2000 ಕೋಟಿ ರೂ ಪ್ಯಾಕೇಜ್ನಲ್ಲಿ ಬಿಜೆಪಿ ಶಾಸಕರಿಗೆ ಅನ್ಯಾಯ? ಡಿಕೆ ಶಿವಕುಮಾರ್ ವಿರುದ್ಧ ವಿಪಕ್ಷ ನಾಯಕ ಕಿಡಿ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಹಾಗೂ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಅಡಿಯಲ್ಲಿ 2000 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದರಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ಅತ್ಯಂತ ಕೀಳುಮಟ್ಟದ ಮಲತಾಯಿ ಧೋರಣೆ ಪ್ರದರ್ಶಿಸಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ನಡೆದುಕೊಂಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಕಿಡಿ ಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ನೀವು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಗಳೋ ಅಥವಾ ಕೇವಲ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಸಿಎಂ ಆಗಿದ್ದೀರಾ?. ಬೆಂಗಳೂರಿನ ಮೂಲಸೌಕರ್ಯ ಹಾಗೂ ರಸ್ತೆಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ ಹಣದಲ್ಲಿ ತಾರತಮ್ಯ ನೀತಿ ಅನುಸರಿಸಿದ್ದೇಕೆ ಎಂದರು.

ಕಾಂಗ್ರೆಸ್ ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ
ಸರ್ಕಾರ ತಮ್ಮ ಪಕ್ಷದ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ನೂರಾರು ಕೋಟಿ ರೂಪಾಯಿಗಳ ಭರಪೂರ ಅನುದಾನ ಒದಗಿಸಿದೆ. ಆದರೆ, ಬಿಜೆಪಿ ಶಾಸಕರಿರುವ ರಾಜಧಾನಿಯ 16 ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಬಿಜೆಪಿ ನಾಯಕರಿರುವ ಕ್ಷೇತ್ರಗಳಲ್ಲಿ ಭಿಕ್ಷೆ ನೀಡಿದಂತೆ ಅಭಿವೃದ್ಧಿಗಾಗಿ ಬಿಡಿಗಾಸು ನೀಡಿ ಮಲತಾಯಿ ಧೋರಣೆ ತಾಳಿದೆ ಎಂದು ಅವರು ದೂರಿದರು.
ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನ ಬೆಂಗಳೂರಿಗರು ನಿಮಗೆ ತೆರಿಗೆ ಕಟ್ಟುತ್ತಿಲ್ಲವೇ?. ಅಲ್ಲಿ ವಾಸಿಸುವ ನಾಗರಿಕರಿಗೆ ರಸ್ತೆ, ಮೂಲಸೌಕರ್ಯ ಬೇಡವೇ?. ನಿಮ್ಮ ಈ ಕ್ಷುಲ್ಲಕ ರಾಜಕೀಯ ದ್ವೇಷದ ನಿರ್ಧಾರದಿಂದಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದರು.
ಸರ್ಕಾರದ ಈ ತಾರತಮ್ಯದ ಆಡಳಿತ ಮತ್ತು ದ್ವೇಷದ ರಾಜಕಾರಣವನ್ನು ಬೆಂಗಳೂರಿನ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯಲ್ಲಿ ರಾಜಧಾನಿಯ ಜನತೆ ನಿಮ್ಮ ನಿಲುವು ಮತ್ತು ಪಕ್ಷಪಾತಿ ನಡೆಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ಗೆ 'ಗಾರ್ಬೇಜ್ ಸಿಟಿ' ಮಾಡಿದ ಶ್ರೇಯಸ್ಸು
'ಗಾರ್ಡನ್ ಸಿಟಿ' ಬೆಂಗಳೂರನ್ನು 'ಗಾರ್ಬೇಜ್ ಸಿಟಿ' ಮಾಡಿದ ಮಹಾನ್ ಶ್ರೇಯಸ್ಸು ನಿಮ್ಮ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು. ಬೆಂಗಳೂರಿನ ಮೂಲೆ ಮೂಲೆಯಲ್ಲೂ ಕಸದ ರಾಶಿ ಬಿದ್ದು ಇಡೀ ರಾಜಧಾನಿ ನಾರುತ್ತಿದ್ದರೂ, ನೀವೇನೋ ದೊಡ್ಡ ಸಾಧನೆ ಮಾಡಿರುವಂತೆ ಕೇವಲ ರೀಲ್ಸ್ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಭಾಷಣ ಬಿಗಿಯುತ್ತಾ ಕಾಲ ಕಳೆಯುತ್ತಿದ್ದೀರಿ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ 'ರೀಲ್ಸ್ ಮಂತ್ರಿ' ಹೆಸರಿಸಿ ಆರ್.ಅಶೋಕ್ ದೂರಿದರು.
