ಬಿಜೆಪಿ ನಾಯಕರು ಭಾಷಣ ಬಿಗಿಯಲಿಕ್ಕಷ್ಟೇ ಸೈ : ಸಿದ್ದು ವ್ಯಂಗ್ಯ
Recommended Video

ಕಾರವಾರ, ಡಿಸೆಂಬರ್ 06 : ಬಿಜೆಪಿಯವರು ಅಭಿವೃದ್ಧಿ ಕೆಲಸ ಮಾಡೋರಲ್ಲ. ಕೇವಲ ಭಾಷಣ ಬಿಗಿಯೋರು. ರಾಜಕೀಯ ಅಂದ್ರೆ ಧರ್ಮ ಪರಿಪಾಲನೆ ಮಾಡೋದು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡೋದು ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಯಾಯ್ದಿದ್ದಾರೆ.
ಉತ್ತರಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಅವರು ಬುಧವಾರ ಭಟ್ಕಳದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಲೇ ಬಿಜೆಪಿಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿ, ಷಾ ಬೇಕಾದ್ರೆ ಬರ್ಲಿ, ಕೋಮು ಸೌಹಾರ್ದ ಕದಡುವಂತಿಲ್ಲ : ಸಿದ್ದು
ಎಲ್ಲ ಧರ್ಮ, ಜಾತಿಯವರನ್ನು ಒಟ್ಟಿಗೆ ತೆಗೆದುಕೊಳ್ಳುವುದು, ಎಲ್ಲ ಜನರಿಗೆ ಸಮಾನ ಅವಕಾಶ ಕಲ್ಪಿಸಿಕೊಡುವ ಮನೋಧರ್ಮವೇ ರಾಜಧರ್ಮ. ಬಿಜೆಪಿಯವರು ಪ್ರತೀ ಭಾಷಣದಲ್ಲಿ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಅಂತಾರೆ. ಒಂದು ಧರ್ಮ, ಜಾತಿಯನ್ನು ಹೊರಗಿಟ್ಟು ಬರೀ ಬಾಯಿ ಮಾತಲ್ಲಿ ಅದನ್ನು ಹೇಳೋದು ಡೋಂಗಿತನ ಅಲ್ವೇ? ಇಂಥ ಡೋಂಗಿಗಳನ್ನು ಜನತೆ ತಿರಸ್ಕಾರ ಮಾಡಬೇಕು ಎಂದು ಕೆಂಡಿ ಕಾರಿದರು.

ದೇಶದಲ್ಲಿ ಎಲ್ಲ ಧರ್ಮ, ಜಾತಿ, ಭಾಷೆಯ ಜನರಿದ್ದಾರೆ. ನಾವೆಲ್ಲ ಭಾರತೀಯರು. ಪರಸ್ಪರ ಪ್ರೀತಿಸಿ, ಗೌರವಿಸಿಕೊಳ್ಳಬೇಕು. ನಮ್ಮ ನಮ್ಮ ನಡುವೆ ಬೆಂಕಿ ಇಡುವ ಯಾರೇ ಆಗಲಿ. ಅವರನ್ನು ಖಂಡಿಸಬೇಕು. ಆಗ ಮಾತ್ರ ದೇಶದ ಸಾರ್ವಭೌಮತೆ, ಸಂವಿಧಾನದ ಜಾತ್ಯಾತೀತ ಸಮಾಜ ನಿರ್ಮಾಣದ ಆಶಯ ಫಲಿಸಲು ಸಾಧ್ಯ ಎಂದು ಭಾಷಣ ಬಿಗಿದರು.
ಚುನಾವಣೆ ಹೊಸ್ತಿಲಲ್ಲಿ ಜಗಳ್ ಬಂದಿ, ಜನರಿಗೆ ಪುಕ್ಕಟೆ ಮನರಂಜನೆ!
ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದವು. ಪ್ರತಿಯೊಬ್ಬ ಸಾಮಾನ್ಯನಿಗೂ ಒಂದೊಂದು ಕಾರ್ಯಕ್ರಮ ನೀಡಿದ್ದೇನೆ. ಚುನಾವಣೆಗೋಸ್ಕರ ಅನ್ನಭಾಗ್ಯ ಅಕ್ಕಿ ಕೊಡ್ತಿಲ್ಲ. ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಅದನ್ನ ಜನರಿಗೆ ನೀಡಿದ್ದೇನೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು. ಇಲ್ಲಿ ಯಾರೂ ಕೂಡ ಹಸಿವಿನಿಂದ ಇರಬಾರದು ಎಂದು ಸಿದ್ದರಾಮಯ್ಯ ಭಾಗ್ಯಗಳ ಕುರಿತು ಹೇಳಿಕೊಂಡರು.

