ಕಾನ್ಪುರ ಉದ್ಯಮಿ ಮನೆಯಲ್ಲಿ ಶೋಧ ಕಾರ್ಯ ಅಂತ್ಯ
ಲಕ್ನೋ ಡಿಸೆಂಬರ್ 29: ದೇಶವನ್ನೇ ಬೆಚ್ಚಿಬೀಳಿಸಿದ್ದ ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಉದ್ಯಮಿ ಪಿಯೂಷ್ ಜೈನ್ ಮನೆ ಮೇಲಿನ ಐಟಿ ದಾಳಿ ಕೊನೆಗೂ ಅಂತ್ಯಗೊಂಡಿದೆ. ಒಂದು ವಾರದ ನಂತರ ಪೂರ್ಣಗೊಂಡ ದಾಳಿಯಲ್ಲಿ ಒಟ್ಟು 196 ಕೋಟಿ ನಗದು, 11 ಕೋಟಿ ಮೌಲ್ಯದ 23 ಕೆಜಿ ಚಿನ್ನ ಮತ್ತು ಸುಮಾರು 6 ಕೋಟಿ ಮೌಲ್ಯದ 600 ಕೆಜಿ ಶ್ರೀಗಂಧದ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ. ಪಿಯೂಷ್ ಜೈನ್ ಬಳಿ ನಗದು ಹಣ ಕಂಡು ತೆರಿಗೆ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಜೊತೆಗೆ ಪರ್ವತದಂತಿದ್ದ ಹಣವನ್ನು ಎಣಿಕೆ ಮಾಡಲು ಹಲವಾರು ನೋಟು ಎಣಿಸುವ ಯಂತ್ರಗಳನ್ನು ತರಿಸಲಾಗಿತ್ತು. ತೆರಿಗೆ ವಂಚನೆ ಆರೋಪದ ಮೇಲೆ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ.
ಕಾನ್ಪುರದ ಉದ್ಯಮಿ ಮನೆಯಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿದ್ದು ಈ ಆದಾಯದ ಪತ್ತೆಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಪಿಯೂಷ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಪಿಯೂಷ್ ಹೇಳಿಕೆ ತೃಪ್ತಕರವಾಗಿಲ್ಲದ್ದರಿಂದ ಅಧಿಕಾರಿಗಳು ದಾಖಲಾತಿ ಇಲ್ಲದ ಅಪಾರ ಸಂಪತ್ತಿನ ಮಾರ್ಗವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಜೊತೆಗೆ ಪಿಯೂಷ್ ಜೈನ್ ಅವರನ್ನು ನ್ಯಾಯಾಲಯ ವಿಚಾರಣೆಗೆ ಒಳಪಡಿಸಬೇಕಾಗಿದೆ.
ಶೋಧ ಕಾರ್ಯ ಪೂರ್ಣಗೊಂಡ ನಂತರ ಸ್ಥಳೀಯ ಮಾರ್ಧಯಮಗಳು ಕನ್ನೌಜ್ನಲ್ಲಿರುವ ಉದ್ಯಮಿ ಪಿಯೂಷ್ ಜೈನ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಪಿಯೂಷ್ ಜೈನ್ ಅವರ ಮಗ, "ನಾನು ಕಾನೂನಿನ ಮೇಲೆ ನಂಬಿಕೆ ಇಟ್ಟಿದ್ದೇನೆ, ಸರಿ ಯಾವುದು ಅಥವಾ ತಪ್ಪು ಯಾವುದು ಎನ್ನುವುದು ಆದಷ್ಟು ಬೇಗ ಹೊರಬರುತ್ತದೆ" ಎಂದು ಹೇಳಿದರು. ಜೊತೆಗೆ ಇನ್ನಷ್ಟು ಪ್ರಶ್ನೆಗಳಿಗೆ ಅವರು ಮಾತನಾಡಲು ನಿರಾಕರಿಸಿದರು.
ಜಿಎಸ್ಟಿ ಗುಪ್ತಚರ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಜಾಕಿರ್ ಹುಸೇನ್ ಅವರು ಕನೌಜ್ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ನಾವು ಇಲ್ಲಿ ದಾಳಿಯನ್ನು ಮುಕ್ತಾಯಗೊಳಿಸಿದ್ದೇವೆ ಮತ್ತು ಚಿನ್ನವನ್ನು ಡಿಆರ್ಐ [ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್] ಗೆ ಹಸ್ತಾಂತರಿಸಿದ್ದೇವೆ. ತನಿಖೆ ನಡೆಯುತ್ತಿದೆ" ಎಂದರು. ಈ ಹಿಂದೆ ಕಾನ್ಪುರದಿಂದ ಸರಕು ಮತ್ತು ಸೇವಾ ತೆರಿಗೆ ವಂಚಿಸಿದ ಆರೋಪದ ಮೇಲೆ ಜೈನ್ ಅವರನ್ನು ಬಂಧಿಸಲಾಗಿತ್ತು. ಆದರೂ ಅವರು ಜಾಮೀನಿನ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈತನಿಂದಾದ ತೆರೆಗೆ ವಂಚನೆ ಇತಿಹಾಸದಲ್ಲಿ ಅತ್ಯಂತ ದೊಡ್ಡ ವಂಚನೆಯಾಗಿದೆ ಎಂದು ಅಧ್ಯಕ್ಷ ವಿವೇಕ್ ಜೋಹ್ರಿ ಹೇಳಿದ್ದಾರೆ.
