ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಘೋಷಣೆ
ನವದೆಹಲಿ, ಜೂನ್ 21: ರಾಷ್ಟ್ರಪತಿ ಆಯ್ಕೆಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ವಿಪಕ್ಷಗಳು ಘೋಷಿಸಿವೆ. ದೆಹಲಿಯಲ್ಲಿ ಇಂದು ಮಂಗಳವಾರ 18 ವಿಪಕ್ಷಗಳು ನಡೆಸಿದ ಸಭೆಯಲ್ಲಿ ಯಶವಂತ್ ಸಿನ್ಹಾ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು.
ಸಂಸತ್ ಭವನದಲ್ಲಿ ಮಂಗಳವಾರ ಬೆಳಗ್ಗೆಯಿಂದ ನಡೆದ ಈ ಸಭೆಯಲ್ಲಿ ಕಾಂಗ್ರೆಸ್ ಕೂಡ ಪಾಲ್ಗೊಂಡಿತ್ತು. ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಯಶವಂತ್ ಸಿನ್ಹಾ ಹೆಸರನ್ನು ಈ ಸಭೆಯಲ್ಲಿ ಟಿಎಂಸಿಯೇ ಮುಂದಿಟ್ಟಿತು. ಎಲ್ಲಾ ಪಕ್ಷಗಳೂ ಇದಕ್ಕೆ ಸಹಮತ ವ್ಯಕ್ತಪಡಿಸಿದವೆನ್ನಲಾಗಿದೆ.
ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷಗಳಿಂದ ಯಶವಂತ್ ಸಿನ್ಹಾ ಅಭ್ಯರ್ಥಿ ಸಾಧ್ಯತೆ
ಇದಕ್ಕೆ ಮುನ್ನ ಕಾಂಗ್ರೆಸ್ ಸೇರಿದಂತೆ ಕೆಲ ವಿಪಕ್ಷಗಳಿಂದ ರಾಷ್ಟ್ರಪತಿ ಚುನಾವಣೆ ಸ್ಪರ್ಧೆಗೆ ಹಲವರ ಹೆಸರು ಮುಂದಿಡಲಾಗಿತ್ತು. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರನ್ನು ವಿಪಕ್ಷಗಳು ಮನವಿ ಮಾಡಿಕೊಂಡಿದ್ದರು. ಆದರೆ, ಈ ಮೂವರೂ ಕೂಡ ಸ್ಪರ್ಧಿಸಲು ನಿರಾಕರಿಸಿದರೆನ್ನಲಾಗಿದೆ. ಗೋಪಾಲಕೃಷ್ಣ ಗಾಂಧಿ ಅವರು ಮಹಾತ್ಮ ಗಾಂಧಿ ಅವರ ಮೊಮ್ಮಗರಾಗಿದ್ದಾರೆ.
ಬಿಜೆಪಿಯಿಂದಲೂ ಸಭೆ
ಅತ್ತ, ಬಿಜೆಪಿಯಿಂದಲೂ ಇಂದು ಮಂಗಳವಾರ ಪಕ್ಷದ ಸಂಸದೀಯ ಮಂಡಳಿಯ ಸಭೆ ನಡೆಯಲಿದೆ. ಇದರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂದು ಚರ್ಚಿಸಲಾಗುತ್ತದೆ. ಇಂದೇ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆಯೂ ಇದೆ. ನಿನ್ನೆ ಸೋಮವಾರವಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪೂರ್ವಭಾವಿಯಾಗಿ ಒಂದು ಸಭೆ ಕೂಡ ನಡೆಸಿದ್ದರು. ಈ ಚುನಾವಣೆಯಲ್ಲಿ ರಣತಂತ್ರ ರೂಪಿಸಲು ಬಿಜೆಪಿಯಿಂದ 14 ಸದಸ್ಯರ ತಂಡವೊಂದನ್ನು ರಚಿಸಲಾಗಿದೆ. ನಡ್ಡಾ ಸೋಮವಾರ ಸಭೆ ನಡೆಸಿದ್ದು ಇದೇ ತಂಡದೊಂದಿಗೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಈ ತಂಡದ ಸಂಚಾಲಕರಾಗಿದ್ದಾರೆ.
