ಉತ್ತರಪ್ರದೇಶ ಉಪಚುನಾವಣೆ: ಸ್ಪರ್ಧಿಸದಿರಲು ಕಾಂಗ್ರೆಸ್ ತೀರ್ಮಾನ
ಲಕ್ನೋ ಜೂನ್ 6: ಮುಂಬರುವ ಉತ್ತರ ಪ್ರದೇಶದ ರಾಂಪುರ ಮತ್ತು ಅಜಂಗಢ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾಂಗ್ರೆಸ್ ತೀರ್ಮಾನಿಸಿದೆ. 2024ರ ಸಾರ್ವತ್ರಿಕ ಚುನಾವಣೆಗಾಗಿ ತಳಮಟ್ಟದಿಂದ ಪಕ್ಷವನ್ನು ಪುನಃ ಕಟ್ಟಲು ಗಮನಹರಿಸ ಬೇಕಾಗಿರುವುದರಿಂದ ಕಾಂಗ್ರೆಸ್ ಈ ತೀರ್ಮಾನಕ್ಕೆ ಬಂದಿದೆ.
ಇತ್ತೀಚಿಗೆ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಶಾಸಕರಾಗಿ ಆಯ್ಕೆಯಾಗಿರುವುದರಿಂದ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹಾಗಾಗಿ ರಾಂಪುರ ಲೋಕಸಭಾ ಕ್ಷೇತ್ರ ಖಾಲಿಯಾಗಿದೆ.
ಅದೇ ರೀತಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶಾಸಕರಾಗಿ ಆಯ್ಕೆಯಾಗಿರುವುದರಿಂದ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹಾಗಾಗಿ ಅಜಂಗಢ ಲೋಕಸಭಾ ಕ್ಷೇತ್ರ ಖಾಲಿಯಾಗಿದೆ.
ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಸರಿಯಾದ ನೆಲೆಯಿಲ್ಲ. ಇಲ್ಲಿ ಪ್ರತಿಪಕ್ಷಗಳಿಗೆ ತೀವ್ರ ಪೈಪೋಟಿ ನೀಡಲು ಸಾಧ್ಯತೆ ಕ್ಷೀಣ. ಅಲ್ಲದೇ ಪಕ್ಷದ ಸಂಘಟನೆಗೆ ಗಮನ ಹರಿಸಬೇಕಿದೆ. ಹೇಗೂ ಸೋಲುವ ಚುನಾವಣೆಗೆ ಗಮನ ಮತ್ತು ಹಣಕಾಸು ವಿನಿಯೋಗಿಸಲು ಪಕ್ಷ ತಯಾರಿಲ್ಲ. ಹಾಗಾಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಪಕ್ಷ ತೀರ್ಮಾನಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪಕ್ಷದ ಸಂಘಟನೆ ಕಡೆಗೆ ಗಮನ
ಮಾರ್ಚ್ ನಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೇವಲ ಎರಡು ಸ್ಥಾನಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಯಿತು. ಪರಿಸ್ಥಿತಿ ಹೀಗಿರುವಾಗ ಪುನಃ ಮೂರು ತಿಂಗಳ ಅಂತರದಲ್ಲಿ ಪಕ್ಷದ ದೌರ್ಬಲ್ಯವನ್ನು ಜನರ ಮುಂದೆ ತೆರೆದಿಡಲು ಕಾಂಗ್ರೆಸ್ ನಾಯಕತ್ವ ಬಯಸುವುದಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ. ಅಲ್ಲದೇ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಈ ತೀರ್ಮಾನ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ ಪಕ್ಷದ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿದ್ದರು.

ಬಿಜೆಪಿ ಯಿಂದ ದಿನೇಶ್ ಲಾಲ್ ಯಾದವ್ ಸ್ಪರ್ಧೆ
ರಾಂಪುರ ಕ್ಷೇತ್ರದಿಂದ ಅಜಂ ಖಾನ್ ಅವರ ಆಪ್ತ ಅಸೀಮ್ ಖಾನ್ ಅವರನ್ನು ಕಣಕ್ಕೆ ಇಳಿಸಲು ಸಮಾಜವಾದಿ ಪಕ್ಷ ತೀರ್ಮಾನಿಸಿದೆ. ಅದೇ ರೀತಿ ಅಜಂಗಢ ಕ್ಷೇತ್ರದಿಂದ ಅಖಿಲೇಶ್ ಯಾದವ್ ಅವರ ಸದೋರ ಸಂಬಂಧಿ ಧರ್ಮೇಂದ್ರ ಯಾದವ್ ಅವರನ್ನು ಕಣಕ್ಕಿಳಿಸುವ ಘೋಷಣೆಯನ್ನು ಪಕ್ಷ ಮಾಡಿದೆ. ಇನ್ನೊಂದೆಡೆ ಬಿಜೆಪಿ ಯು ಅಜಂಗಢ ಲೋಕಸಭಾ ಕ್ಷೇತ್ರದಿಂದ ಭೋಜ್ ಪುರಿ ಖ್ಯಾತ ನಟ ದಿನೇಶ್ ಲಾಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ಇವರು ವಿಧಾನಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ವಿರುದ್ಧ ಸೋತಿದ್ದರು. ಅದೇ ರೀತಿ ಬಿಜೆಪಿ ಯು ರಾಂಪುರ ಕ್ಷೇತ್ರದಿಂದ ಘನಶ್ಯಾಮ್ ಲೋಧಿ ಅವರಿಗೆ ಟಿಕೆಟ್ ನೀಡಿದೆ.

ಬಿಎಸ್ ಯಿಂದ ಪಿ ಗುಡ್ಡು ಜಮಾಲಿ ಸ್ಪರ್ಧೆ
ಜತೆಗೆ ಬಿಎಸ್ ಪಿ ಅಜಂಗಢ ಕ್ಷೇತ್ರದಿಂದ ಶಾ ಅಲಂ ಅಲಿಯಾಸ್ ಗುಡ್ಡು ಜಮಾಲಿ ಅವರಿಗೆ ಟಿಕೆಟ್ ನೀಡಿದೆ. ಸಮಾಜವಾದಿ ಪಕ್ಷದ ಮತಗಳನ್ನು ಕಸಿಯಲೆಂದೇ ಬಿಎಸ್ ಪಿ ಈ ತೀರ್ಮಾನ ಮಾಡಿದೆ ಎನ್ನಲಾಗಿದೆ. ಆದರೆ ರಾಂಪುರ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಬಿಎಸ್ ಪಿ ಕಣಕ್ಕಿಳಿಸುತ್ತಿಲ್ಲ. ಇಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡದಿರಲು ಬಿಎಸ್ ಪಿ ನಿರ್ಧರಿಸಿದೆ.

ಗೆಲುವು ಎಸ್ಪಿ, ಬಿಜೆಪಿ ಎರಡಕ್ಕೂ ಮಹತ್ವದ್ದು
ಎರಡು ಕ್ಷೇತ್ರಗಳು ಸಮಾಜವಾದಿ ಪಕ್ಷಕ್ಕೆ ಭದ್ರಕೋಟೆಗಳು ಎಂದೆನಿವೆ. ಹಾಗಾಗಿ ಇಲ್ಲಿ ಗೆಲುವು ಸಮಾಜವಾದಿ ಪಕ್ಷಕ್ಕೆ ಅನಿವಾರ್ಯವಾಗಿದೆ. ಅದೇ ರೀತಿ ಬಿಜೆಪಿ ಗೆ ಕೂಡ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಮಹತ್ವದ್ದಾಗಿದೆ. ಇಲ್ಲಿನ ಗೆಲುವು ಪಕ್ಷದ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸಿದಂತಾಗುತ್ತದೆ. ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಈಗಾಗಲೇ ಪ್ರಚಾರವನ್ನು ಆರಂಭಿಸಿದ್ದಾರೆ. ಅಲ್ಲದೇ ಅಖಿಲೇಶ್ ಯಾದವ್ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications