ಪೇಜಾವರ ಶ್ರೀಗಳೇ ನಿಮಗ್ಯಾಕೆ ಬೇಕು ಸನ್ಯಾಸ ದೀಕ್ಷೆ?
ಉಡುಪಿ, ಏ 21: ತನ್ನ ಕಾಲ ಬುಡದಲ್ಲೇ 'ಪಂಕ್ತಿಭೇದ' ಎನ್ನುವ ಅಮಾನುಷ ಕೃತ್ಯ ನಡೆಯುತ್ತಿರಬೇಕಾದರೆ ಅದನ್ನು ನಿಷೇಧಿಸುವಲ್ಲಿ ಉಡುಪಿಯ ಹಿರಿಯ ಪೇಜಾವರ ಶ್ರೀಗಳು ವಿಫಲರಾಗಿದ್ದಾರೆ. ಇವರಿಗೆ ಸನ್ಯಾಸ ದೀಕ್ಷೆ ಯಾಕೆ ಬೇಕು, ತ್ಯಾಗ ಮಾಡಿ ಹೋಗಲಿ ಎಂದು ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತ ಪಡಿಸಿದೆ.
ಬ್ರಾಹ್ಮಣರು ಮತ್ತು ಇತರರು ಎಂದು ಸಮಾಜದಲ್ಲಿ ಒಡಕು ಮೂಡಿಸುವ ಉಡುಪಿ ಅಷ್ಠಮಠಗಳಿಗೆ ಬ್ರಾಹ್ಮಣರೇತರು ನೀಡುವ ಕಾಣಿಕೆಯ ದುಡ್ಡು ಬೇಡವೇನೋ? ಇತರ ಜಾತಿಯವರು ಕೊಡುವ ಕಾಣಿಕೆಯನ್ನು ಪಡೆಯುವ ಅಷ್ಠಮಠಗಳು ಊಟದ ವ್ಯವಸ್ಥೆಯಲ್ಲಿ ಮಾತ್ರ ಯಾಕೆ ತಾರತಮ್ಯ ಮಾಡುತ್ತಿವೆ ಎಂದು ಡಿಎಸ್ಎಸ್ ಸಂಘಟನೆ ಕಿಡಿಕಾರಿದೆ.
ಜಾತಿ ಹೆಸರಿನಲ್ಲಿ ತಾರತಮ್ಯ ಮಾಡಿ ಭಕ್ತರನ್ನು ಅವಮಾನಿಸುವುದು ಎಷ್ಟು ಸರಿ? ಪಂಕ್ತಿಭೇದ ಎನ್ನುವ ಅನಿಷ್ಠ ಪದ್ದತಿಯನ್ನು ಸರಕಾರ ಕೂಡಲೇ ನಿಷೇಧಿಸಬೇಕು ಎಂದು ಕೋಮು ಸೌಹಾರ್ದ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಘಟಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಪೇಜಾವರ ಶ್ರೀಗಳ ವಿಷಾದ: ಉಡುಪಿಯಲ್ಲಿ ನಡೆದ ಪಂಕ್ತಿಭೇದದ ಘಟನೆಗೆ ಪೇಜಾವರ ಶ್ರೀಗಳು ವಿಷಾದ ವ್ಯಕ್ತ ಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡುತ್ತಿದ್ದ ಶ್ರೀಗಳು, ತಮ್ಮ ಗಮನಕ್ಕೆ ಬಾರದೇ ಈ ಘಟನೆ ನಡೆದಿದೆ. ಇದಕ್ಕೆ ನಾವು ವಿಷಾದ ವ್ಯಕ್ತ ಪಡಿಸುತ್ತೇವೆ. ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.
ಏನಿದು ಮತ್ತೆ ಈ ವಿವಾದ? ಕೃಷ್ಣಮಠದ ಭೋಜನಶಾಲೆಯಲ್ಲಿ ಶನಿವಾರ (ಏ 19) ವನಿತಾ ಶೆಟ್ಟಿ ಎನ್ನುವ ಬಂಟ್ಸ್ ಸಮುದಾಯದ ಮಹಿಳೆ ತನ್ನ ಸ್ನೇಹಿತೆಯರ ಜೊತೆ ಊಟಕ್ಕೆ ಕುಳಿತಿದ್ದರು. ಮಹಿಳೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಠದ ಅಧಿಕಾರಿಗಳು ಬ್ರಾಹ್ಮಣರೇತರರಿಗೆ ಇಲ್ಲಿ ಊಟಕ್ಕೆ ಅವಕಾಶವಿಲ್ಲ ಎಂದು ಮಹಿಳೆಯನ್ನು ಊಟದ ಮಧ್ಯದಲ್ಲೇ ಎಬ್ಬಿಸಿದ್ದಾರೆ ಎನ್ನುವುದು ವಿವಾದ.
ನಾನು ಉಡುಪಿ ಮೂಲದವಳು, ವೈದ್ಯಕೀಯ ಕ್ಷೇತ್ರದವಳು. ನಾನು ಚೌಕಿಯಲ್ಲಿ (ಬ್ರಾಹ್ಮಣರಿಗಾಗಿರುವ ಊಟದ ಹಾಲ್) ಊಟಕ್ಕೆ ಕುಳಿತಿಲ್ಲ. ಭೋಜನಶಾಲೆಯಲ್ಲಿ ಊಟಕ್ಕೆ ಕೂತೆ. ಅಲ್ಲಿ ಇತರ ಜಾತಿಯವರಿಗೆ ಊಟದ ವ್ಯವಸ್ಥೆ ಇಲ್ಲ ಎನ್ನುವುದಾದರೆ ಫಲಕ ಹಾಕಬೇಕಿತ್ತು.
ತುಂಬಿದ ಊಟದ ಹಾಲಿನಲ್ಲಿ ಎಲ್ಲರ ಮುಂದೆ ನನ್ನನ್ನು ಊಟ ಮಾಡುತ್ತಿರಬೇಕಾದರೆ ಎಬ್ಬಿಸಿ ಹೊರಕ್ಕೆ ಕಳುಹಿಸಿದರು. ಸ್ನೇಹಿತೆಯರ ಮುಂದೆ ನನಗೆ ತುಂಬಾ ಅವಮಾನವಾಗಿದೆ. ನನಗಾದ ಪರಿಸ್ಥಿತಿ ಬೇರೆ ಯಾರಿಗೂ ಬರುವುದು ಬೇಡ ಎಂದು ವನಿತಾ ಶೆಟ್ಟಿ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದರು.