ಡಿಕೆಶಿ 2 ದಿನ ಮೈಸೂರು, ಮಂಡ್ಯದಲ್ಲಿ ಟೆಂಪಲ್ ರನ್: ಟಿಪ್ಪು ಮಸೀದಿಗೂ ಭೇಟಿ
ಬೆಂಗಳೂರು, ನವೆಂಬರ್ 6: ಟಿಪ್ಪು ಸುಲ್ತಾನ್ ಸಂಬಂಧಿತ ವಿಚಾರವನ್ನು ಪಠ್ಯದಿಂದ ತೆಗೆಯುತ್ತಿರುವ ಹೊತ್ತಿನಲ್ಲಿ ಡಿಕೆ ಶಿವಕುಮಾರ್ ಟಿಪ್ಪು ಮಸೀದಿಗೆ ಭೇಟಿ ನೀಡುತ್ತಿರುವುದು ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ.
ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಎರಡು ದಿನ ಮೈಸೂರು, ಮಂಡ್ಯದ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಇದೇ ಸಮಯದಲ್ಲಿ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಮಸೀದಿಗೂ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎರಡು ದಿನದ ಪ್ರವಾಸದಲ್ಲಿ ಏಳು ದೇವಸ್ಥಾನಗಳಿಗೆ ಭೇಟಿ
ಮಾಜಿ ಸಚಿವ ಡಿಕೆ ಶಿವಕುಮಾರ್ ಎರಡು ದಿನದ ಪ್ರವಾಸದಲ್ಲಿ ಏಳು ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಜಾಮೀನು ದೊರೆತ ಬಳಿಕ ಎರಡು ದಿನಗಳ ದೇವಸ್ಥಾನ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಕೇವಲ ಡಿಕೆ ಶಿವಕುಮಾರ್ ಮಾತ್ರವಲ್ಲ ಐಟಿ ಕಂಟಕ ಅವರ ಇಡೀ ಕುಟುಂಬಕ್ಕೆ ಆವರಿಸಿದಂತಿದೆ.
ಹಾಗಾಗಿ ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಯಾವ್ಯಾವ ದೇವಸ್ಥಾನಗಳಿಗೆ ಭೇಟಿ
ನಂಜನಗೂಡು ನಂಜುಂಡೇಶ್ವರ ದೇವಸ್ಥಾನ, ಸುತ್ತೂರು ಮಠ, ಚಾಮುಂಡಿ ಬೆಟ್ಟ, ರಂಗನಾಥ ಸ್ವಾಮಿ ದೇವಸ್ಥಾನ, ನಿಮಿಷಾಂಬ ದೇವಸ್ಥಾನ, ಮಂಡ್ಯ ಕಾಳಿಕಾಂಬ ದೇವಸ್ಥಾನ, ಮದ್ದೂರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

ಶ್ರೀರಂಗಪಟ್ಟಣದ ಟಿಪ್ಪು ಮಸೀದಿಗೆ ಭೇಟಿ
ಡಿಕೆ ಶಿವಕುಮಾರ್ ಶ್ರೀರಂಗಪಟ್ಟದಲ್ಲಿರುವ ಟಿಪ್ಪು ಮಸೀದಿಗೂ ಭೇಟಿ ನೀಡಲಿದ್ದಾರೆ. ಇದೀಗ ಟಿಪ್ಪು ಬಗ್ಗೆ ಚರ್ಚೆ ವಿಪರೀತವಾಗುತ್ತಿದ್ದು, ಬಿಜೆಪಿ ನಾಯಕರು ಟಿಪ್ಪು ವಿಚಾರವನ್ನು ಪಠ್ಯದಿಂದ ತೆಗದು ಹಾಕುವ ಕುರಿತು ಚರ್ಚೆ ಆರಂಭಿಸಿರುವ ಬೆನ್ನಲ್ಲೇ ಅದಕ್ಕೆ ವಿರುದ್ಧವೆಂಬಂತೆ ಡಿಕೆ ಶಿವಕುಮಾರ್ ಮಸೀದಿಗೆ ಭೇಟಿ ನೀಡಲಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.

ಡಿಕೆ ಶಿವಕುಮಾರ್ಗೆ ಜಾಮೀನು
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಒಂದೂವರೆ ತಿಂಗಳಿನಿಂದ ಜೈಲಿನಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಡಿಕೆ ಶಿವಕುಮಾರ್ ತಿಹಾರ್ ಜೈಲಿನಿಂದ ಹೊರ ಬರುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೇ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು.ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅವರಿಗೆ ಜಾಮೀನು ದೊರೆತಿದ್ದನ್ನು ಸ್ವಾಗತಿಸಿದ್ದವು.












Click it and Unblock the Notifications