'ಬಿ.ಶ್ರೀರಾಮುಲು ಅವರನ್ನು ಸೋಲಿಸುವುದು ಖಚಿತ'
ಚಿತ್ರದುರ್ಗ, ಏಪ್ರಿಲ್ 13 : 'ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ಅವರನ್ನು ಸೋಲಿಸುವುದು ಖಚಿತ. ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವೆ ಎಂದು ಶನಿವಾರ ಘೋಷಣೆ ಮಾಡುವೆ' ಎಂದು ಮೊಳಕಾಲ್ಮೂರು ಶಾಸಕ ಎಸ್.ತಿಪ್ಪೇಸ್ವಾಮಿ ಹೇಳಿದರು.
ಮೊಳಕಾಲ್ಮೂರು ಕ್ಷೇತ್ರದಿಂದ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಎಸ್.ತಿಪ್ಪೇಸ್ವಾಮಿ ಬೆಂಬಲಿಗರು, ಶ್ರೀರಾಮುಲು ಅವರು ಸ್ಪರ್ಧಿಸಬಾರದು ಎಂದು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ತಿಪ್ಪೇಸ್ವಾಮಿ ಅವರು ಹಲವಾರು ವಿಚಾರಗಳ ಕುರಿತು ಸ್ಪಷ್ಟನೆ ನೀಡಿದರು. 'ಕಾಂಗ್ರೆಸ್ ಅಥವ ಜೆಡಿಎಸ್ ಸೇರುವ ಕುರಿತು ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ' ಎಂದು ತಿಪ್ಪೇಸ್ವಾಮಿ ಸ್ಪಷ್ಟಪಡಿಸಿದರು.

ಎಸ್.ತಿಪ್ಪೇಸ್ವಾಮಿ ಹೇಳಿದ್ದೇನು?
* ಶ್ರೀರಾಮುಲು ಸುಳ್ಳು ನಾಯಕ ಎಂಬುದು ಈಗ ಗೊತ್ತಾಗಿದೆ. ತಟ್ಟೆಗೆ ಬಡಿಸಿದ ಊಟವನ್ನು ಕಿತ್ತುಕೊಂಡರೆ ಅವರು ಉದ್ಧಾರವಾಗುವುದಿಲ್ಲ. ಬಳ್ಳಾರಿಯಲ್ಲಿ ಸೋಲಿನ ಭಯದಿಂದಾಗಿ ಅವರು ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದಿದ್ದಾರೆ.
* ಶ್ರೀರಾಮುಲು ಅವರು ನನ್ನ ಬಳಿ ಪ್ರೀತಿ, ವಿಶ್ವಾಸದಿಂದ ಮಾತನಾಡಿಲ್ಲ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಅವರು ಸೋಲುವುದು ಖಚಿತ. ಇಲ್ಲಿ ಅವರಿಗೆ ಯಾರೂ ವೋಟು ಹಾಕುವುದಿಲ್ಲ.
* ಕಾಂಗ್ರೆಸ್ ಮತ್ತು ಜೆಡಿಎಸ್ನ ಯಾವ ನಾಯಕರ ಜೊತೆಯೂ ನಾನು ಚರ್ಚೆ ನಡೆಸಿಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ಶನಿವಾರ ನಾನು ನನ್ನ ಅ ಭಿಪ್ರಾಯವನ್ನು ಪ್ರಕಟಿಸುವೆ.
* ಶ್ರೀರಾಮುಲು ಅವರು ಸುಳ್ಳಿನ ಮಾತುಗಳನ್ನು ಆಡಿದ್ದಾರೆ. ಇಲ್ಲಿನ ಜನರು ಅವುಗಳಿಗೆ ಮರುಳಾಗುವುದಿಲ್ಲ. ಅವರು ಸೋಲುವುದು ಖಚಿತ. ನಾನೇ ಅವರನ್ನು ಸೋಲಿಸುತ್ತೇವೆ.












Click it and Unblock the Notifications