ಅರುಣಾಚಲ ಪ್ರದೇಶಕ್ಕೆ ಚೀನಾ ಸೇನೆ ನುಗ್ಗಿದೆಯೇ, ವೈರಲ್ ವರದಿಗಳ ಬಗ್ಗೆ ಭಾರತೀಯ ಸೇನೆ ಹೇಳಿದ್ದೇನು
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಅರುಣಾಚಲ ಪ್ರದೇಶದ ಭಾರತೀಯ ಗಡಿ ಪ್ರದೇಶಕ್ಕೆ ನುಗ್ಗಿ ಹೊಸ ಸೇನಾ ಶಿಬಿರಗಳನ್ನು ಸ್ಥಾಪಿಸಿದೆ ಎಂಬ ವರದಿಗಳನ್ನು ಭಾರತೀಯ ಸೇನೆ ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ರೀತಿಯ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ. ಚೀನಾದ ಸೇನೆ ಭಾರತೀಯ ಗಡಿ ಪ್ರದೇಶಕ್ಕೆ ನುಗ್ಗಿದೆ ಎಂಬ ವರದಿಗಳು ಸಂಪೂರ್ಣವಾಗಿ ಆಧಾರ ರಹಿತವಾಗಿದೆ. ಅಲ್ಲದೆ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯ ಟಕ್ಸಿಂಗ್ ಪ್ರದೇಶದ ಸ್ಥಳೀಯ ಸಾಮಾಜಿಕ ಸಂಘಟನೆಯಾದ 'ನಾಹ್ ವೆಲ್ಫೇರ್ ಸೊಸೈಟಿ' (NWS) ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿ ಪತ್ರದ ಹಿನ್ನೆಲೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಕಳೆದ ಹಲವು ದಶಕಗಳಿಂದ ಚೀನಾದ ಸೇನೆ ಗಡಿ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹಂತ -ಹಂತವಾಗಿ ವಿಸ್ತರಿಸುತ್ತಿದೆ. ಅಲ್ಲದೆ ಸ್ಥಳೀಯರು ಜಾನುವಾರು ಮೇಯಿಸಲು ಹಾಗೂ ಅರಣ್ಯದಿಂದ ಕಟ್ಟಿಗೆಗಳನ್ನು ಸಂಗ್ರಹಿಸಲು ಬಳಸುತ್ತಿದ್ದ ಸಾಂಪ್ರದಾಯಿಕ ಪ್ರದೇಶಗಳನ್ನು ಅತಿಕ್ರಮಿಸುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

2020ರಿಂದ ಚೀನಾ ಸೇನೆಯು ಐದು ಪ್ರಮುಖ ಗಡಿ ಪ್ರದೇಶಗಳಲ್ಲಿ, ವಿಶೇಷವಾಗಿ ಓಯಿಂಗ್ ಮತ್ತು ಚುಜಾರ್ತಾ ಪ್ರದೇಶಗಳಲ್ಲಿನ ಪನಿಯಾರ್, ಮಾರ್ಪನ್, ಪೊಟ್ರಾಂಗ್ ಸರೋವರ ಮತ್ತು ಟಿಂಗ್ಟಿಂಗ್ಟಾಂಗ್ಗಳಲ್ಲಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣದ ಜೊತೆಗೆ ಮಿಲಿಟರಿ ನೆಲೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸ್ಥಳೀಯ ಸಂಸ್ಥೆ ತಿಳಿಸಿದೆ. ಆದಾಗ್ಯೂ, ಒಳನುಗ್ಗುವಿಕೆಯ ವರದಿಗಳನ್ನು ತಳ್ಳಿಹಾಕಿರುವ ಭಾರತೀಯ ಸೇನೆಯು, ಗಡಿಯಲ್ಲಿ ಯಾವುದೇ ಅತಿಕ್ರಮಣ ನಿರ್ಮಾಣಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ದೇಶದ ಗಡಿಗಳನ್ನು ಯಶಸ್ವಿಯಾಗಿ ರಕ್ಷಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಬೀಜಿಂಗ್ನಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯವಹಾರಗಳ ಸಮಾಲೋಚನಾ ಸಮನ್ವಯ ಸಮಿತಿ (ಡಬ್ಲ್ಯೂಎಂಸಿಸಿ) 35ನೇ ಸಭೆಯ ಕೆಲವೇ ದಿನಗಳ ನಂತರ ಈ ಆರೋಪಗಳು ಮುನ್ನೆಲೆಗೆ ಬಂದಿರುವುದು ಗಮನಾರ್ಹ. ಈ ರಾಜತಾಂತ್ರಿಕ ಮಾತುಕತೆಗಳ ಸಮಯದಲ್ಲಿ, ಎರಡೂ ದೇಶಗಳ ಪ್ರತಿನಿಧಿಗಳು ಗಡಿಗಳಲ್ಲಿ ಶಾಂತಿ ಸ್ಥಾಪಿಸುವುದು ಮತ್ತು ದ್ವಿಪಕ್ಷೀಯ ಸಂಬಂಧಗಳ ಪುನಃಸ್ಥಾಪನೆಯ ಬಗ್ಗೆ ಸಕಾರಾತ್ಮಕ ಚರ್ಚೆಗಳನ್ನು ನಡೆಸಿದರು. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಗಡಿಗಳಲ್ಲಿ ಶಾಂತಿ ಮತ್ತು ಭದ್ರತೆಯನ್ನು ಮೇಲ್ವಿಚಾರಣೆ ಮಾಡಲು ಎರಡೂ ಕಡೆಯ ಸೇನೆಯು ಈ ವಿಚಾರದಲ್ಲಿ ಸಹಮತಕ್ಕೆ ಬಂದಿವೆ ಎಂದು ರಕ್ಷಣಾ ಮೂಲಗಳು ಖಚಿತಪಡಿಸಿವೆ.
ಗಡಿ ಭದ್ರತೆಯ ಬಗ್ಗೆ ಸ್ಥಳೀಯ ಜನರು ವ್ಯಕ್ತಪಡಿಸಿದ ಕಳವಳಗಳನ್ನು ಗಣನೆಗೆ ತೆಗೆದುಕೊಂಡು, ಭಾರತೀಯ ಸೇನೆಯು ಎಲ್ಎಸಿ ಉದ್ದಕ್ಕೂ ಹೆಚ್ಚಿನ ಎಚ್ಚರಿಕೆ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅಹಿತಕರ ಚಲನೆಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲು ಗಡಿಯಲ್ಲಿ ನಿರಂತರ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಮತ್ತು ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸೇನೆಯು ಯಾವಾಗಲೂ ಸಿದ್ಧವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications