ಸಿದ್ದರಾಮಯ್ಯ ಕಣ್ಣಿಟ್ಟಿದ್ದ ಕೋಲಾರ ಕ್ಷೇತ್ರಕ್ಕೆ ಭಾರಿ ಡಿಮ್ಯಾಂಡ್, 6 ಅಕಾಂಕ್ಷಿಗಳಿಂದ ಅರ್ಜಿ
ಕೋಲಾರ, ನವೆಂಬರ್ 21: 2023ರ ವಿಧಾನಸಭೆ ಚುನಾವಣೆಗೆ ಮಾಜಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿದೆ. ಈ ಮಧ್ಯೆ ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದು ಹೋಗಿದ್ದು, ಕೋಲಾರ ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲ ಬಯಸುವವರು 2 ಲಕ್ಷ ಡಿಡಿ ಜೊತೆಗೆ ನವೆಂಬರ್ 21ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರ ತಮ್ಮ ಆಪ್ತ ಸಹಾಯಕರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಆದರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂಬುದು ಇನ್ನೂ ಬಗೆಹರಿದಿಲ್ಲ, ಈ ಮಧ್ಯೆ ಬಾದಾಮಿ, ಕೋಲಾರ ಹಾಗೂ ವರುಣ ಮೂರರಲ್ಲಿ ಒಂದರಿಂದ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಯಾವುದೆಂದು ಮಾತ್ರ ಖಚಿತಪಡಿಸಿಲ್ಲ, ಆದರೆ ಅವರು ಬಯಸಿರುವ ಒಂದು ಕ್ಷೇತ್ರವಾದ ಕೋಲಾರ ಕ್ಷೇತ್ರಕ್ಕಾಗಿ 6 ಮಂದಿ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವುದೆ ವಿಶೇಷ.

ಸಿದ್ದರಾಮಯ್ಯ ಪ್ರವಾಸದ ನಂತರ ನವೆಂಬರ್ 14ರಂದು ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಸುದರ್ಶನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಮನೋಹರ್ ಹಾಗೂ ಬೆಂಗಳೂರಿನ ಉದ್ಯಮಿ ಹಾಗೂ ಡಿಕೆ ಶಿವಕುಮಾರ್ ಆಪ್ತರಾಗಿ ಗುರುತಿಸಿಕೊಂಡಿರುವ ಶ್ರೀನಿವಾಸ್ ಅರ್ಜಿ ಸಲ್ಲಿಸಿದ್ದಾರೆ.'
ಆದರೆ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾದ ಸೋಮವಾರವೂ ಕೂಡ ಮತ್ತಿಬ್ಬರು ಅಕಾಂಕ್ಷಿಗಳು ಕೋಲಾರ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಬೆಂಬಲಿಗರಾದ ನಿವೃತ್ತಿ ಅಬಕಾರಿ ಎಲ್ಎ ಮಂಜುನಾಥ್ ಹಾಗೂ ಕಿಸಾನ್ ಕೇತ್ನ ಊರುಬಾಗಿಲು ಶ್ರೀನಿವಾಸ್ ಕೋಲಾರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರೊಂದಿಗೆ ಕೋಲಾರಕ್ಕಾಗಿ ಅರ್ಜಿ ಸಲ್ಲಿಸಿದವರ ಪಟ್ಟಿ ಆರಕ್ಕೇರಿದೆ.
ಹೆಚ್ಚು ಬೇಡಿಕೆ ಇರುವ ಕ್ಷೇತ್ರಗಳು
ಕೋಲಾರ ಅಲ್ಲದೆ ಕಾಂಗ್ರೆಸ್ನಿಂದ ವಿಜಯಪುರದ ತೇರದಾಳ ಕ್ಷೇತ್ರಕ್ಕೆ 7 ಅಕಾಂಕ್ಷಿಗಳು, ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲು 8 ಅಕಾಂಕ್ಷಿಗಳು, ಸಿಎಂ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೆಸ್ನ 11 ಮಂದಿ ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಯಚೂರು ನಗರ ಕ್ಷೇತ್ರಕ್ಕಾಗಿ 10 ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications