ಮೋದಿಯಿಂದ ವಿಶೇಷವಾಗಿ ಆಟಲ್ ಬಿಹಾರಿ ವಾಜಪೇಯಿ ಸಂಸ್ಮರಣೆ
ನವದೆಹಲಿ, ಆ. 16: ಮಾಜಿ ಪ್ರಧಾನಿ, ಬಿಜೆಪಿ ಮುಖಂಡ ಅಟಲ ಬಿಹಾರಿ ವಾಜಪೇಯಿ ಅವರ ಸಂಸ್ಮರಣಾ ದಿನವಾದ ಇಂದು ಪ್ರಧಾನಿ ಮೋದಿ ಅವರು ವಿಶೇಷವಾದ ವಿಡಿಯೋ ಹಂಚಿಕೊಂಡಿದ್ದಾರೆ.
ಅಟಲ್ ಜೀ ಅವರ ಪುಣ್ಯತಿಥಿಯಂದು ನನ್ನ ನಮನ, ದೇಶದ ಪ್ರಗತಿಗಾಗಿ ನಿಮ್ಮ ಸೇವೆ ಹಾಗೂ ತ್ಯಾಗವನ್ನು ಎಂದಿಗೂ ಸ್ಮರಿಸಲಾಗುತ್ತದೆ ಎಂದು ಪ್ರಧಾನಿ ಅವರು ಟ್ವೀಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.
ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪರಿಚಯ
Tributes to beloved Atal Ji on his Punya Tithi. India will always remember his outstanding service and efforts towards our nation’s progress. pic.twitter.com/ZF0H3vEPVd
— Narendra Modi (@narendramodi) August 16, 2020
ಭಾರತ್ ರತ್ನ ಅಟಲ್ ಅವರ ಚಿತ್ರಗಳಿರುವ ವಿಡಿಯೋಕ್ಕೆ ಮೋದಿ ಅವರ ಹಿನ್ನಲೆ ಧ್ವನಿಯಿದೆ. ಅಟಲ್ ಅವರು ಭಾರತದ ದೇಶಭಕ್ತಿ ಹಾಗೂ ಸಂಸ್ಕೃತಿಯ ದನಿಯಾಗಿದ್ದರು. ಚತುರ ಸಂಘಟಕರಾಗಿದ್ದರು, ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ಹೇಗೆ ಕಾರ್ಯ ನಿರ್ವಹಿಸಿದರು, ಅವರ ಭಾಷಣ ಹೇಗೆ ಪ್ರಭಾವ ಬೀರುತ್ತಿತ್ತು, ಅವರ ಮೌಲ್ಯಯುತವಾದ ಜೀವನ, ಅವರ ಮೌನದಲ್ಲೂ ನಮಗೆ ವಿಶೇಷ ಅರ್ಥ ಕಾಣಿಸುತ್ತಿತ್ತು. ಆದರಣೀಯ ಅಟಲ್ ಜೀಗೆ ನನ್ನ ನಮನ ಎಂದು ಮೋದಿ ಹೇಳಿದ್ದಾರೆ.
2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದ ವಾಜಪೇಯಿ ಅವರು ದೀರ್ಘ ಅನಾರೋಗ್ಯದ ಕಾರಣದಿಂದ 2018ರ ಆಗಸ್ಟ್ 16 ರಂದು ನಿಧನ ಹೊಂದಿದ್ದರು. 3 ಬಾರಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ವಾಜಪೇಯಿ ಅವರು ಕವಿಯಾಗಿ, ಉತ್ತಮ ವಾಗ್ಮಿಯಾಗಿ, ಹಾಸ್ಯಪ್ರಜ್ಞೆಯ ಸರಳ ಮನುಷ್ಯರಾಗಿ, ಮಾನವೀಯ ಅಂತಃಕರಣದ ಜನಾನುರಾಗಿಯಾಗಿ ಕೋಟ್ಯಂತರ ಭಾರತೀಯರ ಹೃದಯದಲ್ಲಿ ನೆಲೆಸಿದವರು.
ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ
ಪ್ರೋಖ್ರಾನ್ ಅಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸುವರ್ಣ ಚತುಷ್ಪಥ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಮುಂತಾದವು ವಾಜಪೇಯಿ ಅವರ ದೂರದೃಷ್ಟಿತ್ವದ ಫಲವಾಗಿದೆ. ಮೋದಿಗೆ ರಾಜಧರ್ಮ ಪರಿಪಾಲನೆ ಪಾಠ ಮಾಡಿದ್ದ ಅಟಲ್ ಅವರು ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ ಮೊದಲ ಅವಿವಾಹಿತ ಎನಿಸಿಕೊಂಡಿದ್ದಾರೆ.