ಮಕ್ಕಳಿಗಾಗಿ ಆಫೀಸ್ನಲ್ಲಿ ಉಳಿದ ಬಿಸ್ಕತ್ ತಂದ ತಂದೆಗೆ 'ಭ್ರಷ್ಟ' ಪಟ್ಟ: ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಜವಾನ!
ಪ್ರತಿಯೊಬ್ಬ ಮನುಷ್ಯನಲ್ಲೂ ಹಸಿವು ಇದ್ದೇ ಇರುತ್ತದೆ. ಆದರೆ ಮಾತ್ರ ಅದರ ಸ್ವರೂಪ ಮಾತ್ರ ಬೇರೆ ಇರುತ್ತದೆ. ಕೆಲವರಿಗೆ ಇದು ಉನ್ನತ ಹುದ್ದೆಗೇರುವ ಯಶಸ್ಸಿನ ಹಸಿವಾದರೆ, ದಿನದ ತುತ್ತು ಅನ್ನಕ್ಕಾಗಿ ಪರಿತಪಿಸುವವರ ಹಸಿವು ಇನ್ನೊಂದು. ನಾವೆಲ್ಲರೂ ಬಡ್ತಿ, ಉತ್ತಮ ಸಂಬಳ ಮತ್ತು ದೊಡ್ಡ ಕನಸುಗಳ ಹಿಂದೆ ಓಡುತ್ತಿದ್ದರೆ, ತಮ್ಮ ಮಕ್ಕಳಿಗಾಗಿ ಮನೆಗೆ ಏನಾದರೂ ತೆಗೆದುಕೊಂಡು ಹೋಗಬಹುದೇ ಎಂದು ಯೋಚಿಸುವ ಅಸಹಾಯಕರು ನಮ್ಮ ಸುತ್ತಮುತ್ತಲೂ ಇದ್ದಾರೆ.
ಇಂತಹ ಒಂದು ಮನಮಿಡಿಯುವ ಹಾಗೂ ಆಡಳಿತ ವ್ಯವಸ್ಥೆಯ ಅಮಾನವೀಯತೆಯನ್ನು ಬಿಚ್ಚಿಡುವ ಘಟನೆಯೊಂದು ಜಾರ್ಖಂಡ್ನ ಬೊಕಾರೊದಲ್ಲಿ ನಡೆದಿದೆ. ಇದು ಕೇವಲ ಒಂದು ಕಚೇರಿಯ ಕಥೆಯಲ್ಲ, ಬದಲಾಗಿ ನಮ್ಮ ಸಮಾಜದಲ್ಲಿ ದಿನೇ ದಿನೇ ಕಣ್ಮರೆಯಾಗುತ್ತಿರುವ ಮಾನವೀಯತೆಗೆ ಹಿಡಿದ .

ಜಾರ್ಖಂಡ್ ಬೊಕಾರೊದಲ್ಲಿ ನಡೆದ ಘಟನೆ
ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜವಾನನೊಬ್ಬ ಅಧಿಕಾರಿಗಳು ಸಭೆಯಲ್ಲಿ ತಿಂದು ಬಿಟ್ಟಿದ್ದ ಬಿಸ್ಕೇಟ್ಗಳನ್ನು ತನ್ನ ಮಕ್ಕಳಿಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದನು. ಇದೇ ಆತ ಮಾಡಿದ ಬಹುದೊಡ್ಡ ತಪ್ಪು! ಈ ಸಣ್ಣ ಘಟನೆಯನ್ನು ಅಲ್ಲಿನ ಅಧಿಕಾರಿಗಳು 'ಗಂಭೀರ ಭ್ರಷ್ಟಾಚಾರ' ಎಂದು ಪರಿಗಣಿಸಿ, ಆ ಬಡ ಜವಾನನನ್ನು ಕೆಲಸದಿಂದಲೇ ವಜಾಗೊಳಿಸಿದ್ದಾರೆ.
ಪ್ರತಿದಿನ ಕಚೇರಿಯಲ್ಲಿ ಗುಡಿಸಿ, ಸಾರಿಸಿ, ಅಧಿಕಾರಿಗಳಿಗೆ ನೀರು ಕೊಟ್ಟು ಸೇವೆ ಮಾಡುವ ಜವಾನನಿಗೆ ತಿಂಗಳ ಕೊನೆಯಲ್ಲಿ ಸಿಗುವ ಸಂಬಳ ತುಂಬ ಕಡಿಮೆ. ಕೇವಲ ಕೆಲವು ಬಿಸ್ಕೇಟ್ಗಳಿಗಾಗಿ ಒಬ್ಬ ವ್ಯಕ್ತಿಯ ಉದ್ಯೋಗವನ್ನೇ ಹಾಗೂ ಆತನ ಕುಟುಂಬದ ಅನ್ನವನ್ನೇ ಕಸಿದುಕೊಂಡಿರುವುದು ಈ ವ್ಯವಸ್ಥೆಯ ಕಟು ವಾಸ್ತವವನ್ನು ಎತ್ತಿ ತೋರಿಸುತ್ತದೆ.
ಕೋಟ್ಯಂತರ ರೂಪಾಯಿ ಲಂಚ ಪಡೆಯುವ, ದೊಡ್ಡ ಮಟ್ಟದ ಭ್ರಷ್ಟಾಚಾರ ಮಾಡುವವರು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿರುವಾಗ, ಮಕ್ಕಳ ಹಸಿವು ನೀಗಿಸಲು ಉಳಿದ ಬಿಸ್ಕೇಟ್ ತೆಗೆದುಕೊಂಡು ಹೋದವನು ಇವರ ಕಣ್ಣಿಗೆ ದೊಡ್ಡ ಅಪರಾಧಿಯಾಗಿ ಕಂಡಿದ್ದಾನೆ.
