್ಷದಲ್ಲಿ ಉಳಿಯುವುದು ಕಷ್ಟ ಎಂದೂ ಕುಮಾರ್ ವಿಶ್ವಾಸ್ ಹೇಳಿದ್ದಾರೆ.

ಇಂದು ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಸಭೆ ಸೇರಿದ ಎಎಪಿ ನಾಯಕರು ಸಂಜಯ್ ಸಿಂಗ್, ಸುಶೀಲ್ ಗುಪ್ತ ಮತ್ತು ಎನ್.ಡಿ ಗುಪ್ತಾರನ್ನು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.
ಸಂಜಯ್ ಸಿಂಗ್ ಪಕ್ಷ ಸ್ಥಾಪನೆಯ ಕಾಲದಿಂದಲೂ ಜತೆಗಿದ್ದರೆ, ಸುಶೀಲ್ ಗುಪ್ತಾ ದೆಹಲಿ ಮೂಲದ ಉದ್ಯಮಿಯಾಗಿದ್ದಾರೆ. ಇನ್ನು ಎನ್.ಡಿ ಗುಪ್ತಾ ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ.
ಇವರ ಆಯ್ಕೆಯಿಂದ ದ ಬೇಸರಗೊಂಡಿರುವ ವಿಶ್ವಾಸ್ ಬಹಿರಂಗವಾಗಿಯೇ ತಮ್ಮ ಅಸಮಧಾನ ಹೊರಹಾಕಿದ್ದಾರೆ. "ಕಳೆದ ಒಂದೂವರೆ ವರ್ಷಗಳಲ್ಲಿ ನಾನು ಸತ್ಯವನ್ನೇ ಹೇಳಿದ್ದೇನೆ. ಅದು ಅರವಿಂದ ಕೇಜ್ರಿವಾಲ್ ನಿರ್ಧಾರಗಳಾಗಲಿ ಸರ್ಜಿಕಲ್ ಸ್ಟ್ರೈಕ್, ಅಕ್ರಮ ಟಿಕೆಟ್ ಹಂಚಿಕೆ, ಪಂಜಾಬ್ ನಲ್ಲಿ ತೀವ್ರವಾದಿಗಳ ಬಗ್ಗೆ ಮೃದು ಧೋರಣೆ, ಜೆಎನ್ ಯು ವಿಷಯವೇ ಆಗಲಿ, ಎಲ್ಲಾ ಸಂದರ್ಭದಲ್ಲೂ ಸತ್ಯವನ್ನೇ ಹೇಳಿದ್ದೇನೆ. ಇದೀಗ ಸತ್ಯ ನುಡಿದಿದ್ದಕ್ಕೆ ಶಿಕ್ಷೆಯ ಉಡುಗೊರೆ ಸಿಕ್ಕಿದೆ," ಎಂದು ಹೇಳಿದ್ದಾರೆ.
"ನನ್ನ ಪ್ರಕಾರ ಇದು ನಿಜವಾದ ಕ್ರಾಂತಿಕಾರಿಯ, ಕವಿಯ ಮತ್ತು ಗೆಳೆಯನ ಗೆಲುವು," ಎಂದು ವಿಶ್ವಾಸ್ ಅಭಿಪ್ರಾಯಪಟ್ಟಿದ್ದಾರೆ.
ಜತೆಗೆ ಕೇಜ್ರಿವಾಲ್ ರನ್ನು ವ್ಯಂಗ್ಯವಾಡಿರುವ ಅವರು, ದೊಡ್ಡ ಕ್ರಾಂತಿಕಾರಿಗಳ ಆಯ್ಕೆಯಲ್ಲಿ ಎಎಪಿಯ ಕಾರ್ಯಕರ್ತರ ಧ್ವನಿಯನ್ನು ಆಲಿಸಿದ್ದಕ್ಕೆ ಧನ್ಯವಾದ ಎಂದು ಛೇಡಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ನಡೆದ ಎಎಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೇಜ್ರಿವಾಲ್ ನಗುವಿನೊಂದಿಗೆ, "ನಾವು ನಿನ್ನನ್ನು ಮುಗಿಸುತ್ತೇವೆ, ಆದರೆ ನಿನ್ನನ್ನು ಹುತಾತ್ಮನನ್ನಾಗಿಸಲು ಬಿಡುವುದಿಲ್ಲ," ಎಂದು ಹೇಳಿದ್ದರು ಎಂದು ಕುಮಾರ್ ವಿಶ್ವಾಸ್ ಆರೋಪಿಸಿದ್ದಾರೆ.
"ನಾನು ಹುತಾತ್ಮನಾಗುವುದನ್ನು ಒಪ್ಪಿಕೊಂಡಿದ್ದೇನೆ ಮತ್ತು ಅವರಿಗೆ (ಕೇಜ್ರಿವಾಲ್) ಧನ್ಯವಾದ ಹೇಳುತ್ತೇನೆ," ಎಂದು ವಿಶ್ವಾಸ್ ಮನನೊಂದು ಮಾತಾಡಿದ್ದಾರೆ.
ಜನವರಿ 16ರಂದು ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ದೆಹಲಿ ವಿಧಾನಸಭೆಯಲ್ಲಿ ಭಾರೀ ಬಹುಮತ ಹೊಂದಿರುವ ಎಎಪಿ ಎಲ್ಲಾ ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ.












Click it and Unblock the Notifications