Get Updates
Get notified of breaking news, exclusive insights, and must-see stories!

ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧ ಪರಿಸ್ಥಿತಿ ಮತ್ತು ಭೂರಾಜಕೀಯ ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಹಾಗೂ ದಿಢೀರ್ ವಿಮಾನಗಳ ಸಂಚಾರ ರದ್ದತಿ ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಹಲವಾರು ವಿಮಾನ ಮಾರ್ಗಗಳಲ್ಲಿ ಪ್ರಯಾಣ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ.

ಇರಾನ್-ಇಸ್ರೇಲ್ ಯುದ್ಧ ಪರಿಣಾಮ ಭಾರತದ ಪ್ರವಾಸೋದ್ಯಮ ಮತ್ತು ಟ್ರಾವೆಲ್ಸ್ ಕ್ಷೇತ್ರದ ಮೇಲೂ ಆಗಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಹೊಳ್ಳ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Middle East War

ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದೆ. ಭಾರತದಿಂದ ವಿಶ್ವದ ಅನೇಕ ದೇಶಗಳಿಗೆ ಹೋಗುವ ವಿಮಾನ ಸಂಚಾರವು ಬಹುಪಾಲು ಮಧ್ಯಪ್ರಾಚ್ಯದ ಪ್ರಮುಖ ಹಬ್‌ಗಳಾದ ದುಬೈ, ದೋಹಾ ಮತ್ತು ಅಬುಧಾಬಿ ಮೂಲಕ ಸಾಗುತ್ತದೆ. ಈ ಮಾರ್ಗಗಳಲ್ಲಿ ಉಂಟಾಗಿರುವ ವ್ಯತ್ಯಯಗಳಿಂದ ವಿಮಾನ ಸೇವೆಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡು ಬರುತ್ತಿವೆ. ಪ್ರಯಾಣ ವೆಚ್ಚ ಹೆಚ್ಚಳದಿಂದ ಅನೇಕರು ತಮ್ಮ ಪ್ರಯಾಣವನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಮುಂದಾಗುತ್ತಿದ್ದಾರೆ.

Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ

ಅರಬ್ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಪ್ರತಿದಿನವೂ ಸುಮಾರು 25 ರಿಂದ 30 ವಿಮಾನಗಳು ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರುತ್ತಿದ್ದವು. ಆದರೆ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಆಕ್ರಮಣಕಾರಿ ಭದ್ರತಾ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಅನೇಕ ವಿಮಾನ ಕಂಪನಿಗಳು ತಮ್ಮ ಹಾರಾಟವನ್ನು ಸ್ಥಗಿತಗೊಳಿಸಿವೆ. ಇದರಿಂದ ವಿದೇಶಿ ಸಂಪರ್ಕ ಗಂಭೀರವಾಗಿ ಕುಂಠಿತವಾಗಿದೆ. ಇದರ ಪರಿಣಾಮವಾಗಿ ದೇಶಾದ್ಯಂತ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು ಶೇ. 40ರವರೆಗೆ ಕುಸಿತ ಕಂಡುಬಂದಿದ್ದು, ಬೆಂಗಳೂರಿನಂತಹ ಪ್ರಮುಖ ಅಂತರರಾಷ್ಟ್ರೀಯ ಪ್ರವೇಶ ದ್ವಾರಕ್ಕೆ ಇದು ನೇರ ಹೊಡೆತ ನೀಡಿದೆ ಎಂದು ಅವರು ವಿವರಿಸಿದರು.

ಮಧ್ಯಪ್ರಾಚ್ಯ ಪ್ರದೇಶವು ಭಾರತೀಯ ಪ್ರವಾಸಿಗರಿಗಾಗಿ ಪ್ರಮುಖ ಕೇಂದ್ರವಾಗಿದೆ. ಪ್ರತಿ ವರ್ಷ ಸುಮಾರು 8 ರಿಂದ 9 ಮಿಲಿಯನ್ ಭಾರತೀಯರು ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸುತ್ತಾರೆ, ಜೊತೆಗೆ ಸುಮಾರು 13 ಮಿಲಿಯನ್ ಭಾರತೀಯರು ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಉದ್ಯೋಗದಲ್ಲಿದ್ದಾರೆ. ಈ ನಿರಂತರ ಸಂಚಾರದಲ್ಲಿ ಉಂಟಾಗುವ ವ್ಯತ್ಯಯವು ಭಾರತದ ಪ್ರವಾಸೋದ್ಯಮ ಮತ್ತು ವಿಮಾನಯಾನ ಕ್ಷೇತ್ರಕ್ಕೆ ಗಂಭೀರ ಪರಿಣಾಮ ಬೀರುತ್ತದೆ.

