ಗರ್ಭಿಣಿಯಾಗಿದ್ದಾಗಲೇ ಓಂಪುರಿ ಅಫೇರ್! ಮೊದಲ ಪತ್ನಿ ಸೀಮಾ ಕಪೂರ್ ನೋವಿನ ಸ್ಫೋಟ
ಖಡಕ್ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದ ನಟ ಓಂಪುರಿ ತೀರಿಕೊಂಡು ಒಂಭತ್ತು ವರ್ಷ ಕಳೆದಿದೆ. ಇದೀಗ ಅವರ ಮೊದಲ ಪತ್ನಿ ತನ್ನ ಬದುಕಿನ ಬಹಳ ನೋವಿನ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಅವರು ಗರ್ಭವತಿಯಾಗಿ ಕಷ್ಟದ ದಿನಗಳನ್ನು ಅನುಭವಿಸುತ್ತಿದ್ದಾಗ ಗಂಡ ಓಂಪುರಿ ಮತ್ತೊಬ್ಬ ಹೆಣ್ಣಿನ ತೆಕ್ಕೆಯಲ್ಲಿದ್ದರಂತೆ!
ಖ್ಯಾತ ಖಳ ನಟ, ವಿಲನ್ ಪಾತ್ರಗಳ ಮೂಲಕ ಮನೆಮಾತಾದ ಓಂ ಪುರಿ ಅವರ ಮೊದಲ ಪತ್ನಿ, ಲೇಖಕಿ-ನಿರ್ದೇಶಕಿ ಸೀಮಾ ಕಪೂರ್ ಅವರು ತಮ್ಮ ಜೀವನದ ಅತ್ಯಂತ ನೋವಿನ ಅಧ್ಯಾಯವನ್ನು ಬಿಚ್ಚಿಟ್ಟಿದ್ದಾರೆ. ರಂಗಭೂಮಿ, ಕಲಾವಿದರ ಕುಟುಂಬದಲ್ಲಿ ಹುಟ್ಟಿ ಬೆಳದವರು ಸೀಮಾ ಕಪೂರ್. ಅವರ ತಾಯಿ ಕಮಲ್ ಶಬ್ನಮ್ ಕಪೂರ್ ಖ್ಯಾತ ಉರ್ದು ಕವಿ ಮತ್ತು ಶಾಸ್ತ್ರೀಯ ಸಂಗೀತ ಗಾಯಕಿ. ಸೀಮಾ ತನ್ನ ಕುಟುಂಬದ ಹಿನ್ನೆಲೆ, ಒತ್ತಾಸೆಯಿಂದ ಪಪೆಟ್ ಶೋ ಅಂದರೆ ತೊಗಲು ಗೊಂಬೆಯಾಟ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ವಿಶ್ವಮಟ್ಟದ ಪಪೆಟ್ ಶೋಗಳಲ್ಲಿ ಭಾರತವನ್ನು ಪ್ರತಿನಿಧಿಸಿದವರು. ಮುಂದೆ ಧಾರಾವಾಹಿ, ಸಿನಿಮಾಗಳಿಗೆ ಚಿತ್ರಕಥೆ ಸಂಭಾಷಣೆ ಬರೆಯುತ್ತ ಬಂದವರು. ಇವರು ಸಂಭಾಷಣೆ ಬರೆದ ಅಭಯ್ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. 1990ರಲ್ಲಿ ಸೀಮಾ ಖ್ಯಾತ ಖಳ ನಟ ಓಂಪುರಿ ಕೈ ಹಿಡಿಯುತ್ತಾರೆ. ಮದುವೆಯಾದ ಕೆಲವೇ ಸಮಯದಲ್ಲಿ ಗರ್ಭವತಿಯಾಗುತ್ತಾರೆ.

ಗರ್ಭಿಣಿಯಾಗಿದ್ದಾಗ ಓಂಪುರಿ ದೂರ
ದುರಂತ ಎಂದರೆ ಹೆಣ್ಣು ಗರ್ಭವತಿಯಾಗಿದ್ದಾಗ ಬಹಳ ಸೆನ್ಸಿಟಿವ್ ಇರುತ್ತಾರೆ. ಇಂಥಾ ಸಮಯದಲ್ಲಿ ಪತಿಯ ಒತ್ತಾಸೆ ಅತ್ಯಗತ್ಯ. ಆದರೆ ಸೀಮಾ ದುರಾದೃಷ್ಟ. ಅವರಿಲ್ಲಿ ಪ್ರೆಗ್ನಿನ್ಸಿಯ ಕಷ್ಟಗಳಲ್ಲಿ ಸೆಣಸಾಡುತ್ತಿದ್ದಾಗ ಅವರ ಪತಿ ಓಂ ಪುರಿ ಮತ್ತೊಬ್ಬ ಹೆಣ್ಣಿನ ತೆಕ್ಕೆಯಲ್ಲಿದ್ದರಂತೆ. ಇದು ಸೀಮಾಗೆ ಅತಿದೊಡ್ಡ ಶಾಕ್. ಪತಿ ಇಂಥಾ ಸಮಯದಲ್ಲಿ ತನಗೆ ಇಂಥಾ ಅನ್ಯಾಯ ಮಾಡಬಹುದು ಅಂತ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ ಸೀಮಾ ಬದುಕಿನ ದುರಂತ ಅಲ್ಲಿಗೇ ಕೊನೆಯಾಗಲಿಲ್ಲ. ಪತಿಯಿಂದ ದೂರಾದ ಅವರಿಗೆ ಮಗುವನ್ನೂ ಉಳಿಸಿಕೊಳ್ಳಲಾಗಲಿಲ್ಲ.
ಇವರ ಸಹೋದರ ಅನ್ನು ಕಪೂರ್ ತಂಗಿಯ ಬೆಂಬಲಕ್ಕೆ ನಿಂತು ಶಕ್ತಿ ಕಪೂರ್ ವಿರುದ್ಧ ಕಾನೂನು ಸಮರ ಕೈಗೊಳ್ಳಲು ಹುರಿದುಂಬಿಸಿದರೂ ಸೀಮಾ ಅದಕ್ಕೆ ನಿರಾಕರಿಸಿದರು. ಆ ಕಷ್ಟದ ಅವಧಿಯಲ್ಲಿ ಓಂಪುರಿಯನ್ನು ಮತ್ತೆ ಮುಖಾಮುಖಿಯಾಗುವುದಕ್ಕಿಂತ ಮೌನವನ್ನೇ ಆರಿಸಿಕೊಳ್ಳುವುದು ಸೂಕ್ತ ಅನಿಸಿತು ಎಂದು ಸೀಮಾ ಹೇಳುತ್ತಾರೆ.
ತನ್ನ ಪತಿಯ ಜೀವನಕ್ಕೆ ಮತ್ತೊಬ್ಬ ಮಹಿಳೆ ಬಂದ ನಂತರ ತಮ್ಮ ವೈವಾಹಿಕ ಜೀವನ ಹೇಗೆ ಮುರಿದುಬಿದ್ದಿತು, ಆ ಗೊಂದಲದ ಸಮಯದಲ್ಲಿ ಅವರು ತಮ್ಮ ಹುಟ್ಟಲಿರುವ ಮಗುವನ್ನು ಹೇಗೆ ಕಳೆದುಕೊಂಡರು ಎಂಬುದನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ.
ಮಗುವೈ ಕೈಬಿಟ್ಟು ಹೋಯಿತು
ಓಂ ಪುರಿ ನಂತರ ಪತ್ರಕರ್ತೆ ಮತ್ತು ಲೇಖಕಿ ನಂದಿತಾ ಪುರಿ ಅವರನ್ನು ವಿವಾಹವಾದರು. ಹಿಂದಿ ಸಂದರ್ಶನವೊಂದರಲ್ಲಿ ಜೊತೆ ಮಾತನಾಡುತ್ತಾ ಸೀಮಾ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ, ʼಯಾವಾಗ ಪುರಿ ಸಾಹೇಬರ ಜೊತೆ ಮನಸ್ತಾಪ ಉಂಟಾಯಿತೋ, ಆ ಹೊತ್ತಿಗೆ ಗರ್ಭಿಣಿಯಾಗಿದ್ದೆ. ರಾಜಸ್ಥಾನದಲ್ಲಿದ್ದ ನನ್ನ ತಾಯಿಯ ಬಳಿಗೆ ಹೋಗಿದ್ದೆ. ನನ್ನ ಸಹೋದರ ಅನ್ನು ಕಾನೂನಾತ್ಮಕವಾಗಿ ಹೋರಾಡಲು ಬಯಸಿದ್ದರು. ಕುಟುಂಬದವರು ಓಂಪುರಿ ಮಾಡಿರುವ ಅನ್ಯಾಯಕ್ಕೆ ಪ್ರತೀಕಾರ ತೆಗೆದುಗೊಳ್ಳಲು ಬಯಸಿದ್ದರೂ, ನನಗೆ ಈ ವಿಷಯವನ್ನು ಕಾನೂನು ಹೋರಾಟವಾಗಿ ಬದಲಾಯಿಸಲು ಇಷ್ಟವಿರಲಿಲ್ಲʼ ಎಂದು ಸೀಮಾ ಹೇಳಿದ್ದಾರೆ.
