ಅಹಿಂದ ನಾಯಕ ಸಿದ್ದರಾಮಯ್ಯಗೆ ಲಿಂಗಾಯತರ ಮೇಲೆ ಕಣ್ಣು!
ಬೆಂಗಳೂರು, ಜೂನ್ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪುನರ್ ರಚನೆಗೊಂಡು, 13 ಜನ ಶಾಸಕರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಜಾತಿ, ಪ್ರದೇಶವಾರು ಲೆಕ್ಕಾಚಾರದ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟಿದ್ದಾರೆ. ಕಾಂಗ್ರೆಸ್ ನ ಚಿತ್ತ ಈಗ ಉತ್ತರ ಕರ್ನಾಟಕದ ಲಿಂಗಾಯತ ಮತಗಳತ್ತ ನೆಟ್ಟಿದೆ.
34 ಜನ ಸದಸ್ಯರ ಸಂಪುಟಕ್ಕೆ ಇನ್ನು ಒಂದು ಸ್ಥಾನ ಮಾತ್ರ ಬಾಕಿ ಉಳಿದಿದೆ. ಪ್ರಮಾಣ ವಚನ ಸ್ವೀಕರಿಸಿದ 13 ಜನ ಶಾಸಕರ ಪೈಕಿ 9 ಜನ ಸಂಪುಟ ದರ್ಜೆ ಸಚಿವರು, 4 ರಾಜ್ಯ ದರ್ಜೆ ಸಚಿವರು ಇದರ ಜೊತೆಗೆ ಹಾಲಿ ಇಬ್ಬರು ಸಚಿವ (ಶರಣ ಪ್ರಕಾಶ್ ಪಾಟೀಲ್ ಹಾಗೂ ಕೃಷ್ಣಭೈರೇಗೌಡ)ರಿಗೆ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಸಿಗಲಿದೆ. ಈ ಪೈಕಿ ಬಾಕಿ ಉಳಿದ ಒಂದು ಸ್ಥಾನ ಒಕ್ಕಲಿಗ ಸಮುದಾಯಕ್ಕೆ ಮೀಸಲಾಗಿದೆ.[13 ಹೊಸಮುಖಗಳ ಸೇರ್ಪಡೆ]
ಈ ಮುಂಚೆ 2013ರಲ್ಲಿ ಜಾತಿ ಲೆಕ್ಕಾಚಾರ ಹೀಗಿತ್ತು: ಲಿಂಗಾಯಿತರು - 6, ಒಕ್ಕಲಿಗ 5, ಎಸ್ ಸಿ 4, ಬ್ರಾಹ್ಮಣ ಮತ್ತು ಮುಸ್ಲಿಂರು - 2, ಮತ್ತು ಎಸ್ ಟಿ, ಬಂಜಾರ, ಮರಾಠ, ಕ್ರೈಸ್ತ, ಬಿಲ್ಲವ, ದೇವಾಂಗ, ಜೈನ, ಬೆಸ್ತ ಮತ್ತು ಬಂಟ್ಸ್ ಸಮುದಾಯದಿಂದ ತಲಾ 1. ಈಗಿನ ಜಿಲ್ಲಾ ಪ್ರಾತಿನಿಧ್ಯದ ಹೇಗೆ ನೀಡಲಾಗಿದೆ,ಜಾತಿವಾರು ಹಂಚಿಕೆ ಹೇಗಿದೆ? ಒಕ್ಕಲಿಗರನ್ನು ಓಲೈಸಲು ಏನು ಕ್ರಮ ಕೈಗೊಳ್ಳಲಿದ್ದಾರೆ ಮುಂದೆ ಓದಿ...

ಜಿಲ್ಲಾ ಪ್ರಾತಿನಿಧ್ಯದ ಪೈಕಿ ಉತ್ತರ ಕರ್ನಾಟಕಕ್ಕೆ ಆದ್ಯತೆ
ಜಿಲ್ಲಾ ಪ್ರಾತಿನಿಧ್ಯದ ಪೈಕಿ ರಾಯಚೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಯಾದಗಿರಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ದಾವಣಗೆರೆ, ಬೀದರ್, ಕಲಬುರಗಿ, ಬೆಳಗಾವಿ, ಶಿವಮೊಗ್ಗ, ಉಡುಪಿ, ಬೆಂಗಳೂರು ನಗರ, ಕೋಲಾರ, ಕೊಪ್ಪಳ, ಹಾವೇರಿ, ಮೈಸೂರು, ಧಾರವಾಡ, ಬಾಗಲಕೋಟೆಗೆ ಸಚಿವ ಸ್ಥಾನ ಸಿಕ್ಕಿದೆ. ಸಂಪುಟ ವಿಸ್ತರಣೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗಲಿದ್ದಾರೆ.