ಇದರ ಜೊತೆಗೆ ವೈದ್ಯಕೀಯ ಪ್ರವಾಸೋದ್ಯಮಕ್ಕೂ ಇದರಿಂದ ಹೊಡೆತ ಬೀಳುವ ಸಾಧ್ಯತೆ ಇದೆ. ಭಾರತವು ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುವ ದೇಶವಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಸುಮಾರು 6 ರಿಂದ 7 ಲಕ್ಷ ವಿದೇಶಿ ರೋಗಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಾರೆ, ಇವರಲ್ಲಿ ಗಮನಾರ್ಹ ಸಂಖ್ಯೆಯವರು ಗಲ್ಫ್ ರಾಷ್ಟ್ರಗಳಿಂದ ಆಗಿರುತ್ತಾರೆ. ವಿಮಾನ ಸಂಚಾರದಲ್ಲಿ ಉಂಟಾಗಿರುವ ಅಡಚಣೆಗಳು ಮತ್ತು ಹೆಚ್ಚುತ್ತಿರುವ ಪ್ರಯಾಣ ವೆಚ್ಚದಿಂದ ಈ ಕ್ಷೇತ್ರವೂ ಕುಸಿತ ಎದುರಿಸುವ ಸಾಧ್ಯತೆ ಇದೆ.

ಮೋಜು ಮಸ್ತಿಗೆ ಬ್ರೇಕ್

ಈ ಎಲ್ಲಾ ಬೆಳವಣಿಗೆಗಳ ನೇರ ಪರಿಣಾಮ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಾರಿಗೆ ಕ್ಷೇತ್ರದಲ್ಲಿಯೂ ಕಾಣಿಸುತ್ತಿದೆ. ಅಂತಾರಾಷ್ಟ್ರೀಯ ಪ್ರವಾಸಿಗರು, ವಿಶೇಷವಾಗಿ ಬಿಸಿನೆಸ್ ಮತ್ತು ಹೈಎಂಡ್ ಪ್ರವಾಸಿಗರು, ಲಕ್ಸುರಿ ಟ್ಯಾಕ್ಸಿ ಮತ್ತು ಪ್ರವಾಸಿ ವಾಹನ ಸೇವೆಗಳ ಪ್ರಮುಖ ಗ್ರಾಹಕರು. ಆದರೆ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡುಬರುತ್ತಿರುವುದರಿಂದ ಹಲವಾರು ಲಕ್ಸುರಿ ಟ್ಯಾಕ್ಸಿಗಳು ಮತ್ತು ಪ್ರವಾಸಿ ವಾಹನಗಳು ಈಗ ನಿಂತಂತೆಯೇ ಇರುವ ಪರಿಸ್ಥಿತಿ ಉಂಟಾಗಿದೆ. ಟ್ರಾವೆಲ್ ಏಜೆನ್ಸಿಗಳು ಮತ್ತು ಪ್ರವಾಸ ವ್ಯವಸ್ಥಾಪಕರಿಗೂ ಬುಕಿಂಗ್ ರದ್ದತಿಗಳ ಪ್ರಮಾಣ ಹೆಚ್ಚುತ್ತಿದೆ ಎಂದರು.

ಇದರ ಜೊತೆಗೆ, ಹೆಚ್ಚಿನ ಅಂತಾರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರು ನಗರವನ್ನು ಅವಲಂಬಿಸಿದೆ. ಇದರಿಂದ ಕರ್ನಾಟಕದ ಟ್ರಾವೆಲ್ಸ್ ಉದ್ಯಮಿಗಳಿಗೆ ಇನ್ನಷ್ಟು ಗಂಭೀರ ಹೊಡೆತ ಬಿದ್ದಿದೆ. ಬೆಂಗಳೂರು ಮೂಲಕವೇ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣಿಸುವ ಹೈ-ವ್ಯಾಲ್ಯೂ ವಾಹನ ಬಳಕೆ ಮಾಡುವ ಪ್ರವಾಸಿಗರ ಕೊರತೆಯಿಂದ ಟ್ರಾವೆಲ್ಸ್ ಕಂಪನಿಗಳು, ಲಕ್ಸುರಿ ಕಾರ್ ಸೇವೆಗಳು ಮತ್ತು ಚಾಲಕರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ

ಆರ್ಥಿಕ ಹೊರೆ - ಉದ್ಯಮದ ಬದುಕಿಗೆ ಸವಾಲು, ವಾಸ್ತವ ಸ್ಥಿತಿ

ಈ ಸಂಕಷ್ಟವು ಕೇವಲ ಬೇಡಿಕೆ ಕುಸಿತಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ಉದ್ಯಮದ ಆರ್ಥಿಕ ಸ್ಥಿರತೆಯನ್ನೇ ಕುಸಿತಗೊಳಿಸುವ ಮಟ್ಟಕ್ಕೆ ತಲುಪಿದೆ. ಟ್ರಾವೆಲ್ಸ್ ಉದ್ಯಮಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಒಂದಷ್ಟು ಸಂಕ್ಷಿಪ್ತ ಮಾಹಿತ ಇಲ್ಲಿದೆ.

* ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಸಾಲಗಳ EMI ಪಾವತಿ ಒತ್ತಡ

* ವಾಹನಗಳ ಇನ್ಸುರನ್ಸ್, ಟ್ಯಾಕ್ಸ್ ಮತ್ತು ನಿರ್ವಹಣಾ ವೆಚ್ಚಗಳು

* ಚಾಲಕರಿಗೆ ಮಾಸಿಕ ವೇತನ ನೀಡುವ ಹೊಣೆ

* ವಾಹನಗಳು ನಿಲ್ಲುವ ಪರಿಸ್ಥಿತಿಯಲ್ಲಿದ್ದರೂ ಸ್ಥಿರ ವೆಚ್ಚಗಳ ನಿರಂತರ ಭಾರ

ಆದಾಯವು ತೀವ್ರವಾಗಿ ಕುಸಿದಿರುವಾಗ ಈ ಎಲ್ಲಾ ಖರ್ಚುಗಳನ್ನು ನಿರ್ವಹಿಸುವುದು ಬಹುತೇಕ ಉದ್ಯಮಿಗಳಿಗೆ ಅಸಾಧ್ಯವಾಗುತ್ತಿದೆ. ಇದರಿಂದ ಅನೇಕರು ಸಾಲದ ಬಾಧೆಗೆ ಸಿಲುಕುವ ಭೀತಿ ಎದುರಿಸುತ್ತಿದ್ದಾರೆ ಎಂದು ವಾಹನ ಚಾಲಕರು, ಮಾಲೀಕರ ಸಂಕಷ್ಟ, ಪ್ರವಾಸೋದ್ಯಮ ಸ್ಥಿತಿಗತಿ ವಿವರಿಸಿದರು.

ವ್ಯಾಪಕ ಆರ್ಥಿಕ ಪರಿಣಾಮ

ಭಾರತದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಮಹತ್ವದ ಪಾತ್ರವಹಿಸುತ್ತದೆ. ಈ ಕ್ಷೇತ್ರವು ದೇಶದ ಒಟ್ಟು ಆರ್ಥಿಕ ಉತ್ಪಾದನೆಯ ಸುಮಾರು 5-6 ಶೇಕಡಾ ಪಾಲು ನೀಡುವುದರ ಜೊತೆಗೆ 4 ಕೋಟಿ ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಆದ್ದರಿಂದ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಉಂಟಾಗುವ ಯಾವುದೇ ದೊಡ್ಡ ವ್ಯತ್ಯಯವು ಆರ್ಥಿಕವಾಗಿ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೊರೋನಾ ಮಹಾಮಾರಿಯಿಂದ ಭಾರೀ ಹೊಡೆತ ಅನುಭವಿಸಿದ ನಂತರ ಇದೀಗಷ್ಟೇ ಚೇತರಿಕೆ ಕಂಡುಕೊಳ್ಳುತ್ತಿದ್ದ ಪ್ರವಾಸೋದ್ಯಮ ಮತ್ತು ಟ್ರಾವೆಲ್ಸ್ ಕ್ಷೇತ್ರಕ್ಕೆ ಮಧ್ಯಪ್ರಾಚ್ಯದ ಈ ಸಂಘರ್ಷ ಮತ್ತೊಂದು ದೊಡ್ಡ ಸವಾಲಾಗಿ ಎದುರಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಟ್ರಾವೆಲ್ಸ್ ಮಾಲೀಕರು, ಚಾಲಕರು, ಟೂರ್ ಆಪರೇಟರ್‌ಗಳು ಹಾಗೂ ಈ ಕ್ಷೇತ್ರದ ಮೇಲೆ ಅವಲಂಬಿತವಾಗಿರುವ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೂ ಗಂಭೀರ ಪರಿಣಾಮ ಬೀರುವ ಸಂಭವವಿದೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+