ಪಶ್ಚಿಮ ಯುಪಿಯಲ್ಲಿ ಬಿಜೆಪಿ ಸೋಲಲಿದೆ ಎಂದು ಯಶವಂತ್ ಸಿನ್ಹಾ ಭವಿಷ್ಯ
ಜುಲೈ 18ರಂದು ಚುನಾವಣೆ:
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇವಾವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಜುಲೈ 18ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಜೂನ್ 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜುಲೈ 18ರಂದು ಮತದಾನ ಇದ್ದರೆ ಜುಲೈ 21ರಂದು ಮತ ಎಣಿಕೆಯಾಗಿ ನೂತನ ರಾಷ್ಟ್ರಪತಿ ಘೋಷಣೆ ಆಗಲಿದೆ.
ಯಾರು ಈ ಯಶವಂತ್ ಸಿನ್ಹಾ?
84 ವರ್ಷದ ಯಶವಂತ್ ಸಿನ್ಹಾ ಬಿಹಾರ ಮೂಲದ ರಾಜಕಾರಣಿ. ಜನತಾ ಪರಿವಾರದ ಕುಡಿ. ಐಎಎಸ್ ಅಧಿಕಾರಿಯಾಗಿದ್ದ ಇವರು 1984ರಲ್ಲಿ ರಾಜೀನಾಮೆ ನೀಡಿ ಜನತಾ ಪಕ್ಷ ಸೇರಿದರು. ನಂತರ 1989ರಲ್ಲಿ ಹೊಸದಾಗಿ ರಚನೆಯಾದ ಜನತಾ ದಳ ಸೇರಿದರು. 1990ರಲ್ಲಿ ಚಂದ್ರಶೇಖರ್ ನೇತೃತ್ವದ ಸರಕಾರದಲ್ಲಿ ಹಣಕಾಸು ಸಚಿವರಾದರು.
ಬಳಿಕ ಬಿಜೆಪಿಗೆ ಪಕ್ಷಾಂತರಗೊಂಡ ಅವರು 1996ರಲ್ಲಿ ಬಿಜೆಪಿಯ ವಕ್ತಾರರಾದರು. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಹಣಕಾಸು ಸಚಿವ ಸ್ಥಾನ, ನಂತರ ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನ ಪಡೆದರು.
2014ರಿಂದಲೂ ಬಿಜೆಪಿಯಲ್ಲಿ ಯಶವಂತ್ ಸಿನ್ಹಾ ಕಡೆಗಣಿತವಾಗಿದ್ದರು. ನರೇಂದ್ರ ಮೋದಿಯ ಕಟುಟೀಕಾಕಾರರಾಗಿದ್ದ ಅವರು 2018ರಲ್ಲಿ ಬಿಜೆಪಿ ತೊರೆದರು. 2021 ಮಾರ್ಚ್ 13ರಂದು ಟಿಎಂಸಿ ಪಕ್ಷ ಸೇರಿದರು.
|
ಸಿನ್ಹಾ ಮಾಡಿದ ಟ್ವೀಟ್
ಇಂದು ಬೆಳಗ್ಗೆ ರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳು ತಮ್ಮನ್ನು ಅಭ್ಯರ್ಥಿಯಾಗಿ ನಿಲ್ಲಿಸಬಹುದು ಎಂಬ ಸುಳಿವು ಯಶವಂತ್ ಸಿನ್ಹಾಗೆ ಮೊದಲೇ ಇದ್ದಂತಿತ್ತು. ಮಂಗಳವಾರ ಬೆಳಗ್ಗೆ ಅವರು ಮಾಡಿದ ಟ್ವೀಟ್ನಲ್ಲಿ ಈ ಸುಳಿವು ಕಾಣುತ್ತದೆ.
"ಟಿಎಂಸಿಯಲ್ಲಿ ನನಗೆ ಸಿಕ್ಕಿರುವ ಗೌರವ ಮತ್ತು ಪ್ರತಿಷ್ಠೆಗೆ ಮಮತಾ ಬ್ಯಾನರ್ಜಿಗೆ ಋಣಿಯಾಗಿದ್ದೇನೆ. ರಾಷ್ಟ್ರೀಯ ಉದ್ದೇಶಕ್ಕಾಗಿ ಪಕ್ಷ ತೊರೆದು ವಿಪಕ್ಷದ ಒಗ್ಗಟ್ಟಿಗೆ ಕೆಲಸ ಮಾಡುವ ಸಮಯ ಬಂದಿದೆ. ನನ್ನ ಈ ನಡೆಯನ್ನು ಅವರು ಅನುಮೋದಿಸುತ್ತಾರೆಂದು ಭಾವಿಸಿದ್ಧೇನೆ" ಎಂದು ಸಿನ್ಹಾ ಟ್ವೀಟ್ ಮಾಡಿದ್ದರು.