ಎಎಸ್ ಬೋಪಣ್ಣ, ಅನಿರುದ್ಧ್ ಬೋಸ್ ಸುಪ್ರೀಂ ನ್ಯಾಯಮೂರ್ತಿಗಳಾಗಿ ಶಿಫಾರಸು
ನವದೆಹಲಿ, ಏಪ್ರಿಲ್ 12: ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ ಜಾರ್ಖಂಡ್ ನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅನಿರುದ್ಧ್ ಬೋಸ್ ಹಾಗೂ ಗೌಹಾತಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಶುಕ್ರವಾರ ಶಿಫಾರಸು ಮಾಡಲಾಗಿದೆ.
ಈ ಎರಡು ನೇಮಕದೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯು 27ರಿಂದ 29ಕ್ಕೆ ಏರಿದಂತಾಗಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಮಂಜೂರಾಗಿರುವ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 31. ನಿರ್ಣಯದ ಪ್ರಕಾರ ಸುಪ್ರೀಂ ಕೋರ್ಟ್ ನ ಟಾಪ್ ಐವರು ನ್ಯಾಯಮೂರ್ತಿಗಳು ಸಹಿ ಹಾಕಿದ್ದಾರೆ ಮತ್ತು ಇದನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಹಿರಿತನ ಮತ್ತಿತರ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಸುಪ್ರೀಂಕೋರ್ಟ್ ಕೊಲಿಜಿಯಂ ತೀರ್ಮಾನಕ್ಕೆ ಆಕ್ಷೇಪ; ಏನಿದು ಹೊಸ ವಿವಾದ?
ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರನ್ನು ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಜನವರಿ 19, 2004ರಲ್ಲಿ ನೇಮಿಸಲಾಗಿತ್ತು. ಆ ನಂತರ ಆಗಸ್ಟ್ 11, 2018ರಲ್ಲಿ ಜಾರ್ಖಂಡ್ ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿ ಆಗಿ ಪದೋನ್ನತಿ ಆಗಿತ್ತು. ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಅಖಿಲ ಭಾರತ ಮಟ್ಟದಲ್ಲಿ ಒಟ್ಟಾರೆ ಸೇವಾ ಹಿರಿತನದ ಪ್ರಕಾರ 12ನೇ ಸ್ಥಾನದಲ್ಲಿ ಅವರಿದ್ದರು.
ಇನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಕರ್ನಾಟಕ ಹೈ ಕೋರ್ಟ್ ನ್ಯಾಯಮೂರ್ತಿಯಾಗಿ 2006ರಲ್ಲಿ ನೇಮಿಸಲಾಗಿತ್ತು. ಆ ನಂತರ 2018ರಲ್ಲಿ ಗೌಹಾತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಆಗಿತ್ತು. ಅಖಿಲ ಭಾರತ ಮಟ್ಟದಲ್ಲಿ ಹೈ ಕೋರ್ಟ್ ನ್ಯಾಯಮೂರ್ತಿಗಳ ಹಿರಿತನದಲ್ಲಿ ಅವರು 36ನೇ ಸಂಖ್ಯೆಯಲ್ಲಿದ್ದರು.
ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಗೆ ನ್ಯಾಯಮೂರ್ತಿಗಳನ್ನು ನೇಮಿಸುವುದರಲ್ಲಿ ಇದು ಎರಡನೇ ಬಾರಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಜವಾಬ್ದಾರಿ ವಹಿಸಿಕೊಂಡಿದೆ. ಹಿರಿತನಕ್ಕೆ ಆದ್ಯತೆ ನೀಡಲಾಗಿದೆ. ಕಳೆದ ಜನವರಿ 10ನೇ ತಾರೀಕು ನ್ಯಾಯಮೂರ್ತಿ ಸಂಜೀವ್ ಖನ್ನಾ ಅಖಿಲ ಭಾರತ ಮಟ್ಟದಲ್ಲಿ ಹಿರಿತನದಲ್ಲಿ 33ನೇ ಸ್ಥಾನದಲ್ಲಿದ್ದರು. ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಆ ವೇಳೆ ಅದು ವಿವಾದಕ್ಕೆ ಕಾರಣ ಆಯಿತು.
ಅಚ್ಚರಿ, ಆಕ್ಷೇಪಕ್ಕೆ ಕಾರಣವಾದ ಸುಪ್ರೀಂಕೋರ್ಟ್ ಕೊಲಿಜಿಯಂ ನಿರ್ಧಾರ
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ದೆಹಲಿ ಬಾರ್ ಅಸೋಸಿಯೇಷನ್ ನಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಹಿರಿತನದ ಆಧಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.