ಈರುಳ್ಳಿ ಮಾತ್ರವಲ್ಲ, ಇನ್ನು ಟೊಮ್ಯಾಟೊದಿಂದಲೂ ಕಣ್ಣೀರು!
ನವದೆಹಲಿ, ಸೆಪ್ಟೆಂಬರ್ 26: ಅಡುಗೆಗೆಂದು ಈರುಳ್ಳಿ ಹೆಚ್ಚುವಾಗ ಮಾತ್ರವಲ್ಲ, ಅದನ್ನು ಕೊಳ್ಳುವಾಗಲೂ ಅದರ ದುಬಾರಿ ಬೆಲೆ ಕಣ್ಣೀರು ಸುರಿಯುವಂತೆ ಮಾಡುತ್ತದೆ. ಈಗ ಹುಳಿ ಸಿಹಿ ರುಚಿಯ ಕೆಂಪನೆಯ ಟೊಮ್ಯಾಟೋ ಕೂಡ ಕಣ್ಣೀರು ಸುರಿಸಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನರು ದಿನದ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಟೊಮ್ಯಾಟೋಗೆ ಕೂಡ ದುಬಾರಿ ಬೆಲೆ ತೆತ್ತು ಖರೀದಿಸಬೇಕಾಗಲಿದೆ.
ಈರುಳ್ಳಿಯಂತೆಯೇ ಟೊಮ್ಯಾಟೋ ಕೂಡ ಪೂರೈಕೆ ಕೊರತೆ ಹಾಗೂ ಬೆಲೆ ಏರಿಕೆಯ ಸಮಸ್ಯೆಗೆ ಒಳಗಾಗಿದೆ. ಕಳೆದ ಕೆಲವು ವಾರಗಳಿಂದ ದೆಹಲಿಯಲ್ಲಿ ಟೊಮ್ಯಾಟೋ ಪೂರೈಕೆಯಲ್ಲಿ ಶೇ 70ರಷ್ಟು ಇಳಿಕೆಯಾಗಿದೆ. ದಸರೆ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬದ ದಿನಗಳು ಆಗಮಿಸಲಿದ್ದು, ಇದೇ ಸಂದರ್ಭದಲ್ಲಿ ಈರುಳ್ಳಿ ಮತ್ತು ಟೊಮ್ಯಾಟೋದಂತಹ ಅತಿ ಅಗತ್ಯ ತರಕಾರಿಗಳ ಬೆಲೆ ಗಗಕ್ಕೇರಿರುವುದು ಗ್ರಾಹಕರನ್ನು ಚಿಂತೆಗೀಡುಮಾಡಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ.
ಭಾರಿ ಮಳೆ ಹಾಗೂ ಪ್ರವಾಹ ಸೇರಿದಂತೆ ವಿವಿಧ ಕಾರಣಗಳಿಂದ ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಭಾರತದ ಹಲವೆಡೆ ತರಕಾರಿ ಬೆಳೆಗಳು ನೆಲಕಚ್ಚಿವೆ. ಹೀಗಾಗಿ ಪೂರೈಕೆ ಕಡಿಮೆಯಾಗಿ ಬೆಲೆ ಗಗನಕ್ಕೆ ಚಿಮ್ಮಿದೆ.

