ಕಾಂಗ್ರೆಸ್ ಪಟ್ಟಿ: ಒಂದೇ ಕ್ಷೇತ್ರ ಸಿಕ್ಕರೇನು, ಸಿದ್ದುವೇ ಬಿಗ್ ಬಾಸ್!

Recommended Video

      ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಮಾತ್ರ ಟಿಕೆಟ್ | ಆದರೂ ಇವರೇ ಬಾಸ್ | Oneindia Kannada

      ಬೆಂಗಳೂರು, ಏಪ್ರಿಲ್ 16: ಬಹುದಿನದಿಂದ ನಿರೀಕ್ಷಿಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನಿನ್ನೆ(ಏ.15) ಬಿಡುಗಡೆಯಾಗಿದೆ. ಲಿಸ್ಟು ಹೊರಬರುತ್ತಿದ್ದಂತೆಯೇ ಬಹುಶಃ ಪ್ರತಿಯೊಬ್ಬರ ಕಣ್ಣೂ ಹುಡುಕಿದ್ದು, 'ಬಾದಾಮಿ ಕ್ಷೇತ್ರ'ದ ಅಭ್ಯರ್ಥಿ ಯಾರು ಎಂಬುದನ್ನೇ!

      ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ಮಾತ್ರವಲ್ಲದೆ ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಪಟ್ಟಿಯಲ್ಲಿ ಎರಡು ಬಾರಿ ನಿರೀಕ್ಷಿಸಲಾಗಿತ್ತು. ಆದರೆ 'ಸಿದ್ದರಾಮಯ್ಯ ಒಂದು ಬಗೆದರೆ, ಹೈಕಮಾಂಡ್ ಮತ್ತೊಂದು ಬಗೆದಂತೆ(!)' ಬಾದಾಮಿ ಕ್ಷೇತ್ರದ ಟಿಕೇಟ್ ಡಾ.ದೇವರಾಜ್ ಪಾಟೀಲ್ ಅವರಿಗೆ ನೀಡಲಾಗಿದೆ.

      ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

      ಸಿದ್ದರಾಮಯ್ಯ ಅವರ ಇದೊಂದು ಬೇಡಿಕೆಗೆ 'ಒಲ್ಲೆ' ಎಂದಿದ್ದರೂ, ಅವರ ಉಳಿದೆಲ್ಲ ಬೇಡಿಕೆಗಳಿಗೂ ಹೈಕಮಾಂಡ್ ತಲೆಯಲ್ಲಾಡಿಸಿರುವುದು ಪಟ್ಟಿಯನ್ನು ಕೂಲಂಕಷವಾಗಿ ನೋಡಿದರೆ ಅರ್ಥವಾಗುತ್ತದೆ. ಜೆಡಿಎಸ್ ನ ಏಳು ಬಂಡಾಯ ಶಾಸಕರಿಗೂ ಟಿಕೇಟ್ ನೀಡುವಲ್ಲಿ ಸಫಲರಾಗಿರುವುದು ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಪಾರುಪತ್ಯವನ್ನು ಸಾಬೀತುಪಡಿಸಿದೆ. ಮೇ 12 ರಂದು ನಡೆಯಲಿರುವ ಕರ್ನಾಟಕ ವಿಸಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರೇ 'ಬಿಗ್ ಬಾಸ್' ಎಂದರೆ ತಪ್ಪಾಗಲಾರದು!

      ಚಾಮುಂಡೇಶ್ವರಿ ಸುಲಭಕ್ಕೆ ಒಲಿಯುವವಳಲ್ಲ!

      ಚಾಮುಂಡೇಶ್ವರಿ ಸುಲಭಕ್ಕೆ ಒಲಿಯುವವಳಲ್ಲ!

      ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಟೊಂಕಕಟ್ಟಿ ನಿಂತಿರುವುದು ಸಿದ್ದರಾಮಯ್ಯ ಅವರಲ್ಲೂ ಕೊಂಚ ಭಯ ಹುಟ್ಟಿಸಿದಂತಿದೆ. ಈ ಕ್ಷೇತ್ರದಿಂದ 5 ಬಾರಿ ಗೆದ್ದಿದ್ದರೂ ಸಿದ್ದರಾಮಯ್ಯ ಅವರಿಗೆ ಇಲ್ಲಿ ಕಠಿಣ ಸವಾಲೇ ಎದುರಾಗುವ ಸಾಧ್ಯತೆಯಿದೆ. ಚುನಾವಣೆ ಹೊತ್ತಲ್ಲಿ ವರುಣಾದಿಂದ ಚಾಮುಂಡೇಶ್ವರಿಗೆ ಕ್ಷೇತ್ರ ಬದಲಾಯಿಸಿರುವುದು ಮತದಾರರಲ್ಲಿ ಉತ್ತಮ ಅಭಿಪ್ರಾಯ ಮೂಡಿಸದಿದ್ದರೂ ಅಚ್ಚರಿಯಿಲ್ಲ. ಅಷ್ಟೇ ಅಲ್ಲ, ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಜಿ ಟಿ ದೇವೇಗೌಡ ಈ ಕ್ಷೇತ್ರದ ಹಾಲಿ ಶಾಸಕರು. ಮತದಾರರಲ್ಲಿ ಜಿಟಿಡಿ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಇವೆಲ್ಲವುಗಳೂ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದ್ದೇನಲ್ಲ. ಆದರೂ ಮಗನಿಗೆ ವರುಣಾ ಬಿಟ್ಟುಕೊಡುವ ಧಾವಂತದಲ್ಲಿ ಚಾಮುಂಡೇಶ್ವರಿಯನ್ನು ಆಯ್ಕೆ ಮಾಡಿಕೊಂಡ ಸಿದ್ದರಾಮಯ್ಯ, ಗೆಲ್ಲುವ ಸಂಪೂರ್ಣ ವಿಶ್ವಾಸವಿಲ್ಲದ ಕಾರಣವೇ ಬಾದಾಮಿಯನ್ನೂ ಆರಿಸಿಕೊಳ್ಳುವ ಯೋಚನೆಯಲ್ಲಿದ್ದರು!

      ಒಂದೇ ಕ್ಷೇತ್ರ ಸಾಕು ಎಂದ ರಾಹುಲ್ ಗಾಂಧಿ

      ಒಂದೇ ಕ್ಷೇತ್ರ ಸಾಕು ಎಂದ ರಾಹುಲ್ ಗಾಂಧಿ

      ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ, ಘಟಾನುಘಟಿ ನಾಯಕರ ವರಸೆಯೇ ಬೇರೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ ಎಂಬ ವಿಶ್ವಾಸ ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಹೈಕಮಾಂಡಿಗಿದ್ದಂತಿದೆ! ಆದ್ದರಿಂದಲೇ ಎರಡೆರಡು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಮತದಾರರಲ್ಲಿ ಹಾಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಉತ್ತಮ ಅಭಿಪ್ರಾಯವನ್ನು ಮೂಡಿಸದು ಎಂಬುದು ಹೈಕಮಾಂಡ್ ಅಂಬೋಣ. ಆದ್ದರಿಂದಲೇ ಒಂದೇ ಕ್ಷೇತ್ರವನ್ನು ಆರಿಸಿಕೊಳ್ಳುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ. ಸ್ವತಃ ರಾಹುಲ್ ಗಾಂಧಿಯವರೇ ಎರಡೆರಡು ಕ್ಷೇತ್ರದ ಯೋಚನೆಗೆ ಖಡಾಖಂಡಿತವಾಗಿ 'ಒಲ್ಲೆ' ಎಂದಿದ್ದಾರೆ.

      ಸಿದ್ದರಾಮಯ್ಯಗೆ ಹಿನ್ನಡೆಯೇನಿಲ್ಲ!

      ಸಿದ್ದರಾಮಯ್ಯಗೆ ಹಿನ್ನಡೆಯೇನಿಲ್ಲ!

      ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೆ ಹಿನ್ನಡೆಯನ್ನುಂಟುಮಾಡಿದೆ ಎಂದುಕೊಂಡರೆ ಅದು ತಪ್ಪು. ಏಕೆಂದರೆ ಇದೊಂದನ್ನು ಬಿಟ್ಟರೆ ಉಳಿದಂತೆ ಸಿದ್ದರಾಮಯ್ಯ ಅವರ ಎಲ್ಲಾ ಬೇಡಿಕೆಗಳನ್ನೂ ಹೈಕಮಾಂಡ್ ಒಪ್ಪಿಕೊಂಡಿದೆ. ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ ಸೇರಿದಂತೆ ಜೆಡಿಎಸ್ ನ ಏಳು ಬಂಡಾಯ ಶಾಸಕರಿಗೆ ಟಿಕೇಟ್ ನೀಡುವ ಮೂಲಕ ತಮ್ಮ ಮಾತನ್ನು ಸಿದ್ದು ಉಳಿಸಿಕೊಂಡಿದ್ದಾರೆ. ನೈಸ್ ಹಗರಣದ ಆರೋಪಿ ಅಶೋಕ್ ಖೇಣಿ ಅವರಿಗೆ ಬೀದರ್ ದಕ್ಷಿಣ ಕ್ಷೇತ್ರದ ಟಿಕೇಟ್ ನೀಡಲು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಪುಲಕೇಶಿನಗರದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೇಟ್ ಸಿಕ್ಕಿದೆ! ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಹಾಲಿ ಸಾರಿಗೆ ಸಚಿವ ಎಚ್ ಎಂ ರೇವಣ್ಣ ಅವರಿಗೆ ಟಿಕೇಟ್ ನೀಡುವಲ್ಲಿಯೂ ಸಿದ್ದು ಸಫಲರಾಗಿದ್ದಾರೆ.

      ಖರ್ಗೆ-ಸಿದ್ದು ನಡುವೆ ಜಟಾಪಟಿ!

      ಖರ್ಗೆ-ಸಿದ್ದು ನಡುವೆ ಜಟಾಪಟಿ!

      ಹಾಗೆ ನೋಡಿದರೆ ಶನಿವಾರ(ಏ.14)ವೇ ಬಿಡುಗಡೆಯಾಗಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಒಂದು ದಿನ ವಿಳಂಬವಾಗಿದ್ದು ಸಿದ್ದರಾಮಯ್ಯ ಅವರ ಎಲ್ಲ ಬೇಡಿಕೆಗಳಿಗೂ ಗ್ರೀನ್ ಸಿಗ್ನಲ್ ನೀಡಲು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡದಿದ್ದಿದ್ದಕ್ಕೆ ಎಂಬ ಮಾತೂ ಕೇಳಿಬಂದಿತ್ತು. ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಖರ್ಹೆ ಅವರ ನಡುವಲ್ಲಿ ಸಾಕಷ್ಟು ಜಟಾಪಟಿ ನಡೆದಿದೆ. ಪುಲಕೇಶಿನಗರದಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪ್ರಸನ್ನ ಕುಮಾರ್ ಅವರ ಪರವಾಗಿ ಖರ್ಗೆ ಬ್ಯಾಟಿಂಗ್ ಮಾಡಿದ್ದರು. ಆದರೆ ಕೊನೆಗೂ ಅಖಂಡ ಶ್ರೀನಿವಾಸಮೂರ್ತಿ ಅವರಿಗೇ ಟಿಕೇಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು.

      ಶಾಂತಿ ನಗರ ಅಭ್ಯರ್ಥಿ ಆಯ್ಕೆ ಸಿದ್ದುಗೆ ಬಿಟ್ಟ ವಿಚಾರ!

      ಶಾಂತಿ ನಗರ ಅಭ್ಯರ್ಥಿ ಆಯ್ಕೆ ಸಿದ್ದುಗೆ ಬಿಟ್ಟ ವಿಚಾರ!

      ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಮೊಹ್ಮದ್ ನಲ್ಪಾಡ್ ಅವರ ತಂದೆ ಎನ್ ಎ ಹ್ಯಾರಿಸ್ ಅವರಿಗೆ ಶಾಂತಿನಗರದ ಟಿಕೇಟ್ ಇನ್ನೂ ಘೋಷಿಸಲಾಗಿಲ್ಲ. ಈ ಪ್ರಕರಣದ ವಿವಾದದಿಂದಾಗಿ ಹಾಲಿ ಶಾಸಕ ಹ್ಯಾರಿಸ್ ಅವರು ಸೋಲುವ ಭಯವಿರುವುದರಿಂದಲೋ ಏನೋ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಗೆ ಟಿಕೇಟ್ ನೀಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಶಾಂತಿನಗರದಲ್ಲಿ ಯಾರಿಗೆ ಟಿಕೇಟ್ ನೀಡಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನೂ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೇ ನೀಡಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಶಾಂತಿನಗರದ ಅಭ್ಯರ್ಥಿ ಯಾರು ಎಂಬುದು ಇಂದೇ ತಿಳಿಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+