ಮದರಸಾ ಆರ್ಎಸ್ಎಸ್ ಶಾಖೆಗಳಲ್ಲ; ಓವೈಸಿ ತಿರುಗೇಟು!
ಹೈದರಾಬಾದ್ ಮೇ 24: ಧಾರ್ಮಿಕ ಪ್ರಚೋದನೆಗೆ ಹೆಚ್ಚು ಆದ್ಯತೆ ನೀಡುವ ಮದರಸಾಗಳನ್ನು ಇಲ್ಲದಂತೆ ಮಾಡಬೇಕು, ಅಲ್ಲಿ ಓದಿದವರು ಯಾರು ಡಾಕ್ಟರ್ ಅಥವಾ ಇಂಜಿಯರ್ ಆಗುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿಕೆಗೆ ಓವೈಸಿ ತಿರುಗೇಟು ನೀಡಿದರು.
ಎಐಎಂಐಎಂ ಅಧ್ಯಕ್ಷ ಅಸಾವುದ್ದೀನ್ ಓವೈಸಿ, "ಇಸ್ಲಾಮ್ ಧಾರ್ಮಿಕ ಶಿಕ್ಷಣ ನೀಡುವ ಮದರಸಾಗಳು ಆರ್ಎಸ್ಎಸ್ ಶಾಖೆಗಳಂತಲ್ಲ, ಅಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮತ್ತು ಸಹಾನುಭೂತಿ ತುಂಬಲಾಗುತ್ತದೆ. ಅಲ್ಲಿಯೂ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತವನ್ನು ಹೇಳಿಕೊಡಲಾಗುತ್ತದೆ" ಎಂದರು.
ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ದೆಹಲಿಯಲ್ಲಿ ಮೇ 22 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿಸ್ವಾ ಶರ್ಮಾ, "ಮದರಸಾ ಎಂಬ ಪದ ಕಣ್ಮರೆಯಾಗಬೇಕು. ಅವು ಔಪಚಾರಿಕ ಶಿಕ್ಷಣಕ್ಕಿಂತ ಧಾರ್ಮಿಕ ಪ್ರಚೋದನೆಗೆ ಹೆಚ್ಚು ಆದ್ಯತೆ ನೀಡುತ್ತವೆ. ಅವುಗಳ ಅಸ್ತಿತ್ವವನ್ನು ನಾನೂ ಎಂದಿಗೂ ವಿರೋಧಿಸುತ್ತೇನೆ. ಅವರು ಬೇಕಾದರೆ ಮನೆಯಲ್ಲಿ ಖುರಾನ್ ಕಲಿಸಿ. ಆದರೆ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತವನ್ನು ಸೇರಿದಂತೆ ಎಲ್ಲಾ ವಿಷಯಗಳನ್ನು ಕಲಿಸಬೇಕು" ಎಂದು ಹೇಳಿದ್ದರು.
|
ಪ್ರವಾಹದಿಂದ ಸಂಕಷ್ಟದಲ್ಲಿರುವವರ ಕಡೆ ಗಮನನೀಡಿ
ಬಿಸ್ವಾ ಶರ್ಮಾ ಮಾತನಾಡಿರುವ ವಿಡಿಯೋ ಶೇರ್ ಆಗಿದ್ದ ಟ್ವೀಟ್ಗೆ ಪ್ರಕ್ರಿಕ್ರಿಯಿಸಿರುವ ಓವೈಸಿ, ಅಸ್ಸಾಂನಲ್ಲಿ ಪ್ರವಾಹದಿಂದ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 7 ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ಆದರೆ ಅಲ್ಲಿನ ಮುಖ್ಯಮಂತ್ರಿ ದ್ವೇಷ ಭಾಷಣ ಮಾಡುವುದರಲ್ಲಿಯೇ ನಿರತರಾಗಿದ್ದಾರೆ. ಮೊದಲು ಅವರು ಸಂಕಷ್ಟದಲ್ಲಿರುವವರ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮದರಸಾಗಳ ಪ್ರಮುಖ ಪಾತ್ರ
ಶರ್ಮಾ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಎಐಎಂಐಎಂ ಅಧ್ಯಕ್ಷ ಓವೈಸಿ, ಸಂಘ ಪರಿವಾರದವರು ಬ್ರಿಟಿಷ್ ಏಜೆಂಟ್ಗಳ ರೀತಿ ವರ್ತಿಸುತ್ತಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮದರಸಾಗಳು ಮುಂಚೂಣಿಯಲ್ಲಿದ್ದವು. ಹಲವು ಮದರಸಾಗಳಲ್ಲಿ ವಿಜ್ಞಾನ, ಗಣಿತ ಮತ್ತು ಸಮಾಜಶಾಸ್ತ್ರ ಕಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದೇಶದ ಸಂಸ್ಕೃತಿಗೆ ಮುಸ್ಲಿಂಮರ ಕೊಡುಗೆ
ಮದರಸಾಗಳು ಆರ್ಎಸ್ಎಸ್ ಶಾಖೆಗಳಂತೆ ಅಲ್ಲ. ಅಲ್ಲಿ ಆತ್ಮಗೌರವ ಮತ್ತು ಸಹಾನುಭೂತಿಯನ್ನು ಕಲಿಸಲಾಗುತ್ತದೆ. ಈ ಪರಿಕಲ್ಪನೆಗಳು ಅನಕ್ಷರಸ್ತ ಸಂಘಿಗಳಿಗೆ ಅರ್ಥವಾಗುವುದಿಲ್ಲ. ಹಿಂದೂ ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಮದರಸಾದಲ್ಲಿ ಏಕೆ ವಿದ್ಯಾಭ್ಯಾಸ ಮಾಡಿದ್ದರು?. ಮುಸ್ಲಿಂ ಪೂರ್ವಜರ ಮೇಲಿನ ಗೀಳು ನಿಮ್ಮ ಕೀಳರಿಮೆಯನ್ನು ತೋರಿಸುತ್ತದೆ. ಈ ದೇಶದ ಸಂಸ್ಕೃತಿಗೆ ಮುಸ್ಲಿಂಮರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಅದನ್ನು ಮುಂದುವರಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಮದರಸಾಗಳನ್ನು ವಿಸರ್ಜನೆ
2020ರಲ್ಲಿ ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನ ಶಿಕ್ಷಣ ಸಚಿವರಾಗಿದ್ದಾಗ, ಅಸ್ಸಾಂನಲ್ಲಿ ರಾಜ್ಯ ಸರ್ಕಾರದ ಅನುದಾನದಿಂದ ನಡೆಯುತ್ತಿದ್ದ ಎಲ್ಲಾ ಮದರಸಾಗಳನ್ನು ವಿಸರ್ಜಿಸಲಾಗುವುದು ಎಂದು ಹೇಳಿದ್ದರು. ಅದೇ ವರ್ಷ ಸರ್ಕಾರ ಎಲ್ಲಾ ಮದರಾಸಾಗಳನ್ನು ವಿಸರ್ಜಿಸಿ ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಿತ್ತು. ಈ ಸಂಬಂಧ ಅಸ್ಸಾಂ ವಿಧಾನಸಭೆಯು ಹಲವು ಗೊತ್ತುವಳಿಗಳನ್ನು ಅಂಗೀಕರಿಸಿತ್ತು. ಗುವಾಹಟಿ ಹೈಕೋರ್ಟ್ ಕೂಡ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು.