ಅದು ಸಿ.ಪಿ.ಯೋಗೇಶ್ವರ್ ಅಲ್ಲಾರೀ.. ಸಿ.ಡಿ.ಯೋಗೇಶ್ವರ್
ನವದೆಹಲಿ, ಜುಲೈ 21: ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಸಚಿವರು ಸಿ.ಪಿ.ಯೋಗೇಶ್ವರ್ ಅಲ್ಲ, ಅದು ಸಿ.ಡಿ.ಯೋಗೇಶ್ವರ್. ಅವರ ಬಳಿ ಎಲ್ಲಾ ದಾಖಲೆಯಿದೆ, ಆವಾಗಾವಗ ಎಲ್ಲಾ ದಾಖಲೆಗಳನ್ನು ತೋರಿಸಿಬಿಟ್ಟು, ಕೆಲಸ ಸಾಧಿಸಿಕೊಂಡು ಬರುತ್ತಾರೆ"ಎಂದು ಸಂಸದ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ.
"ಈಗಿನ ಯಡಿಯೂರಪ್ಪನವರದ್ದು ಸಿಡಿ ಸರಕಾರ ಎಂದು ಹೇಳಬಹುದು. ಮಾನ್ಯ ಪ್ರಧಾನಿಗಳು ಮತ್ತು ಕೇಂದ್ರ ಗೃಹ ಸಚಿವರು ಇದನ್ನು ತನಿಖೆಗೆ ಒಳಪಡಿಸಬೇಕೆಂದು ನಾನು ಭಾವಿಸುತ್ತೇನೆ"ಎಂದು ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ.
"ಕಾರಣ ಏನಂದರೆ, ಐನೂರಕ್ಕೂ ಹೆಚ್ಚು ಸಿಡಿಗಳಿವೆ ಎಂದು ವರದಿಯಾಗಿತ್ತು. ಎಲ್ಲರೂ ಸಿಡಿಯನ್ನು ಮುಂದಿಟ್ಟುಕೊಂಡೇ ಅಧಿಕಾರವನ್ನು ಪಡೆಯುತ್ತಿರುವುದು ನಮ್ಮ ರಾಜ್ಯದ ದುರಂತ"ಎಂದು ಡಿ.ಕೆ.ಸುರೇಶ್ ಬೇಸರ ವ್ಯಕ್ತ ಪಡಿಸಿದರು.

"ರಾಜ್ಯದ ಮರ್ಯಾದೆಗೆ ಕಪ್ಪುಚುಕ್ಕೆ ಇಡುವಂತವರನ್ನು ಜನತೆ ಕ್ಷಮಿಸುವುದಿಲ್ಲ. ಇಂತವರು ಯಾವುದೇ ಪಕ್ಷದಲ್ಲಿರಲಿ, ಅವರ ಮೇಲೆ ಮುಂದಿನ ದಿನಗಳಲ್ಲು ಕ್ರಮಗಳನ್ನು ತೆಗೆದುಕೊಳ್ಳಬೇಕು"ಎಂದು ಡಿ.ಕೆ.ಸುರೇಶ್ ಒತ್ತಾಯಿಸಿದ್ದಾರೆ.
"ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರ್ಯಾದೆ ಕೊಡುವ ನಿಟ್ಟಿನಲ್ಲಿ ಇಂತಹ ನಾಯಕರುಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕಿದೆ. ಇಂತಹ ಮನಸ್ಥಿತಿಯವರು ಯಾವುದೇ ಪಕ್ಷದಲ್ಲಿದ್ದರೂ, ಅವರು ಕಂಟಕವೇ"ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆಯ ವಿಚಾರ, ರಾಜ್ಯದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಜುಲೈ 26ಕ್ಕೆ ಆಯೋಜಿಸಲಾಗಿದ್ದ ಬಿಜೆಪಿ ಶಾಸಕರ ಸಭೆಯನ್ನು ರದ್ದು ಪಡಿಸಲಾಗಿದೆ. ಈ ನಡುವೆ, ಸಚಿವ ಶ್ರೀರಾಮುಲು, ವರಿಷ್ಠರ ಬುಲಾವ್ ಮೇರೆಗೆ ದೆಹಲಿಗೆ ದೌಡಾಯಿಸಿದ್ದಾರೆ.












Click it and Unblock the Notifications