IISC ಸಂಶೋಧನೆ : ಕೋಲಾರ- ಚಿಕ್ಕಬಳ್ಳಾಪುರದಲ್ಲಿ ನೀರು ಕುಡಿದರೆ ರೋಗ ಗ್ಯಾರಂಟಿ
ಕೋಲಾರ/ಚಿಕ್ಕಬಳ್ಳಾಪುರ: ರಾಜ್ಯದ ಬಯಲು ಸೀಮೆ ಕೋಲಾರ- ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕುಡಿಯುವ ನೀರಿನಲ್ಲಿ ಅಪಾಯಕಾರಿ ವಿಕಿರಣ ಪೂರಿತ ಯುರೇನಿಯಂ ಧಾತು ಪ್ರಮಾಣ ಒಂದು ಲೀಟರ್ ನಲ್ಲಿ 1000 ಮೈಕ್ರೋ ಗ್ರಾಮ್ ಇರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಅಪಾಯಕಾರಿ ಪ್ರಮಾಣ ಮೀರಿದ ವಿಕಿರಣ ಪೂರಿತ ಯುರೇನಿಯಂ ಧಾತು ಇರುವ ನೀರು ಕುಡಿದರೆ, ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ, ನವಜಾತ ಶಿಶುಗಳ ಮರಣ ಸೇರಿದಂತೆ ಅಪಾಯಕಾರಿ ಕಾಯಿಲೆಗಳಿಗೆ ಜನರು ತುತ್ತಾಗುವ ಅಪಾಯ ಎದುರಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಈ ಆಘಾತಕಾರಿ ಸಂಗತಿ ಹೊರ ಬಿದ್ದಿದೆ.
ಕುಡಿಯುವ ನೀರಿನಲ್ಲಿ ಅಪಾಯಕಾರಿ ವಿಕಿರಣ ಪೂರಿತ ಯುರೇನಿಯಂ ಧಾತು ಪತ್ತೆಯಾಗಿದ್ದು, ಕುಡಿಯುವ ನೀರಿಗಾಗಿ ಸ್ಥಾಪಿಸಿರುವ ಆರ್ ಓ ಘಟಕಗಳ ಕಾರ್ಯಕ್ಷಮತೆ ನಿರ್ವಹಣೆ ಲೋಪದಿಂದ ಕುಡಿಯುವ ನೀರು ಕಲುಷಿತಗೊಂಡಿದೆ. ಹೀಗಾಗಿ ಮೂರು ಜಿಲ್ಲೆಗಳ ಕುಡಿಯುವ ನೀರಿನ ಕೊಳವೆ ಬಾವಿಗಳ ನೀರಿನ ಗುಣಮಟ್ಟ ಖಚಿತ ಪಡಿಸಿ ಪರ್ಯಾಯ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಂಡುವಂತೆ ಶಾಶ್ವತ ನಿರಾವರಿ ಹೋರಾಟ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ. ಈ ಮೂಲಕ ಕುಡಿಯುವ ನೀರಿನಲ್ಲಿ ವಿಕಿರಣ ಪೂರಿತ ಯುರೇನಿಯಂ ಧಾತು ಇರುವ ವಿಚಾರ ಬೆಳಕಿಗೆ ಬಂದಿದೆ.
ನೀರಿನಲ್ಲಿ ಯುರೇನಿಯಂ ಧಾತು ಎಷ್ಟಿರಬೇಕು?:
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು ಪ್ರಕಾರ ಒಂದು ಲೀಟರ್ ಕುಡಿಯುವ ನೀರಿನಲ್ಲಿ ಗರಿಷ್ಠ 30 ಮೈಕ್ರೋ ಗ್ರಾಮ್ ನಷ್ಟು ಯುರೆನಿಯಂ ಇರಬಹುದು ಎಂದು ನಿಗದಿ ಮಾಡಿದ್ದಾರೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಪ್ರಕಾರ ಲೀಟರ್ ಕುಡಿಯುವ ನೀರಿನಲ್ಲಿ ಗರಿಷ್ಠ 60 ಮೈಕ್ರೋ ಗ್ರಾಮ್ ಮೀರುವಂತಿಲ್ಲ. ಆದರೆ, ಭಾರತೀಯ ವಿಜ್ಞಾನ ಸಂಸ್ಥೆ ಕೋಲಾರ- ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳಿಂದ ಪೂರೈಕೆ ಆಗುತ್ತಿರುವ ಕುಡಿಯುವ ನೀರಿನಲ್ಲಿ ಒಂದು ಲೀಟರ್ ನಲ್ಲಿ 1000 ಮೈಕ್ರೋ ಗ್ರಾಮ್ ಯುರೇನಿಯಂ ಪತ್ತೆಯಾಗಿದೆ.
ನಿಗದಿತ ಪ್ರಮಾಣಕ್ಕಿಂತಲೂ ನೂರೈವತ್ತು ಪಟ್ಟು ವಿಕಿರಣ ಪೂರಿತ ಯುರೇನಿಯಂ ಇರುವ ನೀರನ್ನು ಕುಡಿದು ಜನ ಸಾಮಾನ್ಯರು ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಗಮನಕ್ಕೂ ಹೋಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಇದಕ್ಕೂ ತನಗೂ ಏನೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದೆ. ಯುರೇನಿಯಂ ಮಿಶ್ರಿತ ನೀರು ಕುಡಿಯುವುದರಿಂದ ಜನ ಸಾಮಾನ್ಯರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ.
ಇದರ ಜತೆಗೆ ಬೆಂಗಳೂರಿನಿಂದ ಕೊಚ್ಚೆ ನೀರು ಬಿಟ್ಟು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲವನ್ನು ಸಂಪೂರ್ಣ ಕಲುಷಿತ ಮಾಡಲಾಗುತ್ತಿದೆ. ಈ ಕೂಡಲೇ ಜಿಲ್ಲಾಡಳಿತಗಳು ಎಚ್ಚೆತ್ತು, ಕುಡಿಯುವ ನೀರು ಪೂರೈಸುವ ಕೊಳವೆ ಬಾವಿಗಳ ನೀರಿನ ಗುಣಮಟ್ಟದ ಬಗ್ಗೆ ಪ್ರಯೋಗಾಲಯಕ್ಕೆ ಒಳಪಡಿಸಿ ಪರ್ಯಾಯ ಶುದ್ಧ ಕುಡಿಯುವ ನೀರನ್ನು ಪೂರೈಸುವಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಅರ್. ಆಂಜನೇಯರೆಡ್ಡಿ ಅವರು ಆಗ್ರಹಿಸಿದ್ದಾರೆ.
ಕುಡಿಯುವ ನೀರಿನ ಬಗ್ಗೆ ವಿಶ್ವ ಅರೋಗ್ಯ ಸಂಸ್ಥೆ ನಿಗದಿ ಮಾಡಿರುವ ಮಾನದಂಡಗಳ ಪ್ರಕಾರ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಕಗಬೇಕು ಎಂದು ಆಂಜನೇಯರೆಡ್ಡಿ ಮನವಿ ಮಾಡಿದ್ದಾರೆ.