ಸುನಂದಾ ಸಾವು: ವೈದ್ಯರು ನೀಡಿದ ವರದಿಯಲ್ಲೇನಿದೆ?
ನವದೆಹಲಿ, ಜನವರಿ, 15: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಏಮ್ಸ್ ವೈದ್ಯರು ಪೊಲೀಸರಿಗೆ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ವರಿಷ್ಠಾಧಿಕಾರಿ ಬಸ್ಸಿ ವರದಿಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವರದಿಯಲ್ಲಿನ ನಿಖರ ಮಾಹಿತಿಗಳನ್ನು ವಿಶೇಷ ಪೊಲೀಸ್ ಆಯುಕ್ತರಾದ ದೀಪಕ್ ಮಿಶ್ರಾ ಬಹಿರಂಗ ಮಾಡಲಿದ್ದಾರೆ. ದೆಹಲಿಯ ಚಾಣಕ್ಯಪುರಿಯ ಲೀಲಾ ಪ್ಯಾಲೆಸ್ ಪಂಚತಾರಾ ಹೋಟೆಲ್ನ ರೂಮ್ ವೊಂದರಲ್ಲಿ ಸುನಂದಾ ಅನುಮಾನಾಸ್ಪದ ಸಾವಿಗೀಡಾಗಿದ್ದರು. 2014ರ ಜನವರಿ 17 ರಂದು ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಮೃತ ದೇಹ ಪತ್ತೆಯಾಗಿತ್ತು.[ಸುನಂದಾ ಹತ್ಯೆ ಪ್ರಕರಣದ ಎಫ್ ಬಿಐ ವರದಿ ಬಹಿರಂಗ]
ಪ್ರಕರಣಕ್ಕೆ ಸಂಬಂಧಿಸಿ ಶಶಿ ತರೂರ್ ಸೇರಿದಂತೆ ಅನೇಕರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಇದೀಗ ವೈದ್ಯರು ಸಲ್ಲಿಕೆ ಮಾಡಿರುವ ವರದಿ ಸುನಂದಾ ಯಾವ ಕಾರಣದಿಂದ ಸಾವನ್ನಪ್ಪಿದರು ಎಂಬುದನ್ನು ತಿಳಿಸಲಿದೆ. ವರದಿಯಲ್ಲಿನ ಎಲ್ಲ ಅಂಶಗಳು ಬಹಿರಂಗವಾದ ಮೇಲೆ ತನಿಖೆ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆಯಿದೆ.[ಸುನಂದಾ ಅಸಹಜ ಸಾವು ಹುಟ್ಟುಹಾಕಿದ 5 ಪಶ್ನೆಗಳು]
ವಿಷಪ್ರಾಶನದಿಂದ ಸುನಂದಾ ಸಾವನ್ನಪ್ಪಿದ್ದಾರೆ ಎಂದು ಹಲವಾರು ಕಡೆ ಅನುಮಾನಗಳು ವ್ಯಕ್ತವಾಗಿದ್ದವು. ಭದ್ರತೆ ವಿಚಾರಲ್ಲೂ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಸುನಂದಾ ಸಾವಿಗೀಡಾದ ಬರೋಬ್ಬರಿ ಎರಡು ವರ್ಷದ ನಂತರ ವರದಿ ಸಲ್ಲಿಕೆಯಾದಂತೆ ಆಗಿದೆ. ಶಶಿ ತತೂರ್ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ಇವೆ.