ಟೊಮ್ಯಾಟೋ ಕೆಜಿಗೆ 40-60 ರೂ.
ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಈರುಳ್ಳಿ ದರ ಹೆಚ್ಚೂ ಕಡಿಮೆ ದುಪ್ಪಟ್ಟಾಗಿದೆ. ಟೊಮ್ಯಾಟೋ ದರ ಇಲ್ಲಿಯವರೆಗೂ ಅಷ್ಟೇನೂ ಏರಿಳಿತ ಕಂಡಿರಲಿಲ್ಲ. ಹಾಗಾಗಿ ಗ್ರಾಹಕರಿಗೆ ಬೆಲೆ ಏರಿಕೆಯ ಅನುಭವ ಆಗಿರಲಿಲ್ಲ.
ಇತ್ತೀಚಿನ ಕೆಲವು ದಿನಗಳಲ್ಲಿ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಕೆ.ಜಿ. ಟೊಮ್ಯಾಟೋ ಬೆಲೆ 40-60 ರೂ.ಗೆ ಮುಟ್ಟಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಏಕಾಏಕಿ ಬೆಲೆ ಏರಿಕೆ
ದೆಹಲಿ ಮಾತ್ರವಲ್ಲದೆ, ದೇಶದೆಲ್ಲೆಡೆ ಟೊಮ್ಯಾಟೋ ಬೆಲೆ ಏಕಾಏಕಿ ಏರಿಕೆಯಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್ಸೈಟ್ ಮಾಹಿತಿ ಪ್ರಕಾರ, ಬುಧವಾರ ಟೊಮ್ಯಾಟೋ ಬೆಲೆ ಚಂಡೀಗಡದಲ್ಲಿ 52 ರೂ ಇತ್ತು. ಗುರುವಾರ ದೆಹಲಿಯ ಆಜಾದ್ಪುರ ಮಂಡಿಯಲ್ಲಿನ ಹೋಲ್ಸೇಲ್ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮ್ಯಾಟೋಗಳು 25 ಕೆಜಿಗೆ 800 ರೂ.ನಂತೆ ಮಾರಾಟವಾಗಿವೆ. ಸಾಮಾನ್ಯ ಟೊಮ್ಯಾಟೋಗಳು 500 ರೂ.ದಂತೆ ಮಾರಾಟವಾಗಿವೆ.

ಭಾರಿ ದುಬಾರಿಯಾಗಲಿದೆ ಟೊಮ್ಯಾಟೋ
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಉಂಟಾದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಮಾರುಕಟ್ಟೆಗೆ ಬರುವ ಟೊಮ್ಯಾಟೋ ಪ್ರಮಾಣವು ಮೂರನೇ ಒಂದರಷ್ಟು ಕುಸಿತ ಕಂಡಿದೆ. ಟೊಮ್ಯಾಟೋ ಬೆಳೆಗೆ ಈ ಭಾಗಗಳಲ್ಲಿ ಅಪಾರ ಹಾನಿಯಾಗಿದೆ. ದೆಹಲಿ ಮಾರುಕಟ್ಟೆಗೆ ನಿತ್ಯ 40 ಟ್ರಕ್ ಲೋಡ್ ಬರುತ್ತಿದ್ದ ಕಡೆ ಈಗ 20 ಟ್ರಕ್ ಲೋಡ್ ಬರುತ್ತಿದೆ. ವರ್ತಕರ ಪ್ರಕಾರ ಟೊಮ್ಯಾಟೋ ಬೆಲೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದ್ದು, ಹಬ್ಬದ ದಿನಗಳಲ್ಲಿ ಬೇಡಿಕೆ ಅಧಿಕವಾಗುವುದರಿಂದ ಭಾರಿ ದುಬಾರಿಯಾಗಲಿದೆ.

ಈರುಳ್ಳಿ ದರ ಭಾರಿ ಏರಿಕೆ
ಈರುಳ್ಳಿ ಬೆಳೆಗೆ ಮಳೆಯಿಂದ ತೀವ್ರ ಹಾನಿಯಾಗಿರುವುದರಿಂದ ಉತ್ಪಾದನೆ ಕುಸಿದಿದೆ. ಇದರಿಂದ ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಒಂದು ಕೆಜಿ ಸೇಬಿನಷ್ಟೇ ಈರುಳ್ಳಿ ಬೆಲೆಯೂ ತಲುಪಿದೆ. ಹೀಗೆಯೇ ಪರಿಸ್ಥಿತಿ ಮುಂದುವರಿದರೆ ಈರುಳ್ಳಿ ಬೆಲೆ ನೂರರ ಗಡಿ ದಾಟಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ.












Click it and Unblock the Notifications