ಸುನಂದಾ ಪುಷ್ಕರ್ ಸಾವು: ಚಾರ್ಜ್ಷೀಟ್ನಲ್ಲಿ ಶಶಿ ತರೂರ್ ವಿರುದ್ಧ ಆರೋಪ
ನವದೆಹಲಿ, ಮೇ 14: ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ದೆಹಲಿ ಪೊಲೀಸರು ನಾಲ್ಕು ವರ್ಷದ ಬಳಿಕ ಚಾರ್ಜ್ಷೀಟ್ ಸಲ್ಲಿಸಿದ್ದು, ಅವರ ಪತಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿದೆ.
ಪಾಟಿಯಾಲ ಹೌಸ್ ಕೋರ್ಟ್ನ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದರ್ ಸಿಂಗ್ ಅವರಿಗೆ ಚಾರ್ಜ್ಷೀಟ್ಅನ್ನು ಸಲ್ಲಿಸಲಾಗಿದೆ. ಸುನಂದಾ ಪುಷ್ಕರ್ ಅವರದು ಆತ್ಮಹತ್ಯೆಯೇ ವಿನಾ, ಕೊಲೆಯಲ್ಲ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೊಲೀಸರು ತಮ್ಮ ಅಂತಿಮ ವರದಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ಮತ್ತು 498ಎ ಅಡಿಯಲ್ಲಿ ಶಶಿ ತರೂರ್ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಪತ್ನಿ ಮೇಲಿನ ಕ್ರೌರ್ಯದ ಆರೋಪಗಳನ್ನು ಹೊರಿಸಿದ್ದಾರೆ. ತರೂರ್ ಅವರನ್ನು ಶಂಕಿತ ಎಂದು ಎರಡನೆಯ ಕಾಲಂನಲ್ಲಿ ನಮೂದಿಸಲಾಗಿದೆ.

ಮೇ 24ರಂದು ಕೋರ್ಟ್ ಚಾರ್ಜ್ಷೀಟ್ ಸಂಬಂಧ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ತರೂರ್ ಅವರಿಗೆ ಸಮನ್ಸ್ ನೀಡುವ ಸಂಬಂಧ ದೆಹಲಿ ಪೊಲೀಸರು ಮನವಿ ಸಲ್ಲಿಸಲಿದ್ದಾರೆ. ಪ್ರಕರಣದಲ್ಲಿ ತರೂರ್ ಅವರನ್ನು ಶಂಕಿತ ಎಂದು ಕೋರ್ಟ್ ಪರಿಗಣಿಸಿದರೆ ಮಾತ್ರ ಅವರ ವಿರುದ್ಧ ಕಾನೂನಾತ್ಮಕ ಪ್ರಕ್ರಿಯೆನ ನಡೆಸಲು ಸಮನ್ಸ್ ನೀಡಬಹುದಾಗಿದೆ.
ಸುನಂದಾ ಪುಷ್ಕರ್ ಅವರು 2014ರ ಜನವರಿ 17ರಂದು ದಕ್ಷಿಣ ದೆಹಲಿಯ ಲೀಲಾ ಹೋಟೆಲ್ನ 345ನೇ ರೂಮ್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಐಪಿಸಿ ಸೆಕ್ಷನ್ 302ರ ಅಡಿ ಪ್ರಕರಣ ದಾಖಲಾಗಿತ್ತು.












Click it and Unblock the Notifications