ಚಿನ್ನದ ಗಟ್ಟಿಗಳಿಗೆ ಬದಲಾಗಿ ಜೈನ್ ಅವರು ಸುಗಂಧ ದ್ರವ್ಯಗಳ ಕಚ್ಚಾ ವಸ್ತುಗಳನ್ನು ದುಬೈಗೆ ರಫ್ತು ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಆತನ ಆವರಣದಿಂದ ವಶಪಡಿಸಿಕೊಂಡ ಚಿನ್ನದ ಬಾರ್ಗಳು ವಿದೇಶಿ ಗುರುತುಗಳನ್ನು ಹೊಂದಿದ್ದು, ಅವುಗಳನ್ನು ಆಮದು ಮಾಡಿಕೊಳ್ಳುವಾಗ ಅವರು ಹೇಗೆ ಕಸ್ಟಮ್ಸ್ ಸುಂಕವನ್ನು ತಪ್ಪಿಸಿದ್ದಾರೆ ಎಂಬುದನ್ನು ಡಿಆರ್ಐ ಈಗ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಜೈನ್ ಅವರು ಸುಗಂಧ ದ್ರವ್ಯಗಳನ್ನು ಸಿಂಗಾಪುರಕ್ಕೆ ರಫ್ತು ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 22 ರಂದು ಕಾನ್ಪುರದಲ್ಲಿ ಪ್ರಾರಂಭವಾದ ದಾಳಿಗಳು ಇಂದು ಕನೌಜ್ನಲ್ಲಿ ಕೊನೆಗೊಂಡಿವೆ.
ತನಿಖಾಧಿಕಾರಿಗಳ ಪ್ರಕಾರ, ಜೈನ್ ಮತ್ತು ಅವರ ಸಹೋದರ ಅಂಬ್ರಿಶ್ ಜೈನ್ ತಮ್ಮ ತಂದೆ ರಸಾಯನಶಾಸ್ತ್ರಜ್ಞರಿಂದ ಸುಗಂಧ ದ್ರವ್ಯಗಳನ್ನು ತಯಾರಿಸಲು ಕಲಿತರು. ಅವರು ಪಾನ್ ಮಸಾಲಾ ತಯಾರಕರಿಗೆ ಸುಗಂಧ ದ್ರವ್ಯಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ ನಂತರ ಅವರ ವ್ಯವಹಾರವು ಅಭಿವೃದ್ಧಿ ಹೊಂದಿತು. ಸಹೋದರರು ಎಲ್ಲಾ ಪಾವತಿಗಳನ್ನು ನಗದು ರೂಪದಲ್ಲಿ ತೆಗೆದುಕೊಂಡರು.
ಜಿಎಸ್ಟಿ ಗುಪ್ತಚರ ಘಟಕ ತೆರಿಗೆ ವಂಚನೆಯನ್ನು ಕಂಡು ಪಾನ್ ಮಸಾಲಾ ತಯಾರಕರಿಗೆ ಬಲೆ ಬೀಸಿತು. ಈ ಜಾಡು ಹಿಡಿದು ಹೊರಟ ಅವರು ತಲುಪಿದ್ದು ಜೈನ್ ಮನೆಗೆ. ಸ್ಕೂಟರ್ ಓಡಿಸಿಕೊಂಡು ಸರಳವಾಗಿ ಜೀವನ ನಡೆಸುತ್ತಿದ್ದ ಜೈನ್ ಇಷ್ಟು ದೊಡ್ಡ ಸಂಪತ್ತನ್ನು ಕೂಡಿ ಹಾಕಿರುವುದು ತಿಳಿದ ನೆರೆಹೊರೆಯವರು ಬೆಚ್ಚಿಬಿದ್ದರು.
ಮಾತ್ರವಲ್ಲದೇ ಪಿಯೂಷ್ ಜೈನ್ ಮನೆಯಲ್ಲಿ ಸಿಕ್ಕ ಅಪಾರ ತೆರಿಗೆ ವಂಚಿತ ಹಣಕ್ಕೂ ರಾಜಕೀಯ ಕೆಸರೆರೆಚಾಟ ಶುರುವಾಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಬಿಜೆಪಿ ಮತ್ತು ಎಸ್ಪಿ ಈ ವಿಚಾರವನ್ನು ಬಳಸಿಕೊಂಡು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿವೆ. ಪ್ರಸ್ತುತ ಬಿಜೆಪಿ ಮತ್ತು ಸಮಾಜವಾದಿ ಪಕ್ಷ ಉದ್ಯಮಿಯನ್ನು ಬೆಂಬಲಿಸುತ್ತಿದೆ ಎಂದು ಪರಸ್ಪರ ಆರೋಪಿಸಿಕೊಂಡಿದ್ದಾರೆ.
ಇತ್ತೀಚೆಗೆ ಸಮಾಜವಾದಿಯ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ ಉದ್ಯಮಿ ಜೈನ್ ಎಂದು ಬಿಜೆಪಿ ಆರೋಪಿಸಿದರೆ, ಅಖಿಲೇಶ್ ಯಾದವ್ ಬಿಜೆಪಿ ತಮ್ಮ ಪಕ್ಷದವರ ಮೇಲೆ ತಪ್ಪಾಗಿ ದಾಳಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಪಿಯೂಷ್ ಜೈನ್ ಮತ್ತು ಬಿಜೆಪಿ ಪಕ್ಷದ ಪುಷ್ಪರಾಜ್ ಜೈನ್ ನಡುವೆ ಸಂಬಂಧವಿದೆ. ಕಾನ್ಪುರದ ಉದ್ಯಮಿ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.