ದುರದೃಷ್ಟವಶಾತ್ ಏನಾಯಿತು ಎಂದರೆ ನನ್ನ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಗು ಆ ಸಮಯದಲ್ಲಿ ನನಗೆ ತುಂಬಾ ಅಮೂಲ್ಯವಾಗಿತ್ತು. ಏಕೆಂದರೆ ಪುರಿ ಸಾಹೇಬರು ಇನ್ನು ಮುಂದೆ ಹಿಂತಿರುಗಿ ಬರುವವರಾಗಿರಲಿಲ್ಲ. ಜೀವನದಲ್ಲಿ ಎಂದಿಗೂ ಮತ್ತೆ ಮದುವೆಯಾಗುವ ಮನಸ್ಥಿತಿ ನನಗಿರಲಿಲ್ಲ. ಹಾಗಾಗಿ ಆ ಮಗುವೊಂದೇ ನನ್ನ ಪಾಲಿನ ಆಸ್ತಿಯಾಗಿತ್ತು. ಆದರೆ ಅದೂ ನನ್ನ ಕೈಬಿಟ್ಟು ಹೋಯಿತು. ನಾನು ತೀರಿಕೊಂಡ ಮಗುವಿಗೆ ಪತ್ರಗಳನ್ನು ಬರೆದೆ. ಪದೇ ಪದೇ ಮಗುವಿನ ಬಳಿ ಕೇಳುತ್ತಿದ್ದೆ, 'ನೀನು ಏಕೆ ಬರಲಿಲ್ಲ? ಅಂತಹ ಕೊರತೆ ನನ್ನಲ್ಲಿ ಏನಿತ್ತು?' ನಂತರ ಮಗುವಿನ ಪರವಾಗಿ ಉತ್ತರವನ್ನೂ ನಾನೇ ಬರೆದೆ. ನನ್ನ ದುಃಖವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಬದಲು ಲೇಖನಿ ಮತ್ತು ಕಾಗದದೊಂದಿಗೆ ಹಂಚಿಕೊಳ್ಳುವುದು ಲೇಸು ಎಂದು ನನಗೆ ಅನಿಸಿತುʼ ಎಂದು ನೋವು ತೋಡಿಕೊಂಡಿದ್ದಾರೆ.
ಸಾಯುವ ಹೊತ್ತಿನಲ್ಲಿ ಪಶ್ಚಾತ್ತಾಪ
ಸಾವಿನ ಹೊಸ್ತಿಲಲ್ಲಿದ್ದಾಗ ಓಂಪುರಿ ಸೀಮಾ ಅವರಿಗೆ ಫೋನ್ ಮಾಡುತ್ತಾರೆ. ಬಹಳ ಭಾವನಾತ್ಮಕವಾಗಿ ಮಾತನಾಡುತ್ತಾರೆ. ʼನನಗೆ ನಾಳೆ ಆಪರೇಷನ್ ಇದೆ. ನಾನು ಬದುಕುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ನಿನ್ನಲ್ಲಿ ಕ್ಷಮೆ ಕೇಳಲು ಬಯಸುತ್ತೇನೆ. ಅವರೊಳಗೆ ನನ್ನ ಬಗ್ಗೆ ಪ್ರೀತಿ ಇತ್ತು. ನನ್ನ ವಿಚಾರದಲ್ಲಿ ತಾನು ತಪ್ಪು ಮಾಡಿದೆ ಎಂಬುದು ಅವರನ್ನು ಒಳಗೊಳಗೇ ಕಾಡುತ್ತಿತ್ತು. ಅದಕ್ಕಾಗಿಯೇ ಅವರು ನನ್ನನ್ನು ವಾಪಾಸ್ ಕರೆಸಿಕೊಂಡರು, ನನ್ನ ಹೃದಯ ಒಡೆದಿದ್ದರೂ ಓಂಪುರಿ ನನಗೆ ಆಪ್ತರೇʼ ಎಂದು ಸೀಮಾ ಹೇಳಿದ್ದಾರೆ.
(ಬರಹ: ಭವಾನಿ ಭಟ್)














Click it and Unblock the Notifications