ನಾಮಪತ್ರ ವಾಪಸ್ಗೆ ಜೆಡಿಎಸ್ ಅಭ್ಯರ್ಥಿ ಸ್ವಾಮೀಜಿ ಒಪ್ಪಿಗೆ: ಬಿಜೆಪಿಗೆ ನೆಮ್ಮದಿ
Recommended Video
ಹಿರೇಕೆರೂರು, ನವೆಂಬರ್ 20: ಹಿರೇಕೆರೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಮ್ಮ ಉಮೇದುವಾರಿಕೆ ಹಿಂಪಡೆಯಲು ನಿರ್ಧರಿಸಿದ್ದಾರೆ.
ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಮೊದಲು ಉಜಿನೆಪ್ಪ ಕೋಡಿಹಳ್ಳಿ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಭಾನುವಾರ ರಾತ್ರಿ ಅಭ್ಯರ್ಥಿಯನ್ನು ಬದಲಿಸಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಟಿಕೆಟ್ ನೀಡಿ ಅಚ್ಚರಿ ನೀಡಿತ್ತು. ಸ್ವಾಮೀಜಿಗಳ ಸ್ಪರ್ಧೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ಅವರ ಭಕ್ತ ವರ್ಗದಿಂದ ತೀವ್ರ ವಿರೋಧ ಉಂಟಾಗಿತ್ತು.
ಸ್ವಾಮೀಜಿಗಳ ಸ್ಪರ್ಧೆ ಮುಖ್ಯವಾಗಿ ಬಿಜೆಪಿಗೆ ದೊಡ್ಡ ಆಘಾತವಾಗಿತ್ತು. ಕ್ಷೇತ್ರದ ಲಿಂಗಾಯತ ಮತಗಳು ಹಂಚಿಹೋಗುವುದರಿಂದ ಬಿಜೆಪಿಗೆ ಹಿನ್ನಡೆಯುಂಟಾಗುವ ಸಾಧ್ಯತೆ ಇತ್ತು. ನಾಮಪತ್ರ ವಾಪಸ್ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಅವರ ಹಾದಿಯನ್ನು ಸುಗಮಗೊಳಿಸುವಂತೆ ಸ್ವಾಮೀಜಿ ಅವರನ್ನು ಮನವೊಲಿಸಲು ಬಿಜೆಪಿ ಮುಖಂಡರು ಸತತ ಪ್ರಯತ್ನ ನಡೆಸಿದ್ದರು. ಸ್ವಾಮೀಜಿ ಅವರ ಸುತ್ತ ಆಕ್ರೋಶ ಹಾಗೂ ಆರೋಪಗಳು ವ್ಯಕ್ತವಾಗಿರುವುದರನ್ನು ಕಂಡು ಸ್ವತಃ ಎಚ್ ಡಿ ಕುಮಾರಸ್ವಾಮಿ ಅವರೇ ನಾಮಪತ್ರ ವಾಪಸ್ಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಗುರು ಪರಂಪರೆ ಪರಮೋಚ್ಛ
ಬುಧವಾರ ಅಥವಾ ಗುರುವಾರ ನಾಮಪತ್ರ ಹಿಂದಕ್ಕೆ ಪಡೆಯಲು ಸ್ವಾಮೀಜಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. 'ಗುರು ಪರಂಪರೆಯ ವೃತ್ತಿಯಲ್ಲಿ ಪರಮೋಚ್ಛ ಸ್ಥಾನಕ್ಕೆ ಬಂದಿದ್ದೇನೆ. ಈಗ ಅದಕ್ಕಿಂತ ದೊಡ್ಡ ಪದವಿ ಬೇಡ ಎನಿಸಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಿಂದ ಹಿಂದೆ ಸರಿದಿದ್ದೇನೆ. ಹಿರಿಯ ಸ್ವಾಮೀಜಿಗಳ ಸಲಹೆಯಂತೆ ನಾಮಪತ್ರ ವಾಪಸ್ ಪಡೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ' ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಿರಿಯ ಸ್ವಾಮೀಜಿಗಳಿಂದ ಒತ್ತಡ
ಯಾರೇ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾದರೂ, ಅಭಿವೃದ್ಧಿ ಕೆಲಸಗಳನ್ನು ಮಾಡುವ ಕಾರ್ಯಸೂಚಿಗೆ ಬದ್ಧರಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಾಗಿ ಹೇಳಿದ್ದಾರೆ. ಬಳಿಕ ಕುಮಾರಸ್ವಾಮಿ ಮತ್ತು ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ನಡುವೆ ಚರ್ಚೆ ನಡೆದಿತ್ತು. ಅದರೊಟ್ಟಿಗೆ ಬಿಜೆಪಿ ನಾಯಕರು ಮತ್ತು ಹಿರಿಯ ಸ್ವಾಮೀಜಿಗಳಿಂದಲೂ ಶಿವಾಚಾರ್ಯ ಸ್ವಾಮೀಜಿಗಳ ಮೇಲೆ ಒತ್ತಡ ಬಂದಿತ್ತು ಎನ್ನಲಾಗಿದೆ.

ಅಜ್ಞಾತ ಸ್ಥಳಕ್ಕೆ ತೆರಳಿದ್ದ ಸ್ವಾಮೀಜಿ
ಉಪ ಚುನಾವಣೆಯಲ್ಲಿ ಯಾವುದೇ ಸ್ವಾಮೀಜಿಗಳನ್ನು ಕಣಕ್ಕಿಳಿಸಬೇಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪಂಚಪೀಠಗಳ ಸ್ವಾಮೀಜಿಗಳು ಮನವಿ ಮಾಡಿದ್ದರು. ಈ ನಡುವೆ ಸ್ವಾಮೀಜಿ ಮಠದಲ್ಲಿ ಕಾಣಿಸದೆ ಇದ್ದದ್ದು ಆತಂಕಕ್ಕೆ ಕಾರಣವಾಗಿತ್ತು. ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿತ್ತು. ಬಿ.ಸಿ. ಪಾಟೀಲ್ ಅವರನ್ನು ಸೋಲಿಸಲು ಕೊನೆಯ ಕ್ಷಣದಲ್ಲಿ ಗೇಮ್ ಪ್ಲ್ಯಾನ್ ಬದಲಿಸಿದ್ದ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ, ಸ್ವಾಮೀಜಿಗೆ ಟಿಕೆಟ್ ನೀಡಿದ್ದರು.

ಬಿಜೆಪಿಗೆ ಕೊನೆಗೂ ನೆಮ್ಮದಿ
ಸ್ವಾಮೀಜಿಗಳು ನಾಮಪತ್ರ ಹಿಂದಕ್ಕೆಪಡೆಯಲು ನಿರ್ಧರಿಸಿರುವುದು ಬಿಜೆಪಿಗೆ ನೆಮ್ಮದಿ ನೀಡಿದೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಅನರ್ಹ ಶಾಸಕ ಬಿ.ಸಿ. ಪಾಟೀಲ್ ಅವರಿಗೆ ಸ್ವಾಮೀಜಿಯ ಸ್ಪರ್ಧೆ ದೊಡ್ಡ ತಲೆನೋವಾಗಿತ್ತು. ಮತಗಳು ಹಂಚಿ ಹೋಗುವುದರಿಂದ ಸಮುದಾಯದ ಬಹುಪಾಲು ಮತಗಳನ್ನು ಕಳೆದುಕೊಳ್ಳುವ ಭೀತಿ ಬಿಜೆಪಿಗೆ ಎದುರಾಗಿತ್ತು. ಸ್ವಾಮೀಜಿಗಳ ಸ್ಪರ್ಧೆಗೆ ಭಕ್ತರಲ್ಲಿ ಪರ-ವಿರೋಧದ ಚರ್ಚೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮೀಜಿ ವಿರುದ್ಧ ಭಕ್ತರು ಕಿಡಿಕಾರಿದ್ದರು. ಸಂಸದ ಬಿವೈ ರಾಘವೇಂದ್ರ, ಮಾಜಿ ಸಚಿವ ಯು.ಬಿ. ಬಣಕಾರ ಸಂಧಾನಸಭೆ ನಡೆಸಿದ್ದರೂ ಫಲ ನೀಡಿರಲಿಲ್ಲ.












Click it and Unblock the Notifications