ಜಾತಿ ವಾರು ಲೆಕ್ಕಾಚಾರ ಬದಲಾಯಿಸಿದ ಕೈ ಪಡೆ
ಜಾತಿ ವಾರು ಲೆಕ್ಕಾಚಾರ: ಪುನರ್ ರಚನೆ ಬಳಿಕ ಲಿಂಗಾಯತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಸ್ಪಷ್ಟವಾಗಿದೆ. ಜೊತೆಗೆ ಎಲ್ಲಾ ಜಾತಿ ವರ್ಗಗಳನ್ನು ಸಮನಾಗಿ ಕಾಣಲಾಗಿದೆ. ಒಬಿಸಿ -9, ಲಿಂಗಾಯತ- 7, ಒಕ್ಕಲಿಗ-5, ಪರಿಷ್ಟಿತ ಜಾತಿ 5, ಮುಸ್ಲಿಂ 3, ಪರಿಶಿಷ್ಟ ಪಂಗಡ 1 ಹಾಗೂ ಕ್ರೈಸ್ತ 1

ಬಿಜೆಪಿಗೆ ಎಚ್ಚರಿಕೆ ಸಂದೇಶ
ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಲಿಂಗಾಯತ ಮತಗಳ ಮೇಲೆ ನಂಬಿಕೆ ಇರಿಸಿಕೊಂಡಿರುವ ಬಿಜೆಪಿಗೆ ಸಿದ್ದರಾಮಯ್ಯ ಅವರು ಎಚ್ಚರಿಕೆಯ ಸಂದೇಶ ಹೊರಡಿಸಿದ್ದಾರೆ. ಸಂಪುಟ ಪುನರ್ ರಚನೆ ನಂತರ ಒಬಿಸಿ, ಎಸ್ ಸಿ/ಎಸ್ ಟಿ ಗಳಿಗೆ 16 ಸ್ಥಾನ ಸಿಕ್ಕಿದೆ. ಲಿಂಗಾಯತರ ಸ್ಥಾನ ಏರಿಕೆಯಾಗಿದೆ.

ಕಾಂಗ್ರೆಸ್ ಹಾಗೂ ವೀರಶೈವ ಲಿಂಗಾಯತರು
ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ಕಾಲ ಬಿಟ್ಟರೆ, ಅವರ ನಂತರ ಕಾಂಗ್ರೆಸ್ ಪಕ್ಷದ ರಣತಂತ್ರ ಎಂದಿಗೂ ತಿರುಗುಬಾಣವಾಗುತ್ತಲೇ ಬಂದಿದೆ. ಇದರ ಪೂರ್ಣಲಾಭವನ್ನು ಬಿಎಸ್ ಯಡಿಯೂರಪ್ಪ ಅವರು ಪಡೆದುಕೊಳ್ಳುತ್ತಿದ್ದಾರೆ. ಈಗ 2018ರ ಚುನಾವಣೆ ದೃಷ್ಟಿಯಿಂದ ಎರಡು ಪಕ್ಷಗಳು ಲಿಂಗಾಯತ ಮತಗಳ ಮೇಲೆ ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯತಂತ್ರ ರೂಪಿಸಬೇಕಿದೆ.

ಸ್ಪೀಕರ್ ಸ್ಥಾನಕ್ಕೆ ಕೋಳಿವಾಡ
ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್ ಸ್ಥಾನ ತೊರೆದು ಸಿದ್ದರಾಮಯ್ಯ ಅವರ ಸಚಿವ ಸಂಪುಟ ಸೇರಿದ್ದಾರೆ. ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಕೆಬಿ ಕೋಳಿವಾಡ ಅವರ ಹೆಸರು ಕೇಳಿಬಂದಿದೆ. ಕೆಬಿ ಕೋಳಿವಾಡ ಅಥವಾ ನಾಡಗೌಡ ಅವರ ಹೆಸರನ್ನು ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದಾರೆ. ಈ ಮೂಲಕ ಲಿಂಗಾಯತರ ಬಲ ಇನ್ನಷ್ಟು ಹೆಚ್ಚಿಸಲು ಯತ್ನಿಸುತ್ತಿದ್ದಾರೆ.

ಒಕ್ಕಲಿಗರದ್ದೇ ಸಮಸ್ಯೆ
ಮಂಡ್ಯ ಜಿಲ್ಲೆಗೆ ಇನ್ನೂ ಪ್ರಾತಿನಿಧ್ಯ ಸಿಕ್ಕಿಲ್ಲ. ವಸತಿ ಸಚಿವ ಅಂಬರೀಶ್ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ಅವರು ಟವೆಲ್ ಹಾಕಿದ್ದಾರೆ. ಮಾಜಿ ಸಂಸದೆ ರಮ್ಯಾ ಅವರನ್ನು ಎಂಎಲ್ ಸಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳುವ ಸುದ್ದಿ ಓಡಾಡುತ್ತಿದೆ. ಇದು ಕೂಡಾ ಶೀಘ್ರದಲ್ಲೇ ನೆರವೇರಲಿದೆ.

ಒಕ್ಕಲಿಗರ ಓಲೈಕೆಗೆ ಕ್ರಮ
ಬೆಂಗಳೂರಿನ ಒಕ್ಕಲಿಗ ಶಾಸಕರು ಎಂ ಕೃಷ್ಣಪ್ಪ ಬಳಗವನ್ನು ತೃಪ್ತಿ ಪಡಿಸಬೇಕಿದೆ. ಇದಕ್ಕೆಲ್ಲ ಪರಿಹಾರವಾಗಿ ಜಿ ಪರಮೇಶ್ವರ ಸ್ಥಾನದಲ್ಲಿ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಕೂರಿಸುವ ಸಾಧ್ಯತೆ ಹೆಚ್ಚಿದೆ. ಬ್ರಾಹ್ಮಣ/ ಮುಸ್ಲಿಂ ಮತಗಳನ್ನು ಸೆಳೆಯಲು ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ.












Click it and Unblock the Notifications