ಲಂಕಾಗೆ ಕೊಳ್ಳಿ ಇಟ್ಟು ಭಾರತಕ್ಕೆ ತ್ರಿಕೋನ ಸರಣಿ ಮುಕುಟ ತೊಡಿಸಿದವರು ಇವರೇ ನೋಡಿ
India A Vs Sri lanka A: ಶ್ರೀಲಂಕಾದ ದಂಬುಲ್ಲಾದಲ್ಲಿ ಭಾನುವಾರ (ಜೂನ್ 21) ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ 'ಎ' ವಿರುದ್ಧ ಭಾರತ ಎ ಭರ್ಜರಿಯಾಗಿ ಗೆದ್ದು ಬೀಗಿತು. ಈ ಮೂಲಕ ಏಕದಿನ ತ್ರಿಕೋನ ಸರಣಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಹಾಗಾದ್ರೆ ಈ ಗೆಲುವಿಗೆ ಪ್ರಮುಖ ಕಾರಣವಾಗಿದ್ದು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ಧ ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಭಾರತ ಎ ತಂಡವು 15 ವರ್ಷದ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 377 ರನ್ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಬಳಿಕ ಬ್ಯಾಟ್ ಬೀಸಿದ ಲಂಕಾ 47.1 ಓವರ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 311 ರನ್ಗಳನ್ನಷ್ಟೇ ಕಲೆಹಾಕಿ ಸೋಲನುಭವಿಸಿತು.

ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾ
ದಂಬುಲ್ಲಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಕಡಿಮೆ ರನ್ಗಳಿಗೆ ವಿಕೆಟ್ ಒಪ್ಪಿಸಿದ್ದ ವೈಭವ್ ಸೂರ್ಯವಂಶಿ ಅವರು ಫೈನಲ್ನಲ್ಲಿ ಅಬ್ಬರದ ಆಟವಾಡಿ ಭಾರತ ಎ ತಂಡ ಬೃಹತ್ ಮೊತ್ತ ಕಲೆಹಾಕಲು ಕಾರಣರಾದರು. ಇನ್ನೂ ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ಲಂಕಾ ಪಡೆ ವಿಫಲವಾಗಿದ್ದು, ಟೀಮ್ ಇಂಡಿಯಾ 66 ರನ್ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಲಂಕಾ ಬೌಲರ್ಗಳಿಗೆ ನರಕ ದರ್ಶನ ಮಾಡಿಸಿದ ವೈಭವ್
ಭಾರತದ ಈ ಗೆಲುವಿಗೆ ಪ್ರಮುಖ ಕಾರಣ ಎಂದರೆ ಅದು 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು. ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಲಂಕಾ ಬೌಲರ್ಗಳಿಗೆ ನರಕ ದರ್ಶನವನ್ನೇ ಮಾಡಿಸಿದರು. ಕೇವಲ 29 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್ಗಳ ಸಹಿತ 94 ರನ್ಗನ್ನು ಸಿಡಿಸಿ ಮಿಂಚಿದರು. ಈ ಇನಿಂಗ್ಸ್ನಲ್ಲಿ ಅವರು ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಜಾಗತಿಕ ಲಿಸ್ಟ್ 'ಎ' ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಭಾರತದ ಗೆಲುವಿಗೆ ಕಾರಣರಾದವರು ಯಾರು?
ವೈಭವ್ ಸೂರ್ಯವಂಶಿ ನೀಡಿದ ಸ್ಫೋಟಕ ಆರಂಭದ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡದ ನಾಯಕ ತಿಲಕ್ ವರ್ಮಾ 90 ಎಸೆತಗಳಲ್ಲಿ 67 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇನಿಂಗ್ಸ್ನ ಅಂತ್ಯದಲ್ಲಿ ಅಬ್ಬರಿಸಿದ ಅನುಕುಲ್ ರಾಯ್ ಕೇವಲ 15 ಎಸೆತಗಳಲ್ಲಿ 39 ರನ್ ಚಚ್ಚಿದರು. ಉಳಿದಂತೆ ಭಾರತದ ಪರ ರುತುರಾಜ್ ಗಾಯಕ್ವಾಡ್ 40(51), ಪ್ರಿಯಾಂಕ್ ಆರ್ಯ 39(29), ಕುಮಾರ್ ಕುಶಾಗ್ರ 36(39), ವಿಪ್ರಜ್ ನಿಗಮ್ 27(20) ರನ್ ಸಿಡಿಸಿ ಮಿಂಚಿದರು. ಪರಿಣಾಮ ಭಾರತ 'ಎ' ತಂಡ ನಿಗದಿತ ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 377 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಭಾರತ ಬೌಲಿಂಗ್ ದಾಳಿಗೆ ಲಂಕಾ ಧೂಳೀಪಟ
378 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 'ಎ' ತಂಡಕ್ಕೆ ಭಾರತದ ಬೌಲರ್ಗಳು ಆರಂಭದಲ್ಲೇ ಶಾಕ್ ನೀಡಿದರು. ಲಂಕಾ ಪರ ಸದೀರ ಸಮರವಿಕ್ರಮ (52 ರನ್) ಮತ್ತು ವನುಜಾ ಸಹನ್ (62 ರನ್) ಅರ್ಧಶತಕ ಸಿಡಿಸಿ ಮಿಂಚಿದರು. ಆದರೂ ಶ್ರೀಲಂಕಾವು ಭಾರತದ ಬೌಲಿಂಗ್ ದಾಳಿಗೆ ಮಣಿದು 47.1 ಓವರ್ಗಳಲ್ಲಿ 311 ರನ್ಗಳಿಗೆ ಆಲೌಟ್ ಆಯಿತು.
ಭಾರತದ ಪರ ವೇಗಿ ಯಶ್ ಠಾಕೂರ್ ಮತ್ತು ಸ್ಪಿನ್ನರ್ ವಿಪ್ರಜ್ ನಿಗಮ್ ತಲಾ 3 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾದ ಬ್ಯಾಟರ್ಗಳ ರನ್ ವೇಗಕ್ಕೆ ಕಡಿವಾಣ ಹಾಕಿದರಯ. ಉಳಿದಂತೆ ಅನುಕುಲ್ ರಾಯ್ 2 ವಿಕೆಟ್ ಕಿತ್ತರೆ, ಅಶೋಕ್ ಶರ್ಮಾ, ತಿಲಕ್ ವರ್ಮಾ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು. ಇನ್ನೂ ಈ ಭರ್ಜರಿ ಜಯದೊಂದಿಗೆ ಭಾರತ 'ಎ' ತಂಡವು ಟ್ರೋಫಿಯನ್ನು ಎತ್ತಿಹಿಡಿದು ಸಂಭ್ರಮಿಸಿತು.












Click it and Unblock the Notifications