ಮಾರುತಿರಾವ್ ಆತ್ಮಹತ್ಯೆ; 200 ಕೋಟಿ ಆಸ್ತಿ ವಿವಾದ ಕಾರಣ?
ಹೈದರಾಬಾದ್, ಮಾರ್ಚ್ 10 : ಪ್ರಣಯ್ ಪೆರುಮಲ್ಲಾ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಅವರಿನ್ನು ಆಸ್ತಿ ವಿವಾದ ಕಾಡುತ್ತಿತ್ತಾ? ಎಂಬ ಶಂಕೆ ಹುಟ್ಟಿಕೊಂಡಿದೆ.
ಮಾರುತಿರಾವ್ ಹೈದರಾಬಾದ್ನ ಖೈರತಾಬಾದ್ ಆರ್ಯವೈಶ್ಯ ಭವನದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾನುವಾರ ಬೆಳಗ್ಗೆ ಶವ ಪತ್ತೆಯಾಗಿತ್ತು. ಮಾರುತಿರಾವ್ ಬರೆದ ಡೆತ್ ನೋಟ್ ಸಹ ಪೊಲೀಸರಿಗೆ ಸಿಕ್ಕಿತ್ತು.
ಪ್ರಣಯ್ ಪೆರುಮಲ್ಲಾ ಹತ್ಯೆಗೆ ಸುಪಾರಿ ಕೊಟ್ಟಿದ್ದ ಮಾರುತಿರಾವ್ 200 ಕೋಟಿ ಒಡೆಯ. ಆಸ್ತಿಯ ವಿಚಾರದಲ್ಲಿ ಸಹೋದರ ಸರವಣ ಜೊತೆ ಆಸ್ತಿ ವಿವಾದವಾಗಿತ್ತೆ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾರುತಿರಾವ್ ಆತ್ಮಹತ್ಯೆ ಬಳಿಕ ಪ್ರತಿಕ್ರಿಯೆ ನೀಡಿದ್ದ ಸರವಣ, "ನಮ್ಮ ನಡುವೆ ಆಸ್ತಿ ವಿಚಾರದಲ್ಲಿ ಯಾವುದೇ ವಿವಾದವಿರಲಿಲ್ಲ" ಎಂದು ಹೇಳಿಕೆ ನೀಡಿದ್ದರು. ಸೋಮವಾರ ಮಾರುತಿರಾವ್ ಅಂತ್ಯಕ್ರಿಯೆ ನಡೆದಿದೆ.

ಸೀಮೆಎಣ್ಣೆ ವಿತರಕ
ಆಂಧ್ರಪ್ರದೇಶದ ನಲ್ಗೋಂಡ ಜಿಲ್ಲೆಯ ವಿರ್ಯಾಲಗೂಡು ನಿವಾಸಿ ಮಾರುತಿರಾವ್ ಮೊದಲು ಸೀಮೆಎಣ್ಣೆ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ರೈಸ್ ಮಿಲ್ ತೆರೆದರು, ಅಂತಿಮವಾಗಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಆರಂಭಿಸಿದರು. ಆತ್ಮಹತ್ಯೆಗೆ ಶರಣಾಗುವ ವೇಳೆ ಅವರ ಆಸ್ತಿ 200 ಕೋಟಿ ರೂ.ಗಳು.

ಹೈದರಾಬಾದ್ನಲ್ಲಿ ಆಸ್ತಿ
ಶರಣ್ಯ ಗ್ರೀನ್ ಹೋಮ್ಸ್ ಎಂಬ ಹೆಸರಿನಲ್ಲಿ ಮಾರುತಿರಾವ್ ಹಲವಾರು ವಿಲ್ಲಾಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದಾರೆ. 10 ಎಕರೆ ಜಾಗದಲ್ಲಿ ಅಮೃತಾ ಎಂಬ ಆಸ್ಪತ್ರೆ ಇದೆ. ಪತ್ನಿ ಗಿರಿಜಾ ಹೆಸರಿನಲ್ಲಿ ಮಾರುತಿರಾವ್ ಹೈದರಾಬಾದ್ನಲ್ಲಿ ಹಲವಾರು ವಾಣಿಜ್ಯ ಸಂಕೀರ್ಣವನ್ನು ಹೊಂದಿದ್ದಾರೆ.

ವಿರ್ಯಾಲಗೂಡು ಸುತ್ತ-ಮುತ್ತ ಆಸ್ತಿ
ಮಾರುತಿರಾವ್ ವಿರ್ಯಾಲಗೂಡು ಸುತ್ತ-ಮುತ್ತ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಪ್ರಭಾವಿ ವ್ಯಕ್ತಿಯಾಗಿರುವ ಮಾರುತಿರಾವ್ ವಿಲ್ ಮಾಡಿದ್ದಾರೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಹೋದರ ಸರವಣ ಹೇಳಿಕೆಗಳನ್ನು ಪೊಲೀಸರು ಪಡೆಯುವ ಸಾಧ್ಯತೆ ಇದೆ.

ಅಮೃತಾಳಿಗೂ ಆಸ್ತಿ ಹಂಚಬೇಕಿತ್ತು
ತಮ್ಮ ಆಸ್ತಿಯನ್ನು ಪತ್ನಿ ಗಿರಿಜಾ ಮತ್ತು ಪುತ್ರಿ ಅಮೃತಾಳಿಗೆ ಸಮನಾಗಿ ಹಂಚಲು ಮಾರುತಿರಾವ್ ಬಯಸಿದ್ದರು. ಆದರೆ, ಅಮೃತಾ ಪ್ರಣಯ್ ಪೆರುಮಲ್ಲಾ ವಿವಾಹವಾದ ಬಳಿಕ ಮರ್ಯಾದಾ ಹತ್ಯೆಗೆ ಸುಪಾರಿ ನೀಡಿ ಜೈಲು ಪಾಲಾಗಿದ್ದರು. ಮಾರುತಿರಾವ್ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.












Click it and Unblock the Notifications