ಹಸಿವು, ಘನತೆ ಮತ್ತು ಮಾನವೀಯತೆಯ ಕೊರತೆ
ಬದುಕು ಎಲ್ಲರಿಗೂ ಒಂದೇ ತರಹದ ಅವಕಾಶಗಳನ್ನು ನೀಡಿರುವುದಿಲ್ಲ. ಬಹುಶಃ ಈ ಪ್ರಪಂಚದ ಅತಿ ದೊಡ್ಡ ಸೌಭಾಗ್ಯ ಎಂದರೆ, ಬದುಕು ಮತ್ತು ಘನತೆಯ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಾರದಿರುವುದು. ನಮ್ಮ ಜೊತೆ ಕೆಲಸ ಮಾಡುವವರನ್ನು, ಕೆಳಹಂತದ ಕಾರ್ಮಿಕರನ್ನು ಕೇವಲ ಅವರ ಹುದ್ದೆಯಿಂದ ಅಥವಾ ಅವರು ಮಾಡುವ ಕೆಲಸದಿಂದ ಅಳೆಯುವುದನ್ನು ಬಿಟ್ಟು, ಆತನೂ ಒಬ್ಬ ತಂದೆ, ಆತನಿಗೂ ಒಂದು ಕುಟುಂಬವಿದೆ ಎಂದು ನೋಡಲು ಆರಂಭಿಸಿದಾಗ ಮಾತ್ರ ಈ ಜಗತ್ತು ಸ್ವಲ್ಪ ಖುಷಿಯಿಂದ ಕೂಡಿರಲು ಸಾಧ್ಯ.
ಸಹಾನುಭೂತಿ ಅಥವಾ ಮಾನವೀಯತೆ ತೋರಿಸಲು ನಾವೇನು ಯಾರಿಗೂ ಹಣ ಕೊಡಬೇಕಾಗಿಲ್ಲ. ಅದು ಸಂಪೂರ್ಣ ಉಚಿತ. ಆದರೆ, ಅದೇ ಮಾನವೀಯತೆಯ ಕೊರತೆಯಿಂದಾಗಿ ಒಬ್ಬ ಬಡ ಜವಾನ ಇಂದು ಬೀದಿಗೆ ಬಿದ್ದಿದ್ದಾನೆ. ಇಂತಹ ಘಟನೆಗಳು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ
ಈ ಘಟನೆಯು ಲಿಂಕ್ಡ್ಇನ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜನಸಾಮಾನ್ಯರು ಅಧಿಕಾರಿಗಳ ಈ ಕಠಿಣ ಹಾಗೂ ಅಮಾನವೀಯ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ವೈರಲ್ ಆಗಿರುವ ಪೋಸ್ಟ್ವೊಂದಕ್ಕೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, "ಇಂದಿನ ಸಮಾಜದಲ್ಲಿ ಕೆಲವರು ತಿಂದ ಮೇಲೆ ಉಳಿದ ಆಹಾರವನ್ನು ಕೇವಲ ಕಸ ಎಂದು ಭಾವಿಸಿದರೆ, ಇನ್ನು ಕೆಲವರು ಅದೇ ಕಸದಲ್ಲಿ ತಮ್ಮ ಮುಂದಿನ ಊಟವನ್ನು ಹುಡುಕುತ್ತಿರುತ್ತಾರೆ. ಬಾಲ್ಯದಿಂದಲೇ ಅನ್ನವನ್ನು ಗೌರವಿಸಲು ಮತ್ತು ಸಾಧ್ಯವಾದರೆ ಹಂಚಿ ತಿನ್ನಲು ನಮ್ಮ ಪೋಷಕರು ಕಲಿಸಿದ್ದಾರೆ," ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು ಇಂದಿನ ಸರ್ಕಾರದ ಹಾಗೂ ಸಮಾಜದ ವ್ಯವಸ್ಥೆಯ ಬಗ್ಗೆ ನೇರವಾಗಿ ಕಿಡಿಕಾರುತ್ತಾ, "ಅಧಿಕಾರಿಗಳು ಬಿಟ್ಟಿದ್ದ ಉಳಿದ ಆಹಾರವನ್ನು ಮನೆಗೆ ಕೊಂಡೊಯ್ಯುವುದು ಗಂಭೀರ ಭ್ರಷ್ಟಾಚಾರವಾಗುತ್ತದೆ. ಆದರೆ, ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಜನರ ಹಣವನ್ನು ಲಂಚದ ರೂಪದಲ್ಲಿ ಕದಿಯುವುದು ಮಾತ್ರ ಎಲ್ಲರಿಗೂ ಸ್ವೀಕಾರಾರ್ಹವಾಗಿದೆ. ಇದು ಎಂಥಾ ನ್ಯಾಯ?" ಎಂದು ವ್ಯವಸ್ಥೆಯನ್ನು ಅಣಕಿಸಿದ್ದಾರೆ.
"ತಂದೆಯ ಪ್ರೀತಿ ಅನಂತವಾದದ್ದು ಮತ್ತು ಅದಕ್ಕೆ ಯಾವುದೇ ಕೊನೆಯಿಲ್ಲ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಬಡವನ ಹೊಟ್ಟೆಯ ಹಸಿವು ಮತ್ತು ಆತನ ಮಕ್ಕಳ ಮೇಲಿನ ಕಾಳಜಿ, ಅಧಿಕಾರಶಾಹಿ ವ್ಯವಸ್ಥೆಯ ಕಣ್ಣಿಗೆ ಭ್ರಷ್ಟಾಚಾರವಾಗಿ ಕಂಡಿರುವುದು ನಿಜಕ್ಕೂ ದುರಂತ.












Click it and Unblock the Notifications