ಅನಂತ್ ಕುಮಾರ್ ಹೆಗಡೆ, ಬಿ.ಎಸ್.ಯಡಿಯೂರಪ್ಪನಂಥವರು 100 ಜನ ಬಂದ್ರೂ ಕಾಂಗ್ರೆಸ್ ಪಕ್ಷವನ್ನ ಅಲುಗಾಡಿಸಲು ಆಗಲ್ಲ. 132 ವರ್ಷ ಇತಿಹಾಸ ಇರುವ ಪಕ್ಷ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪಕ್ಷ ಕಾಂಗ್ರೆಸ್. ದೇಶಕ್ಕಾಗಿ ನೆತ್ತರು ಹರಿಸಿದ, ತ್ಯಾಗ, ಬಲಿದಾನ ನೀಡಿದ ಪಕ್ಷ. ಬಿಜೆಪಿಯವ್ರು ಯಾರಾದ್ರು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ದೇಶಕ್ಕೆ ಏನು ಕೊಡುಗೆ ನೀಡಿದ್ದಾರಾ? ಎಂದು ಪ್ರಶ್ನಿಸಿದರು.
ಪರಿವರ್ತನಾ ಯಾತ್ರೆ ಅಂತ ಡಂಗೂರ ಹೊಡ್ಕೊಂಡು ಯಡಿಯೂರಪ್ಪ ಯಾತ್ರೆ ಹೊರಡ್ತಾರೆ. ಯಾರು ಆಗ್ಬೇಕಾಗಿರೋದು ಪರಿವರ್ತನೆ? ಜಾತ್ಯಾತೀತತೆಯಲ್ಲಿ ನಂಬಿಕೆಯುಳ್ಳ ಇಲ್ಲಿನ ಜನರಿಗೆ ನಿಮ್ಮ ಯಾತ್ರೆ ಬೇಕಿಲ್ಲ. ಇದರ ಕನಿಷ್ಠ ಜ್ಞಾನ ಕೂಡ ಅವರಿಗಿಲ್ಲ. ಅಧಿಕಾರ ಇದ್ದಾಗ ಏನೂ ಮಾಡಿಲ್ಲ. ಕೇಳಿದ್ರೆ ಸೀರೆ ಕೊಟ್ವಿ, ಸೈಕಲ್ ಕೊಟ್ವಿ ಅಂತಾ ಎರಡನ್ನ ಹೇಳ್ತಾರೆ. ಇನ್ನು ಮೂರನೇಯದ್ದು ಜೈಲಿಗೆ ಹೋಗ್ಬಂದ್ವಿ ಅನ್ಬಹುದು ಬಿಟ್ರೆ ಬೇರೇನೂ ಹೇಳಲ್ಲ. ತಪ್ಪು ಮಾಡಿಯೇ ತಾನೆ ಜೈಲಿಗೆ ಹೋಗಿದ್ದು. ನಿಮ್ಮಿಂದ ನಾವು ಪಾಠ ಕಲಿಬೇಕಾಗಿಲ್ಲ ಎಂದು ಖಾರವಾಗಿ ನುಡಿದರು.
ಪ್ರತೀ ಬಾರಿಯ ಬೆಳಗಾವಿಯ ಅಧಿವೇಶನದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು. ಆದ್ರೆ ಈಬಾರಿ ಯಾವುದೇ ಪ್ರತಿಭಟನೆ ನಡೆದಿಲ್ಲ. ಸಾಲ ಮನ್ನಾ ಮಾಡಿ ಅಂತ ಪೌರುಷ ತೋರೋ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪನವ್ರು, ಅನಂತ್ಕುಮಾರ್ ಹೆಗಡೆಯವ್ರು ಪ್ರಧಾನಿಗೆ ಈ ಮಾತನ್ನ ಹೇಳಲಿ ನೋಡೋಣ. ರೈತರ ಬಗ್ಗೆ ಪ್ರಧಾನಿ ಹತ್ರ ಕೇಳೋಕಾಗಿಲ್ಲ ಅಂದಮೇಲೆ ರೈತರ ಬಗ್ಗೆ ಮಾತೋಡೋ ನೈತಿಕ ಹಕ್ಕು ಕೂಡ ಅವರಿಗಿಲ್ಲ ಎಂದು ಆಕ್ರೋಶಭರಿತರಾಗಿ ಹೇಳಿದರು.

ನಾಲಿಗೆ ಅವರ ಸಂಸ್ಕೃತಿಯನ್ನು ಹೇಳುತ್ತೆ ಅಂತಾರೆ. ಉತ್ತರಕನ್ನಡದ ಜನತೆ ಬಹಳ ಸಭ್ಯರು. ಸಂಸ್ಕೃತಿ ಉಳ್ಳವರು. ರಾಜಕೀಯದಲ್ಲಿ ಪರಿಶುದ್ಧಿಗಳು. ಆದ್ರೆ ಅನಂತ್ಕುಮಾರ್ ಹೆಗಡೆ ಇಲ್ಲಿಗೆ ಎಲ್ಲಿಂದ ಬಂದ್ರು ಗೊತ್ತಾಗಿಲ್ಲ ಎಂದು ಹೀಯಾಳಿಸಿದರು. ಕೇಂದ್ರದ ಮಂತ್ರಿಯಾಗಿ ಹೇಗೆ ಮಾತಾಡಬೇಕು ಎಂದು ತಿಳಿಯದವರು ಸಾರ್ವಜನಿಕ ಜೀವನದಲ್ಲಿ ಇರೋದಕ್ಕೂ ಲಾಯಕ್ಕಿಲ್ಲ. ಬಿಜೆಪಿ ಕೋಮುವಾದಿ ಪಕ್ಷ ಎಂದು ಕಟುಕಿದರು.












Click it and Unblock the Notifications