ಅಲಟ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಡಿಸೆಂಬರ್ ತಿಂಗಳ ಪೂರ್ತಿ 'ಸುಶಾಸನ ಮಾಸ' ಆಚರಣೆ
ಬೆಂಗಳೂರಿನ ನವೆಂಬರ್ 29: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ಡಿಸೆಂಬರ್ ತಿಂಗಳನ್ನು 'ಸುಶಾಸನ ಮಾಸ' ವನ್ನಾಗಿ ಆಚರಿಸಲಾಗುತ್ತಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಹಾಗೂ ಐಟಿ ಬಿಟಿ ಇಲಾಖೆಗಳಲ್ಲಿ ಅನೇಕ ಸುಧಾರಣೆ ತರಲಾಗುತ್ತಿದೆ. ಅದರ ಭಾಗವಾಗಿ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್, ಹಣಕಾಸು ಸಮಿತಿ, ಸಿಂಡಿಕೇಟ್ ಸಭೆಗಳ ನೇರ ಪ್ರಸಾರಕ್ಕೆ ಚಾಲನೆ ನೀಡಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಮಂಗಳವಾರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಶಾಸನ ದಿನಾಚರಣ ಜೊತೆಗೆ ಈ ವರ್ಷ ನಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಡಿಸೆಂಬರ್ ತಿಂಗಳು ಪೂರ್ತಿ 'ಸುಶಾಸನ ಮಾಸ'ವನ್ನಾಗಿ ಆಚರಿಸಲಿದ್ದೇವೆ. ಈ ಸಂಬಂಧ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸೆಂಬರ್ 1ರಂದು ಚಾಲನೆ ನೀಡಲಿದ್ದಾರೆ ಎಂದರು.
ಉನ್ನತ ಶಿಕ್ಷಣ, ಎಲೆಕ್ಟ್ರಾನಿಕ್ಸ್, ಐಟಿಬಿಟಿ/ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳಲ್ಲಿ ಡಿಸೆಂಬರ್ ಹಲವು ಕಾರ್ಯಕ್ರಮ ನಡೆಯಲಿವೆ. ವಿಶ್ವವಿದ್ಯಾಲಯದ ಆಡಳಿತವನ್ನು ಪಾರದರ್ಶಕವಾಗಿಸುವ ಉದ್ದೇಶ ಹೊಂದಲಾಗಿದೆ. ಅಕಾಡೆಮಿ ಕೌನ್ಸಿಲ್, ಹಣಕಾಸು ಸಮಿತಿ ಹಾಗೂ ಸಿಂಡಿಕೇಟ್ ಸಭೆಗಳ ನೇರ ಪ್ರಸಾರ ವ್ಯವಸ್ಥೆಯೂ ಒಳಗೊಂಡಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಈ ನೇರ ಪ್ರಸಾರ ನಡೆಯಲಿದೆ. ಒಮ್ಮೆ ಜಾರಿಗೆ ಬರುತ್ತಿದ್ದಂತೆ ಕಾಯಂ ವ್ಯವಸ್ಥೆಯಾಗಿ ಮುಂದುವರಿಯಲಿದೆ ಎಂದು ಅಶ್ವಥ ನಾರಾಯಣ್ ವಿವರಿಸಿದರು.

ವಿವಿಗಳ ಮಾಹಿತಿ ವೆಬ್ಸೈಟ್ನಲ್ಲಿ ಪ್ರಕಟಿಸಲು ಸೂಚನೆ
ವಿಶ್ವವಿದ್ಯಾಲಯಗಳ ಮಾಹಿತಿ ಡಿಸೆಂಬರ್ 10ರೊಳಗೆ ಆಯಾ ವೆಬ್ಸೈಟ್ನಲ್ಲಿ ಪ್ರಕಟಿಸಲು ನಿರ್ದೇಶನ, ಸಂಯೋಜಿತ ಕಾಲೇಜುಗಳು ಹಾಗೂ ಘಟಕ ಕಾಲೇಜುಗಳು ಕೂಡ ಇದನ್ನು ಪಾಲಿಸಬೇಕು. ಶುಲ್ಕ ವಿವರದಿಂದ ಹಿಡಿದು ವಿವಿಗಳಿಗೆ ಮಂಜೂರಾದ ಅನುದಾನದ ಮೊತ್ತ, ಕೈಗೊಂಡ ಯೋಜನೆ, ಬೋಧಕ ಸಿಬ್ಬಂದಿ ಸಂಖ್ಯೆ, ಬೋಧಕೇತರ ಸಿಬ್ಬಂದಿ ಸಂಖ್ಯೆ, ಹೀಗೆ ಪ್ರತಿಯೊಂದು ಮಾಹಿತಿ ಅಳವಡಿಸುವುದು ಕಡ್ಡಾಯವಾಗಿಸುವುದು.

