ಶಬರಿಮಲೆ ಅಚಾತುರ್ಯಗಳು: ಅಯ್ಯಪ್ಪಸ್ವಾಮಿಗೆ ಅಸಮಾಧಾನ!
ಶಬರಿಮಲೆ, ಜೂನ್ 20: ದೇವರ ನಾಡು ಕೇರಳದಲ್ಲಿನ ಶಬರಿಮಲೆ ದೇವಸ್ಥಾನದಲ್ಲಿ ನಡೆಯುತ್ತಿರುವ ನಡುವಳಿಕೆಗಳ ಬಗ್ಗೆ ಖುದ್ದು ಅಯ್ಯಪ್ಪಸ್ವಾಮಿಗೆ ಅಸಮಾಧಾನವಾಗಿದೆಯಂತೆ! ಇದರಿಂದ ಏನು, ನಡೆಯಬಾರದಂಥಾದ್ದು ಏನಾಯಿತು, ಅವ್ಯವಹಾರ/ದುರ್ವವಹಾರಗಳೇನಾದರೂ ನಡೆದವಾ, ಭಕ್ತಗಣದ ಮೇಲೆ ಅಯ್ಯಪ್ಪಸ್ವಾಮಿಗೆ ಮುನಿಸೇಕೆ? ಎಂಬ ಪ್ರಶ್ನೆಗಳು ಏಳತೊಡಗಿವೆ.
ಅಂದಹಾಗೆ ಈ ಬಗ್ಗೆ ಸುಳಿವು ನೀಡಿದವರು ಜ್ಯೋತಿಷಿ ಚೇರುವಳ್ಳಿ ನಾರಾಯಣ ನಂಬೂದರಿ. ಇವರು 'ಅಷ್ಟಮಂಗಳ ದೇವಪ್ರಶ್ನೆ' ಕೇಳಿದಾಗ ಕೆಲ ಆತಂಕಕಾರಿ ಸಂಗತಿಗಳು ಹೊರಬಿದ್ದಿವೆ.
ಅಯ್ಯಪ್ಪಸ್ವಾಮಿ ಕೃಪಾಕಟಾಕ್ಷ ಬೀರುತ್ತಿಲ್ಲ ಎಂಬುದು ಅಷ್ಟಮಂಗಳ ದೇವಪ್ರಶ್ನೆ' ಕೇಳುವ ಪ್ರಕ್ರಿಯೆಯ ಆರಂಭದಲ್ಲೇ ಗೋಚರವಾಗಿದೆ. ಇದರಿಂದ ಮುಕ್ತರಾಗಲು ತಕ್ಷಣ ದೇವಸ್ಥಾನದಲ್ಲಿ ಶುದ್ಧಿ ಮಾಡಿಸಬೇಕು. ಸಾಮೂಹಿಕ ಪ್ರಾರ್ಥನೆಗಳನ್ನು ಕೈಗೊಳ್ಳಬೇಕು. ಅಯ್ಯಪ್ಪಸ್ವಾಮಿ ದೇವಸ್ಥಾನ ಮತ್ತು ಮಲ್ಲಿಕಾಪುರಂ ದೇವಿ ಆಲಯದಲ್ಲಿ ವಿಶೇಷ ಪೂಜೆಗಳು ನಡೆಯಬೇಕು ಎಂದು ನಾರಾಯಣ ನಂಬೂದರಿ ಪರಿಹಾರ ಸೂಚಿಸಿದ್ದಾರೆ.
'ಸ್ವಾಮಿಗೆ ನಡೆಯುವ ಪೂಜಾ ಕೈಕಂರ್ಯಗಳಲ್ಲಿ ಕೆಲವು ಅಚಾತುರ್ಯಗಳಾಗುತ್ತಿವೆ. ಉದಾಹರಣೆಗೆ ಸ್ವಾಮಿಗೆ ಅರ್ಪಿಸುತ್ತಿರುವ ವಿಭೂತಿ ಕೃತಕ ಪರಿಕರಗಳಿಂದ ಕೂಡಿದೆ. ಇದು ದೇವರಿಗೆ ಸಮಸ್ಯೆಗಳನ್ನು ವಿಘ್ನಕಾರಕವಾಗಿದೆ ಎಂಬುದು ಅಷ್ಟಮಂಗಳ ದೇವಪ್ರಶ್ನೆ ಮುಖಾಂತರ ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ. (ಉಡುಪಿ ಅಷ್ಟ ಮಠಗಳ ಪೀಠಾಧಿಪತಿಗಳು ಯಾರು)
ಇದೇ ವೇಳೆ ಅಯ್ಯಪ್ಪಸ್ವಾಮಿ ಎದುರಿಗಿರುವ ಚಿನ್ನದ ಧ್ವಜಸ್ತಂಭವನ್ನು ಬದಲಾಯಿಸಬೇಕು. ಹಳೆಯದು ಜೀರ್ಣಾವಸ್ಥೆಯಲ್ಲಿದೆ. ಧ್ವಜಸ್ತಂಭದ ತಳಭಾಗ ಸಿಮೆಂಟಿನಿಂದ ಮಾಡಿಸಲಾಗಿದೆ. ಇದು ಅಪಚಾರವಾಗಿದೆ. ಅದನ್ನು ಟೀಕ್ ವುಡ್ ನಿಂದ ಮಾಡಿಸಬೇಕು ಎಂದೂ ದೇವಪ್ರಶ್ನೆಯಿಂದ ತಿಳಿದುಬಂದಿದೆ.
ಸ್ವಚ್ಛತೆಗೆ ಒತ್ತು: ಹೋಮಕುಂಡವನ್ನು ಸ್ಥಳಾಂತರಿಸುವ ಬಗ್ಗೆಯೂ ಸ್ವಾಮಿಗೆ ಅಸಮಾಧಾನವಾಗಿದೆ. ಆದರೆ ಅತ್ಯಾಧುನಿಕ ಯಂತ್ರೋಪಕರಣ ಬಳಸಿ ಹೋಮಕುಂಡವನ್ನು ಶುಚಿಗೊಳಿಸಬೇಕು. ಜತೆಗೆ ದೇವಸ್ಥಾನದ ಆವರಣದಲ್ಲಿ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಬಹುದು ಎಂದು ದೇವಪ್ರಶ್ನೆಯಿಂದ ತಿಳಿದುಬಂದಿದೆ.
ದೇವಸ್ಥಾನದೊಳಕ್ಕೆ ಮಹಿಳೆಯರ ಪ್ರವೇಶವಾಗಿದ್ದು, ಶುದ್ದೀಕರಣ ನಡೆಯಬೇಕಿದೆ. ಆದರೆ ಮಣಿಮಂಟಪ ಸ್ಥಳಾಂತರಕ್ಕೆ ಅಯ್ಯಪ್ಪಸ್ವಾಮಿ ಒಪ್ಪಿಗೆ ನೀಡಲಿಲ್ಲ. ಇನ್ನು ನಾಗರ, ನವಗ್ರಹ ಜಾಗಗಳನ್ನು ಸ್ಥಳಾಂತರಿಸುವ ಮೂಲಕ ಮಲ್ಲಿಕಾಪುರಂ ದೇವಿ ಆಲಯವನ್ನು ವಿಶಾಲಗೊಳಿಸಬಹುದಾಗಿದೆ ಎಂದು ನಾರಾಯಣ ನಂಬೂದರಿ ತಿಳಿಸಿದ್ದಾರೆ.