ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿ 500 ಜನರ ವಿರುದ್ಧ ಎಫ್ಐಆರ್
ಲಕ್ನೋ, ಅಕ್ಟೋಬರ್.05: ಉತ್ತರ ಪ್ರದೇಶದ ಹತ್ರಾಸ್ ಸಂತ್ರಸ್ತೆ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ 400 ರಿಂದ 500 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹತ್ರಾಸ್ ಗ್ರಾಮಕ್ಕೆ ಭೇಟಿ ನೀಡಿದ ಚಂದ್ರಶೇಖರ್ ಆಜಾದ್ ಮತ್ತು ನೂರಾರು ಕಾರ್ಯಕರ್ತರ ವಿರುದ್ಧ ಸಾಂಕ್ರಾಮಿಕ ಪಿಡುಗು ಕಾಯ್ದೆ ಮತ್ತು ಸಿಆರ್ ಪಿಸಿ ಸೆಕ್ಷನ್ 144 ಸೇರಿದಂತೆ ಹಲವು ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹತ್ರಾಸ್ ಸಂತ್ರಸ್ತೆ ಕುಟುಂಬಕ್ಕೆ Y ಹಂತದ ಭದ್ರತೆ ನೀಡಲು ಒತ್ತಾಯ
ಕಳೆದ ಭಾನುವಾರವಷ್ಟೇ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು, ಹತ್ರಾಸ್ ಅತ್ಯಾಚಾರದ ಸಂತ್ರಸ್ತೆಯ ಕುಟುಂಬ ಸದಸ್ಯರ ಮನೆಗೆ ಭೇಟಿ ನೀಡಿದ್ದರು. ಅದಕ್ಕೂ ಮೊದಲು ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅವರನ್ನು ಹತ್ರಾಸ್ ಗಡಿಯಲ್ಲಿರುವ ಬುಲ್ಗಡಿ ಗ್ರಾಮದ ಬಳಿ ಪೊಲೀಸರು ತಡೆದಿದ್ದರು.
Y ಹಂತದ ಭದ್ರತೆಗೆ ಆಗ್ರಹಿಸಿದ್ದ ಆಜಾದ್:
ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಂಬಂಧಿಕರಿಗೆ ಭದ್ರತೆಯ ಅವಶ್ಯಕತೆಯಿದೆ. ಜಿಲ್ಲಾಡಳಿತವೇ ಅವರಿಗೆ ಬೆದರಿಕೆ ಹಾಕಿರುವ ಆರೋಪವೂ ಇದೆ. ಈ ಹಿನ್ನೆಲೆ ಕುಟುಂಬಕ್ಕೆ Y- ಹಂತದ ಭದ್ರತೆ ನೀಡಬೇಕು. ನೀವು ಅವರಿಗೆ 'Y' ಹಂತದ ಭದ್ರತೆ ನೀಡುತ್ತಿರೋ ಅಥವಾ ಅವರನ್ನೆಲ್ಲ ನಾನು ನಮ್ಮ ಮನೆಗೆ ಕರೆದುಕೊಂಡು ಹೋಗಲೋ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಪ್ರಶ್ನೆ ಮಾಡಿದ್ದರು.
ಸಂತ್ರಸ್ತೆ ಕುಟುಂಬ ಸದಸ್ಯರ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಚಂದ್ರಶೇಖರ್ ಆಜಾದ್ ಮಾತನಾಡಿದರು. ಸಂತ್ರಸ್ತೆಯ ಸಂಬಂಧಿಕರ ಜೊತೆಗೆ ಹೆಚ್ಚು ಹೊತ್ತು ಚರ್ಚಿಸುವುದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಕುಟುಂಬ ಸದಸ್ಯರ ಸ್ಥಿತಿ ಅಷ್ಟೊಂದು ಸುರಕ್ಷಿತವಾಗಿ ಎಂದು ಎನ್ನಿಸುವುದಿಲ್ಲ. ಪೊಲೀಸರು, ಎಸ್ಐಟಿ ಮತ್ತು ಸಿಬಿಐ ತನಿಖೆಯಿಂದ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿಲ್ಲ ಎಂದು ಅವರು ತಿಳಿಸಿದರು.