ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ಸ್ಪರ್ಧೆಯ ಹಿಂದಿದೆ ಭಾರೀ ಲೆಕ್ಕಾಚಾರ!
Recommended Video

ಕೊನೆಗೂ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 224 ಕ್ಷೇತ್ರಗಳ ಪೈಕಿ 218 ಸೀಟಿಗೆ ತನ್ನ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದ್ದು, ಇಡೀ ರಾಜ್ಯವೇ ಕುತೂಹಲದಿಂದ ಎದುರು ನೋಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದ ಬಗೆಗಿನ ಗೊಂದಲಕ್ಕೂ ತೆರೆಬಿದ್ದಂತಾಗಿದೆ.
ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಮತ್ತು ಬಾಗಲಕೋಟೆ ಜಿಲ್ಲೆ ಬಾದಾಮಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವ ಊರೆಲ್ಲಾ ಹರಡಿದ್ದ ಸುದ್ದಿಗೆ ಉತ್ತರ ಸಿಕ್ಕಿದ್ದು, ಸಿಎಂ ತಮ್ಮ ರಾಜಕೀಯ ಕರ್ಮಭೂಮಿ ಮೈಸೂರು ಜಿಲ್ಲೆಯ ಕ್ಷೇತ್ರವೊಂದರಿಂದ ಮಾತ್ರ ಸ್ಪರ್ಧಿಸುತ್ತಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು, ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ಮತ್ತು ಬಾದಾಮಿಯಿಂದ ಡಾ.ದೇವರಾಜ್ ಪಾಟೀಲ್ ಕೈಪಕ್ಷದ ಟಿಕೆಟಿನಿಂದ ಕಣಕ್ಕಿಳಿಯಲಿದ್ದಾರೆ.
ಹಿಂದಿನಿಂದಲೂ ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸುವುದಾಗಿ ಹೇಳಿಕೊಂಡು ಬರುತ್ತಿದ್ದ ಸಿದ್ದರಾಮಯ್ಯ ತಮ್ಮ ಮಾತಿಗೆ ಬದ್ದರಾಗಿದ್ದು, ನೇರವಾಗಿ ತಮ್ಮ ರಾಜಕೀಯ ಗುರು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ತೊಡೆತಟ್ಟಿದ್ದಾರೆ. ಒಂದೇ ಕ್ಷೇತ್ರದಲ್ಲಿ ನಿಂತು ತಮ್ಮ ಮುಂದಿನ ರಾಜಕೀಯ ಜೀವನದ ಲೆಕ್ಕಾಚಾರ ಬರೆಯಲು ಮುಂದಾಗುವ ನಿರ್ಧಾರವನ್ನು ಸಿಎಂ ತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಮಾತನ್ನು ತೆಗೆದುಹಾಕುವ ಮಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸದ್ಯದ ಮಟ್ಟಿಗೆ ಇಲ್ಲ ಎನ್ನುವ ಮಾತಿನ ನಡುವೆಯೂ, ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವಂತೆ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಒತ್ತಡ ಹೇರಿತ್ತು ಎನ್ನುವ ಮಾಹಿತಿಯಿದೆ.. ಇಂಟರೆಸ್ಟಿಂಗ್ ರಾಜಕೀಯ ವಿಚಾರ, ಮುಂದೆ ಓದಿ

ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿಯಲ್ಲಿ ಗೆಲ್ಲುವ ವಿಶ್ವಾಸವಿಲ್ಲ
ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿಯಲ್ಲಿ ಗೆಲ್ಲುವ ವಿಶ್ವಾಸವಿಲ್ಲ, ಹಾಗಾಗಿ ಇನ್ನೊಂದು ಸೇಫ್ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಬಾದಾಮಿಯಿಂದಲೂ ಸ್ಪರ್ಧಿಸುತ್ತಿದ್ದಾರೆ ಎನ್ನುವ ಸುದ್ದಿ ಊರೆಲ್ಲಾ ಹರಡಿತ್ತು. ಚಾಮುಂಡೇಶ್ವರಿ ಕ್ಷೇತ್ರದ ಹಾಲೀ ಶಾಸಕ ಮತ್ತು ಈಗಿನ ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡ, ಕಳೆದ ಚುನಾವಣೆಯಲ್ಲಿ 7,103 ಮತಗಳ ಅಂತದಿಂದ ಗೆದ್ದಿದ್ದರು. ಪಕ್ಕದ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯಗೆ, ಆಗತಾನೇ ಜಗತ್ತಿಗೆ ಪರಿಚಯವಾಗಿದ್ದ ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಉತ್ತಮ ಪೈಪೋಟಿಯನ್ನೇ ನೀಡಿದ್ದರು. ಜೆಡಿಎಸ್ ನಾಮಕೇವಾಸ್ತೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಈಗ ಸಿಎಂ ತಮ್ಮ ಮಗನಿಗಾಗಿ, ವರುಣಾ ಕ್ಷೇತ್ರದ ಬದಲಾಗಿ ಚಾಮುಂಡೇಶ್ವರಿಯಿಂದ ಸ್ಪರ್ಧಿಸುತ್ತಿದ್ದಾರೆ. ಅಲ್ಲಿಗೆ ಮಗನಿಗೂ ರಾಜಕೀಯದಲ್ಲಿ ನೆಲೆನೀಡಿದಂತಾಯಿತು..

ಗುಪ್ತಚರ ವರದಿಯಲ್ಲಿ ಸದ್ಯ ಪೂರಕ ಅಂಶ
ಹಲವು ಸುತ್ತಿನ ಗುಪ್ತಚರ ವರದಿಯ ನಂತರ, ಸದ್ಯ ಪೂರಕ ರಿಪೋರ್ಟ್ ಬಂದ ಹಿನ್ನಲೆಯಲ್ಲಿ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲೇ ತಮ್ಮ ಭವಿಷ್ಯವನ್ನು ಒರೆಗಚ್ಚಲು ಮುಂದಾಗಿದ್ದಾರೆ. ಈವರೆಗಿನ ಗುಪ್ತಚರ ವರದಿಯಲ್ಲಿ ಸಿದ್ದರಾಮಯ್ಯ ಪ್ರಯಾಸದ ಗೆಲುವು, ಚುನಾವಣೆಯ ಹೊತ್ತಿನಲ್ಲಿ ಅದು ಹೇಗೆ ಬೇಕಾದರೂ ಟರ್ನ್ ಆಗಬಹುದು ಎನ್ನುವ ಮಾಹಿತಿ ಇದ್ದಿದ್ದರಿಂದಲೇ, ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿಎಂ ಮುಂದಾಗಿದ್ದರು ಎನ್ನಲಾಗುತ್ತಿತ್ತು.