NEP ಅನುಷ್ಟಾನಕ್ಕೆ ಐದು ವರ್ಷ ಗುರಿ
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಐದು ವರ್ಷಗಳ ಗುರಿಯನಿಟ್ಟುಕೊಂಡು ಸಾಂಸ್ಥಿಕ ಅಭಿವೃದ್ಧಿ ಯೋಜನೆ (ಐಡಿಪಿ) ಸಿದ್ದಪಡಿಸಲು ವಿವಿ ಗಳಿಗೆ ಸೂಚಿಸಲಾಗಿದೆ. 'ನೀತಿ' ಆಯೋಗ ಕೂಡ ಇದನ್ನು ಕಡ್ಡಾಯಗೊಳಿಸಿದ್ದು, ಈ ಸಂಬಂಧ ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಯಾಗಾರ ನಡೆಸಲಿದ್ದೇವೆ. ಉದ್ಯಮದ ಬೆಳವಣಿಗೆ ಗಮನದಲ್ಲಿಕೊಟ್ಟು ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ 'ಸ್ಕಿಲ್ ಕನೆಕ್ಟ್' ಪೋರ್ಟಲ್ ಅನ್ನು ಪರಿಷ್ಕೃತಗೊಳಿಸಲಾಗಿದೆ. ಅದು ಡಿಸೆಂಬರ್ ರಂದು ಲೋಕಾರ್ಪಣೆಗೊಳ್ಳಲಿದೆ.

ಬಹುಕೌಶಲ್ಯ ಕೇಂದ್ರ ಉದ್ಘಾಟನೆಗೆ ಸಜ್ಜು
ಬೆಂಗಳೂರಿನಲ್ಲಿ ಉತ್ಕೃಷ್ಟತಾ ಕೇಂದ್ರ ಕಟ್ಟಡದ ಉದ್ಘಾಟನೆ, ಹುಬ್ಬಳ್ಳಿಯಲ್ಲಿ 'ಬಹು ಕೌಶಲ್ಯ ಕೇಂದ್ರದ ಉದ್ಘಾಟನೆಗೊಳ್ಳಲಿವೆ.
ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಮಹಿಳಾ ಉದ್ಯಮಶೀಲತೆ, ಗ್ರಾಮೀಣ ಉದ್ಯಮಶೀಲತೆ, ನವೋದ್ಯಮಕ್ಕೆ ಉತ್ತೇಜನಕ್ಕಾಗಿ ಕೆಡಿಇಎಂ, ಎಚ್ಡಿಎಫ್ಸಿ ಮತ್ತಿತರ ಸಂಸ್ಥೆಗಳ ಜೊತೆ ಕೈಜೋಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರಲ್ಲೂ ಕಾರ್ಯಕ್ರಮಗಳು ನಡೆಯಲಿವೆ.

ಮಹಿಳಾ ಸ್ವಸಹಾಯ ಗುಂಪಿನ ಸಾಮರ್ಥ್ಯ ವೃದ್ಧಿಗೆ ತಂತ್ರಾಂಶ
ಇಲಾಖೆಗಳಡಿ ಡಿಸೆಂಬಂರ್ ತಿಂಗಳ ಪ್ರತಿದಿನ ಒಂದೊಂದು ಕಾರ್ಯಕ್ರಮ ಜರುಗಲಿವೆ. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಪೋಸ್ಟರ್ ರಚನೆ ಸ್ಪರ್ಧೆ, ಉದ್ಯಮಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕಾರ್ಯಗಾರಗಳು, ವಿದ್ವತ್ ಗೋಷ್ಠಿಗಳು ನಡೆಯಲಿವೆ. ಸ್ವ ಸಹಾಯ ಗುಂಪುಗಳ ಮಹಿಳೆಯರ ಜೀವನೋಪಾಯ ಸಾಮರ್ಥ್ಯ ವೃದ್ಧಿಗಾಗಿ ತಂತ್ರಾಂಶ ಅಳವಡಿಕೆಗೆ ಇದೇ ಸಂದರ್ಭದಲ್ಲಿ ಚಾಲನೆ ಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕೌಶಲಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ ಪ್ರದೀಪ್, ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶಕ ಬಸವರಾಜ ಉಪಸ್ಥಿತರಿದ್ದರು.












Click it and Unblock the Notifications