ಬೆಂಗಳೂರಿನ ಪ್ರಮುಖ ರಸ್ತೆಗಳು, ವಾರ್ಡ್ಗಳು ಹಾಗೂ ನಾಗರಿಕರ ವಸತಿ ಪ್ರದೇಶಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಕೆ.ಆರ್. ಪುರ, ನಾಗಸಂದ್ರ ಮೆಟ್ರೋ ನಿಲ್ದಾಣದ ರಸ್ತೆ, ಲಗ್ಗೆರೆ, ಚೊಕ್ಕಸಂದ್ರ, ಟೆಲಿಕಾಂ ಲೇಔಟ್ ಸೇರಿದಂತೆ ಇಡೀ ನಗರ ಇಂದು ಕಸದ ಸಾಮ್ರಾಜ್ಯವಾಗಿದೆ. ಪ್ರತಿನಿತ್ಯ ಕಸ ವಿಲೇವಾರಿ ಆಗುತ್ತಿದೆ ಎಂದು ಬಿಎಸ್ಡಬ್ಲ್ಯುಎಂಎಲ್ (BSWMAL) ಅಧಿಕಾರಿಗಳು ಕಾಗದದ ಮೇಲೆ ಸುಳ್ಳು ಲೆಕ್ಕ ಬರೆಯುತ್ತಿದ್ದಾರೆ. ಆದರೆ ಬೀದಿಯಲ್ಲಿ ಹಸುಗಳು ಆ ಕಸದ ರಾಶಿಯನ್ನು ಮೇಯುತ್ತಾ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸೃಷ್ಟಿಯಾಗಿದೆ ಎಂದು ಅವರು ತಿಳಿಸಿದರು.
'ಸೋತ ಮಾದರಿ'ಯ ಬೆಂಗಳೂರು
ಈಗ ಹೇಳಿ ರೀಲ್ಸ್ ಮಂತ್ರಿಗಳೇ, ಇತ್ತೀಚೆಗೆ ಬೆಂಗಳೂರನ್ನು ಸೋತ ಮಾದರಿ (Failed Model) ಎಂದು ಕರೆದಿದ್ದರಲ್ಲ ಅದಕ್ಕೆ ಯಾರು ಹೊಣೆ?. ಮೂರು ವರ್ಷ ಬೆಂಗಳೂರಿನ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನಿಕಟಪೂರ್ವ ಬೆಂಗಳೂರು ನಗರಾಭಿವೃದ್ಧಿ ಮಂತ್ರಿ ಹಾಗೂ ಹಾಲಿ ಸಿಎಂ ಡಿಕೆ ಶಿವಕುಮಾರ್ ಅವರೋ ಅಥವಾ ಮಾಜಿ ಸಿಎಂ ಸಿದ್ದರಾಮಯ್ಯ ಇದಕ್ಕೆಲ್ಲ ಹೊಣೆಯೇ ಎಂದು ಕಿಡಿ ಕಾರಿದರು.
ಸರ್ಕಾರದ ಬಾಕಿ ಎರಡು ವರ್ಷವೂ ಹೀಗೆ 'ಸೋತ ಮಾದರಿ' ಎಂದು ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ, ರೀಲ್ಸ್ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತೀರಾ, ಇಲ್ಲವೇ ಸುಧಾರಣೆಗಾಗಿ ಏನಾದರೂ ಕಠಿಣ ಕ್ರಮ ಕೈಗೊಳ್ಳುತ್ತೀರಾ? ಎಂದರು. ಜನ ತೆರಿಗೆ ಕಟ್ಟುತ್ತಿರುವುದು ನಿಮ್ಮ ಬಿಟ್ಟಿ ಪ್ರಚಾರದ ರೀಲ್ಸ್ ನೋಡಲು ಅಲ್ಲ. ಕನಿಷ್ಠ ಮೂಲಸೌಕರ್ಯ ಮತ್ತು ಸ್ವಚ್ಛತೆಯನ್ನು ಪಡೆಯಲು ಎಂದು ಎಚ್ಚರಿಸಿದರು.














Click it and Unblock the Notifications