ಸುನಂದಾ ಪುಷ್ಕರ್ ಸಾವು: ದೆಹಲಿ ಪೊಲೀಸರ ವಿರುದ್ಧ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ
ನವದೆಹಲಿ, ಸೆಪ್ಟೆಂಬರ್ 9: ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೆ ಧ್ವನಿ ಎತ್ತಿದ್ದಾರೆ. ಇದು ಕೊಲೆ ಎಂದು ವೈದ್ಯರು ವರದಿ ನೀಡಿದ್ದರೂ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅದನ್ನು ಸಲ್ಲಿಸಿಯೇ ಇಲ್ಲ ಎಂದು ಆರೋಪಿಸಿದ್ದಾರೆ.
ಸುನಂದಾ ಪುಷ್ಕರ್ ಅವರ ಅಸಹಜ ಸಾವಿನ ಪ್ರಕರಣದಲ್ಲಿ ಅವರ ಮೃತದೇಹವು ಏಮ್ಸ್ ವೈದ್ಯರ ತಂಡದ ತಪಾಸಣೆಗೆ ಸಿಕ್ಕಿತ್ತು. ಡಾ. ಸುಧೀರ್ ಗುಪ್ತಾ ಅವರ ಮುಂದಾಳತ್ವದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದ ವೈದ್ಯರ ತಂಡ ಅದು ಕೊಲೆ ಎಂದು ಅಂತಿಮ ತೀರ್ಮಾನಕ್ಕೆ ಬಂದಿತ್ತು ಎಂದು ಸ್ವಾಮಿ ತಿಳಿಸಿದ್ದಾರೆ.
ಸುನಂದಾ ಅವರ ಅಸಹಜ ಸಾವಿನ ಕುರಿತು ಏಮ್ಸ್ ವೈದ್ಯರು ಸವಿವರವಾದ ಮರಣೋತ್ತರ ಪರೀಕ್ಷೆಯ ವರದಿಯನ್ನು ದೆಹಲಿ ಪೊಲೀಸರಿಗೆ ನೀಡಿದ್ದರು. ಆದರೆ ಇದುವರೆಗೂ ದೆಹಲಿ ಪೊಲೀಸರು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಏಕೆ? ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ಸುನಂದಾ ಪುಷ್ಕರ್ ಸಾವು ಆತ್ಮಹತ್ಯೆಯಲ್ಲ, ಅದು ಕೊಲೆ ಎಂದು ಪ್ರತಿಪಾದಿಸಿರುವ ಸುಬ್ರಮಣಿಯನ್ ಸ್ವಾಮಿ, ಅದರ ತನಿಖೆಯನ್ನು ನ್ಯಾಯಾಲಯದ ನಿಗಾದಲ್ಲಿ ವಿಶೇಷ ತನಿಖೆ ತಂಡ ನಡೆಸಬೇಕೆಂದು ಕೋರಿ ಮನವಿ ಮಾಡಿದ್ದರು. ಈ ಬಗ್ಗೆ ಈಗಾಗಲೇ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದಿದ್ದ ನ್ಯಾಯಾಲಯ ಅವರ ಅರ್ಜಿಯನ್ನು ತಳ್ಳಿಹಾಕಿತ್ತು.
ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್, 2014ರ ಜನವರಿ 17ರಂದು ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದರು.












Click it and Unblock the Notifications