'ಹುಸೇನ್ ಒಬಾಮಾ': ಮೋದಿ ಯುಎಸ್ ಭೇಟಿ ಸಂದರ್ಭದಲ್ಲೇ ಅಸ್ಸಾಂ ಸಿಎಂ ಕಿರಿಕ್- ಬಿಜೆಪಿಗೆ ಮುಜುಗರ
ನವದೆಹಲಿ, ಜೂನ್ 24: ಭಾರತದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಕುರಿತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಾತನಾಡಿದ್ದಾರೆ. ಮೋದಿ ಅಮೆರಿಕ ಭೇಟಿ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಒಬಾಮಾ ಅವರ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬರಾಕ್ ಒಬಾಮಾ ಬದಲಿಗೆ 'ಹುಸೇನ್ ಒಬಾಮಾ' ಎಂದು ಕರೆದಿದ್ದಾರೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಭಾರತದಲ್ಲಿನ ಅನೇಕ 'ಹುಸೇನ್ ಒಬಾಮಾ'ಗಳ ಬಗ್ಗೆ ಅಸ್ಸಾಂ ಪೊಲೀಸರು 'ಕಾಳಜಿ' ವಹಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿದೆ. ಮೋದಿ ಭೇಟಿ ಸಂದರ್ಭದಲ್ಲಿ ಅಸ್ಸಾಂ ಸಿಎಂ ಆಡಿದ ಮಾತುಗಳು ಬಿಜೆಪಿಗೆ ಮುಜುಗರ ತಂದಿದೆ ಎಂದು ಹೇಳಲಾಗುತ್ತಿದೆ.

ಜೂನ್ 22 ರಂದು ಸಿಎನ್ಎನ್ಗೆ ಒಬಾಮಾ ಸಂದರ್ಶನ ನೀಡಿದ್ದರು. ಈ ಕುರಿತು ಪತ್ರಕರ್ತೆ ರೋಹಿಣಿ ಸಿಂಗ್ ಅವರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹಿಮಂತ ಅವರ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ 'ಹುಸೇನ್ ಒಬಾಮಾ' ಎಂದು ಕರೆದಿದ್ದಾರೆ.
ಪ್ರಧಾನಿ ಮೋದಿಯವರ ಯುಎಸ್ ಭೇಟಿ ಸಂದರ್ಭದಲ್ಲಿ ಭಾರತದಲ್ಲಿ ಮುಸ್ಲಿಮರ ಹಕ್ಕು ರಕ್ಷಣೆ ಕುರಿತು ಪ್ರಶ್ನೆ ಮಾಡಲಾಗಿತ್ತು. ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪ್ರಶ್ನೆಗಳು ಎದ್ದಿದ್ದವು. ಆದರೆ, ಮೋದಿ ಅವರು ಇವುಗಳನ್ನು ಅಲ್ಲಗಳೆದಿದ್ದರು. ಭಾರತೀಯರ ರಕ್ತದಲ್ಲಿ ಪ್ರಜಾಪ್ರಭುತ್ವ ಹರಿಯುತ್ತಿದೆ. ಜಾತಿ ಧರ್ಮ, ಲಿಂಗದ ಆಧಾರಿತ ತಾರತಮ್ಯಗಳು ಭಾರತದಲ್ಲಿ ಇಲ್ಲವೆಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪತ್ರಕರ್ತೆ ರೋಹಿಣಿ ಸಿಂಗ್, 'ಭಾವನೆಗೆ ಧಕ್ಕೆ ತಂದಿದ್ದಕ್ಕಾಗಿ ಒಬಾಮಾ ವಿರುದ್ಧ ಗುವಾಹಟಿಯಲ್ಲಿ ಎಫ್ಐಆರ್ ದಾಖಲಾಗಿದೆಯೇ? ಒಬಾಮಾ ಅವರನ್ನು ವಿಮಾನದಿಂದ ಕೆಳಗಿಳಿಸಿ ಅವರನ್ನು ಬಂಧಿಸಲು ಅಸ್ಸಾಂ ಪೊಲೀಸರು ವಾಷಿಂಗ್ಟನ್ಗೆ ತೆರಳುತ್ತಿದ್ದಾರೆಯೇ?' ಎಂದು ಪ್ರಶ್ನಿಸಿದ್ದಾರೆ.

ಮೋದಿ ವಿರುದ್ಧ ಮಾತನಾಡಿದ್ದಕ್ಕಾಗಿ ಅಸ್ಸಾಂ ಪೊಲೀಸರು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ವಿಮಾನ ನಿಲ್ದಾಣದಲ್ಲಿ ಕಳೆದ ತಿಂಗಳು ಬಂಧಿಸಿದ್ದರು. ಮೋದಿಯನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಪದಗಳನ್ನು ಬಳಸಿದ ಆರೋಪದ ಮೇಲೆ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. 2022ರಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೂಡ ಇದೇ ರೀತಿ ಟ್ವೀಟ್ ಮಾಡಿ ಬಂಧನವಾಗಿದ್ದರು.
ರೋಹಿಣಿ ಸಿಂಗ್ ಅವರ ಟ್ವಿಟ್ಗೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಸಿಎಂ, 'ಅಸ್ಸಾಂ ಪೊಲೀಸರು ಭಾರತದಲ್ಲಿರುವ ಹುಸೇನ್ ಒಬಾಮಾರ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರಿಗೆ ಆದ್ಯತೆ ನೀಡುತ್ತಾರೆ' ಎಂದು ಹೇಳಿದ್ದಾರೆ.
'ಭಾರತದಲ್ಲಿಯೇ ಅನೇಕ ಹುಸೇನ್ ಒಬಾಮಾ ಇದ್ದಾರೆ. ವಾಷಿಂಗ್ಟನ್ಗೆ ಹೋಗುವುದನ್ನು ಪರಿಗಣಿಸುವ ಮೊದಲು ನಾವು ಅವರ ಆರೈಕೆಗೆ ಆದ್ಯತೆ ನೀಡಬೇಕು. ಅಸ್ಸಾಂ ಪೊಲೀಸರು ನಮ್ಮ ಆದ್ಯತೆಗಳ ಪ್ರಕಾರ ಕಾರ್ಯನಿರ್ವಹಿಸುತ್ತಾರೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸಾವಿರಾರು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ ಅಸ್ಸಾಂ ಸಿಎಂ ಅವರ 'ಇಸ್ಲಾಮೋಫೋಬಿಯಾ'ದ ಮಾತುಗಳು ತೀವ್ರ ಆಕ್ರೋಶಕ್ಕೆ ಗುರಿಯಾಗಿವೆ.
ಹಿಮಂತ ಅವರು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಮುಖ್ಯಸ್ಥರಾಗಿದ್ದಾರೆ. ಇದು ಭಾರತೀಯ ಜನತಾ ಪಕ್ಷದ ನೇತೃತ್ವದ ಈಶಾನ್ಯ ಪಕ್ಷಗಳ ಒಕ್ಕೂಟವಾಗಿದೆ. ಜನಾಂಗೀಯ ಹಿಂಸಾಚಾರಕ್ಕೆ ಗುರಿಯಾಗಿರುವ ಮಣಿಪುರಕ್ಕೆ ಅವರನ್ನು ಕಳುಹಿಸಲಾಗಿತ್ತು.












Click it and Unblock the Notifications