ರೈಲು ಟಿಕೆಟ್ ಕನ್ಫರ್ಮ್ ಆದರೂ ಸೀಟ್ ಇಲ್ಲ; ಭಾರತೀಯ ರೈಲ್ವೆ ಇಲಾಖೆಗೆ ಕೋರ್ಟ್ ದಂಡ
ದೃಢೀಕೃತ ಮೀಸಲಾಗಿರುವ ಟಿಕೆಟ್ ಹೊಂದಿದ್ದರೂ ಪ್ರಯಾಣಿಕರಿಗೆ ಮೀಸಲಾದ ಆಸನಗಳನ್ನು ನೀಡದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಗೆ ಬಿಹಾರದ ಗ್ರಾಹಕ ನ್ಯಾಯಾಲಯವು ದಂಡ ವಿಧಿಸಿದೆ. ಪ್ರಯಾಣದ ವೇಳೆ ಆಸನ ಸಿಗದೆ ನಿಂತುಕೊಂಡೇ ಪ್ರಯಾಣಿಸಬೇಕಾದ ನಾಲ್ವರು ಪ್ರಯಾಣಿಕರ ಪರವಾಗಿ ತೀರ್ಪು ನೀಡಿರುವ ನ್ಯಾಯಾಲಯ, ರೈಲ್ವೇ ಇಲಾಖೆ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ.
ವರದಿಗಳ ಪ್ರಕಾರ, ಈ ಘಟನೆ ಲೋಕಮಾನ್ಯ ತಿಲಕ್ ಟರ್ಮಿನಸ್ ಪಾಟ್ನಾ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದ್ದು, ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ವಿಂಧ್ಯಾಚಲ್ನಿಂದ ಬಿಹಾರದ ಆರಾಗೆ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಯಾಣಿಕರು ದೂರು ದಾಖಲಿಸಿದ್ದರು. ರೈಲು ಹತ್ತಿದಾಗ ತಮ್ಮ ಹೆಸರಿನಲ್ಲಿ ಕಾಯ್ದಿರಿಸಿದ್ದ ಬೋಗಿಗಳಲ್ಲಿ ರೈಲ್ವೇ ಸಿಬ್ಬಂದಿಯೇ ಕುಳಿತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಪ್ರಯಾಣಿಕರು ಹಲವಾರು ಬಾರಿ ಮನವಿ ಮಾಡಿದರೂ ಸಿಬ್ಬಂದಿ ಆಸನಗಳನ್ನು ಬಿಟ್ಟು ಕೂಡಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪರಿಣಾಮವಾಗಿ, ದೃಢೀಕೃತ ಟಿಕೆಟ್ ಇದ್ದರೂ ಅವರು ಸಂಪೂರ್ಣ ಪ್ರಯಾಣವನ್ನು ನಿಂತುಕೊಂಡೇ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.
ನಂತರ ಈ ನಾಲ್ವರು ಪ್ರಯಾಣಿಕರು ಭೋಜ್ಪುರ ಜಿಲ್ಲೆ ಗ್ರಾಹಕ ವಿವಾದ ಪರಿಹಾರ ಆಯೋಗದ ಮೊರೆ ಹೋಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಪ್ರಯಾಣಿಕರ ಪರವಾಗಿ ತೀರ್ಪು ನೀಡಿದೆ. ಆಯೋಗದ ಅಧ್ಯಕ್ಷ ಕೃಷ್ಣ ಪ್ರತಾಪ್ ಸಿಂಗ್ ಹಾಗೂ ಸದಸ್ಯ ಕಮಲ್ ಕಿಶೋರ್ ಸಿಂಗ್ ಒಳಗೊಂಡ ಪೀಠವು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿ ರೈಲ್ವೇ ಸೇವೆಯಲ್ಲಿ ಲೋಪವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಾಲಯವು ಉತ್ತರ ಮಧ್ಯ ರೈಲ್ವೇ ಮತ್ತು ರೈಲ್ವೇ ಸಚಿವಾಲಯಕ್ಕೆ ಟಿಕೆಟ್ ಬುಕ್ಕಿಂಗ್ ಮೊತ್ತವಾದ ₹1,876.80 ಅನ್ನು ವಾರ್ಷಿಕ 8 ಶೇಕಡಾ ರಷ್ಟು ಬಡ್ಡಿಯೊಂದಿಗೆ ಮರುಪಾವತಿಸಲು ಆದೇಶಿಸಿದೆ. ಜೊತೆಗೆ ಮಾನಸಿಕ, ದೈಹಿಕ ಮತ್ತು ಆರ್ಥಿಕ ಕಿರುಕುಳಕ್ಕೆ ಪರಿಹಾರವಾಗಿ ₹20,000 ಹಾಗೂ ನ್ಯಾಯಾಂಗ ವೆಚ್ಚಕ್ಕಾಗಿ ₹15,000 ಪಾವತಿಸಬೇಕು ಎಂದು ಸೂಚಿಸಿದೆ.
ಆದೇಶದ ಪ್ರಕಾರ, 60 ದಿನಗಳೊಳಗೆ ಪರಿಹಾರ ಮೊತ್ತವನ್ನು ಪಾವತಿಸದಿದ್ದರೆ, ಪ್ರಯಾಣಿಕರು ಕಾನೂನು ಪ್ರಕ್ರಿಯೆಯ ಮೂಲಕ ಹಣವನ್ನು ವಸೂಲಿ ಮಾಡಬಹುದು. ಆ ಸಂದರ್ಭದಲ್ಲಿ ವಾರ್ಷಿಕ ಶೇ 10 ರಷ್ಟು ಬಡ್ಡಿಯೂ ಅನ್ವಯವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಯಾಣದ ವೇಳೆ ತಾವು ರೈಲ್ವೆ ಸಹಾಯವಾಣಿ, ರೈಲ್ವೇ ಸೇವಾ ಪೋರ್ಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ದೂರು ಸಲ್ಲಿಸಿದ್ದೇವೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ದೂರು ದಾಖಲಾದ ಬಗ್ಗೆ SMS ಮೂಲಕ ಮಾಹಿತಿ ಬಂದಿದ್ದರೂ, ತಕ್ಷಣದ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ, ಬಕ್ಸರ್ ನಿಲ್ದಾಣದಲ್ಲಿ ಟಿಟಿಇಗೆ ಸಮಸ್ಯೆ ತಿಳಿಸಿದಾಗ, ರೈಲಿನಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ "ಹೇಗಾದರೂ ಹೊಂದಿಕೊಂಡು ಪ್ರಯಾಣಿಸಿ" ಎಂದು ಉತ್ತರ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಚಾರಣೆ ವೇಳೆ ರೈಲ್ವೇ ಇಲಾಖೆ, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದ್ದು, ಸರ್ಕಾರಿ ರೈಲ್ವೇ ಪೊಲೀಸ್ (GRP) ವ್ಯಾಪ್ತಿಗೆ ಬರುತ್ತದೆ ಎಂದು ವಾದಿಸಿತು. ಅಲ್ಲದೆ ತಮ್ಮ ಸೇವೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಹೇಳಿತ್ತು.
ಆದರೆ ಟಿಕೆಟ್ಗಳು, ದೂರು ದಾಖಲೆಗಳು, ಸಂದೇಶಗಳು ಹಾಗೂ ಪ್ರಯಾಣಿಕರು ಸಲ್ಲಿಸಿದ ಫೋಟೋಗಳನ್ನು ಪರಿಶೀಲಿಸಿದ ಬಳಿಕ, ಅವರಿಗೆ ಮೀಸಲಾದ ಆಸನಗಳನ್ನು ವಾಸ್ತವವಾಗಿ ನಿರಾಕರಿಸಲಾಗಿತ್ತು ಎಂಬುದನ್ನು ಆಯೋಗ ದೃಢಪಡಿಸಿದೆ. ಇದರಿಂದ ಪ್ರಯಾಣಿಕರ ಹಕ್ಕು ಉಲ್ಲಂಘನೆಯಾಗಿದ್ದು, ರೈಲ್ವೆ ಇಲಾಖೆ ಹೊಣೆಗಾರಿಕೆ ವಹಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಕರ್ನಾಟಕದಲ್ಲಿಯೂ ರೈಲ್ವೆ ಸೇವೆಗಳ ಬಗ್ಗೆ ದೂರುಗಳು ಹೊಸದೇನಲ್ಲ. ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರಿನ ಕೆಎಸ್ಆರ್ ಬೆಂಗಳೂರು, ಯಶವಂತಪುರ ಹಾಗೂ ಹುಬ್ಬಳ್ಳಿ ವಿಭಾಗಗಳಲ್ಲಿ ಮೀಸಲು ಟಿಕೆಟ್ ಇದ್ದರೂ ಆಸನ ಸಿಗದಿರುವುದು, ಬೋಗಿಗಳಲ್ಲಿನ ಅತಿಯಾದ ಜನಸಂದಣಿ ಹಾಗೂ ಟಿಟಿಇಗಳ ಸ್ಪಂದನೆ ಕೊರತೆ ಕುರಿತು ಪ್ರಯಾಣಿಕರು ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಹಬ್ಬದ ಸಂದರ್ಭಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಸಂಚರಿಸುವ ಜನಪ್ರಿಯ ರೈಲುಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.














Click it and Unblock the Notifications