ತನಗೇ ಒಂದು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿಲ್ಲ
ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ, ಪಕ್ಷವನ್ನು ಮುನ್ನಡೆಸುತ್ತಿರುವ ತನಗೇ ಒಂದು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿಲ್ಲ, ಇನ್ನು ಪಕ್ಷವನ್ನು ಇವರು ಹೇಗೆ ದಡಕ್ಕೆ ಸೇರಿಸುತ್ತಾರೆ ಎನ್ನುವ ಮಾತೂ ಕೇಳಿಬರುತ್ತಿರುವುದರಿಂದ, ಆಗಿದ್ದು ಆಗಲಿ ಎಂದು ಚಾಮುಂಡೇಶ್ವರಿಯಲ್ಲೇ ತಮ್ಮ ಮುಂದಿನ ರಾಜಕೀಯ ಭವಿಷ್ಯ ಬರೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಮತ್ತೊಂದು ಉಪಚುನಾವಣೆಗೆ ಮತ್ತೆ ಖರ್ಚುವೆಚ್ಚ
ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸಿ, ಎರಡರಲ್ಲೂ ಗೆದ್ದರೆ ಮತ್ತೊಂದು ಚುನಾವಣೆ ನಡೆಸಬೇಕಾಗುತ್ತದೆ. ಮತ್ತೊಂದು ಉಪಚುನಾವಣೆಗೆ ಮತ್ತೆ ಖರ್ಚುವೆಚ್ಚ, ತೆರಿಗೆದಾರರ ದುಡ್ಡನ್ನು ಪೋಲು ಮಾಡುವ ಉದ್ದೇಶ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಚುನಾವಣೆಯ ವೇಳೆ ಮೈಲೇಜ್ ತೆಗೆದುಕೊಳ್ಳುವ ಉದ್ದೇಶ ಮುಖ್ಯಮಂತ್ರಿಗಳಿಗೆ ಯಾಕಿರಬಾರದು ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ನೀವೂ ಒಂದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದುಬನ್ನಿ ನೋಡೋಣ
ನಾನು ಒಂದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ, ನೀವೂ ಒಂದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದುಬನ್ನಿ ನೋಡೋಣ ಎಂದು ಓಪನ್ ಆಗಿ ಕುಮಾರಸ್ವಾಮಿಗೆ ಚಾಲೆಂಜ್ ಹಾಕಿದಂತಿದೆ ಸಿಎಂ ನಿರ್ಧಾರ. ಕುಮಾರಸ್ವಾಮಿ, ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಚನ್ನಪಟ್ಟಣದಿಂದ ಎಚ್ ಎಂ ರೇವಣ್ಣ ಮತ್ತು ರಾಮನಗರದಿಂದ ಇಕ್ಬಾಲ್ ಹುಸೇನ್, ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. ತಮಗೆ ಒಂದು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿಲ್ಲ ಎಂದು ಕೇಳಿಬರುತ್ತಿದ್ದ ಮಾತನ್ನು ಈಗ ಕುಮಾರಸ್ವಾಮಿ ಕಡೆಗೆ ಸಿಎಂ ತಿರುಗಿಸಲು ಅವಕಾಶ ಸಿಕ್ಕಂತಾಗಿದೆ.

ಎರಡೆರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ಆಸೆಗೆ ಹೊಡೆತ
ಸಿದ್ದರಾಮಯ್ಯ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರಿಂದ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತನಗೂ ಎರಡು ಕ್ಷೇತ್ರದಿಂದ ಟಿಕೆಟ್ ಕೊಡಿ ಎಂದು ಲಾಬಿ ನಡೆಸಿದ್ದರು. ತುಮಕೂರು ಜಿಲ್ಲೆ ಕೊರಟಗೆರೆ ಮತ್ತು ಬೆಂಗಳೂರಿನ ಪುಲಿಕೇಶಿನಗರದಿಂದ ಪರಮೇಶ್ವರ್ ಹೆಸರು ಕೇಳಿ ಬಂದಿತ್ತು. ಈಗ ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ, ಪರಮೇಶ್ವರ್ ಅವರ ಎರಡೆರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ಆಸೆಗೆ ಹೊಡೆತ ಬಿದ್ದಂಗೂ ಆಗಿದೆ.

ಕರ್ನಾಟಕದಲ್ಲಿ ನನ್ನ ಮಾತೇ ಅಂತಿಮ ಎನ್ನುವ ಸಂದೇಶ
ಕಾಂಗ್ರೆಸ್ ಇದೇ ಮೊದಲ ಬಾರಿಗೆ ಮೊದಲ ಪಟ್ಟಿಯಲ್ಲೇ ಬಹುತೇಕ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ ಬಯಸಿದ ಅಭ್ಯರ್ಥಿಗಳಿಗೇ ಮಣೆ ಹಾಕಲಾಗಿದೆ. ಖರ್ಗೆ, ಪರಮೇಶ್ವರ್ ಅವರ ಕೆಲವೊಂದು ಶಿಫಾರಸುಗಳಿಗೆ ಹೈಕಮಾಂಡ್ ಸೊಪ್ಪು ಹಾಕಲಿಲ್ಲ ಎನ್ನುವ ಮಾಹಿತಿಯಿದೆ. ಆ ಮೂಲಕ, ಕರ್ನಾಟಕದಲ್ಲಿ ನನ್ನ ಮಾತೇ ಅಂತಿಮ ಎನ್ನುವ ಸಂದೇಶವನ್ನೂ ರಾಜ್ಯದ ಕಾಂಗ್ರೆಸ್ಸಿಗರಿಗೂ ತಲುಪಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.












Click it and Unblock the Notifications